ಎಡಿಟೋರಿಯಲ್

ಗಿಡಗಳ ಫೀಸು ಪಡೆಯುವ ಅಪರೂಪದ ಕೋಚಿಂಗ್ ಕ್ಲಾಸ್!

ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಕೊಡಲು ಹುಟ್ಟಿಕೊಂಡ ‘ಬಿಎಎಸ್ ಕ್ಲಬ್’ ಪರಿಸರ ಜಾಗೃತಿ ಮೂಡಿಸುತ್ತಾ ಇದುವರೆಗೆ ೧.೭ ಲಕ್ಷ ಗಿಡಗಳನ್ನು ನೆಟ್ಟಿದೆ
ಪಂಜು ಗಂಗೊಳ್ಳಿ

ಬಿಹಾರದ ಸಮಷ್ಟಿಪುರದ ಬಲ್ಜಿತ್ ಕುಮಾರ್‌ನ ತಂದೆ ಗಾರೆ ಕೆಲಸ ಮಾಡುವ ಒಬ್ಬ ದಿನಗೂಲಿ. ಆರ್ಥಿಕ ಕಾರಣದಿಂದ ಸಹಜವಾಗಿಯೇ ಈತನಿಗೆ ಬಲ್ಜಿತ್‌ನ ಶಿಕ್ಷಣದ ಖರ್ಚನ್ನು ಸಂಭಾಳಿಸುವುದು ಬಹಳ ಕಠಿಣವಾಗಿತ್ತು. ಆದರೂ, ಬಲ್ಜಿತ್ ಉತ್ತಮ ಶಿಕ್ಷಣ ಪಡೆದು ಈಗ ರೈಲ್ವೇಯಲ್ಲಿ ನೌಕರಿ ಮಾಡುತ್ತಿದ್ದಾನೆ. ಇದಕ್ಕೆ ಕಾರಣ ಸಮಷ್ಟೀಪುರದ ‘ಬಿಎಸ್‌ಎಸ್ ಕ್ಲಬ್’ ಎಂಬ ಒಂದು ಕೋಚಿಂಗ್ ಕ್ಲಾಸು. ಬಲ್ಜಿತ್ ಕುಮಾರ್‌ನಂತೆಯೇ ಪಿಯೂಷ್ ಕುಮಾರ್ ಕೂಡಾ ಒಂದು ಬಡ ಕುಟುಂಬದಿಂದ ಬಂದವನು. ಅವನ ತಂದೆ ಒಂದು ಚಿಕ್ಕ ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ. ಅವನೂ ಇದೇ ‘ಬಿಎಸ್‌ಎಸ್ ಕ್ಲಬ್’ ಕೋಚಿಂಗ್ ಕ್ಲಾಸಿನ ನೆರವಿನಿಂದ ಈಗ ದೆಹಲಿಯಲ್ಲಿ ಇನ್‌ಕಮ್ ಟ್ಯಾಕ್ಸ್ ಇಲಾಖೆಯಲ್ಲಿ ನೌಕರಿಯಲ್ಲಿದ್ದಾನೆ. ಬಲ್ಜಿತ್ ಕುಮಾರ್ ಮತ್ತು ಪಿಯೂಷ್ ಕುಮಾರ್ ಇಬ್ಬರೂ ತಮ್ಮ ಶಿಕ್ಷಣಕ್ಕಾಗಿ ಖರ್ಚು ಮಾಡಿದ್ದು ಕೇವಲ ತಲಾ ೧೮ ಗಿಡಗಳು! ಹೌದು, ೧೮ ಗಿಡಗಳು!!

ಇಂದು ದೇಶದ ಮೂಲೆ ಮೂಲೆಗಳಲ್ಲೂ ಕೋಚಿಂಗ್ ಕ್ಲಾಸುಗಳು ನಾಯಿ ಕೊಡೆಗಳಂತೆ ಹುಟ್ಟಿಕೊಂಡಿವೆ. ಇವೆಲ್ಲವೂ ಹಣ ಮಾಡಲು ಹುಟ್ಟಿಕೊಂಡ ಕೇಂದ್ರಗಳೆಂಬುದು ಸಾಮಾನ್ಯ ನಂಬುಗೆ. ಈ ನಂಬಿಕೆ ಸಂಪೂರ್ಣವಾಗಿ ಸುಳ್ಳೂ ಅಲ್ಲ. ಆದರೆ, ಬಿಹಾರದ ಸಮಷ್ಟಿಪುರದಲ್ಲಿರುವ ‘ಬಿಎಸ್‌ಎಸ್ ಕ್ಲಬ್’ ಕೋಚಿಂಗ್ ಕ್ಲಾಸ್ ಇದಕ್ಕೊಂದು ಅಪವಾದ. ಬಡಕುಟುಂಬಗಳ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಕೊಡಲು ಹುಟ್ಟಿಕೊಂಡ ‘ಬಿಎಸ್‌ಎಸ್ ಕ್ಲಬ್’ ತನ್ನ ವಿದ್ಯಾರ್ಥಿಗಳಿಂದ ಫೀಸಿನ ರೂಪದಲ್ಲಿ ಪಡೆಯವುದು ೧೮ ಗಿಡಗಳು!

ಇಂದು ಬಲ್ಜಿತ್ ಕುಮಾಕ್ ಮತ್ತು ಪಿಯೂಷ್ ಕುಮಾರ್‌ರಂತಹ ಏಳು ನೂರಕ್ಕೂ ಹೆಚ್ಚು ಬಡಮಕ್ಕಳು ಒಳ್ಳೆಯ ಶಿಕ್ಷಣ ಪಡೆದು, ಪರೀಕ್ಷೆಗಳನ್ನು ಪಾಸು ಮಾಡಿ ಸರ್ಕಾರೀ ಇಲಾಖೆಗಳಲ್ಲಿ ಉದ್ಯೋಗ ಪಡೆದಿದ್ದಾರೆ.

ಬಿಹಾರದ ರೊಸೇರಾ ನಗರದ ೩೪ ವರ್ಷ ಪ್ರಾಯದ ರಾಜೇಶ್ ಕುಮಾರ್ ಸುಮನ್ ಒಬ್ಬ ಪರಿಸರ ಮತ್ತು ‘ಕ್ಲೈಮೇಟ್ ಚೇಂಜ್’ ಚಳವಳಿಗಾರ. ೨೦೦೮ ರಲ್ಲಿ ಅವರು ‘ಬಿಎಸ್‌ಎಸ್ ಕ್ಲಬ್’ ಕೋಚಿಂಗ್ ಕ್ಲಾಸನ್ನು ಶುರು ಮಾಡಿದರು. ಬಿಎಸ್‌ಎಸ್ ಕ್ಲಬ್ ಅನ್ನುವುದು ‘ಬಿನೋದ್ ಸ್ಮೃತಿ ಸ್ಟಡಿ ಕ್ಲಬ್’ ಅನ್ನುವುದರ ಚುಟುಕು ರೂಪ. ಬಿನೋದ್ ಸ್ಮೃತಿ ರಾಜೇಶ್ ಕುಮಾರರ ಸೋದರ ಮಾವನ ಹೆಸರು. ಅವರೇ ರಾಜೇಶ್ ಕುಮಾರ್‌ಗೆ ಬಡಮಕ್ಕಳಿಗೆ ಸಹಾಯ ಮಾಡು ಎಂದು ಉತ್ತೇಜಿಸಿದ ಕಾರಣ ಅವರ ಹೆಸರಲ್ಲೇ ಈ ಕೋಚಿಂಗ್ ಕ್ಲಾಸನ್ನು ತೆರೆದರು. ಅದರಂತೆ, ‘ಬಿಎಸ್‌ಎಸ್ ಕ್ಲಬ್’ ಅವತ್ತಿನಿಂದ ಈವರೆಗೆ ೧೦ ಸಾವಿರಕ್ಕೂ ಹೆಚ್ಚು ಬಡಮಕ್ಕಳ ಬದುಕನ್ನು ಹಸನಾಗಿಸಿದೆ.

ಆದರೆ, ೧೮ ಗಿಡಗಳನ್ನು ಫೀಸಿನ ರೂಪದಲ್ಲಿ ಪಡೆಯುವುದಕ್ಕೆ ಕಾರಣವೇನು? ಎಂದು ಕೇಳಿದರೆ ರಾಜೇಶ್ ಕುಮಾರ್, ‘ಒಬ್ಬ ಮನುಷ್ಯ ತನ್ನ ಜೀವಮಾನದಲ್ಲಿ ಸರಾಸರಿ ೧೮ ಗಿಡಗಳು ಪರಿಸರಕ್ಕೆ ಬಿಡುಗಡೆ ಮಾಡುವ ಪ್ರಮಾಣದಷ್ಟು ಆಮ್ಲಜನಕವನ್ನು ಉಸಿರಾಡುತ್ತಾನೆ. ಮಕ್ಕಳಲ್ಲಿ ಮನುಷ್ಯನ ಬದುಕಿನಲ್ಲಿ ಗಿಡಗಳ ಪ್ರಾಮುಖ್ಯತೆ ಮನದಟ್ಟಾಗಲು ಅವರಿಂದ ಫೀಸಿನ ರೂಪದಲ್ಲಿ ೧೮ ಗಿಡಗಳನ್ನು ಪಡೆಯುತ್ತೇನೆ’ ಎಂದು ಹೇಳುತ್ತಾರೆ. ಹದಿನೆಂಟು ಗಿಡಗಳ ಫೀಸಿನ ಕಾರಣಕ್ಕಾಗಿ ಸ್ಥಳಿಯರು ‘ಬಿಎಸ್‌ಎಸ್ ಕ್ಲಬ್’ ನ್ನು ಗ್ರೀನ್ ಪಾಠಶಾಲಾ ಎಂದು ಕರೆಯುತ್ತಾರೆ.

ಕಳೆದ ೧೪ ವರ್ಷಗಳಲ್ಲಿ ‘ಬಿಎಸ್‌ಎಸ್ ಕ್ಲಬ್’ ಸುಮಾರು ೧.೭ ಲಕ್ಷ ಗಿಡಗಳನ್ನು ಫೀಸಿನ ರೂಪದಲ್ಲಿ ಪಡೆದಿದೆ. ಅದನ್ನೆಲ್ಲ ಉತ್ತರ ಬಿಹಾರದ ಸಮಷ್ಟಿಪುರ, ಬೆಗುಸರೈ, ದರ್ಭಾಂಗ, ಖಾಗಾರಿಯಾ ಮತ್ತು ಮುಝಾಪ್ಪರ್‌ಪುರ ಮೊದಲಾದ ಜಿಲ್ಲೆಗಳಲ್ಲಿ ನೆಟ್ಟಿದ್ದಾರೆ.

ಮಕ್ಕಳಿಂದ ಫೀಸು ಪಡೆಯದೆ ಕೋಚಿಂಗ್ ಕ್ಲಾಸಿನ ಖರ್ಚನ್ನು ಹೇಗೆ ನಿಭಾಯಿಸುತ್ತಾರೆ? ಅದಕ್ಕೆ ರಾಜೇಶ್ ಕುಮಾರ್, ‘ನಮ್ಮಲ್ಲಿ ಕೆಲಸ ಮಾಡುವ ಶಿಕ್ಷಕರೆಲ್ಲ ಸ್ವಯಂ ಸೇವಕರು. ಅವರೆಲ್ಲರೂ ಜೀವನ ನಿರ್ವಹಣೆಗೆ ಬೇರೆ ಉದ್ಯೋಗ ಮಾಡುತ್ತಾರೆ. ಸ್ವತಃ ನಾನು ಕೂಡಾ ಕೃಷಿ ಮಾಡುವ ಮೂಲಕ ನನ್ನ ಜೀವನ ನಡೆಸುತ್ತಿದ್ದೇನೆ’ ಎಂದು ಹೇಳುತ್ತಾರೆ. ಪ್ರಾರಂಭದಲ್ಲಿ ರಾಜೇಶ್ ಕುಮಾರ್ ಬಹಳ ಕಷ್ಟ ಪಡಬೇಕಾಯಿತು. ಅವರು ಯಾವುದಾದರೂ ಕಾರ್ಯಕ್ರಮಗಳಿಗೆ ಹೋಗಿ, ಗಿಡಗಳ ಪ್ರಸ್ತಾಪ ಮಾಡಿದರೆ ಜನ ಅವರನ್ನು ದೂರ ಓಡಿಸುತ್ತಿದ್ದರು. ಅವರನ್ನು ಹುಚ್ಚ ಅಂತ ಗೇಲಿ ಮಾಡುತ್ತಿದ್ದರು. ಇಂದು ಅದೇ ಜನ ತಮ್ಮ ಕಾರ್ಯಕ್ರಮಗಳಿಗೆ ಅವರನ್ನು ಅತಿಥಿಯಾಗಿ ಕರೆಸುತ್ತಾರೆ. ತಮ್ಮ ಮದುವೆ, ಜನ್ಮದಿನಾಚರಣೆ ಮೊದಲಾದ ಸಮಾರಂಭಗಳ ಆಮಂತ್ರಣ ಪತ್ರಿಕೆಗಳಲ್ಲಿ ಅವರ ಹೆಸರು ಛಾಪಿಸುತ್ತಾರೆ.

ರಾಜೇಶ್ ಕುಮಾರ್ ಗಿಡ ನೆಡುವುದರ ಜೊತೆಯಲ್ಲಿ ತನ್ನದೇ ರೀತಿಯಲ್ಲಿ ‘ಬೇಟಿ ಪಡಾವ್ ಬೇಟಿ ಬಚಾವ್’ ಕಾರ್ಯಕ್ರಮವನ್ನೂ ನಡೆಸುತ್ತಾರೆ. ‘ಬಿಎಸ್‌ಎಸ್ ಕ್ಲಬ್’ ಸಂಜೆ ಹೊತ್ತು ಹುಡುಗರಿಗೆ ಕ್ಲಾಸು ನಡೆಸಿದರೆ, ಬೆಳಗ್ಗಿನ ಹೊತ್ತು ಹುಡುಗಿಯರಿಗೆ. ಹುಡುಗಿಯರ ಸಂಖ್ಯೆ ಹೆಚ್ಚೂ ಕಡಿಮೆ ಹುಡುಗರಷ್ಟೇ ಇದೆ. ಹಳ್ಳಿಗಳಲ್ಲಿ ಸುತ್ತಿ, ‘ಮನೆಯ ಹೆಣ್ಣು ಮಕ್ಕಳ ಹೆಸರಲ್ಲಿ ಮನೆ ಎದುರು ಗಿಡ ನೆಡಿ. ಮುಂದೆ ಆ ಹೆಣ್ಣು ಮಕ್ಕಳು ಮದುವೆಯಾಗಿ ಹೋದಾಗ ಆ ಗಿಡಗಳು ನಿಮ್ಮ ಮನೆ ಎದುರು ನಳನಳಿಸುತ್ತ ದಿನಾ ಅವರ ನೆನಪನ್ನು ಮಾಡಿಸುತ್ತವೆ’ ಎಂದು ಹಳ್ಳಿಯ ಜನರನ್ನು ಕೇಳಿಕೊಳ್ಳುತ್ತಾರೆ. ಹಾಗೆಯೇ, ಹೆಣ್ಣು ಮಕ್ಕಳಿಗೂ ಅವರ ಕೈಯ್ಯಾರೆ ಗಿಡ ನೆಡಲು ಹುರಿದುಂಬಿಸುತ್ತಾರೆ. ಮುಂದೆ ಅವರು ಮದುವೆಯಾಗಿ ಬೇರೆ ಮನೆಗೆ ಹೋದಾಗ ಅವರ ಹೆತ್ತವರು ಆ ಗಿಡಗಳನ್ನು ತಮ್ಮ ಹೆಣ್ಣುಮಕ್ಕಳಂತೆ ನೋಡಿಕೊಳ್ಳುವಂತೆ ಅವರ ಹೆತ್ತವರನ್ನು ವಿನಂತಿಸುತ್ತಾರೆ. ನಾಲ್ಕು ಹಳ್ಳಿಗಳನ್ನು ದತ್ತು ಪಡೆದು, ಅಲ್ಲಿ ಗಿಡ ನೆಡುವುದನ್ನು ಚಳವಳಿಯ ರೂಪದಲ್ಲಿ ನಡೆಸಿ, ಜನರಿಗೆ ಮನುಷ್ಯನ ಬದುಕಿನಲ್ಲಿ ಗಿಡಗಳ ಪ್ರಾಮುಖ್ಯತೆಯನ್ನು ಮನದಟ್ಟು ಮಾಡುತ್ತಿದ್ದಾರೆ.

andolana

Recent Posts

ದ್ವಿತೀಯ ಪಿಯುಸಿ ಫಲಿತಾಂಶ: ಇದೊಂದು ಐತಿಹಾಸಿಕ ದಿನ ಎಂದ ಮಧು ಬಂಗಾರಪ್ಪ

ಬೆಂಗಳೂರು: ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 5.46,698 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕರ್ನಾಟಕಕ್ಕೆ ಮೊದಲ ಬಾರಿ ಶೇ.86.48ರಷ್ಟು ಫಲಿತಾಂಶ ಬಂದಿದೆ…

6 hours ago

ಎರಡು ಕ್ಷೇತ್ರಗಳ ಉಪಚುನಾವಣೆ ಮತದಾನ ಮುಕ್ತಾಯ: ವೋಟಿಂಗ್‌ ಪ್ರಮಾಣವೆಷ್ಟು.?

ದಾವಣಗೆರೆ/ಬಾಗಲಕೋಟೆ: ರಾಜ್ಯದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಇಂದು ಮತದಾನ ನಡೆದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.…

6 hours ago

ಚಾಮುಂಡಿಬೆಟ್ಟದಲ್ಲಿ ನಡೆಯುತ್ತಿದ್ದ ಕಾಮಗಾರಿಗಳಿಗೆ ಹೈಕೋರ್ಟ್‌ ತಡೆಯಾಜ್ಞೆ

ಬೆಂಗಳೂರು: ನಾಡಿನ ಅಧಿದೇವತೆ ನೆಲೆಸಿರುವ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಕೇಂದ್ರ ಸರ್ಕಾರದ ಅನುದಾನದಡಿ ನಡೆಯುತ್ತಿದ್ದ ಕಾಮಗಾರಿಗಳಿಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಹೈಕೋರ್ಟ್‌…

6 hours ago

ಬೆಂಗಳೂರಿನಲ್ಲಿ ಮುಂದಿನ ಮೂರು ದಿನ ಬಿಸಿ ಗಾಳಿ ಎಚ್ಚರಿಕೆ

ಬೆಂಗಳೂರು: ನಗರದಲ್ಲಿ ಮುಂದಿನ ಮೂರು ದಿನಗಳ ಕಾಲ ಅಧಿಕ ಉಷ್ಣಾಂಶ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬಿಸಿ…

7 hours ago

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆದ್ದರೆ ಆರು ಗ್ಯಾರಂಟಿ ಜಾರಿ: ಪ್ರಧಾನಿ ನರೇಂದ್ರ ಮೋದಿ

ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಜನರಿಗೆ ಆರು ಗ್ಯಾರಂಟಿಗಳನ್ನು ನೀಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.…

7 hours ago

ಭಾರತ ತಲುಪಿದ ಗ್ರೀನ್‌ ಆಶಾ: 15,000 ಟನ್‌ ಎಲ್‌ಪಿಜಿ ಹೊತ್ತು ತಂದ ನೌಕೆ

ಮುಂಬೈ: ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಭಾರತದ ಧ್ವಜ ಹೊಂದಿರುವ 15,400 ಟನ್‌ ಎಲ್‌ಪಿಜಿ ಹೊತ್ತ ಟ್ಯಾಂಕರ್‌ ಹಾರ್ಮುಜ್‌ ಜಲಸಂಧಿಯನ್ನು…

7 hours ago