ಜಿಲ್ಲೆಗಳು

ಮೈಸೂರು ವಿವಿ ಬೋಧಕೇತರ ಸಿಬ್ಬಂದಿ ನೇಮಕಾತಿ ಆದೇಶಕ್ಕೆ ಸಿಂಡಿಕೇಟ್ ಬ್ರೇಕ್

ಖಾಯಂ ಹುದ್ದೆ ಪ್ರಸಾರಾಂಗ ಉಪ ನಿರ್ದೇಶಕ ಹುದ್ದೆಗೂ ಅತಿಥಿ ಉಪನ್ಯಾಸಕರ ನೇಮಕ * ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಪ್ರಸ್ತಾಪ ಡೋಲಾಯಮಾನ

– ಕೆ.ಬಿ.ರಮೇಶನಾಯಕ

ಮೈಸೂರು: ಆರ್ಥಿಕ ಕೊರತೆ ಇದ್ದರೂ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳದ ತೀರ್ಮಾನ ಕೈಗೊಂಡಿದ್ದ ಮೈಸೂರು ವಿವಿಯ ನಡೆಗೆ ಹಣಕಾಸು ಇಲಾಖೆ ಚಾಟಿ ಬೀಸಿದ ಬೆನ್ನಲ್ಲೇ ಕಳೆದ ನಾಲ್ಕು ತಿಂಗಳ ಹಿಂದೆ ನೇಮಕಗೊಂಡಿದ್ದ ಬೋಧಕೇತರ ಸಿಬ್ಬಂದಿ ನೇಮಕಾತಿ ಆದೇಶಕ್ಕೆ ಸಿಂಡಿಕೇಟ್ ಸಭೆಯಲ್ಲಿ ಬ್ರೇಕ್ ಹಾಕಲಾಗಿದ್ದು, ಅತಿಥಿ ಉಪನ್ಯಾಸಕರ ವೇತನ ಹೆಚ್ಚಳದ ನಿರ್ಧಾರವೂ ಡೋಲಾಯಮಾನವಾಗಿದೆ. ಹಣಕಾಸು ಇಲಾಖೆ ಎತ್ತಿದ್ದ ಆಕ್ಷೇಪಣೆಗೆ ಸಮರ್ಪಕ ಪ್ರತ್ಯುತ್ತರ ನೀಡಲು ತಡಬಡಾಯಿಸಿರುವ ಮೈಸೂರು ವಿ.ವಿ. ಆಡಳಿತ ಮಂಡಳಿ, ವಿಶ್ರಾಂತ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅವರ ಅವಧಿಯಲ್ಲಿ ನೇಮಕಾತಿಯಾಗಿದ್ದ ಸಿಬ್ಬಂದಿಗೆ ಆದೇಶ ನೀಡುವುದಕ್ಕೆ ತಡೆಯಾಜ್ಞೆ ನೀಡಲಾಗಿದೆ. ಇದರಿಂದಾಗಿ ನೇಮಕಾತಿ ಆದೇಶ ಪತ್ರದ ನಿರೀಕ್ಷೆಯಲ್ಲಿದ್ದವರಿಗೆ ಬಾರೀ ನಿರಾಶೆ ಮೂಡಿಸಿದ್ದರೆ, ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳ ಭಾಗ್ಯ ಇಲ್ಲದೆ ಮತ್ತೊಮ್ಮೆ ಸರ್ಕಾರದ ಕದ ತಟ್ಟಬೇಕಾಗಿದೆ.

ಪ್ರೊ.ಜಿ.ಹೇಮಂತಕುಮಾರ್ ಅವರ ಅವಧಿ ಅಂತ್ಯವಾಗುವ ಎರಡು ತಿಂಗಳ ಮುನ್ನ ನೇಮಕಾತಿ ಸೇರಿ ಪ್ರಮುಖ ನಿರ್ಣಯಗಳನ್ನು ತಗೆದುಕೊಳ್ಳಲು ನಿಯಮಾನುಸಾರ ಯಾವುದೇ ಅಧಿಕಾರ ಇರುವುದಿಲ್ಲ. ಒಂದು ವೇಳೆ ಸಿಂಡಿಕೇಟ್ ಸಭೆಯಲ್ಲಿ ಅನುಮೋದಿಸಿ ಒಪ್ಪಿಗೆ ಪಡೆದರೂ ಸರ್ಕಾರ ಅಂತಿಮ ತೀರ್ಮಾನ ಮಾಡಬೇಕಾಗಿದೆ. ಆದರೆ, ವಿವಿಯಲ್ಲಿ ಖಾಲಿ ಇದ್ದ ಬೋಧಕೇತರ ಹುದ್ದೆಗೆ ಸಿಬ್ಬಂದಿ ನೇಮಕಾತಿ ಮಾಡಿಕೊಂಡಿದ್ದು, ಇದು ಸರ್ಕಾರದ ನಿಯಮಾವಳಿ ವಿರುದ್ಧವಾಗಿದೆ. ಹೀಗಾಗಿ, ಸಿಂಡಿಕೇಟ್ ಸಭೆಯಲ್ಲಿ ಈ ವಿಚಾರವನ್ನು ಸದಸ್ಯರು ಗಂಭೀರವಾಗಿ ಚರ್ಚಿಸಿ, ನೇಮಕಾತಿ ಆದೇಶ ಪತ್ರವನ್ನು ನೀಡಲು ತಡೆ ನೀಡಿದ್ದಾರೆ. ಇದಲ್ಲದೆ, ಪ್ರಸಾರಾಂಗ ಉಪ ನಿರ್ದೇಶಕರ ಹುದ್ದೆ ಕಾಯಂ ಹುದ್ದೆಯಾಗಿದ್ದು, ಈ ಸ್ಥಾನಕ್ಕೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿರುವುದಕ್ಕೂ ಬ್ರೇಕ್ ಹಾಕಿ, ಅವರನ್ನು ಹುದ್ದೆಯಿಂದ ವಾಪಸ್ ಕರೆಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಡೋಲಾಯಮಾನ: ಅತಿಥಿ ಉಪನ್ಯಾಸಕರ ವೇತನ ಹೆಚ್ಚಳದ ತೀರ್ಮಾನ ಮಾಡಿದ್ದ ಸಿಂಡಿಕೇಟ್ ಸಭೆಯ ನಿರ್ಣಯಕ್ಕೆ ಹಣಕಾಸು ಇಲಾಖೆ ನಿರಾಕರಿಸಿರುವ ಹಿನ್ನಲೆಯೆಲ್ಲಿ ಮತ್ತೊಮ್ಮೆ ಸಿಂಡಿಕೇಟ್ ಸಭೆಯಲ್ಲಿ ಪ್ರಸ್ತಾಪವಾದರೂ ಸರ್ಕಾರದ ವಿರುದ್ಧ ಹೋಗಲು ಸಾಧ್ಯವಿಲ್ಲದ ಕಾರಣದಿಂದ ವೇತನ ಹೆಚ್ಚಳ ಪ್ರಸ್ತಾಪ ಡೋಲಾಯಮಾನವಾಗಿದೆ.

12 ಗಂಟೆಗಳ ಕಾರ್ಯಭಾರ ಹೊಂದಿರುವ ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರ ವೇತನವನ್ನು 28ರಿಂದ 37 ಸಾವಿರ ರೂ., ಯುಜಿಸಿ ವಿದ್ಯಾರ್ಹತೆ ಹೊಂದಿಲ್ಲದವರಿಗೆ 24ರಿಂದ 26,400 ರೂ. ಹಾಗೂ ಕೆಲವು ಉಪನ್ಯಾಸಕರಿಗೆ ಮಾಸಿಕ ಗರಿಷ್ಟ 60 ಸಾವಿರ ರೂ.ಗಳಿಗೆ ವೇತನ ಹೆಚ್ಚಿಸಿರುವುದು ಯುಜಿಸಿಯು ಪೂರ್ಣಕಾರ್ಯಭಾರಕ್ಕೆ ನಿಗದಿಪಡಿಸಿರುವ ಗರಿಷ್ಟ ವೇತನಕ್ಕಿಂತಲೂ ಹೆಚ್ಚಾಗಿರುತ್ತದೆ. ಇದಲ್ಲದೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ನಿಗದಿಪಡಿಸಿರುವ ಸಂಭಾವನೆಗಿಂತಲೂ ಹೆಚ್ಚಿರುತ್ತದೆ. ಹಾಗಾಗಿ, ಸರ್ಕಾರದ ಆದೇಶದಲ್ಲಿ ನಿಗದಿಪಡಿಸಿರುವ ಮಾನದಂಡಗಳನ್ವಯ ವೇತನ ನಿಗದಿಪಡಿಸಲು ಕ್ರಮವಹಿಸುವಂತೆ ಸೂಚನೆ ಕೊಟ್ಟಿರುವುದನ್ನು ಯಥಾವತ್ತಾಗಿ ಪಾಲಿಸಲು ತೀರ್ಮಾನಿಸಲಾಗಿದೆ.

ಪರೀಕ್ಷಾ ಶುಲ್ಕ, ಟ್ಯೂಷನ್‌ಶುಲ್ಕ ಮೊದಲಾದ ಮೂಲಗಳಿಂದ ಅಂದಾಜು 15 ಕೋಟಿ ರೂ. ಸಂಗ್ರಹವಾದರೂ, ಸುಮಾರು 114 ಕೋಟಿ ರೂ. ಹೆಚ್ಚುವರಿ ಖರ್ಚು ಮಾಡಿರುವುದನ್ನು ವರದಿಯಲ್ಲಿ ಗುರುತಿಸಲಾಗಿದೆ. ಇದಲ್ಲದೆ, ವಿಶ್ವವಿದ್ಯಾನಿಲಯದ ವಿವಿಧ ಕಟ್ಟಡ ಕಾಮಗಾರಿಗಳಿಗೆ ಕೊಡಬೇಕಿರುವ ಬಾಕಿ ಮೊತ್ತ 50 ಕೋಟಿ ರೂ. ಇದ್ದು,ಬಿಡುಗಡೆ ಮಾಡುವಂತೆ ಉನ್ನತ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೂರು ವರ್ಷಗಳ ಸಂಪನ್ಮೂಲ ಮತ್ತು ವೆಚ್ಚವನ್ನು ಪರಿಗಣಿಸಿದರೆ ಸುಮಾರು 170 ಕೋಟಿ ರೂ.ನಷ್ಟು ಆರ್ಥಿಕ ಕೊರತೆಯನ್ನು ಎದುರಿಸುವ ಮೂಲಕ ದೊಡ್ಡ ಸಂಕಷ್ಟಕ್ಕೆ ಸಿಲುಕಿರುವುದರಿಂದ ಈಗ ವೇತನ ಹೆಚ್ಚಳ ಮಾಡುವುದನ್ನು ಕೈಬಿಡುವ ಮಟ್ಟಕ್ಕೆ ತಲುಪಿದೆ.


ಅತಿಥಿ ಉಪನ್ಯಾಸಕರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು ಪತ್ರ ಬರೆದಿರುವ ಹಿನ್ನಲೆಯಲ್ಲಿ ಮತ್ತೊಂದು ಬಾರಿ ಪ್ರಸ್ತಾವನೆ ಸಲ್ಲಿಸಿ ಸರ್ಕಾರದ ವಿರುದ್ಧ ಹೋಗಲಾಗದು. ಹಿಂದಿನ ಸಿಂಡಿಕೇಟ್ ಸಭೆಯ ನಿರ್ಣಯದಂತೆ ವೇತನ ಕೊಡಬೇಕಾಗಿತ್ತು. ಆದರೆ ಈಗ ಅದನ್ನು ಜಾರಿಗೊಳಿಸಲು ತಡೆ ಹಾಕಲಾಗಿದೆ. ಬೋಧಕೇತರ ಸಿಬ್ಬಂದಿ ನೇಮಕ ವಿಚಾರದಲ್ಲೂ ಹಲವು ತೀರ್ಮಾನ ಮಾಡಲಾಗಿದೆ.

-ಡಾ.ಎಚ್.ರಾಜಶೇಖರ್, ಹಂಗಾಮಿ ಕುಲಪತಿ


ವೇತನ ನಿಗದಿಯಲ್ಲೂ ವ್ಯತ್ಯಾಸ

ಮೈಸೂರು: ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಸಮಾನತೆ ಕಾಯ್ದುಕೊಳ್ಳದೆ ಒಂದೊಂದು ರೀತಿಯ ವೇತನ ನಿಗದಿಯಾಗಿರುವುದೂ ಬಹಿರಂಗಗೊಂಡಿದ್ದು, ಈ ವ್ಯತ್ಯಾಸ ಸರಿಪಡಿಸುವ ಕೆಲಸಕ್ಕೆ ಸಿಂಡಿಕೇಟ್ ಮುಂದಾಗಿದೆ. ಎಫ್‌ಡಿಎ, ಎಸ್‌ಡಿಸಿ ಮತ್ತು ತಾಂತ್ರಿಕ ಸಿಬ್ಬಂದಿ ವೇತನವನ್ನು ನಿಗದಿಪಡಿಸುವಾಗ ಮಾನದಂಡ ಪಾಲಿಸಬೇಕಿತ್ತಾದರೂ ತಾಂತ್ರಿಕ ಸಿಬ್ಬಂದಿಗೂ, ಎಫ್‌ಡಿಎ ಸಿಬ್ಬಂದಿ ವೇತನವನ್ನೇ ನಿಗದಿಪಡಿಸಿರುವುದು ಕಂಡುಬಂದಿದೆ. ಹಾಗಾಗಿ, ನೇಮಕಾತಿ ಆದೇಶಕ್ಕೆ ತಡೆ ಕೊಡುವ ಜತೆಗೆ ಅವೈಜ್ಞಾನಿಕವಾಗಿ ವೇತನ ನಿಗದಿಪಡಿಸಿರುವ ವಿಚಾರ ಈಗ ವಿವಿ ಮಟ್ಟದಲ್ಲಿ ದೊಡ್ಡ ಸದ್ದು ಮಾಡಿದೆ.

 

andolanait

Recent Posts

ಅಕ್ರಮ ಗಾಂಜಾ ಮಾರಾಟ : ಮಹಿಳೆ ಪೊಲೀಸ್ ವಶಕ್ಕೆ

ಹನೂರು : ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯೋರ್ವಳನ್ನು ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ಹನೂರು…

12 mins ago

ಮತಗಳ್ಳತನದ ಹೋರಾಟದಲ್ಲಿ ರಾಜಕೀಯ ಉದ್ದೇಶವಿಲ್ಲ : ಡಿ.ಕೆ.ಶಿವಕುಮಾರ್

ಹೊಸದಿಲ್ಲಿ : ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ನಾವು ಮತಕಳ್ಳತನದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಇದರಲ್ಲಿ…

1 hour ago

10 ವರ್ಷದ ಪ್ರೀತಿಗೆ ಮೋಸ,ಹಣವೂ ದೋಖಾ : ಬೇರೆ ಮದುವೆಗೆ ಮುಂದಾದ ಯುವಕನ ಮನೆಮುಂದೆ ಪ್ರಿಯತಮೆ ಗಲಾಟೆ

ಚಿಕ್ಕಮಗಳೂರು : ಅದೊಂದು ಬಹುಕಾಲದ ಪ್ರೀತಿ, ಪ್ರೀತಿ ಮಾಡಿ, ಪ್ರೇಯಸಿಯಿಂದ ಹಣ ಪಡೆದು, ಇದೀಗ ಬೇರೊಂದು ಮದುವೆಗೆ ಸಿದ್ಧವಾಗಿದ್ದ ಹುಡಗ…

3 hours ago

ವರ್ಷಾಂತ್ಯಕ್ಕೂ ಸಫಾರಿ ಪುನಾರಂಭ ಸಾಧ್ಯತೆ ಕ್ಷೀಣ

ಬಂಡೀಪುರ, ನಾಗರಹೊಳೆಯಲ್ಲಿ ಹೊಸ ವರ್ಷ ಆಚರಿಸಲು ಬಯಸಿದವರಿಗೆ ನಿರಾಸೆ ರೆಸಾರ್ಟ್, ಹೋಟೆಲ್ ಮಾಲೀಕರಿಂದ ಸಫಾರಿ ಪುನಾರಂಭಕ್ಕೆ ಒತ್ತಡ? ಮೈಸೂರು :…

3 hours ago

ಪ್ರತಿಭಟನೆ ಮಾಹಿತಿ ತಿಳಿದು ಕೆರೆಗೆ ನೀರು ತುಂಬಿಸಿದ ಅಧಿಕಾರಿಗಳು!

ಎಚ್.ಡಿ.ಕೋಟೆ : ತಾಲ್ಲೂಕಿನ ಕ್ಯಾತನಹಳ್ಳಿ, ಆಲನಹಳ್ಳಿ, ಜಿ. ಬಿ. ಸರಗೂರು ವ್ಯಾಪ್ತಿಯ ಐದು ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ನಿರ್ಲಕ್ಷಿ…

6 hours ago

ಓದುಗರ ಪತ್ರ | ರಸ್ತೆ ದುರಸ್ತಿ ಮಾಡಿ

ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆ ಎದುರಿನ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಎಲ್ಲೆಡೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು,…

6 hours ago