ಎಡಿಟೋರಿಯಲ್

ಅಭಿಜಾತ ವಿದ್ವಾಂಸ ಪ್ರೊ.ರಾಗೌ

ಪ್ರೊ.ಸಿ.ಪಿ.ಸಿದ್ಧಾಶ್ರಮ

‘ರಾಗೌ’ ಎಂಬ ಕಾವ್ಯ ನಾಮದಿಂದ ಪ್ರಸಿದ್ಧರಾಗಿ ರುವ ಪ್ರೊ.ರಾಮೇಗೌಡರು ಕಾವ್ಯ, ವಿಮರ್ಶೆ, ಸಂಶೋ ಧನೆ, ಗ್ರಂಥಸಂಪಾದನೆ, ಜಾನಪದ, ಮಕ್ಕಳ ಸಾಹಿತ್ಯ, ನಾಟಕ ಮುಂತಾದ ಪ್ರಕಾರಗಳಲ್ಲಿ ಆರು ದಶಕಗಳಿಂದ ನಿರಂತರ ಕೃಷಿ ಮಾಡಿ ಅರವತ್ತಕ್ಕಿಂತಲೂ ಹೆಚ್ಚಿನ ಮೌಲಿಕ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡುವುದರ ಮೂಲಕ ಸಾಹಿತ್ಯ ಕ್ಷೇತ್ರದ ಕ್ಷಿತಿಜವನ್ನು ವಿಸ್ತರಿಸಿದ್ದಾರೆನ್ನಬೇಕು.

ರಾಗೌ ಅವರು ಮದ್ದೂರು ತಾಲ್ಲೂಕಿನ ಈರೇ ಗೌಡನದೊಡ್ಡಿಯ ಮಾಸ್ತಿಗೌಡ ಮತ್ತು ನಿಂಗಮ್ಮ ದಂಪತಿಗಳ ಮಗನಾಗಿ 1942ರ ಏ.3ರಂದು ಜನಿಸಿದರು. ಬಡತನವಿದ್ದರೂ ಶಿಕ್ಷಣದಿಂದ ವಂಚಿತ ರಾಗದೆ ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಶಿಕ್ಷಣದವರೆಗೆ ಶ್ರದ್ಧೆ ನಿಷ್ಠೆಯಿಂದ ಓದಿ ಕನ್ನಡ ಎಂ.ಎ ಪದವಿಯನ್ನು ಚಿನ್ನದ ಪದಕದೊಂದಿಗೆ ಮೊದಲ ರ‍್ಯಾಂಕ್‌ನಲ್ಲಿ ತೇರ್ಗಡೆಯಾದರು.

‘ಕನ್ನಡ ಕಾವ್ಯಗಳಲ್ಲಿ ಐತಿಹಾಸಿಕ ವಿಚಾರಗಳು’ ಎಂಬ ವಿಷಯ ಕುರಿತು ಡಾ.ಹಾ.ಮಾ.ನಾಯಕರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿಯನ್ನು ಪಡೆಯುತ್ತಾರೆ. ಅನಂತರ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ 37 ವರ್ಷ ಪ್ರಾಧ್ಯಾಪಕರಾಗಿ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತರಾದರು. ಇವರ ಸಾಹಿತ್ಯ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಹಲಸಂಗಿ ಗೆಳೆಯರ ಪ್ರತಿಷ್ಠಾನ ಪ್ರಶಸ್ತಿ, ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷ ಗೌರವ ಮುಂತಾದ ಇಪ್ಪತ್ತಕ್ಕೂ ಹೆಚ್ಚಿನ ಪ್ರಶಸ್ತಿ, ಗೌರವಗಳು ಸಂದಿವೆ. ಇವರ ಪುಸ್ತಕಗಳಿಗೆ ಐದು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಸಂದಿರುವುದು ದಾಖಲೆಯೇ ಸರಿ.

ಕಾವ್ಯ: ರಾಗೌ ಅವರ ಮೊದಲ ಕವನಸಂಕಲನ ‘ಯಾತ್ರೆ’ 1966ರಲ್ಲಿ ಪ್ರಕಟವಾಯಿತು. ಅಲ್ಲಿಂದ ಆರಂಭವಾದ ರಾಗೌ ಕಾವ್ಯಪಯಣ ತೆಪ್ಪ, ಮೋಡ ಮುಸುಕಿದ ಆಕಾಶ, ನೆಲದ ಮರೆಯ ನಿಧಾನ, ಮಾತು ಮೌನಗಳ ನಡುವೆ, ಅನಾಗತ, ಕೋಗಿಲೆ ಗೊಂದು ಕೋರಿಕೆ, ನೀರತಾವರೆ, ಕಾಲಾತೀತ, ನಿರಾವರಣ ಮುಂತಾಗಿ 17 ಕವನ ಸಂಕಲನಗಳವರೆಗೆ ಬೆಳೆದುನಿಂತಿದೆ. ಸಾವಿರ ಪುಟಗಳ ಅವರ ಸಮಗ್ರ ಕಾವ್ಯವೂ ಪ್ರಕಟವಾಗಿದೆ. ರಾಗೌ ಅವರ ಬದುಕಿನಂತೆ ಅವರ ಕಾವ್ಯವೂ ಪ್ರಾಮಾಣಿಕ ಮತ್ತು ಮಾನವೀಯ ಮೌಲ್ಯವುಳ್ಳದ್ದು.

ವಿಮರ್ಶೆ: ಕನ್ನಡದ ಶ್ರೇಷ್ಠ ವಿಮರ್ಶಕರಾದ ರಾಗೌ ಅವರು ರಾಘವಾಂಕ, ಕಾವ್ಯಾನುಶೀಲನ, ಅವಗಾ ಹನ, ಕುವೆಂಪು ಸಾಹಿತ್ಯ ವಿಮರ್ಶನ, ಪ್ರಾಸ್ತಾವಿಕ, ದುರ್ಗಸಿಂಹ, ಪ್ರಾಚೀನ ಕಾವ್ಯ ಚಿಂತನ, ಬಿ.ಎಂ.ಶ್ರೀಕಂಠಯ್ಯ, ಟಿ.ಎಸ್.ವೆಂಕಣ್ಣಯ್ಯ ಮುಂತಾದ ಹದಿನೈದಕ್ಕೂ ಹೆಚ್ಚಿನ ವಿಮರ್ಶಾ ಕೃತಿಗಳನ್ನು ಪ್ರಕಟಿಸಿದ್ದಾರೆ.

ಸಂಶೋಧನೆ: ಯಾವುದೇ ವಿಷಯ ಕುರಿತು ಬಡಪಟ್ಟಿಗೆ ನಿರ್ಣಯಕ್ಕೆ ಬರದ ರಾಗೌ ಅವರು ವಿಷಯಕ್ಕೆ ಸಂಬಂಧಿಸಿದ ಎಲ್ಲ ಮೂಲಚೂಲಗಳನ್ನು ಆಕರಸಾಮಗ್ರಿಯನ್ನು ಸಮಗ್ರವಾಗಿ ಹೆಕ್ಕಿತೆಗೆದು ತಳಮಟ್ಟದಿಂದ ಶೋಧಿಸಿ ಸತ್ಯವನ್ನು ಕಾಣಿಸುವ ಗಂಭೀರ ಶಿಸ್ತಿನ ನಿಷ್ಠಾವಂತ ಶುದ್ಧ ಸಂಶೋಧಕರು. ಈ ಮಾತಿಗೆ ನಿದರ್ಶನವಾಗಿ ಅವರ ‘ಕನ್ನಡ ಕಾವ್ಯ ಗಳಲ್ಲಿ ಐತಿಹಾಸಿಕ ವಿಚಾರಗಳುೞ ಎಂಬ ಸಂಶೋಧನಾ ಕೃತಿ ಕನ್ನಡಿಗರ ಮುಂದಿದೆ. ಅವರ ಸಂಶೋಧನೆ ಕೇವಲ ಪದವಿಗೋಸ್ಕರ ನಡೆದದ್ದಲ್ಲ. ನೈಜ ಸಂಶೋಧಕನೊಬ್ಬನ ದೀರ್ಘಕಾಲದ ಶ್ರಮಪೂರ್ಣವಾದ ಸತ್ಯಾನ್ವೇಷಣೆಯ ಫಲವಾಗಿ ಮೂಡಿಬಂದ ಕನ್ನಡದ ಶ್ರೇಷ್ಠ ಸಂಶೋಧನಾ ಕೃತಿಯಿದು. ‘ಕವಿರಾಜಮಾರ್ಗ’ ದಿಂದ ಹಿಡಿದು ‘ಕೆಳದಿನೃಪವಿಜಯ’ದವರೆಗಿನ ಸುಮಾರು ಒಂದುಸಾವಿರ ವರ್ಷ ವ್ಯಾಪ್ತಿಯ ಕನ್ನಡ ಕಾವ್ಯಗಳನ್ನು ಕೂಲಂಕಷವಾಗಿ ಅಭ್ಯಾಸಿಸಿ ಅಲ್ಲಿನ ಐತಿಹಾಸಿಕ ವಿಚಾರಗಳನ್ನು ಶಾಸನಗಳೊಂದಿಗೆ ಹೋಲಿಸಿ ಸತ್ಯಾಂಶವನ್ನು ಶೋಧಿಸಿ ನೈಜ ಇತಿಹಾ ವನ್ನು ಪುನಾರಚಿಸುವ ಬಹುದೊಡ್ಡ ಕೆಲಸವಿದು.

ಗ್ರಂಥಸಂಪಾದನೆ : ಗ್ರಂಥಸಂಪಾದನ ಕ್ಷೇತ್ರದಲ್ಲೂ ರಾಗೌ ಉತ್ತಮ ಕೆಲಸವನ್ನೇ ಮಾಡಿದ್ದಾರೆ. ರನ್ನನ ‘ಸಾಹಸಭೀಮವಿಜಯಂ’, ‘ಅಜಿತತೀರ್ಥಂಕರ ಪುರಾಣ’, ಲಕ್ಷಿ ಶನ ‘ಜೈಮಿನಿ ಭಾರತ’ ಮತ್ತು ಪಂಪಕವಿಯ ‘ಆದಿಪುರಾಣ’ ಕೃತಿಗಳನ್ನು ಬಿ.ಎಸ್.ಸಣ್ಣಯ್ಯ ಅವರೊಂದಿಗೆ ಜಂಟಿಯಾಗಿ ಸಂಪಾದಿಸಿದ್ದರೆ, ‘ಸರ್ವಜ್ಞನ ವಚನಗಳು’, ದೇವಚಂದ್ರನ ‘ರಾಜಾವಳಿ ಕಥೆ’ ಕೃತಿಗಳನ್ನು ಸ್ವತಂತ್ರವಾಗಿ ಸಂಪಾದಿಸಿದ್ದಾರೆ.

ಜಾನಪದ: ಜಾನಪದ ಕ್ಷೇತ್ರದ ದೊಡ್ಡ ವಿದ್ವಾಂಸರಾದ ರಾಗೌ ಜನಪದ ಕಥೆ, ಒಗಟು, ಗಾದೆ, ಕಥನಕವನ, ಶಿಶುಪ್ರಾಸ ಮುಂತಾದ ಜನಪದ ಪ್ರಕಾರಗಳ ಆರೆಂಟು ಸಂಗ್ರಹವನ್ನು ಪ್ರಕಟಿಸಿದ್ದಲ್ಲದೆ, ಈ ಪ್ರಕಾರಗಳಿಗೆ ಸಂಬಂಧಿಸಿದ ತಾತ್ವಿಕ ಚಿಂತನೆಯನ್ನು ಅಂತರ್‌ಶಿಸ್ತೀಯ ನೆಲೆಯಲ್ಲಿ ಕೈಗೊಂಡು ‘ಜಾನಪದ ತತ್ವಾರ್ಥ ಪ್ರವೇಶ’ದಂಥ ಮೌಲಿಕ ಕೃತಿಯನ್ನು, ‘ಜನಪದ ಮಹಾಭಾರತ ಸಮಾಲೋಚನೆೞಯಂಥ ಮಹತ್ವದ ಕೃತಿಯನ್ನು ಪ್ರಕಟಿಸಿರುವುದು ಅವರನ್ನು ಬಹು ಎತ್ತರಕ್ಕೆ ನಿಲ್ಲಿಸಿದೆ. ಉತ್ತಮ ಮಕ್ಕಳ ಸಾಹಿತಿಯಾಗಿರುವ ರಾಗೌ ಒಳ್ಳೆಯ ನಾಟಕಕಾರರಾಗಿದ್ದು, ಅವರ ‘ದೊರೆ ದುರ್ಯೋಧನ’ ಸಮಕಾಲೀನ ಆಶಯದ ಉತ್ತಮ ಐತಿಹಾಸಿಕ ನಾಟಕವಾಗಿದೆ.

andolanait

Recent Posts

ಓದುಗರ ಪತ್ರ: ರಸ್ತೆ ದುರಸ್ತಿಗೊಳಿಸಿ

ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದ ರಸ್ತೆ ಹಾಳಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಹರ ಸಾಹಸ ಮಾಡಬೇಕಾಗಿದೆ. ರಸ್ತೆಯ…

60 mins ago

ಓದುಗರ ಪತ್ರ: ಮಾನಸ ಗಂಗೋತ್ರಿಯಲ್ಲಿ ಕಸ ತೆರವುಗೊಳಿಸಿ

ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಆವರಣದಲ್ಲಿ ಜ್ಯೂಸ್ ಸೆಂಟರ್, ಕಾಫಿ, ಟೀ ಅಂಗಡಿಗಳು ಪ್ಲಾಸ್ಟಿಕ್ ಕವರ್, ನೀರಿನ ಬಾಟಲಿ, ಪ್ಲಾಸ್ಟಿಕ್ ಕಪ್‌ಗಳನ್ನು…

1 hour ago

ಹಾರ್ಮುಜ್ ಹಾದಿಯಲ್ಲಿ ಬಟ್ಟಬಯಲಾದ ನೀತಿ ವೈಫಲ್ಯ

ಭಾರತದ ಹೆಚ್ಚಿನ ಕುಟುಂಬಗಳಿಗೆ ಅಡುಗೆ ಅನಿಲ ಅಥವಾ ಎಲ್‌ಪಿಜಿ ಎಂಬುದು ದಿನಚರಿಯ ಅವಿಭಾಜ್ಯ ಅಂಗವಾಗಿದೆ. ಸಿಲಿಂಡರ್ ಯಾವಾಗ ಖಾಲಿಯಾಗುತ್ತದೆ ಎನ್ನುವುದರತ್ತ…

1 hour ago

ಕಡಂಗಮರೂರು ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ

ಗ್ರಾಮದಲ್ಲಿ ಆತಂಕ ಸೃಷ್ಟಿಸಿದ ಆನೆಗಳ ಹಿಂಡು; ಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರ ಒತ್ತಾಯ ಕಾಂಗೀರ ಬೋಪಣ್ಣ ವಿರಾಜಪೇಟೆ: ಸಮೀಪದ ಅರಣ್ಯ ಪ್ರದೇಶದಿಂದ…

1 hour ago

ಗುಂಡ್ಲುಪೇಟೆ: ಟಿಪ್ಪರ್‌ಗಳಿಗೆ ಬೀಳಬೇಕಿದೆ ಬ್ರೇಕ್

ಒಂದು ವರ್ಷದಲ್ಲಿ ಹತ್ತಕ್ಕೂ ಹೆಚ್ಚು ಅಪಘಾತ; ಗಣಿಗಾರಿಕೆ ಹಗಲು-ರಾತ್ರಿ ನಡೆಯುವುದರಿಂದ ಟಿಪ್ಪರ್‌ಗಳ ಸಂಚಾರ ಹೆಚ್ಚಳ ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ…

1 hour ago