ಜಿಲ್ಲೆಗಳು

ಮಳೆ ನೀರು ಮೋರಿ ಸೇರಲು ಜಾಗವಿಲ್ಲ; ಸವಾರರಿಗೆ ಯಾತನೆ ತಪ್ಪಿದ್ದಲ್ಲ

ಕೆಲವಡೆ ಅವೈಜ್ಞಾನಿಕ ಫುಟ್‌ಪಾತ್ ನಿರ್ಮಾಣ; ಸರಾಗವಾಗಿ ನೀರು ಹರಿಯಲು ತಡೆ

ಮೈಸೂರು: ನಗರದಲ್ಲಿ ರಾತ್ರಿ-ಹಗಲು ಎನ್ನದೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಹಲವು ರಸ್ತೆಗಳಲ್ಲಿ ಮಳೆ ನೀರು ಮೋರಿ, ಚರಂಡಿಗೆ ಸೇರಲು ಜಾಗವಿಲ್ಲದೆ ರಸ್ತೆಯಲ್ಲೇ ನಿಲ್ಲುವಂತಾಗಿದೆ. ಅವೈಜ್ಞಾನಿಕವಾಗಿ ಫುಟ್‌ಪಾತ್‌ಗಳನ್ನು ನಿರ್ಮಾಣ ಮಾಡಿರುವುದರಿಂದ ಸರಾಗವಾಗಿ ನೀರು ಹರಿಯಲು ಜಾಗವಿಲ್ಲ. ಹೀಗಾಗಿ ವಾಹನ ಸವಾರರು, ಸಾರ್ವಜನಿಕರು ಫಜೀತಿ ಅನುಭವಿಸುತ್ತಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದ ರಸ್ತೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಾಲೆಯ ಎದುರಿನ ಮಾರ್ಗ, ಪಡುವಾರಹಳ್ಳಿ ಮಹಾರಾಣಿ ವಾಣಿಜ್ಯ ನಿರ್ವಹಣಾ ಕಾಲೇಜು ಎದುರಿನ ರಸ್ತೆ, ಯಾದವಗಿರಿಯ ಆಕಾಶವಾಣಿ ಕೇಂದ್ರದ ರಸ್ತೆ, ಅರವಿಂದನಗರ, ಜೆ.ಪಿ.ನಗರದ ಅಕ್ಕಮಹಾದೇವಿ ರಸ್ತೆ, ಸಿದ್ಧಾರ್ಥ ನಗರದ ಕೇಂದ್ರ ಅಬಕಾರಿ ಸೀಮಾ ಸುಂಕ ಕಚೇರಿ ಮಾರ್ಗದ ರಸ್ತೆಯಲ್ಲಿ ಇಂತಹ ಅಧ್ವಾನಗಳು ಕಣ್ಣಿಗೆ ರಾಚುತ್ತಿವೆ.

ಜೋಡಿ ರಸ್ತೆಯನ್ನು ನಿರ್ಮಾಣ ಮಾಡುವಾಗ ಹಾಗೂ ರಸ್ತೆ ಅಗಲೀಕರಣಗೊಳಿಸಿ ಫುಟ್‌ಪಾತ್‌ಗಳನ್ನು ನಿರ್ಮಾಣ ಮಾಡುವಾಗ ವೈಜ್ಞಾನಿಕ ಕ್ರಮಗಳನ್ನು ಅನುಸರಿಸದಿರುವುದು ಮಳೆ ಬಂದಾಗ ಸಮಸ್ಯೆಗಳಿಗೆ ಆಹ್ವಾನ ನೀಡಿದಂತಾಗಿದೆ. ಇದು ಒಂದೆರಡು ಮುಖ್ಯರಸ್ತೆಗಳ ಕಥೆಯಲ್ಲ. ಹಲವಾರು ಬಡಾವಣೆಗಳ ವ್ಯಥೆಯಾಗಿದೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಾಲೆ ಎದುರು ಅಂದವಾಗಿ ಫುಟ್‌ಪಾತ್ ನಿರ್ಮಿಸಿ ವಿದ್ಯುತ್ ದೀಪಗಳನ್ನು ಅಳವಡಿಸಿದ್ದರೂ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿಲ್ಲ. ಅಲ್ಲಲ್ಲಿ ರಂಧ್ರವನ್ನು ಕೊರೆದಿದ್ದರೂ ಮಣ್ಣು ಸೇರಿಕೊಂಡು ನೀರು ನಿಂತಲ್ಲೇ ನಿಲ್ಲುತ್ತಿದೆ.

ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಎದುರಿನ ಸಿಎಫ್‌ಟಿಆರ್‌ಐ ವಸತಿಗೃಹಕ್ಕೆ ಹೋಗುವ ಮಾರ್ಗವು ಜಲಾವೃತವಾಗಿದೆ. ಇದರಿಂದ ಸಿಬ್ಬಂದಿ ವಾಹನಗಳಲ್ಲಿ ಓಡಾಡಲು ಹರಸಾಹಸ ಪಡುವಂತಾಗಿದೆ. ವಿಜಯನಗರ ಮೊದಲ ಹಂತದ ಕಸಾಪ ವೃತ್ತದಿಂದ ಉಪ ನೋಂದಣಾಧಿಕಾರಿ ಕಚೇರಿಗೆ ಹೋಗುವ ರಸ್ತೆಯಲ್ಲೂ ಅದೇ ಸಮಸ್ಯೆಯುಂಟಾಗಿದೆ.

ಮಳೆಗೆ ಕಿತ್ತು ಬಂದ ಡಾಂಬರು: ದಸರಾ ಮಹೋತ್ಸವದ ಯುವ ಸಂಭ್ರಮದ ಅಂಗವಾಗಿ ಮಾನಸಗಂಗೋತ್ರಿ ಬಯಲು ರಂಗಮಂದಿರದ ರಸ್ತೆಯಲ್ಲಿ ಹಾಕಲಾಗಿದ್ದ ಡಾಂಬರು ಕಿತ್ತು ಬಂದಿದೆ. ಮಳೆ ಮುಂದುವರಿದಷ್ಟು ಈ ರಸ್ತೆ ಸಂಪೂರ್ಣ ಹಾಳಾಗಲಿದೆ. ಮತ್ತೊಂದೆಡೆ ಕುಕ್ಕರಹಳ್ಳಿ ಕೆರೆಯಿಂದ ಮೈಸೂರು ವಿವಿಯ ಕಾರ್ಯಸೌಧದ ಕಡೆಗೆ ತೆರಳುವ ರಸ್ತೆಯಲ್ಲಿ ಹಾಕಿದ್ದ ಡಾಂಬರು ಹಾಳಾಗಿ ಮ್ಯಾನ್‌ಹೋಲ್ ಕುಸಿದಿರುವ ಕಾರಣ ರಸ್ತೆಯಲ್ಲಿ ನೀರು ಹರಿಯುತ್ತಿರುವುದು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿದೆ.

ಮಾನಸಗಂಗೋತ್ರಿ ಬಯಲು ರಂಗಮಂದಿರದ ರಸ್ತೆಯಲ್ಲಿ ಡಾಂಬರು ಕಿತ್ತು ಬಂದಿರುವುದು.

ಮೈಸೂರಿನ ಹಲವು ಕಡೆಗಳಲ್ಲಿ ಫುಟ್‌ಪಾತ್ ನಿರ್ಮಾಣ ಮಾಡುವಾಗ ಮಳೆ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಅದಕ್ಕೆ ಕಬ್ಬಿಣದ ಪೈಪ್, ಗ್ರಿಲ್‌ಗಳನ್ನು ಅಳವಡಿಸದೆ ಬಿಟ್ಟಿರುವ ಕಾರಣ ಮಣ್ಣು ತುಂಬಿಕೊಂಡಿದೆ. ಮಳೆ ನೀರು ಯಥೇಚ್ಛ ವಾಗಿ ನಿಲ್ಲುವ ಸ್ಥಳಗಳ ಮಾಹಿತಿ ಪಡೆದು ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಕ್ರಮ ಕೈಗೊಳ್ಳುತ್ತೇವೆ.
-ಶಿವಕುಮಾರ್, ಮಹಾಪೌರರು

 

 

 

andolana

Recent Posts

ಪೂರ್ಣ ಸಿದ್ಧವಾಗದ ಎಕ್ಸ್‌ಪ್ರೇಸ್‌ ವೇ : ಟೋಲ್‌ ಕಡಿತ

ಹೊಸದಿಲ್ಲಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಹತ್ವದ ಸುದ್ದಿಯೊಂದನ್ನು ನೀಡಿದೆ.…

7 hours ago

ಸೇವಾ ತೀರ್ಥ ಸಂಕೀರ್ಣ ಉದ್ಘಾಟಿಸಿದ ಪ್ರಧಾನಿ ಮೋದಿ

ಹೊಸದಿಲ್ಲಿ : ಪ್ರಧಾನ ಮಂತ್ರಿ ಕಾರ್ಯಾಲಯ (ಪಿಎಂಒ), ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ಸಂಪುಟ ಸಚಿವಾಲಯಗಳನ್ನು ಒಳಗೊಂಡಿರುವ ‘ಸೇವಾ…

8 hours ago

T20 World Cup | ಕೆನಡಾ ವಿರುದ್ಧ ಯುಎಇಗೆ ರೋಚಕ ಜಯ

ಹೊಸದಿಲ್ಲಿ : ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ‘ಡಿ’ಗುಂಪಿನ ಪಂದ್ಯದಲ್ಲಿ ಯುಎಇ ಕ್ರಿಕೆಟ್ ತಂಡವು ಕೆನಡಾ ತಂಡವನ್ನು ಐದು…

8 hours ago

ದಳಪತಿ ವಿಜಯ್‌ ರ‍್ಯಾಲಿಯಲ್ಲಿ ನಿಲ್ಲದ ದುರಂತ : ಮತ್ತೊಬ್ಬನ ಸಾವು

ಸೇಲಂ : ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ರ‍್ಯಾಲಿ ವೇಳೆ ಕುಸಿದು ಬಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದ ಮಧ್ಯೆ…

9 hours ago

ರೈಲ್‌ಒನ್‌ ಆಪ್‌ : ಒಂದೇ ಕಡೆ ಸಿಗಲಿದೆ ರೈಲು ಸೌಲಭ್ಯಗಳು

ಬೆಂಗಳೂರು : ಭಾರತೀಯ ರೈಲ್ವೆಯು ತನ್ನ ಅಧಿಕೃತ ಆಪ್ ‘ರೈಲ್‌ಒನ್’ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದರಲ್ಲಿ ರೈಲ್ವೆ ಸೇವೆಗಳೆಲ್ಲವೂ…

9 hours ago

ತಾರಿಖ್‌ ರೆಹಮಾನ್‌ ಬಾಂಗ್ಲಾದೇಶದ ನೂತನ ಪ್ರಧಾನಿ

ಢಾಕಾ : ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ(ಬಿಎನ್‌ಪಿ) ಗೆದ್ದು ಬೀಗಿದೆ. ಸಂಸತ್ತಿನ ಒಟ್ಟು 300 ಸ್ಥಾನಗಳ ಪೈಕಿ…

9 hours ago