ಎಡಿಟೋರಿಯಲ್

ನಾಲ್ಕು ದಿಕ್ಕಿನಿಂದ : 18 ಸೋಮವಾರ 2022

ನಾಲ್ಕು ದಿಕ್ಕಿನಿಂದ

ಸುಸ್ತಿಯ ಹಾದಿಯಲ್ಲಿ ಅರ್ಧ ಡಜನ್ ದೇಶಗಳು!

ದ್ವೀಪ ರಾಷ್ಟ್ರ ಶ್ರೀಲಂಕಾದಂತೆಯೇ ಅರ್ಧ ಡಜನ್ ರಾಷ್ಟ್ರಗಳು ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವೆ. ಮಾಡಿದ ಸಾಲಕ್ಕೆ ಅಸಲು ಇರಲಿ, ಬಡ್ಡಿಯನ್ನು ಪಾವತಿ ಮಾಡಲಾಗದೇ ಸುಸ್ತಿದಾರರಾಗುವುದೇ ಆರ್ಥಿಕ ಬಿಕ್ಕಟ್ಟು. ಕೋವಿಡ್‌ನಿಂದ ಬಂದ ಸಂಕಷ್ಟಗಳು, ನಂತರ ಆರ್ಥಿಕ ಹಿನ್ನಡೆಗಳು, ಜಾಗತಿಕ ರಾಜಕೀಯ ಕ್ಷೋಭೆ ಮತ್ತಿತರ ಕಾರಣಗಳಿಂದಾಗಿ ಈ ದೇಶಗಳು ಬಿಕ್ಕಟ್ಟು ಎದುರಿಸುತ್ತಿವೆ. ಈ ನಡುವೆ ಡಾಲರ್ ಮೌಲ್ಯ ಯದ್ವಾ ತದ್ವಾ ಏರುತ್ತಿದೆ. ಡಾಲರ್ ಮೂಲಕವೇ ಸಾಲ ಮರುಪಾವತಿ ಮಾಡಬೇಕಾದ ಇತರ ರಾಷ್ಟ್ರಗಳೂ ಕಷ್ಟದಲ್ಲಿವೆ. ರಾಯಿಟರ್ಸ್ ವರದಿ ಪ್ರಕಾರ, ಏರುತ್ತಿರುವ ಬೆಲೆಗಳು, ಹಣದುಬ್ಬರ ಮತ್ತು ಸಾಲವು ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ. ಶ್ರೀಲಂಕಾ ಅಲ್ಲದೇ, ಲೆಬನಾನ್, ರಷ್ಯಾ, ಸುರಿನಾಮ್ ಮತ್ತು ಜಾಂಬಿಯಾ ಈಗಾಗಲೇ ಸಾಲದ ಸುಳಿಯಲ್ಲಿ ಸಿಕ್ಕಿಬಿದ್ದಿವೆ. ಅಂದರೆ, ಸಾಲ ಮರುಪಾವತಿ ಮಾಡಲಾಗದೆ ಸುಸ್ತಿದಾರರಾಗಿವೆ. ಬೆಲಾರಸ್ ಸಹ ಆ ಹಾದಿಯಲ್ಲೇ ಇದೆ. ಕೆಲವು ತಿಂಗಳು ಕಳೆದರೆ ಇನ್ನೂ ಒಂದು ಡಜನ್ ದೇಶಗಳು ಸುಸ್ತಿದಾರರಾಗುವ ಅಪಾಯದಲ್ಲಿವೆ. ಈ ಎಲ್ಲಾ ರಾಷ್ಟ್ರಗಳು ಸುಸ್ತಿಯಾಗಿರುವ ಸಾಲದ ಮೊತ್ತವೇ ೪೦೦ ಬಿಲಿಯನ್ ಡಾಲರ್. ರೂಪಾಯಿ ಲೆಕ್ಕದಲ್ಲಿ ೩೨ ಲಕ್ಷ ಕೋಟಿ!


ಅಸಂಸದೀಯ ಪದಗಳು!

ಸಂಸತ್ತಿನ ಕಲಾಪದ ವೇಳೆ ಪ್ರಧಾನಿ ಸೇರಿದಂತೆ ಯಾರನ್ನಾದರೂ ತರಾಟೆಗೆ ತೆಗೆದುಕೊಳ್ಳಬಹುದಿತ್ತು. ಹೀಗೆ ತರಾಟೆಗೆ ತೆಗೆದುಕೊಳ್ಳುವಾಗ ಕೆಲ ಕಠಿಣ ಪದಗಳಿಂದ ಟೀಕಿಸಲೂ ಬಹುದಿತ್ತು. ಈಗ ಅಂತಹ ಕಠಿಣ ಪದಗಳಿಂದ ಟೀಕೆ ಮಾಡುವುದಕ್ಕೂ ನಿರ್ಬಂಧ ಹೇರಲಾಗಿದೆ. ಆಯ್ದ ಕೆಲವು ಪದಗಳನ್ನು ಸಂಸದರು ಬಳಸುವಂತಿಲ್ಲ. ಬಳಸಬಾರದ ಪದಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅವುಗಳಲ್ಲಿ ‘ಜುಮ್ಲಾ ಜೀವಿ’ಯೂ ಸೇರಿದೆ. ವಿರೋಧ ಪಕ್ಷದ ನಾಯಕರು ಮಾಡುತ್ತಿರುವ ಟೀಕೆಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ, ಸಾಮರ್ಥ್ಯ, ಜಾಣ್ಮೆ, ಪ್ರಬುದ್ಧತೆ ಇತ್ಯಾದಿಗಳನ್ನು ವರ್ಣಿಸಲು ಬಳಸಲಾಗುತ್ತಿದ್ದ ಪದಗಳೆಲ್ಲವನ್ನೂ ಅಸಂಸದೀಯ ಪದಗಳ ವ್ಯಾಪ್ತಿಗೆ ತರಲಾಗಿದೆ. ‘ಜುಮ್ಲಾ ಜೀವಿ’ ಪದದ ಹುಟ್ಟಿಗೆ ಒಂದು ಪುಟ್ಟ ಇತಿಹಾಸ ಇದೆ. ಕೃಷಿ ಕಾಯ್ದೆ ವಿರೋಧಿಸಿ ರೈತರು ಚಳಿ, ಮಳೆ, ಬಿಸಿಲಲ್ಲೂ ವರ್ಷವಿಡೀ ಪ್ರತಿಭಟನೆ ಮಾಡುತ್ತಿದ್ದಾಗ, ಸಂಸತ್ತಿನಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ ಅವರು ‘ಆಂದೋಲನ ಜೀವಿ’ಗಳು ಎಂಬ ಪದ ಬಳಸಿ ಟೀಕಿಸಿದ್ದರು. ಅದಾದ ನಂತರ ಪ್ರಧಾನಿ ಮೋದಿ ಅವರಿಗೆ ‘ಜುಮ್ಲಾ ಜೀವಿ‘ ಎಂಬ ಪದ ಖಾಯಂ ಆಗಿತ್ತು! ಅದಕ್ಕೂ ಮುನ್ನ ‘ಜುಮ್ಲೆಬಾಝ್‌‘ ಅನ್ನಲಾಗುತ್ತಿತ್ತು!


ಇಂದಿನಿಂದ ಮತ್ತಷ್ಟು ದುಬಾರಿ ದುನಿಯಾ!

ಸರಕು ಮತ್ತು ಸೇವಾ ತೆರಿಗೆ ಮಂಡಳಿಯ ಇತ್ತೀಚಿನ ತೆರಿಗೆ ಪರಿಷ್ಕರಣೆ ಆದೇಶ ಜುಲೈ ೧೮ರಿಂದ ಜಾರಿಯಾಗುತ್ತಿದೆ. ಅಂದರೆ, ಗ್ರಾಹಕರ ಮೇಲಿನ ತೆರಿಗೆ ಭಾರ ಮತ್ತಷ್ಟು ಏರಲಿದೆ. ತೆರಿಗೆ ಹೇರಿಕೆಯ ಹೊಸ ಅಧ್ಯಾಯಕ್ಕೆ ಗ್ರಾಹಕರು ತೆರೆದುಕೊಳ್ಳಬೇಕಿದೆ. ೫,೦೦೦ ರೂಪಾಯಿಗಳಿಗಿಂತ ಹೆಚ್ಚು ಬಾಡಿಗೆ ಇರುವ ಆಸ್ಪತ್ರೆ ಕೊಠಡಿಗಳು ದುಬಾರಿಯಾಗಲಿವೆ. ಅದು ಶ್ರೀಮಂತರ ಕತೆ. ಶ್ರೀಸಾಮಾನ್ಯರು ಬಳಸುವ ಆಟಾ (ಗೋಧಿ ಹಿಟ್ಟು), ಮೊಸರು, ಪನೀರ್ ಮೇಲೆ ಶೇ.೫ರಷ್ಟು ಜಿಎಸ್‌ಟಿ ಹೇರಲಾಗಿದೆ.
ದಿನಕ್ಕೆ ೧,೦೦೦ ರೂಪಾಯಿ ದರ ಹೊಂದಿರುವ ಹೋಟೆಲ್ ಕೊಠಡಿಗಳು, ಶೈಕ್ಷಣಿಕ ನಕ್ಷೆಗಳು ಮತ್ತು ಚಾರ್ಟ್‌ಗಳು, ಅಟ್ಲಾಸ್‌ಗಳ ಮೇಲೆ ಶೇ.೧೨ರಷ್ಟು ಸರಕು ಮತ್ತು ಸೇವಾ ತೆರಿಗೆ ಹೇರಲಾಗಿದೆ. ನೀವು ಬ್ಯಾಂಕಿನಿಂದ ಪಡೆವ ಚೆಕ್ ಬುಕ್ಕಿನ ಮೇಲೂ ಶೇ.೧೮ರಷ್ಟು ಜಿಎಸ್‌ಟಿ ಇದೆ. ಈಗಾಗಲೇ ಪೆಟ್ರೋಲ್, ಡಿಸೇಲ್, ಎಲ್ ಪಿಜಿ ಸಿಲಿಂಡರ್, ಆಹಾರಧಾನ್ಯಗಳು, ಖಾದ್ಯ ತೈಲಗಳ ದರ ಏರಿಕೆಯಿಂದ ತತ್ತರಿಸುವ ಜನರಿಗೆ ಈಗ ಮತ್ತಷ್ಟು ಹೊರೆ ಹೇರಲಾಗಿದೆಯಷ್ಟೇ!


ಭವಿಷ್ಯ ನಿಧಿಗೂ ತೆರಿಗೆ ಹೇರಿಕೆ!

ತೆರಿಗೆ ಸುಧಾರಣಾ ಪರ್ವವಿದು. ಇದುವರೆಗೆ ಸಂಪೂರ್ಣ ತೆರಿಗೆ ವಿನಾಯಿತಿ ಇದ್ದ ಕಾರ್ಮಿಕರ ಭವಿಷ್ಯ ನಿಧಿಯ ಮೇಲೂ ೨೦೨೨ ಏಪ್ರಿಲ್ ೧ರಿಂದ ತೆರಿಗೆ ಹೇರಲು ನಿರ್ಧರಿಸಲಾಗಿದೆ. ಈ ಮೊದಲು ಕಾರ್ಮಿಕರು ತಮ್ಮ ಭವಿಷ್ಯ ನಿಧಿ ಖಾತೆಗೆ ವಾರ್ಷಿಕ ಎಷ್ಟಾದರೂ ಪಾವತಿ ಮಾಡಬಹುದಿತ್ತು. ಹಾಗೆಯೇ ಭವಿಷ್ಯನಿಧಿಯಲ್ಲಿರುವ ಮೊತ್ತಕ್ಕೆ ಬರುವ ಬಡ್ಡಿಯ ಮೇಲೂ ಯಾವುದೇ ತೆರಿಗೆ ಇರಲಿಲ್ಲ. ಈಗ ಪರಿಷ್ಕೃತ ಆದೇಶದಂತೆ ಒಬ್ಬ ಕಾರ್ಮಿಕ ೨.೫ ಲಕ್ಷ ರೂಪಾಯಿ ಮೀರಿ ಭವಿಷ್ಯ ನಿಧಿಗೆ ಪಾವತಿ ಮಾಡಿದ್ದರೆ, ಅದರ ಮೇಲೆ ತೆರಿಗೆ ಹೇರಲಾಗುತ್ತದೆ. ಅದೇ ವೇಳೆ ಕಾರ್ಮಿಕನ ಭವಿಷ್ಯ ನಿಧಿಯ ಮೇಲೆ ವಾರ್ಷಿಕ ೨.೫ ಲಕ್ಷ ರೂಪಾಯಿಗಿಂದ ಹೆಚ್ಚು ಬಡ್ಡಿ ಬಂದರೆ ಅದಕ್ಕೂ ತೆರಿಗೆ ವಿಧಿಸಲಾಗುತ್ತದೆ. ಅಂದರೆ, ಇನ್ನು ಮುಂದೆ ಭವಿಷ್ಯ ನಿಧಿ ಸಂಪೂರ್ಣ ತೆರಿಗೆ ಮುಕ್ತವಲ್ಲ. ತೆರಿಗೆ ವಿನಾಯಿತಿ ಇದೆ ಎಂಬ ಕಾರಣಕ್ಕೆ ಬಹಳಷ್ಟು ಜನ ಭವಿಷ್ಯನಿಧಿಗೆ ಹೆಚ್ಚಿನ ಪಾಲು ಹೂಡಿಕೆ ಮಾಡುತ್ತಿದ್ದರು. ಹಾಗೆಯೇ ಬಡ್ಡಿ ಸಹ ಬ್ಯಾಂಕುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿತ್ತು. ಇದೀಗ ೨.೫ ಲಕ್ಷ ಮೀರಿದ ಪಾವತಿ ಮತ್ತು ೨.೫ ಲಕ್ಷ ಮೀರಿದ ಬಡ್ಡಿ ಆದಾಯದ ಮೇಲೆ ತೆರಿಗೆ ಬೀಳಲಿದೆ.

andolanait

Recent Posts

ಕೊಡಗು ಜಿಲ್ಲೆಯಲ್ಲಿ ಅಣಬೆ ಕೃಷಿಗೆ ವಿಪುಲ ಅವಕಾಶ

ಕೃಷ್ಣ ಸಿದ್ದಾಪುರ ಅಣಬೆ ಕೃಷಿ ಗೃಹಿಣಿಯರಿಗೆ ಆದಾಯ ತರುವ ಉದ್ಯಮ ಸಿದ್ದಾಪುರ: ಕೊಡಗು ಜಿಲ್ಲೆಯಲ್ಲಿ ಅಣಬೆ ಕೃಷಿಗೆ ವಿಪುಲ ಅವಕಾಶಗಳಿದ್ದು,…

2 hours ago

ಮಹಾಭಾರತ: ಹೊಸ ಅರ್ಥ ಕಟ್ಟಲು ಯತ್ನಿಸಿದ ರಾಮು

ʼರಾಮು ಅವರ ‘ಮಹಾಭಾರತದೊಳಗಿಂದ ಒಂದಿಷ್ಟು’ ಕೃತಿ ಬಿಡುಗಡೆ ಮಾಡಿದ ಚ.ಹ.ರಘುನಾಥ ಅಭಿಮತ ಮೈಸೂರು: ಸಾವಿರಾರು ವರ್ಷಗಳ ಹಿಂದಿನ ಮಹಾಭಾರತವನ್ನು ಸಮಕಾಲೀನ…

2 hours ago

ಹಾಡು-ಪಾಡುವಿನ ರಾಮು ರಾಜ್ಯ

ಓ.ಎಲ್.ನಾಗಭೂಷಣ ಸ್ವಾಮಿ ‘ಹಾಡು-ಪಾಡು ರಾಮು’ ಅಂತಲೇ ಪರಿಚಯವಾಗಿರುವ ರಾಮು ನೆನಪು ಮಾತ್ರವಾಗಿ ಉಳಿದು ಇವತ್ತಿಗೆ ಮೂರು ವರ್ಷ. ರಾಮು ಮಹಾ…

2 hours ago

ಸಂಪ್‌ಗೆ ಬಿದ್ದು ಎರಡು ವರ್ಷದ ಮಗು ಸಾವು

ಮಂಡ್ಯ: ಮನೆಯ ಮುಂದಿನ ನೀರಿನ ಸಂಪ್‌ಗೆ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ಪಾಂಡವಪುರ ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ನಡೆದಿದೆ. ಗ್ರಾಮದ…

15 hours ago

ಬಸ್-ಲಾರಿ ನಡುವೆ ಡಿಕ್ಕಿ; ಹಲವರಿಗೆ ಗಾಯ

ಗುಂಡ್ಲುಪೇಟೆ: ರಾಷ್ಟ್ರೀಯ ಹೆದ್ದಾರಿ ಮೈಸೂರು-ಊಟಿ ರಸ್ತೆಯ ಗುಂಡ್ಲುಪೇಟೆ ತಾಲ್ಲೂಕಿನ ಮಳವಳ್ಳಿ ಗೇಟ್ ಬಳಿ ಗೂಡ್ಸ್ ಲಾರಿ ಹಾಗೂ ಕೆಎಸ್ಆರ್‌ಟಿಸಿ ಬಸ್…

16 hours ago