ಬುದ್ಧವಿಹಾರದಲ್ಲಿ ಎಸ್ಎಫ್ಐನ ೧೧ನೇ ಜಿಲ್ಲಾ ಸಮ್ಮೇಳನ ಉದ್ಘಾಟನೆ
* ಆಧುನಿಕ ಆಂಜನೇಯರನ್ನು ಸೃಷ್ಟಿಸಿ ಸಾಂಸ್ಕೃತಿಕ ಗುಲಾಮಗಿರಿಗೆ ಮತ್ತೆ ತಳ್ಳಲು ಯತ್ನ
* ಎಸ್ಎಫ್ಐನಿಂದ ನೂತನ ಶಿಕ್ಷಣ ನೀತಿಯ ವಿರುದ್ಧ ದೇಶಾದ್ಯಂತ ತೀವ್ರ ಹೋರಾಟದ ಎಚ್ಚರಿಕೆ
* ಎಸ್ಎಫ್ಐ ನೂತನ ಜಿಲ್ಲಾ ಪದಾಧಿಕಾರಿಗಳ ಆಯ್ಕೆ
ಮೈಸೂರು: ಪ್ರಸ್ತುತ ಆಡಳಿತದಲ್ಲಿರುವ ಸರ್ಕಾರ ಆಧುನಿಕ ಆಂಜನೇಯರನ್ನು ಸೃಷ್ಟಿಸಿ ಸಾಂಸ್ಕೃತಿಕ ಗುಲಾಮಗಿರಿಗೆ ಮತ್ತೆ ತಳ್ಳಲು ಯತ್ನಿಸುತ್ತಿದೆ ಎಂದು ರಂಗಾಯಣ ಮಾಜಿ ನಿರ್ದೇಶಕ ಎಚ್.ಜನಾರ್ಧನ್(ಜನ್ನಿ) ಬೇಸರಿಸಿದರು.
ನಗರದ ಬುದ್ಧವಿಹಾರದಲ್ಲಿ ನಡೆದ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ)ನ ೧೧ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನ ಇಂದು ಅಪಾಯದಲ್ಲಿದೆ. ಸಂವಿಧಾನದಡಿ ಆಯ್ಕೆಯಾದವರೇ ಇಂದು ಸಂವಿಧಾನದ ಆಶಯವನ್ನು ನಾಶ ಮಾಡಲು ನಿಂತಿದ್ದಾರೆ. ಇದನ್ನು ತಡೆಯಲು ವಿದ್ಯಾರ್ಥಿಗಳು ಸಂಘಟಿತರಾಗಬೇಕಿದೆ ಎಂದರು.
ಇಂದು ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಬೆಳೆಸಿ, ಬುದ್ಧಿವಂತರನ್ನಾಗಿಸಿ, ಬದುಕಿನ ಮೌಲ್ಯಗಳನ್ನು ಕಲಿಸಬೇಕಾದ ಶಿಕ್ಷಣ, ಇಂದು ಮಕ್ಕಳ ನಡುವೆ ಕಂದಕವನ್ನು ಸೃಷ್ಟಿಸಲು ಎಳೆಯ ಮನಸ್ಸಿನಲ್ಲಿ ಭೇದವನ್ನು ಸೃಷ್ಟಿಸುತ್ತಿದೆ. ಕುವೆಂಪುರವರು ಶತಮಾನಗಳ ಹಿಂದಿಯೇ ನಮಗೆಂತ ಶಿಕ್ಷಣ ಬೇಕು, ನಮಗೆಂತ ವ್ಯವಸ್ಥೆ ಬೇಕು ಎಂದು ಹೇಳಿದ್ದರು. ಆ ಮತದ ಈ ಮತದ ಹಳೆ ಮತದ ಸಹವಾಸ ಸಾಕಿನ್ನು ಸೇರಿರಿ ಮನುಜ ಮತಕ್ಕೆ ಎಂದು ಕರೆ ನೀಡಿದ್ದರು. ಆದರೆ, ಇಂದು ಯುವ ಜನರನ್ನು ಮತಗಳ ವ್ಯಾಮೋಹಕ್ಕೆ ಸಿಲುಕಿಸಲು ಆಳುವವರು ಪಠ್ಯ ಪುಸ್ತಕದ ಕೇಸರೀಕರಣಕ್ಕೆ ಹೊರಟಿದೆ ಎಂದು ಕಿಡಿಕಾರಿದರು.
ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಾಸುದೇವ ರೆಡ್ಡಿ ಮಾತನಾಡಿ, ನೂತನ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿಯೇ ಮೊದಲು ಜಾರಿ ಮಾಡುತ್ತೇವೆಂದು ರಾಜ್ಯದ ತುಂಬೆಲ್ಲಾ ಹೇಳಲಾಗುತ್ತಿದೆ. ಆದರೆ, ಈ ನೂತನ ಶಿಕ್ಷಣ ನೀತಿಯ ಉದ್ದೇಶ ಬಡವರು, ದಲಿತರು, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ದೂರ ಇಡುವುದೇ ಆಗಿದೆ. ಈ ನೀತಿ ಶಿಕ್ಷಣದ ಖಾಸಗೀಕರಣವನ್ನು ಪ್ರೋತ್ಸಾಹಿಸುತ್ತದೆ ಹಾಗೂ ಸರ್ಕಾರವನ್ನು ಶಿಕ್ಷಣದ ಹೊಣೆಗಾರಿಕೆಯಿಂದ ದೂರ ಇಡುವ ಹುನ್ನಾರವೂ ಇದೆ ಎಂದು ಹೇಳಿದರು.
ವಿಶ್ವವಿದ್ಯಾನಿಲಯಗಳನ್ನು ದುರ್ಬಲಗೊಳಿಸುವುದು, ಉಪ ಕುಲಪತಿಗಳನ್ನು ಕೇವಲ ಉತ್ಸವ ಮೂರ್ತಿಗಳಾಗಿಸಲು ಈ ನೂತನ ಶಿಕ್ಷಣ ನೀತಿ ಹೊರಟಿದೆ. ಉದ್ಯೋಗಾಧಾರಿತ ಶಿಕ್ಷಣವನ್ನು ನೀಡಬೇಕಾದ ಶಿಕ್ಷಣ ಇಂದು ವಿದ್ಯಾರ್ಥಿಗಳನ್ನು, ಯುವಜನರನ್ನು ಶ್ರೀಮಂತ ಕಂಪೆನಿಗಳ ಸೆಕ್ಯೂರಿಟಿ ಗಾರ್ಡ್ಗಳನ್ನಾಗಿ ಮಾಡಲು ಹೊರಟಿದೆ. ಇದರ ವಿರುದ್ಧ ಭಾರತ ವಿದ್ಯಾರ್ಥಿ ಫೆಡರೇಷನ್ ನಿರಂತರವಾಗಿ ಹೋರಾಡುತ್ತಿದೆ. ಮುಂದಿನ ದಿನಗಳಲ್ಲಿ ಈ ನೂತನ ಶಿಕ್ಷಣ ನೀತಿಯ ವಿರುದ್ಧ ದೇಶಾದ್ಯಂತ ತೀವ್ರ ಹೋರಾಟ ನಡೆಸಲಿದೆ ಎಂದು ತಿಳಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆ: ಜಿಲ್ಲಾಧ್ಯಕ್ಷರಾಗಿ ಟಿ.ಎಸ್.ವಿಜಯ್ ಕುಮಾರ್ , ಜಿಲ್ಲಾ ಕಾರ್ಯದರ್ಶಿಯಾಗಿ ಡಿ.ಅಭಿ, ಉಪಾಧ್ಯಕ್ಷರಾಗಿ ಸಂತೋಷ್, ಪ್ರೀತಮ್, ಮಹೇಂದ್ರ, ಭೂಮಿಕಾ, ಸಹ ಕಾರ್ಯದರ್ಶಿಯಾಗಿ ದರ್ಶನ್, ಸಚಿನ್ ದೇವ್, ಗೋಕುಲ್ ಸೇನ್, ರಕ್ಷಿತಾ ಅವಿರೋಧವಾಗಿ ಆಯ್ಕೆಯಾದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ ಮಾತನಾಡಿದರು. ಎಸ್ಎಫ್ಐ ಜಿಲ್ಲಾ ಸಂಚಾಲಕ ಟಿ.ಎಸ್.ವಿಜಯ್ ಕುಮಾರ್, ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ನಗರ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿ ಜಿಲ್ಲೆಯ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಅಂಬೇಡ್ಕರ್, ಕುವೆಂಪು, ನಾರಾಯಣ ಗುರು ಮುಂತಾದವರ ಆಶಯಗಳನ್ನು ವಿದ್ಯಾರ್ಥಿಗಳಿಂದ ದೂರವಿಡುವ ಪ್ರಯತ್ನಗಳು ನಡೆಯುತ್ತಿವೆ. ಇದರ ಹಿಂದಿನ ಹುನ್ನಾರಗಳನ್ನು ವಿದ್ಯಾರ್ಥಿಗಳು ಅರ್ಥೈಸಿಕೊಂಡು ಸಂಘಟಿತರಾಗಬೇಕು.
-ಎಚ್.ಜನಾರ್ಧನ್(ಜನ್ನಿ), ರಂಗಕರ್ಮಿ.
ಬೆಂಗಳೂರು: ತಮ್ಮ ವಿರುದ್ಧ ದಾಖಲಾಗಿರುವ ಅಸಹಜ ಲೈಂಗಿಕ ಪ್ರಕರಣವನ್ನು ಕೈಬಿಡುವಂತೆ ಕೋರಿ, ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ…
ಟಿ.ನರಸೀಪುರ: ಕಾಡಾನೆ ದಾಳಿಗೆ ಸಿಲುಕಿ ರೈತರೊಬ್ಬರು ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ತಲಕಾಡು ಪೊಲೀಸ್ ಠಾಣೆ ವ್ಯಾಪ್ತಿಯ…
ಮೈಸೂರು: ಮೈಸೂರು ನಗರದ ಸಿಸಿಬಿ ಪೊಲೀಸರು ಇಂದು ಮಾದಕ ವಸ್ತುಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.…
ಮಂಡ್ಯ: ಮಕ್ಕಳು ಪಠ್ಯೇತರ ಚಟುವಟಿಕೆಗಳಾದ ಚಿತ್ರಕಲೆ, ಸಂಗೀತ, ಕ್ರೀಡಾ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಹಾಗೂ ಕರ್ನಾಟಕ ರಾಜ್ಯ…
ಮೈಸೂರು: ಶಾಸಕರ ವಿದೇಶಿ ಪ್ರವಾಸಕ್ಕೂ ರಾಜಕೀಯ ಬೆಳವಣಿಗೆಗಳಿಗೂ ಸಂಬಂಧವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.…
ಬೆಂಗಳೂರು: ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದ್ದು, ವಿಶೇಷ ತನಿಖಾ ತಂಡ ತನಿಖೆಯನ್ನು ಪೂರ್ಣಗೊಳಿಸಿ ವರದಿ…