ಜಿಲ್ಲೆಗಳು

ಹಿಂದೂಪರ ಸಂಘಟನೆಗಳಿಂದ ಮಂಡ್ಯ ಬಂದ್‌; ಬಿಗಿ ಪೊಲೀಸ್‌ ಬಂದೋಬಸ್ತ್‌

ಮಂಡ್ಯ : ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವುಗೊಳಿಸಿರುವುದನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಕರೆ ನೀಡಿದ್ದ ಮಂಡ್ಯ ಬಂದ್ ಸಂಪೂರ್ಣ ವಿಫಲವಾಯಿತು. ಕೇವಲ ರ‍್ಯಾಲಿಗಷ್ಟೇ ಸೀಮಿತವಾಗಿತ್ತು.
ಕೆರಗೋಡು ಗ್ರಾಮದ ರಂಗಮೈದಾನದಲ್ಲಿ ಸ್ಥಾಪಿಸಿದ್ದ 108 ಅಡಿ ಧ್ವಜಸ್ಥಂಭದಲ್ಲಿ ಹಾರಿಸಲಾಗಿದ್ದ ಹನುಮಧ್ವಜವನ್ನು ತೆರವುಗೊಳಿಸಿದ ಸರ್ಕಾರ, ರಾಷ್ಟ್ರ ಧ್ವಜವನ್ನು ಹಾರಿಸಿತ್ತು. ಮತ್ತೆ ಹನುಮಧ್ವಜ ಹಾರಿಸುವಂತೆ ಗ್ರಾಮಸ್ಥರು ಹಾಗೂ ಹಿಂದೂ ಕಾರ್ಯಕರ್ತರು ಒತ್ತಾಯ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಂಡ್ಯ ಹಾಗೂ ಕೆರಗೋಡು ಬಂದ್‌ಗೆ ಕರೆ ನೀಡಲಾಗಿತ್ತು.

ಶ್ರೀರಾಮ ಭಜನಾ ಮಂಡಳಿ ಹಾಗೂ ಹಿಂದೂ ಸಂಘಟನೆಗಳು ಕರೆ ನೀಡಿದ್ದ ಬಂದ್ ವಿಫಲವಾಗಿದ್ದು, ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ‍್ಯಾಲಿ ಮಾತ್ರ ನಡೆದಿದೆ. ಕೆರಗೋಡು ಗ್ರಾಮದಲ್ಲಿ ಬಂದ್ ಯಶಸ್ವಿಯಾಗಿದೆ.
ಶಾಲಾ-ಕಾಲೇಜುಗಳು, ಚಿತ್ರಮಂದಿರಗಳು, ದಿನಸಿ ಅಂಗಡಿಗಳು ಸೇರಿದಂತೆ ಇನ್ನಿತರೆ ವಾಣಿಜ್ಯ ಚಟುವಟಿಕೆಗಳು ಎಂದಿನಂತೆ ಕಾರ್ಯ ನಿರ್ವಹಿಸಿವೆ. ಜಿಲ್ಲಾ ವಾಣಿಜ್ಯ ಮಂಡಳಿ ಬಂದ್ ಬೆಂಬಲಿಸುವುದಿಲ್ಲ ಎಂದು ಹೇಳಿದ್ದ ಕಾರಣ ವರ್ತಕರು ಅಂಗಡಿಗಳನ್ನು ಬಂದ್ ಮಾಡದೆ ವ್ಯಾಪಾರ ವಹಿವಾಟು ನಡೆಸಿದರು.

ಆಟೋ, ಕಾರುಗಳು, ಬಸ್ಸುಗಳ ಸಂಚಾರ ಎಂದಿನಂತಿತ್ತು. ಯಾವುದೇ ಚಟುವಟಿಕೆಗಳಿಗೂ ತೊಂದರೆಯಾಗಲಿಲ್ಲ. ನಗರದಲ್ಲಿ ಎಲ್ಲವೂ ಸಹಜ ಸ್ಥಿತಿಯಲ್ಲೇ ಮುಂದುವರಿದಿದ್ದು ಕಂಡುಬಂತು.ಈ ಮಧ್ಯೆ ಸಮಾನ ಮನಸ್ಕರು ಫೆ. 7ರಂದು ಬಂದ್ ಮಾಡುವುದಾಗಿ ತಿಳಿಸಿದ್ದರು. ಆದರೆ ಜಿಲ್ಲಾಧಿಕಾರಿಗಳು ಎರಡೂ ಸಂಘಟನೆಗಳ ಕಾರ್ಯಕರ್ತರನ್ನು ಕರೆದು ಚರ್ಚಿಸಿ ಬಂದ್ ಕೈಬಿಡುವಂತೆ ಮನವಿ ಮಾಡಿದ್ದರು. ಸಮಾನ ಮನಸ್ಕರು ಬಂದ್ ಕೈಬಿಡುವುದಾಗಿ ಹಿಂದೆ ಸರಿದಿದ್ದರು. ಆದರೆ ಹಿಂದೂ ಸಂಘಟನೆಗಳವರು ಬಂದ್ ಮಾಡುವುದಾಗಿ ತಿಳಿಸಿದ್ದರು. ನಂತರ ಬಿಜೆಪಿ ಬಂದ್‌ಗೆ ಬೆಂಬಲ ಇಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದು, ಈ ಹಿನ್ನೆಲೆಯಲ್ಲಿ ಬಂದ್ ವಿಫಲವಾಗಿದೆ ಎಂದು ಹೇಳಲಾಗಿದೆ.

ಬೈಕ್ ರ‍್ಯಾಲಿ ಯಶಸ್ವಿ

ಶ್ರೀರಾಮ ಭಜನಾ ಮಂಡಳಿ, ಭಜರಂಗದಳ, ವಿಶ್ವ ಹಿಂದೂ ಪರಿಷತ್‌ನ ನೂರಾರು ಮಂದಿ ಕಾರ್ಯಕರ್ತರು ಕೆರಗೋಡು ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬೈಕ್ ರ‍್ಯಾಲಿ ನಡೆಸಿದರು. ಬೈಕ್ ರ‍್ಯಾಲಿ ಮರಿಲಿಂಗನದೊಡ್ಡಿ, ಅಂಕಣ್ಣನದೊಡ್ಡಿ, ಹುಲಿವಾನ, ಹೊನಗಾನಹಳ್ಳಿ, ಕೊಮ್ಮೇರಹಳ್ಳಿ, ಸಾತನೂರು, ಚಿಕ್ಕಮಂಡ್ಯ, ಕಾಳಿಕಾಂಬ ದೇವಾಲಯದ ಮಾರ್ಗವಾಗಿ ನಂದಾ ವೃತ್ತದ ಮೂಲಕ ನಗರದ ರೈಲು ನಿಲ್ದಾಣದ ಬಳಿ ಇರುವ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದವರೆಗೆ ನಡೆಯಿತು.

ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಗಳನ್ನು ಪೂರೈಸಿದ ಕಾರ್ಯಕರ್ತರು ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದರು. ಈ ವೇಳೆ ಜೈಶ್ರೀರಾಮ್, ಜೈಹನುಮಾನ್ ಘೋಷಣೆಗಳು ಮೊಳಗಿದವು. ಹಿಂದೂ ಕಾರ್ಯಕರ್ತರು ಹನುಮಾನ್ ಹಾಡಿಗೆ ನೃತ್ಯ ಮಾಡಿದ್ದು ವಿಶೇಷವಾಗಿತ್ತು.

ಬಿಗಿ ಬಂದೋಬಸ್ತ್‌ :

ಹಿಂದೂ ಸಂಘಟನೆಗಳು ಮಂಡ್ಯ ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ರ‍್ಯಾಲಿ ಬರುವ ಮಾರ್ಗದಲ್ಲೂ ಪೊಲೀಸರನ್ನು ನಿಯೋಜಿಸಲಾಗಿತ್ತು. ನಗರದ ನಂದ ಸರ್ಕಲ್, ಮಹಾವೀರ ವೃತ್ತ, ಜೆ.ಸಿ. ವೃತ್ತ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸಶಸ್ತ್ರ ಪೊಲೀಸ್ ಹಾಗೂ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿತ್ತು.

ಬೈಕ್ ರ‍್ಯಾಲಿ ಮತ್ತು ಪಾದಯಾತ್ರೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿತ್ತು.

ಶಾಸಕರ ನಿವಾಸಕ್ಕೆ ಭದ್ರತೆ :
ಶಾಸಕ ಪಿ. ರವಿಕುಮಾರ್ ಗಣಿಗ ಅವರ ಬಂದೀಗೌಡ ಬಡಾವಣೆಯ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ನಿವಾಸದ ಸುತ್ತ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.

andolana

Recent Posts

ಅವಕಾಶ ವಂಚಿತ ಚೆನ್ನೈ ಮಕ್ಕಳಿಗೆ ಪ್ರವಾಸ ಭಾಗ್ಯ

ಕೆ.ಎಸ್.ಚಂದ್ರಶೇಖರ್ ಮೂರ್ತಿ ಮೈಸೂರು: ಪ್ರತಿಯೊಂದು ಮಗುವಿಗೂ ಎಲ್ಲಾ ರೀತಿಯ ಅನುಭವ ಬೇಕು. ಆದರೆ ಎಲ್ಲ ಮಕ್ಕಳಿಗೂ ಅಂತಹ ಅವಕಾಶ ಒದಗಿ…

3 mins ago

ಹೆಚ್ಚಾಯ್ತು ಸಫಾರಿ ವಿರೋಧ : 25ಕ್ಕೂ ಹೆಚ್ಚು ಗ್ರಾ.ಪಂ ಪಿಡಿಒಗಳಿಗೆ ಮನವಿ ಸಲ್ಲಿಸಿ ರೈತರು

ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಪುನರಾರಂಭಿಸುವ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಕರ್ನಾಟಕ ರಾಜ್ಯ…

10 hours ago

ಟ್ರಂಪ್‌ ಸುಂಕ ರದ್ದುಪಡಿಸಿದ ಅಮೆರಿಕಾ ಸುಪ್ರೀಂಕೋರ್ಟ್‌ : ಭಾರತ ಹೇಳಿದ್ದೇನು?

ಹೊಸದಿಲ್ಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿವಿಧ ದೇಶಗಳ ಮೇಲೆ ಹೇರಿರುವ ಹೆಚ್ಚುವರಿ ಸಾಮೂಹಿಕ ಸುಂಕಗಳನ್ನು ಅಮೆರಿಕ…

10 hours ago

ಗಡಿ ಭದ್ರತೆಗೆ ಒತ್ತು : ತಮಿಳುನಾಡು ಚುನಾವಣೆಗೆ ಕರ್ನಾಟಕ ಪೊಲೀಸ್ ಸಹಕಾರ ಭರವಸೆ

ಹನೂರು : ಮುಂದಿನ ದಿನಗಳಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು ಯಶಸ್ವಿಯಾಗಿ ನಡೆಸಲು ಕರ್ನಾಟಕ ಪೊಲೀಸರು ಹಾಗೂ ಅಬಕಾರಿ ಇಲಾಖೆ…

11 hours ago

ಶಾರ್ಟ್ ಸರ್ಕ್ಯೂಟ್ : ಎಲೆಕ್ಟ್ರಾನಿಕ್ಸ್ ಅಂಗಡಿ ಸುಟ್ಟು ಭಸ್ಮ, ಲಕ್ಷಾಂತರ ರೂ. ನಷ್ಟ

ಕೆ.ಆರ್.ಪೇಟೆ : ಪಟ್ಟಣದ ಪಿ.ಎಲ್.ಡಿ ಬ್ಯಾಂಕ್ ಮುಂಭಾಗದಲ್ಲಿ ಶಫಿಉಲ್ಲಾ ಅವರು ನಡೆಸುತ್ತಿದ್ದ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ಸ್ ಅಂಗಡಿಯು ವಿದ್ಯುತ್ ಶಾರ್ಟ್…

11 hours ago