ಸಾಮಾಜಿಕ ಮಾಧ್ಯಮ, ಡಿಜಿಟಲ್ ಮಾಧ್ಯಮ, ನವಮಾಧ್ಯಮ ಯಾವುದೇ ಹೆಸರಿನಲ್ಲಿ ಕರೆಯಬಹುದು. ಅವು ಇಂದು ತಮ್ಮದೇ ಆದ ಛಾಪನ್ನು ಮೂಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿವೆ. ಎಲ್ಲ ಕ್ಷೇತ್ರಗಳಲ್ಲೂ. ಈ ದಿನಗಳಲ್ಲಿ ಸುದ್ದಿಗಳ ಸತ್ಯಾಸತ್ಯತೆಯನ್ನು ತಿಳಿಯುವುದೇ ಹರಸಾಹಸ. ಟ್ವಿಟ್ಟರ್, ಫೇಸ್ಬುಕ್, ಇನ್ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲ ತಾಣಗಳು, ಅವುಗಳ ಜೊತೆಗೆ ಎಲ್ಲೆಂದರಲ್ಲಿ ಯುಟ್ಯೂಬ್ ಮೂಲಕ ಬರುವ ಮಂದಿ… ವಾಟ್ಸಾಪ್ ಗುಂಪುಗಳು… ಒಂದೇ ಎರಡೇ…
ಇದು ಸಿನಿಮಾ ಕ್ಷೇತ್ರದಲ್ಲಿ ಇತ್ತೀಚೆಗೆ ಹೆಚ್ಚಾಗತೊಡಗಿದೆ. ಇತರ ಭಾಷಾ ಚಿತ್ರೋದ್ಯಮಗಳಲ್ಲಿ ಇವುಗಳು ಬೀರುವ ಪರಿಣಾಮಗಳ ಕುರಿತಂತೆ ಪರ–ವಿರೋಧ ಅಭಿಪ್ರಾಯಗಳಿವೆ. ಸುದ್ದಿಗಳ ವಿಷಯಕ್ಕೆ ಬಂದರೆ. ಸತ್ಯ–ಮಿಥ್ಯೆಗಳನ್ನು ಬೇರ್ಪಡಿಸುವುದು ಕಷ್ಟಸಾಧ್ಯ ಎನ್ನುವುದು ಬಲ್ಲವರ ಮಾತು. ಸಿನಿಮಾ ಕ್ಷೇತ್ರ ಇದರಿಂದ ಹೊರತಲ್ಲ.
ಎರಡು ವಾರಗಳ ಹಿಂದೆ ನಿಧನರಾದ ಸ್ಪಂದನಾ ವಿಜಯ ರಾಘವೇಂದ್ರ ಅವರ ಕುರಿತಂತೆ ವಿಧವಿಧದ ಸುದ್ದಿಗಳು. ತಾವೇ ಸ್ವತಃ ದೃಕ್ಷಾಕ್ಷಿ ಎಂಬಂತೆ ಬಂದ ವರದಿಗಳಲ್ಲಿ ಬಹುತೇಕ ಗಾಳಿಮಾತುಗಳೇ. ಯುಟ್ಯೂಬ್ ವಾಹಿನಿಗಳ ಮೇಲೆ ಯಾವುದೇ ನಿಯಂತ್ರಣ ಬೇರೆ ಎಲ್ಲೂ ಇಲ್ಲ. ಆದರೆ ಕೇರಳದಲ್ಲಿ ಅಲ್ಲಿನ ಚಿತ್ರೋದ್ಯಮ, ಅವುಗಳಿಗೆ ನಿಷೇಧ ಹೇರಿದ್ದಾಗಿ ವರದಿಯಾಗಿತ್ತು. ತಮ್ಮ ಚಿತ್ರಗಳ ಪತ್ರಿಕಾಗೋಷ್ಠಿ, ಪೂರ್ವಪ್ರದರ್ಶನಗಳಿಗೆ ಈ ವಾಹಿನಿಗಳ ಮಂದಿಯನ್ನು ಆಹ್ವಾನಿಸದಿರಲು ನಿರ್ಧರಿಸಿದ್ದಾಗಿ ಹೇಳಿತ್ತು ಆ ವರದಿ. ಮಾತ್ರವಲ್ಲ, ಸರ್ಕಾರಕ್ಕೂ ಉದ್ಯಮದ ಪ್ರಾತಿನಿಧಿಕ ಸಂಸ್ಥೆಗಳು ಪತ್ರವನ್ನು ಬರೆದು, ಇವುಗಳ ನಿಯಂತ್ರಣಕ್ಕೆ ಸೂಕ್ತ ಕಾನೂನು ತರಬೇಕೆಂದೂ ಹೇಳಿತ್ತು.
ಡಿಜಿಟಲ್ ಪ್ರೊಮೋಶನ್ ಚಿತ್ರಗಳ ಪ್ರಚಾರಕ್ಕೆ ಹೊಸದಾಗಿ ಲಭ್ಯವಿರುವ ಇನ್ನೊಂದು ದಾರಿ. ಯುಟ್ಯೂಬ್ ವಾಹಿನಿಗಳ ಮೂಲಕ ಈ ಪ್ರಚಾರ. ಇವುಗಳು ಬರುವ ಮೊದಲು, ಸಿನಿಮಾಗಳ ಪ್ರಚಾರಕ್ಕೆ ಭಿತ್ತಿಪತ್ರಗಳು, ಕಟೌಟ್ಗಳು, ಸೈಕಲ್, ಎತ್ತಿನ ಗಾಡಿಗಳಲ್ಲಿ ಹಿಂದೆ ನಾಟಕಗಳ ಪ್ರಚಾರದಂತೆ ಪ್ರಚಾರ, ಚಿತ್ರಮಂದಿರಗಳಲ್ಲಿ ಸ್ಲೆ ಡ್ಗಳ ಮೂಲಕ ಪ್ರಚಾರ ಇರುತ್ತಿತ್ತು. ಜೊತೆಗೆ ಪತ್ರಿಕೆಗಳಲ್ಲಿ ಜಾಹೀರಾತು, ಸುದ್ದಿ, ಲೇಖನ, ಸಂದರ್ಶನ, ವಿಶ್ಲೇಷಣೆ, ವಿಮರ್ಶೆಗಳೂ ಚಿತ್ರಗಳ ಪ್ರಚಾರಕ್ಕೆ ಪೂರಕ ಆಗುತ್ತಿದ್ದವು. ಕಿರುತೆರೆ ನಡುಮನೆಗೆ ಕಾಲಿಟ್ಟ ನಂತರ ಅದು ಕೂಡ ಪ್ರಚಾರಕ್ಕೆ ದಾರಿ ಮಾಡಿಕೊಟ್ಟದ್ದು ಹೌದು. ಆರಂಭದ ದಿನಗಳಲ್ಲಿ ಉದ್ಯಮ ಇದು ನಮ್ಮ ಪಾಲಿಗೆ ಶಾಪವಾಗಬಹುದು ಎಂದುಕೊಂಡಿದ್ದ ಉಪಗ್ರಹ ವಾಹಿನಿಗಳು ಚಿತ್ರೋದ್ಯಮದ ಪಾಲಿಗೆ ಇದೀಗ ವರವಾಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಪರಸ್ಪರ ಕೊಡುಕೊಳು ಇಲ್ಲಿ ನಡೆಯುತ್ತಿದೆ. ಈ ಎರಡು ಮಾಧ್ಯಮಗಳ ನಂತರ ಹೊಸದಾಗಿ ತಲೆ ಎತ್ತಿರುವ ಯುಟ್ಯೂಬ್ ವಾಹಿನಿಗಳಲ್ಲಿ ವಿವಿಧ ಕ್ಷೇತ್ರಗಳ ಮಾಹಿತಿ, ವಿವರ, ವಿಶೇಷಗಳನ್ನು ಹೇಳುವವು ಇವೆ. ಅವುಗಳಲ್ಲಿ ಕೆಲವು ಕೋಟ್ಯಂತರ ಚಂದಾದಾರರನ್ನು ಹೊಂದಿದವೂ ಇವೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವು ತಮ್ಮದೇ ಆದ ಮಾಹಿತಿಗಳನ್ನು ನೀಡುವುದರ ಜೊತೆಗೆ ಸಾಕಷ್ಟು ಆರ್ಥಿಕ ಲಾಭವನ್ನೂ ಮಾಡುತ್ತಿರುತ್ತವೆ. ಗೂಗಲ್ ಜಾಹೀರಾತುಗಳು, ಆ ವಾಹಿನಿಗಳ ಕಾರ್ಯಕ್ರಮಗಳನ್ನು ವೀಕ್ಷಿಸುವ ಮಂದಿಯ ಲೆಕ್ಕಕ್ಕೆ ಅನುಗುಣವಾಗಿ ಸಂಬಂಧಪಟ್ಟವರಿಗೆ ಪಾವತಿ ಆಗುತ್ತಿರುತ್ತವೆ.
ಡಿಜಿಟಲ್ ಪ್ರೊಮೋಶನ್, ಡಿಜಿಟಲ್ ಮಾರ್ಕೆಟಿಂಗ್ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಮಂದಿಯನ್ನು ಒಟ್ಟು ಸೇರಿಸುವ ಸಂಘಟಕರೂ ಅಲ್ಲೊಬ್ಬರು ಇಲ್ಲೊಬ್ಬರು ಇದ್ದಾರೆ. ಸಂಘಟಕರೆನ್ನಿ, ಮಧ್ಯವರ್ತಿಗಳೆನ್ನಿ. ಕನ್ನಡ ಚಿತ್ರರಂಗದಲ್ಲೂ ಈ ಬೆಳವಣಿಗೆ ಇದೆ. ಆದರೆ ಈ ಯುಟ್ಯೂಬ್ ವಾಹಿನಿಗಳನ್ನು ನೋಡುವವರ ಸಂಖ್ಯೆ ಎಷ್ಟು, ಅವರಲ್ಲಿ ಎಷ್ಟು ಮಂದಿ ಸಂಬಂಧಪಟ್ಟ ಚಿತ್ರಗಳನ್ನು ನೋಡಲು ಬರುತ್ತಾರೆ, ಬರಬಹುದು ಎನ್ನುವ ಕುರಿತಂತೆ, ಅಧ್ಯಯನಗಳು ಬೇರೆ ದೇಶಗಳಲ್ಲಿ ಆದಂತೆ ಇಲ್ಲೇನೂ ಆದಂತಿಲ್ಲ.
ಗಮನಿಸಿ. ಕಾಂತಾರ ಚಿತ್ರ ಕಳೆದ ವರ್ಷ ಸೆಪ್ಟೆಂಬರ್ ತಿಂಗಳ ಕೊನೆಯ ವಾರ ವಿಶ್ವಾದ್ಯಂತ ತೆರೆ ಕಂಡಿತಷ್ಟೇ. ಅದು ಕನ್ನಡದಲ್ಲಿ ಮಾತ್ರ ತಯಾರಾಗಿದ್ದ ಚಿತ್ರ. ಎರಡು ವಾರಗಳ ಕಾಲ, ವಿಶ್ವಾದ್ಯಂತ ಚಿತ್ರರಸಿಕರು ಅದನ್ನು ಕನ್ನಡದಲ್ಲೇ ನೋಡಿದರು. ಯುಟ್ಯೂಬ್ ವಾಹಿನಿಗಳು ನಾಮುಂದು, ತಾಮುಂದು ಎಂಬಂತೆ ದೇಶಾದ್ಯಂತ ಆ ಚಿತ್ರದ ಕುರಿತಂತೆ ಹೇಳಿದವು. ತುಳುನಾಡಿನಲ್ಲಿ ಪ್ರಚಲಿತವಿರುವ ಭೂತಾರಾಧನೆಯ ಕುರಿತಂತೆ ದೇಶವಿದೇಶಗಳಲ್ಲಿ ವಿಶೇಷ ರೀತಿಯಲ್ಲಿ ತಿಳಿಯುವಂತೆ ಮಾಡಿದ್ದು ಈ ವಾಹಿನಿಗಳೇ. ಇವು ಯಾವುವೂ ನಿರ್ಮಾಪಕರಿಂದ ಪ್ರಚಾರಕ್ಕಾಗಿ ಶುಲ್ಕ ಪಡೆದವುಗಳಾಗಿರಲಿಲ್ಲ. ಚಿತ್ರವೇ ಅಂತಹದೊಂದು ವಾತಾವರಣವನ್ನು ಸೃಷ್ಟಿಸಿತ್ತು.
ಅಂತಹದೇ ಉದಾಹರಣೆ ಕಳೆದ ವಾರ ತೆರೆಕಂಡ ‘ಜೈಲರ್’ ಚಿತ್ರ. ರಜನಿಕಾಂತ್ ಮುಖ್ಯ ಭೂಮಿಕೆಯ ಈ ಚಿತ್ರದಲ್ಲಿ ಶಿವರಾಜ್ಕುಮಾರ್, ಮೋಹನ್ಲಾಲ್, ಜಾಕಿಶ್ರಾ– ಮುಂತಾದವರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಶಿವಣ್ಣ ಅಭಿನಯದ ಕುರಿತಂತೆ ಸಾಮಾಜಿಕ ತಾಣಗಳಲ್ಲಿ ಎಲ್ಲೆಡೆ ಶಹಬ್ಬಾಸ್ ಗಿರಿ ವ್ಯಕ್ತವಾಗುತ್ತಿದೆ. ದಕ್ಷಿಣದ ಎಲ್ಲ ರಾಜ್ಯಗಳ ಮಾಧ್ಯಮಗಳಿಂದಲೂ ನ ಭೂತೋ ಎನ್ನುವಂತಹ ಮಾತು, ಮೆಚ್ಚುಗೆ. ಇವೆಲ್ಲ ಜಾಹೀರಾತೋ, ಡಿಜಿಟಲ್ ಮಾರ್ಕೆಟಿಂಗ್ನಿಂದ ಆದ ಪ್ರಚಾರವೋ ಅಲ್ಲ. ಅದಕ್ಕೆ ಮಧ್ಯವರ್ತಿಗಳ ಸಂಪರ್ಕವೂ ಇದ್ದಂತಿಲ್ಲ.
ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಇಂತಹದೊಂದು ಬೆಳವಣಿಗೆಯ ಮಾತುಗಳು ಹೆಚ್ಚು ಹೆಚ್ಚು ಕೇಳಿಬರತೊಡಗಿದೆ. ಪ್ಯಾನ್ ಇಂಡಿಯಾ ಹೆಸರಲ್ಲಿ, ಎಲ್ಲ ಡಿಜಿಟಲ್ ಪ್ರೊಮೋಶನ್ಗೆ ಲಕ್ಷಗಳಲ್ಲಿ ನೀಡಬೇಕಾಗುತ್ತದೆ ಎಂದು ನಿರ್ಮಾಪಕರ ಶೋಷಣೆ ನಡೆಯುತ್ತಿದೆ ಎನ್ನುವ ದೂರೂ ಇದೆ.
ಬಹುಕೋಟಿ ವೆಚ್ಚದಲ್ಲಿ ಚಿತ್ರಗಳನ್ನು ನಿರ್ಮಿಸುವವರು ಕನ್ನಡ ಚಿತ್ರರಂಗದಲ್ಲಿ ಬಹಳ ಕಡಿಮೆ. ಎರಡು ಮೂರು ಸಂಸ್ಥೆಗಳನ್ನು ಹೊರತುಪಡಿಸಿದರೆ, ಉಳಿದ ನಿರ್ಮಾಪಕರಲ್ಲಿ ಕೆಲವರು ಹತ್ತು ಕೋಟಿಯ ಒಳಗೆ ಚಿತ್ರ ನಿರ್ಮಿಸಬಹುದು; ಒಂದೆರಡು ಕೋಟಿಯ ಗಡಿ ದಾಟದವರೇ ಹೆಚ್ಚು. ವರ್ಷದಲ್ಲಿ ತಯಾರಾಗುವ 350ರಿಂದ 400ರವರೆಗಿನ ಕನ್ನಡ ಚಿತ್ರಗಳಲ್ಲಿ ಬಹಳಷ್ಟು ಚಿತ್ರಗಳ ನಿರ್ಮಾಣ ವೆಚ್ಚ ಎಂಟಂಕಿ ದಾಟುವುದಿಲ್ಲ.
ಚಿತ್ರ ನಿರ್ಮಾಣಕ್ಕೆ ಒಂದು ಕೋಟಿ ರೂ. ಕೂಡ ಬಂಡವಾಳ ಹೂಡಲು ಸಾಧ್ಯವಾಗದೆ ಇರುವವರು ಡಿಜಿಟಲ್ ಪ್ರಮೋಶನ್ಗಾಗಿ 15-20 ಲಕ್ಷ ರೂಪಾಯಿ ನೀಡುವುದು ಸಾಧ್ಯವೇ? ಅದರ ನಂತರ ಪತ್ರಿಕಾ ಜಾಹೀರಾತುಗಳು, ವಾಹಿನಿಗಳಲ್ಲಿ ಜಾಹೀರಾತು, ಹೀಗೆ, ಚಿತ್ರ ನಿರ್ಮಾಣಕ್ಕಿಂತ ಹೆಚ್ಚು ತಲೆಕೆಡಿಸಿಕೊಳ್ಳಬೇಕಾದ ಸ್ಥಿತಿ ಇವತ್ತು ಬಂದಿದೆ ಎನ್ನುತ್ತಾರೆ ನಿರ್ಮಾಪಕರೊಬ್ಬರು. ಸಾಮಾಜಿಕ ಜಾಲ ತಾಣಗಳಲ್ಲಿ, ಯುಟ್ಯೂಬ್ ವಾಹಿನಿಗಳಲ್ಲಿ ಪ್ರಚಾರಕ್ಕಾಗಿ ಅದೇ ಕೆಲಸ ಮಾಡುತ್ತಿದ್ದೇವೆ ಎಂದು ದಾರಿ ತಪ್ಪಿಸುವುದು ಸುಲಭ, ಇಲ್ಲಿ ಆ ಕೆಲಸ ನಡೆದಿದೆ, ಅದರಲ್ಲೂ ಹೊಸ ನಿರ್ಮಾಪಕರು ಹೀಗೆ ಅವರಿವರ ಮಾತು ಕೇಳಿ ದಾರಿ ತಪ್ಪುತ್ತಿದ್ದಾರೆ ಎಂದು ಕೇಳಿಬರುತ್ತಿರುವುದು ಹೊಸದೇನೂ ಅಲ್ಲ.
ಪಾನ್ ಇಂಡಿಯಾ ಚಿತ್ರಗಳು ಎನ್ನುವ ಹೆಸರಲ್ಲಿ ಕನ್ನಡದಲ್ಲಿ ನಿರ್ಮಿಸಿ, ಇತರ ಭಾಷೆಗಳಿಗೆ ಡಬ್ ಮಾಡುವ, ಇತರ ಯಾವುದಾದರೂ ಭಾಷೆಯಲ್ಲಿ ತಯಾರಾಗಿ ಕನ್ನಡವೂ ಸೇರಿದಂತೆ ಇತರ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗುವ ಈ ಚಿತ್ರಗಳ ಗೆಲುವಿಗೆ ಯುಟ್ಯೂಬ್ ವಾಹಿನಿಗಳ ಮೂಲಕ ಪ್ರಚಾರದಿಂದ ಗೆಲುವು ಸುಲಭಸಾಧ್ಯ ಎನ್ನುವುದನ್ನು ನಂಬುವ ನಿರ್ಮಾಪಕರಲ್ಲಿ ಬಹಳಷ್ಟು ಮಂದಿಗೆ ತಮ್ಮ ಚಿತ್ರ ತೆರೆಕಂಡು ಅವು ಗಲ್ಲಾಪೆಟ್ಟಿಗೆಯಲ್ಲಿ ಕೆಳಮುಖ ಮಾಡಿದಾಗ, ಪ್ರಚಾರದ ಹೆಸರಲ್ಲಿ ಆದ ಅಪವ್ಯಯದ ಬಗ್ಗೆ ತಿಳಿಯಬಹದೇನೋ.
ಯಾವುದೇ ಸಂಸ್ಥೆ ಆರಂಭಿಸಲು ಅನುಮತಿ, ತರಬೇತಿ, ಇತ್ಯಾದಿ ಅಗತ್ಯ. ಆದರೆ ಚಿತ್ರಗಳನ್ನು ನಿರ್ಮಿಸಲು ಯಾವುದೇ ತರಬೇತಿ, ಪರವಾನಗಿ ಬೇಕಿಲ್ಲ. ಹೂಡಲು ಬಂಡವಾಳ ಇದ್ದರೆ ಸಾಕು. ಈಗ ಈ ಡಿಜಿಟಲ್ ದಿನಗಳಲ್ಲಿ, ಡಿಜಿಟಲ್ ಪ್ರಚಾರ, ಡಿಜಿಟಲ್ ಪ್ರೊಮೋಶನ್, ಡಿಜಿಟಲ್ ಮಾರ್ಕೆಟಿಂಗ್ ಮಾಡುವವರನ್ನು ಸೇರಿಸಲು ಈ ಡಿಜಿಟಲ್ ತಂತ್ರಜ್ಞಾನವನ್ನು ತಿಳಿದಿರಬೇಕಾದ್ದು ಏನೂ ಇಲ್ಲ. ಚಿತ್ರರಂಗದಲ್ಲಿರುವವರ ಸಂಪರ್ಕ, ಮಾತನಾಡುವ ಛಾತಿ ಇದ್ದರೆ ಸಾಕು ಎನ್ನುತ್ತಾರೆ ಗಾಂಽನಗರಿಗರು.
ಮೈಸೂರು: ಬದಲಿ ನಿವೇಶನ ಹಂಚಿಕೆ, ೫೦:೫೦ ಅನುಪಾತದಲ್ಲಿ ನಿವೇಶನ ಅಕ್ರಮ ಹಂಚಿಕೆ ಹಗರಣದಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿರುವ ಮೈಸೂರು…
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜುಂಬೂ ಸವಾರಿ ಸಾಗುವ ಮಾರ್ಗದಲ್ಲಿ ಕಳೆದ ಎರಡೂ ವರ್ಷಗಳಿಂದ ಬಿದ್ದಿದ್ದ ಬೃಹತ್ ಮರದ ಕಾಂಡವನ್ನು…
ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿಯನ್ನು ವೀಕ್ಷಿಸಲು ಆಗಮಿಸಿದ ಎಲ್ಲರಿಗೂ ಚಿನ್ನದ ಅಂಬಾರಿ ನೋಡುವ ಅವಕಾಶ ಸಿಗಬೇಕು…
ಮೈಸೂರು: ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ ಎಂದು ಕರೆಯುವ ಮೈಸೂರನ್ನು ಗರಡಿ ಮನೆಗಳ ನಗರಿ ಎಂದೂ ಇತ್ತೀಚಿನ ವರ್ಷಗಳಲ್ಲಿ ಕರೆಯುವುದು…
ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…
ಅಮರಾವತಿ: ಜಗತ್ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…