ಶಿಕ್ಷಕನಿಂದಲೇ ವಿದ್ಯಾರ್ಥಿ ಹತ್ಯೆ ಖಂಡನೀಯ
ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಹೆದ್ಲಿ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯೆ ಕಲಿಸಬೇಕಿದ್ದ ಗುರುವೇ ತನ್ನ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಅತಿಥಿ ಶಿಕ್ಷಕನೋರ್ವ ಅದೇ ಶಾಲೆಯ ಸಹೋದ್ಯೋಗಿ ಶಿಕ್ಷಕಿಯ ಮೇಲಿರುವ ವೈಯಕ್ತಿಕ ವೈಷಮ್ಯದಿಂದ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯ ಮೇಲೆ ಕಬ್ಬಿಣದ ಸಲಾಕೆಯಿಂದ ಮನಬಂದಂತೆ ಹಲ್ಲೆ ನಡೆಸಿ ಬಳಿಕ ಆ ಬಾಲಕನನ್ನು ಒಂದನೇ ಮಹಡಿಯಿಂದ ಕೆಳಗೆಸೆದು ಹತ್ಯೆ ಮಾಡಿರುವ ಅಮಾನವೀಯ ಘಟನೆ ಖಂಡನೀಯವಾಗಿದೆ. ಮಕ್ಕಳನ್ನು ದೇಶದ ಸತ್ಪ್ರಜೆಗಳಾಗಿ ರೂಪಿಸುವ ಮಹತ್ತರ ಜವಾಬ್ದಾರಿ ಹೊತ್ತಿರುವ ಶಿಕ್ಷಕರೇ ವಿದ್ಯಾರ್ಥಿಗಳ ಪಾಲಿಗೆ ರಕ್ಕಸರಾದರೆ ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಹೇಗೆ? ಎಂಬುದು ಪ್ರಶ್ನೆಯಾಗಿದೆ. ಆದ್ದರಿಂದ ಈ ಘಟನೆಗೆ ಸಂಬಂಧಪಟ್ಟಂತೆ ಆರೋಪಿ ಶಿಕ್ಷಕನ ವಿರುದ್ಧ ಕಾನೂನು ಕ್ರಮವಹಿಸಿ ಶಿಕ್ಷಣ ಇಲಾಖೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮವಹಿಸಬೇಕು.
-ದಿವ್ಯಶ್ರೀ ದಾಸ್, ಪತ್ರಿಕೋದ್ಯಮ ವಿಭಾಗ, ಮಾನಸಗಂಗೋತ್ರಿ, ಮೈಸೂರು.
ನೇತ್ರರಾಜು ಒಂದು ಬೆರಗು
ಇತ್ತೀಚೆಗೆ ಪತ್ರಿಕಾ ಛಾಯಾಗ್ರಾಹಕ ಎಸ್.ಆರ್.ಮಧುಸೂದನ್ರವರು ಹೊರ ತಂದಿರುವ ನೇತ್ರರಾಜು ಸ್ಮರಣಾರ್ಥ ೨೦೨೩ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವನ್ಯಜೀವಿ ತಜ್ಞ ಸೇನಾನಿ ಅವರು, ನೇತ್ರರಾಜು ಅವರಿಲ್ಲದ ಕಲಾಮಂದಿರವನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ? ಝೆನ್ ವರ್ಣಿಸಲಾಗದಂತೆಯೇ ನೇತ್ರ ಅವರ ಕ್ಯಾರೆಕ್ಟರ್ ಹಿಡಿದಿಡುವುದು ಕಷ್ಟ. ಹಾಗೂ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ನೇತ್ರ ಅವರನ್ನು ಒಂದು ಬೆರಗು, ಅವರಿಗೆ ಭೂತ ಹಾಗೂ ಭವಿಷ್ಯದ ಚಿಂತನೆ ಇಲ್ಲ. ಆತ ನಿಜವಾದ ದಿಗಂಬರ ಜೈನ ಎಂದು ಹೇಳಿದ್ದಾರೆ. ಮತ್ತೊಬ್ಬ ವನ್ಯಜೀವಿ ತಜ್ಞ ಕೃಪಾಕರ ಅವರು, ಬದುಕಿರುವ ತನಕ ತಾನು ತೆಗೆದ ಚಿತ್ರಗಳನ್ನು ಉತ್ತಮ ಚಿತ್ರ ಎಂದು ಹೇಳದೆ ಇನ್ನೂ ಉತ್ತಮ ಚಿತ್ರ ತೆಗೆಯಲು ಸದಾ ಹಂಬಲಿಸುತ್ತಿದ್ದ ವ್ಯಕ್ತಿ ಎಂದು ಸ್ಮರಿಸಿಕೊಂಡರು. ಇಂತಹ ಅದ್ಬುತ ಛಾಯಾಗ್ರಾಹಕ ನೇತ್ರಾರಾಜು ಅವರು ಸಾಹಿತ್ಯದ ಕಾರ್ಯಕ್ರಮಗಳು, ಚಳವಳಿಗಳು, ರಂಗಭೂಮಿಯ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸದೇ ಇರುತ್ತಿರಲಿಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿರುವ ಸಂಗತಿ. ಇಂದು ಅವರನ್ನು ಕಳೆದುಕೊಂಡು ಛಾಯಾಗ್ರಹಣ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಚಿತ್ರಗಳು ಮಾತನಾಡುವಂತೆ ಸೆರೆಹಿಡಿಯುತ್ತಿದ್ದ ನೇತ್ರರಾಜು ಅವರ ಚಿತ್ರಗಳು ಮತ್ತೆ ಬರುವುದಿಲ್ಲ ಎಂಬುದೇ ಬೇಸರದ ವಿಚಾರವಾಗಿದೆ.
-ಬೆಸಗರಹಳ್ಳಿ ರವಿ ಪ್ರಸಾದ್, ಕೆ.ಸಿ.ನಗರ, ಮೈಸೂರು
ನೆಹರು ಭಾವಚಿತ್ರ ಅನಾವರಣಗೊಳಿಸಲಿ
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅದಿವೇಶನದ ಮೊದಲ ದಿನ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಕಾರ್ಯಕ್ರಮವನ್ನು ನಡೆಸಿದ್ದು, ಈ ವೇಳೆ ಪ್ರತಿಪಕ್ಷದವರ ಗೈರು ಕಾಣುತಿತ್ತು. ಅಲ್ಲದೇ ಭಾವಚಿತ್ರ ಅನಾವರಣ ಕಾರ್ಯಕ್ರಮದ ವೇಳೆ ದೇಶ ಕಂಡ ಮೊದಲ ಪ್ರಧಾನಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಜವಾಹರಲಾಲ್ ನೆಹರು ಭಾವಚಿತ್ರವನ್ನು ಕಡೆಗಣಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ರೀತಿ ದೇಶದ ಮೊದಲ ಪ್ರಧಾನಿಯನ್ನು ಅವಮಾನಿಸುವುದು ಎಷ್ಟರ ಮಟ್ಟಿಗೆ ಸರಿ? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ದೇಶದ ಮೊದಲ ಪ್ರಧಾನಿ ಹುದ್ದೆಗೆ ಪಕ್ಷಾತೀತವಾಗಿ ಗೌರವ ಸೂಚಿಸುವುದು ಎಲ್ಲ ಪಕ್ಷಗಳು ಹಾಗೂ ಸಾರ್ವಜನಿಕರ ಕರ್ತವ್ಯ. ಆದರೆ ಇಲ್ಲಿ ಸರ್ಕಾರವೇ ಮೊದಲ ಪ್ರಧಾನಿಯ ಭಾವಚಿತ್ರ ಅನಾವರಣಗೊಳಿಸದೆ ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನೆ ಮಾಡುತ್ತಿದೆ. ಆದ್ದರಿಂದ ಇನ್ನಾದರೂ ಆಡಳಿತ ಹಾಗೂ ವಿರೋಧ ಪಕ್ಷಗಳು ತಮ್ಮ ಒಳಜಗಳವನ್ನು ಬದಿಗಿಟ್ಟು, ಸ್ವಾತಂತ್ರ್ಯ ಹೋರಾಟಗಾರರಿಗೆ ಅಗೌರವ ತರುವ ಪ್ರಯತ್ನಕ್ಕೆ ಮುಂದಾಗದೆ ಎಲ್ಲ ಹೋರಾಟಗಾರರಿಗೂ ಗೌರವ ನೀಡುವ ಜೊತೆಗೆ ಈ ದೇಶದ ಮೊದಲ ಪ್ರಧಾನಿ ನೆಹರು ಅವರ ಭಾವಚಿತ್ರವನ್ನೂ ಅನಾವರಣಗೊಳಿಸಬೇಕಿದೆ.
-ಸಾಗರ್ ದ್ರಾವಿಡ್, ಹಿರಿಯೂರು
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಬಾಳೆಕೆರೆ ಗ್ರಾಮದಲ್ಲಿ ಗ್ರಂಥಾಲಯವಿಲ್ಲದೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಗ್ರಾಮದಲ್ಲಿ ೧೦೦ಕ್ಕೂ ಹೆಚ್ಚು…
ಪತ್ರಿಕಾ ವಿತರಕರು ಅಕ್ಷರಶಃ ಸಮಾಜದ ಅದೃಶ್ಯ ಕಾಯಕಯೋಗಿಗಳು. ಮಳೆ, ಗಾಳಿ, ಚಳಿ ಎನ್ನದೆ ಜ್ಞಾನದೀವಿಗೆ ಹಂಚುವ ಇವರ ಬದುಕು ಇಂದಿಗೂ…
ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿರುವ ಸರ್ಕಾರಿ ಶಾಲೆಯನ್ನು ಉನ್ನತಿಕರಣಗೊಳಿಸದೇ ಇರುವುರಿಂದ ಪೋಷಕರು ಮಕ್ಕಳನ್ನು ಶಾಲೆಗೆ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಪ್ರಸ್ತುತ…
ಸೈಬರ್ ವಂಚನೆಯ ಸಂತ್ರಸ್ತರಿಗೆ ಗರಿಷ್ಟ ರೂ.೨೫,೦೦೦ ಪರಿಹಾರ ನೀಡುವುದಾಗಿ ಭಾರತದ ರಿಸರ್ವ್ ಬ್ಯಾಂಕ್ ಪ್ರಕಟಿಸಿರುವುದು ಸ್ವಾಗತಾರ್ಹವಾಗಿದೆ. ಆದರೆ, ಅನೇಕ ಸಂದರ್ಭಗಳಲ್ಲಿ…
ಮೈಸೂರಿನ ಕೆಲವು ಬಡಾವಣೆಗಳಲ್ಲಿ ಈಗಾಗಲೇ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ದವರು ಭೂಗತ ಕೇಬಲ್ ಅಳವಡಿಸುವ ಸಲುವಾಗಿ ಯಂತ್ರಗಳ…
ಡಾ.ಶಿವಲಿಂಗಸ್ವಾಮಿ ಎಚ್.ಕೆ. ಯುಜಿಸಿ- ೨೦೨೬ ನಿಯಮಾವಳಿಗಳು ಹೇಳುವುದೇನು? ಉನ್ನತ ಶಿಕ್ಷಣದಲ್ಲಿ ಸೃಷ್ಟಿಸಬೇಕಿರುವ ಸಮಾನತೆಗೆ ಸಂಬಂಧಿಸಿದಂತೆ ಯುಜಿಸಿ (ವಿಶ್ವವಿದ್ಯಾಲಯಗಳ ಅನುದಾನ ಆಯೋಗ)-೨೦೨೬ರ…