ಎಡಿಟೋರಿಯಲ್

ನಾಲ್ಕು ದಿಕ್ಕಿನಿಂದ : 18 ಸೋಮವಾರ 2022

ನಾಲ್ಕು ದಿಕ್ಕಿನಿಂದ

ಸುಸ್ತಿಯ ಹಾದಿಯಲ್ಲಿ ಅರ್ಧ ಡಜನ್ ದೇಶಗಳು!

ದ್ವೀಪ ರಾಷ್ಟ್ರ ಶ್ರೀಲಂಕಾದಂತೆಯೇ ಅರ್ಧ ಡಜನ್ ರಾಷ್ಟ್ರಗಳು ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವೆ. ಮಾಡಿದ ಸಾಲಕ್ಕೆ ಅಸಲು ಇರಲಿ, ಬಡ್ಡಿಯನ್ನು ಪಾವತಿ ಮಾಡಲಾಗದೇ ಸುಸ್ತಿದಾರರಾಗುವುದೇ ಆರ್ಥಿಕ ಬಿಕ್ಕಟ್ಟು. ಕೋವಿಡ್‌ನಿಂದ ಬಂದ ಸಂಕಷ್ಟಗಳು, ನಂತರ ಆರ್ಥಿಕ ಹಿನ್ನಡೆಗಳು, ಜಾಗತಿಕ ರಾಜಕೀಯ ಕ್ಷೋಭೆ ಮತ್ತಿತರ ಕಾರಣಗಳಿಂದಾಗಿ ಈ ದೇಶಗಳು ಬಿಕ್ಕಟ್ಟು ಎದುರಿಸುತ್ತಿವೆ. ಈ ನಡುವೆ ಡಾಲರ್ ಮೌಲ್ಯ ಯದ್ವಾ ತದ್ವಾ ಏರುತ್ತಿದೆ. ಡಾಲರ್ ಮೂಲಕವೇ ಸಾಲ ಮರುಪಾವತಿ ಮಾಡಬೇಕಾದ ಇತರ ರಾಷ್ಟ್ರಗಳೂ ಕಷ್ಟದಲ್ಲಿವೆ. ರಾಯಿಟರ್ಸ್ ವರದಿ ಪ್ರಕಾರ, ಏರುತ್ತಿರುವ ಬೆಲೆಗಳು, ಹಣದುಬ್ಬರ ಮತ್ತು ಸಾಲವು ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ. ಶ್ರೀಲಂಕಾ ಅಲ್ಲದೇ, ಲೆಬನಾನ್, ರಷ್ಯಾ, ಸುರಿನಾಮ್ ಮತ್ತು ಜಾಂಬಿಯಾ ಈಗಾಗಲೇ ಸಾಲದ ಸುಳಿಯಲ್ಲಿ ಸಿಕ್ಕಿಬಿದ್ದಿವೆ. ಅಂದರೆ, ಸಾಲ ಮರುಪಾವತಿ ಮಾಡಲಾಗದೆ ಸುಸ್ತಿದಾರರಾಗಿವೆ. ಬೆಲಾರಸ್ ಸಹ ಆ ಹಾದಿಯಲ್ಲೇ ಇದೆ. ಕೆಲವು ತಿಂಗಳು ಕಳೆದರೆ ಇನ್ನೂ ಒಂದು ಡಜನ್ ದೇಶಗಳು ಸುಸ್ತಿದಾರರಾಗುವ ಅಪಾಯದಲ್ಲಿವೆ. ಈ ಎಲ್ಲಾ ರಾಷ್ಟ್ರಗಳು ಸುಸ್ತಿಯಾಗಿರುವ ಸಾಲದ ಮೊತ್ತವೇ ೪೦೦ ಬಿಲಿಯನ್ ಡಾಲರ್. ರೂಪಾಯಿ ಲೆಕ್ಕದಲ್ಲಿ ೩೨ ಲಕ್ಷ ಕೋಟಿ!


ಅಸಂಸದೀಯ ಪದಗಳು!

ಸಂಸತ್ತಿನ ಕಲಾಪದ ವೇಳೆ ಪ್ರಧಾನಿ ಸೇರಿದಂತೆ ಯಾರನ್ನಾದರೂ ತರಾಟೆಗೆ ತೆಗೆದುಕೊಳ್ಳಬಹುದಿತ್ತು. ಹೀಗೆ ತರಾಟೆಗೆ ತೆಗೆದುಕೊಳ್ಳುವಾಗ ಕೆಲ ಕಠಿಣ ಪದಗಳಿಂದ ಟೀಕಿಸಲೂ ಬಹುದಿತ್ತು. ಈಗ ಅಂತಹ ಕಠಿಣ ಪದಗಳಿಂದ ಟೀಕೆ ಮಾಡುವುದಕ್ಕೂ ನಿರ್ಬಂಧ ಹೇರಲಾಗಿದೆ. ಆಯ್ದ ಕೆಲವು ಪದಗಳನ್ನು ಸಂಸದರು ಬಳಸುವಂತಿಲ್ಲ. ಬಳಸಬಾರದ ಪದಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅವುಗಳಲ್ಲಿ ‘ಜುಮ್ಲಾ ಜೀವಿ’ಯೂ ಸೇರಿದೆ. ವಿರೋಧ ಪಕ್ಷದ ನಾಯಕರು ಮಾಡುತ್ತಿರುವ ಟೀಕೆಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ, ಸಾಮರ್ಥ್ಯ, ಜಾಣ್ಮೆ, ಪ್ರಬುದ್ಧತೆ ಇತ್ಯಾದಿಗಳನ್ನು ವರ್ಣಿಸಲು ಬಳಸಲಾಗುತ್ತಿದ್ದ ಪದಗಳೆಲ್ಲವನ್ನೂ ಅಸಂಸದೀಯ ಪದಗಳ ವ್ಯಾಪ್ತಿಗೆ ತರಲಾಗಿದೆ. ‘ಜುಮ್ಲಾ ಜೀವಿ’ ಪದದ ಹುಟ್ಟಿಗೆ ಒಂದು ಪುಟ್ಟ ಇತಿಹಾಸ ಇದೆ. ಕೃಷಿ ಕಾಯ್ದೆ ವಿರೋಧಿಸಿ ರೈತರು ಚಳಿ, ಮಳೆ, ಬಿಸಿಲಲ್ಲೂ ವರ್ಷವಿಡೀ ಪ್ರತಿಭಟನೆ ಮಾಡುತ್ತಿದ್ದಾಗ, ಸಂಸತ್ತಿನಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ ಅವರು ‘ಆಂದೋಲನ ಜೀವಿ’ಗಳು ಎಂಬ ಪದ ಬಳಸಿ ಟೀಕಿಸಿದ್ದರು. ಅದಾದ ನಂತರ ಪ್ರಧಾನಿ ಮೋದಿ ಅವರಿಗೆ ‘ಜುಮ್ಲಾ ಜೀವಿ‘ ಎಂಬ ಪದ ಖಾಯಂ ಆಗಿತ್ತು! ಅದಕ್ಕೂ ಮುನ್ನ ‘ಜುಮ್ಲೆಬಾಝ್‌‘ ಅನ್ನಲಾಗುತ್ತಿತ್ತು!


ಇಂದಿನಿಂದ ಮತ್ತಷ್ಟು ದುಬಾರಿ ದುನಿಯಾ!

ಸರಕು ಮತ್ತು ಸೇವಾ ತೆರಿಗೆ ಮಂಡಳಿಯ ಇತ್ತೀಚಿನ ತೆರಿಗೆ ಪರಿಷ್ಕರಣೆ ಆದೇಶ ಜುಲೈ ೧೮ರಿಂದ ಜಾರಿಯಾಗುತ್ತಿದೆ. ಅಂದರೆ, ಗ್ರಾಹಕರ ಮೇಲಿನ ತೆರಿಗೆ ಭಾರ ಮತ್ತಷ್ಟು ಏರಲಿದೆ. ತೆರಿಗೆ ಹೇರಿಕೆಯ ಹೊಸ ಅಧ್ಯಾಯಕ್ಕೆ ಗ್ರಾಹಕರು ತೆರೆದುಕೊಳ್ಳಬೇಕಿದೆ. ೫,೦೦೦ ರೂಪಾಯಿಗಳಿಗಿಂತ ಹೆಚ್ಚು ಬಾಡಿಗೆ ಇರುವ ಆಸ್ಪತ್ರೆ ಕೊಠಡಿಗಳು ದುಬಾರಿಯಾಗಲಿವೆ. ಅದು ಶ್ರೀಮಂತರ ಕತೆ. ಶ್ರೀಸಾಮಾನ್ಯರು ಬಳಸುವ ಆಟಾ (ಗೋಧಿ ಹಿಟ್ಟು), ಮೊಸರು, ಪನೀರ್ ಮೇಲೆ ಶೇ.೫ರಷ್ಟು ಜಿಎಸ್‌ಟಿ ಹೇರಲಾಗಿದೆ.
ದಿನಕ್ಕೆ ೧,೦೦೦ ರೂಪಾಯಿ ದರ ಹೊಂದಿರುವ ಹೋಟೆಲ್ ಕೊಠಡಿಗಳು, ಶೈಕ್ಷಣಿಕ ನಕ್ಷೆಗಳು ಮತ್ತು ಚಾರ್ಟ್‌ಗಳು, ಅಟ್ಲಾಸ್‌ಗಳ ಮೇಲೆ ಶೇ.೧೨ರಷ್ಟು ಸರಕು ಮತ್ತು ಸೇವಾ ತೆರಿಗೆ ಹೇರಲಾಗಿದೆ. ನೀವು ಬ್ಯಾಂಕಿನಿಂದ ಪಡೆವ ಚೆಕ್ ಬುಕ್ಕಿನ ಮೇಲೂ ಶೇ.೧೮ರಷ್ಟು ಜಿಎಸ್‌ಟಿ ಇದೆ. ಈಗಾಗಲೇ ಪೆಟ್ರೋಲ್, ಡಿಸೇಲ್, ಎಲ್ ಪಿಜಿ ಸಿಲಿಂಡರ್, ಆಹಾರಧಾನ್ಯಗಳು, ಖಾದ್ಯ ತೈಲಗಳ ದರ ಏರಿಕೆಯಿಂದ ತತ್ತರಿಸುವ ಜನರಿಗೆ ಈಗ ಮತ್ತಷ್ಟು ಹೊರೆ ಹೇರಲಾಗಿದೆಯಷ್ಟೇ!


ಭವಿಷ್ಯ ನಿಧಿಗೂ ತೆರಿಗೆ ಹೇರಿಕೆ!

ತೆರಿಗೆ ಸುಧಾರಣಾ ಪರ್ವವಿದು. ಇದುವರೆಗೆ ಸಂಪೂರ್ಣ ತೆರಿಗೆ ವಿನಾಯಿತಿ ಇದ್ದ ಕಾರ್ಮಿಕರ ಭವಿಷ್ಯ ನಿಧಿಯ ಮೇಲೂ ೨೦೨೨ ಏಪ್ರಿಲ್ ೧ರಿಂದ ತೆರಿಗೆ ಹೇರಲು ನಿರ್ಧರಿಸಲಾಗಿದೆ. ಈ ಮೊದಲು ಕಾರ್ಮಿಕರು ತಮ್ಮ ಭವಿಷ್ಯ ನಿಧಿ ಖಾತೆಗೆ ವಾರ್ಷಿಕ ಎಷ್ಟಾದರೂ ಪಾವತಿ ಮಾಡಬಹುದಿತ್ತು. ಹಾಗೆಯೇ ಭವಿಷ್ಯನಿಧಿಯಲ್ಲಿರುವ ಮೊತ್ತಕ್ಕೆ ಬರುವ ಬಡ್ಡಿಯ ಮೇಲೂ ಯಾವುದೇ ತೆರಿಗೆ ಇರಲಿಲ್ಲ. ಈಗ ಪರಿಷ್ಕೃತ ಆದೇಶದಂತೆ ಒಬ್ಬ ಕಾರ್ಮಿಕ ೨.೫ ಲಕ್ಷ ರೂಪಾಯಿ ಮೀರಿ ಭವಿಷ್ಯ ನಿಧಿಗೆ ಪಾವತಿ ಮಾಡಿದ್ದರೆ, ಅದರ ಮೇಲೆ ತೆರಿಗೆ ಹೇರಲಾಗುತ್ತದೆ. ಅದೇ ವೇಳೆ ಕಾರ್ಮಿಕನ ಭವಿಷ್ಯ ನಿಧಿಯ ಮೇಲೆ ವಾರ್ಷಿಕ ೨.೫ ಲಕ್ಷ ರೂಪಾಯಿಗಿಂದ ಹೆಚ್ಚು ಬಡ್ಡಿ ಬಂದರೆ ಅದಕ್ಕೂ ತೆರಿಗೆ ವಿಧಿಸಲಾಗುತ್ತದೆ. ಅಂದರೆ, ಇನ್ನು ಮುಂದೆ ಭವಿಷ್ಯ ನಿಧಿ ಸಂಪೂರ್ಣ ತೆರಿಗೆ ಮುಕ್ತವಲ್ಲ. ತೆರಿಗೆ ವಿನಾಯಿತಿ ಇದೆ ಎಂಬ ಕಾರಣಕ್ಕೆ ಬಹಳಷ್ಟು ಜನ ಭವಿಷ್ಯನಿಧಿಗೆ ಹೆಚ್ಚಿನ ಪಾಲು ಹೂಡಿಕೆ ಮಾಡುತ್ತಿದ್ದರು. ಹಾಗೆಯೇ ಬಡ್ಡಿ ಸಹ ಬ್ಯಾಂಕುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿತ್ತು. ಇದೀಗ ೨.೫ ಲಕ್ಷ ಮೀರಿದ ಪಾವತಿ ಮತ್ತು ೨.೫ ಲಕ್ಷ ಮೀರಿದ ಬಡ್ಡಿ ಆದಾಯದ ಮೇಲೆ ತೆರಿಗೆ ಬೀಳಲಿದೆ.

andolanait

Recent Posts

ಪಚ್ಚೆದೊಡ್ಡಿ ಗ್ರಾಮಕ್ಕೆ ತ್ರಿಸದಸ್ಯ ಸಮಿತಿ ತಂಡ ಭೇಟಿ

ಸಾರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಸಿಎಂಗೆ ಪತ್ರ ಬರೆದಿದ್ದ ಗ್ರಾಮದ ವಿದ್ಯಾರ್ಥಿಗಳು ಹನೂರು: ತಾಲ್ಲೂಕಿನ ಪಚ್ಚೆದೊಡ್ಡಿ ಗ್ರಾಮದ ನಿವಾಸಿಗಳಿಗೆ ಸಮರ್ಪಕ…

2 hours ago

ತ್ರಿಪುರ ಸುಂದರಿ ಅಮ್ಮನವರ ಜಾತ್ರೆಗೆ ಸಕಲ ಸಿದ್ಧತೆ

ಎಂ.ನಾರಾಯಣ್ ತಿ.ನರಸೀಪುರ ತಾಲ್ಲೂಕಿನ ಮೂಗೂರಿನಲ್ಲಿ ಜ.೩ರಂದು ಆಕರ್ಷಕ ಬಂಡಿ ಉತ್ಸವ; ೫ರಂದು ರಥೋತ್ಸವ ತಿ.ನರಸೀಪುರ: ಪುರಾಣ ಪ್ರಸಿದ್ಧ ತಾಲ್ಲೂಕಿನ ಮೂಗೂರಿನ…

2 hours ago

ಮತ್ತೆ ಆರಂಭವಾದ ಕೋಟೆ ಪೊಲೀಸ್ ಕ್ಯಾಂಟೀನ್

ಶಾಸಕರ ಸೂಚನೆಯ ಮೇರೆಗೆ ಕ್ಯಾಂಟೀನ್ ಆರಂಭ; ಬಡವರು, ಕಾರ್ಮಿಕರು, ವಿದ್ಯಾರ್ಥಿಗಳಿಗೆ ಸಂತಸ ಎಚ್.ಡಿ.ಕೋಟೆ: ಕಡಿಮೆ ದರದಲ್ಲಿ ರುಚಿಕರವಾದ ತಿಂಡಿ, ಊಟ…

2 hours ago

ಗುಬ್ಬಚ್ಚಿ ಶಾಲೆಯಲ್ಲಿ ಬರೀ 12 ವಿದ್ಯಾರ್ಥಿಗಳು!

ವರಹಳ್ಳಿ ಆನಂದ ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾನಿಲಯ ೧ರಿಂದ ೭ನೇ ತರಗತಿವರೆಗೆ ಪ್ರವೇಶಾವಕಾಶ ಇರುವ ಸ.ಹಿ.ಪ್ರಾ. ಶಾಲೆ ಮೈಸೂರು: ನೂರಾರು…

2 hours ago

ಕೊಡಗು‌ ಸಿದ್ದಾಪುರ ದರೋಡೆ ಪ್ರಕರಣ ಭೇದಿಸಲು ವಿಶೇಷ ಕಾರ್ಯಪಡೆ ಸಜ್ಜು

ಸಿದ್ದಾಪುರ :- ನಗರದಲ್ಲಿ ನಡೆದ ದರೋಡೆ ಪ್ರಕರಣ ಭೇದಿಸಲು ಜಿಲ್ಲಾ ಹೆಚ್ಚುವರಿ ಪೋಲೀಸ್ ಅಧೀಕ್ಷರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿದೆ…

11 hours ago