ಜಿಲ್ಲೆಗಳು

ʼಆಟೋಮ್ಯಾಟಿಕ್‌ ಸ್ಮಾರ್ಟ್ ಮೀಟರ್’ ಅಳವಡಿಕೆಗೆ ಸೆಸ್ಕ್ ಪ್ಲಾನ್!

ಮುಂದಿನ ಐದು ವರ್ಷಗಳಲ್ಲಿ ವಿದ್ಯುತ್ ನಷ್ಟವನ್ನು ಶೇ.5ರ ಒಳಗೆ ತರಲು ಚಿಂತನೆ

* ವರ್ಷದಿಂದ ವರ್ಷಕ್ಕೆ ನಷ್ಟದ ಪ್ರಮಾಣ ಕಡಿಮೆ
* ವಿಚಕ್ಷಣಾ ದಳದ ಕಾರ್ಯ ಒತ್ತಡ ಕಡಿಮೆ
* ಖಾಸಗಿ ಕಂಪೆನಿಗಳ ಮೊರೆಗೆ ಸೆಸ್ಕ್ ಚಿಂತನೆ
* ಒಂದು ಸ್ಮಾರ್ಟ್ ಮೀಟರ್‌ಗೆ 8 ಸಾವಿರ ರೂ.
* ಕೇಂದ್ರ ಸರ್ಕಾರದಿಂದ 900 ರೂ. ಸಬ್ಸಿಡಿ ವ್ಯವಸ್ಥೆ

ಕೆ.ಬಿ.ರಮೇಶ ನಾಯಕ

ಮೈಸೂರು: ಗುಣಮಟ್ಟದ ವಿದ್ಯುತ್ ಸರಬರಾಜಿನ ಜತೆಗೆ ವಿದ್ಯುತ್ ಸೋರಿಕೆ, ನಷ್ಟದ ಪ್ರಮಾಣವನ್ನು ಕಡಿಮೆ ಮಾಡಲು ಮಾಹಿತಿ ತಂತ್ರಜ್ಞಾನ ಬಳಸಿಕೊಳ್ಳಲು ಮುಂದಾಗಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್)ವು ‘ಆಟೋಮ್ಯಾಟಿಕ್‌ ಸ್ಮಾರ್ಟ್ ಮೀಟರ್’ ಅಳವಡಿಸಲು ಚಿಂತನೆ ನಡೆಸಿದೆ.
ಖಾಸಗಿ ಕಂಪೆನಿಗಳ ಸಹಯೋಗದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸಿ ಕುಳಿತಲ್ಲೇ ವಿದ್ಯುತ್ ಕಳ್ಳತನ ಪತ್ತೆ ಹಚ್ಚುವ, ತಡೆಗಟ್ಟುವ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತರಲಿದ್ದು, ಈ ಯೋಜನೆ ಸಫಲವಾದರೆ ಮುಂದಿನ ಐದು ವರ್ಷಗಳಲ್ಲಿ ವಿದ್ಯುತ್ ನಷ್ಟವನ್ನು ಶೇ.5ರೊಳಗೆ ತರುವ ಜತೆಗೆ ವರ್ಷಕ್ಕೆ 50ರಿಂದ 100 ಕೋಟಿ ರೂ. ಹೊರೆ ತಪ್ಪಲಿದೆ. ವಿಚಕ್ಷಣಾ ದಳದ ಕಾರ್ಯದ ಒತ್ತಡವನ್ನು ಕಡಿಮೆ ಮಾಡಬಹುದಾಗಿದೆ.
ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಕಳ್ಳತನವನ್ನು ತಡೆಯಲು ವಿಚಕ್ಷಣಾ ದಳ ಆಗಿಂದಾಗ್ಗೆ ದಾಳಿ ನಡೆಸಿ ವಿದ್ಯುತ್ ಕಳ್ಳರನ್ನು ಸೆರೆ ಹಿಡಿದು ಜೈಲಿಗೆ ಕಳುಹಿಸುವ ಕೆಲಸ ಮಾಡುತ್ತಿದೆ ಯಾದರೂ ಸೋರಿಕೆ ಮತ್ತು ನಷ್ಟವನ್ನು ಸಂಪೂರ್ಣವಾಗಿ ತಡೆಯಲಾಗುತ್ತಿಲ್ಲ. ಹೀಗಾಗಿ, ವಾರ್ಷಿಕ ಅಂದಾಜು 100ರಿಂದ 150 ಕೋಟಿ ರೂ. ಸೆಸ್ಕ್‌ಗೆ ನಷ್ಟವಾಗುತ್ತಿದೆ. ಹೀಗಾಗಿಯೇ, ವಿದ್ಯುತ್ ದರ ಹೆಚ್ಚಳ ಪ್ರಸ್ತಾಪ ಮಾಡಿದಾಗಲೆಲ್ಲಾ ಸೋರಿಕೆ, ವಿತರಣಾ ನಷ್ಟವನ್ನು ತಡೆಯುವಂತೆ ಬೇಡಿಕೆ ಬರುವ ಕಾರಣ ಅನೇಕ ಯೋಜನೆಗಳನ್ನು ಹಮ್ಮಿಕೊಂಡು ಸ್ವಲ್ಪಮಟ್ಟಿಗೆ ಸಫಲವಾಗಿದೆ. ಇದರ ಪರಿಣಾಮವಾಗಿ 2017ರಲ್ಲಿ ಶೇ.13.20ರಷ್ಟಿದ್ದ ವಿತರಣಾ ನಷ್ಟದ ಪ್ರಮಾಣವು ವರ್ಷದಿಂದ ವರ್ಷಕ್ಕೆ ಕಡಿಮೆಯಾಗಿ 2022-23ನೇ ಸಾಲಿನಲ್ಲಿ ಶೇ.9.06ಕ್ಕೆ ಬಂದು ನಿಂತಿದೆ.

ಸ್ಮಾರ್ಟ್ ಮೀಟರ್‌ನಿಂದ ಏನೇನು ಉಪಯೋಗ?:
ಗೃಹ ಬಳಕೆ, ವಾಣಿಜ್ಯ ಬಳಕೆ, ಟ್ರಾನ್ಸ್‌ಫಾರ್ಮರ್, ಫೀಡರ್ ಲೇನ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸುವುದರಿಂದ ಮಾಹಿತಿ ತಂತ್ರಜ್ಞಾನ ಬಳಸಿಕೊಂಡು ಕುಳಿತಲ್ಲೇ ನಿರ್ವಹಣೆ ಮಾಡಬಹುದಾಗಿದೆ. ಟಿಸಿಗಳು ಇದ್ದಕ್ಕಿದ್ದಂತೆ ಹೀಟ್ ಆಗುವುದಕ್ಕೆ ಶುರುವಾದರೆ ಕೊಳವೆ ಬಾವಿಗಳು ಅನಧಿಕೃತವಾಗಿ ಸಂಪರ್ಕ ಪಡೆಯುವುದರ ಮುನ್ಸೂಚನೆ ದೊರೆಯಲಿದೆ. ಅಲ್ಲದೆ, ಟಿಸಿಗಳಲ್ಲಿನ ಅಡ್ವಾನ್ಸ್ಡ್ ಅಲಾರಾಮ್ ಸಿಸ್ಟಂ ಮಾಹಿತಿ ರವಾನೆ ಮಾಡುತ್ತದೆ. ಇದರಿಂದ ಟಿಸಿಗಳು ಕೆಟ್ಟು ಹೋಗುವುದಕ್ಕೆ ಮತ್ತು ಹೀಟ್ ಆಗುವುದಕ್ಕೆ ನಿಖರವಾದ ಕಾರಣ ಗೊತ್ತಾಗುತ್ತದೆ. ಆಗ ಕೇಂದ್ರ ಕಚೇರಿಯಲ್ಲಿರುವ ಮಾನಿಟರಿಂಗ್ ಸಿಸ್ಟಂ ಮೂಲಕವೇ ಅದನ್ನು ನಿರ್ವಹಣೆ ಮಾಡುವುದಕ್ಕೆ ಸುಲಭವಾಗಲಿದೆ.
ಉದಾಹರಣೆಗೆ ಮೈಸೂರು ನಗರದಲ್ಲಿ ಬೀದಿ ದೀಪಗಳಿಗೆ ಸ್ವಯಂಚಾಲಿತ ಸ್ವಿಚ್ ಆನ್ ಮತ್ತು ಸ್ವಿಚ್ ಆಫ್ ವ್ಯವಸ್ಥೆ ಇರುವುದರಿಂದ ತಿಂಗಳಿಗೆ 6 ಕೋಟಿ ರೂ. ವಿದ್ಯುತ್ ಬಿಲ್ ಉಳಿತಾಯವಾಗುತ್ತಿದೆ. ವರ್ಷಕ್ಕೆ 75 ಕೋಟಿ ರೂ. ವಿದ್ಯುತ್ ಬಿಲ್ ಉಳಿಯುತ್ತಿರುವುದರಿಂದ ಸ್ಮಾರ್ಟ್ ಮೀಟರ್ ಅಳವಡಿಕೆಯಿಂದ ನಷ್ಟ ಮತ್ತು ಸೋರಿಕೆ ತಡೆಯಬಹುದಾಗಿದೆ.

1800 ಕೋಟಿ ರೂ. ಯೋಜನೆ

ಮೈಸೂರು: ಸ್ಮಾರ್ಟ್ ಮೀಟರ್ ಅಳವಡಿಕೆ ಯೋಜನೆ ಜಾರಿಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಅಂದಾಜು 1800 ಕೋಟಿ ರೂ. ಭರಿಸಬೇಕಿದ್ದು, ಇಷ್ಟು ದೊಡ್ಡ ಮೊತ್ತವನ್ನು ನಿಗಮವು ಭರಿಸುವುದು ಕಷ್ಟಕರವಾಗಲಿದೆ. ರಾಜ್ಯ ಸರ್ಕಾರ ಈ ಯೋಜನೆಗೆ ಅನುದಾನ ನೀಡಲು ಮುಂದಾದರೆ ಎಲ್ಲ ಎಸ್ಕಾಂಗಳಿಗೂ ಭರಿಸಬೇಕಾಗುತ್ತದೆ. ಹೀಗಾಗಿ,ಆಯಾಯ ಎಸ್ಕಾಂಗಳೇ ನಿರ್ಧರಿಸಿ ಯೋಜನೆ ಜಾರಿಗೊಳಿಸಬೇಕಿದೆ. ಒಂದು ಸ್ಮಾರ್ಟ್ ಮೀಟರ್‌ಗೆ 8 ಸಾವಿರ ರೂ. ತಗುಲಲಿದ್ದು, ಕೇಂದ್ರ ಸರ್ಕಾರ 900 ರೂ. ಸಬ್ಸಿಡಿ ಕೊಡುವುದರಿಂದ 7,100 ರೂ. ಭರಿಸಬೇಕಾಗಿದೆ. ಈ ಮೊತ್ತವನ್ನು ಗ್ರಾಹಕರಿಂದ ಪಡೆದು ಮೀಟರ್ ಅಳವಡಿಸುವುದು ಅಸಾಧ್ಯವಾಗಿರುವ ಕಾರಣ, ಖಾಸಗಿ ಕಂಪೆನಿಗಳ ಮೂಲಕ ಯೋಜನೆ ಜಾರಿಗೊಳಿಸಿ ಐದು ವರ್ಷಗಳ ಕಾಲ ಸಂಪೂರ್ಣ ನಷ್ಟವಿಲ್ಲದೆ ನಿರ್ವಹಣೆ ಮಾಡಿ ತೋರಿಸಿದರೆ ಮುಂದಿನ ಐದು ವರ್ಷಗಳ ಕಾಲ ನಿರ್ವಹಣೆಗೆ ಅವಕಾಶ ಮಾಡಿಕೊಡುವ ಯೋಜನೆ ರೂಪಿಸಲಾಗಿದೆ.


ವಿದ್ಯುತ್ ನಷ್ಟವನ್ನು ವಿಚಕ್ಷಣಾ ದಳವೊಂದರಿಂದಲೇ ತಡೆಯಲಾಗದು. ಅದಕ್ಕಾಗಿ ಬದಲಾದ ಕಾಲಕ್ಕೆ ತಕ್ಕಂತೆ ಆಟೋಮ್ಯಾಟಿಕ್ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಿ ನಿರ್ವಹಣೆ ಮಾಡಿದಲ್ಲಿ ನಷ್ಟವನ್ನು ತಪ್ಪಿಸಬಹುದು. ಖಾಸಗಿ ಕಂಪೆನಿಗಳ ಸಹಭಾಗಿತ್ವದೊಂದಿಗೆ ಈ ಯೋಜನೆ ಅನುಷ್ಠಾನಗೊಳಿಸುವ ಸಂಬಂಧ ಹಲವಾರು ಕಂಪೆನಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಒಂದು ಮೀಟರ್‌ಗೆ 8 ಸಾವಿರ ರೂ. ವೆಚ್ಚವಾಗುವ ಕಾರಣ 1,800 ಕೋಟಿ ರೂ. ಅಗತ್ಯವಿದೆ.

ಜಯವಿಭವ ಸ್ವಾಮಿ, ವ್ಯವಸ್ಥಾಪಕ ನಿರ್ದೇಶಕರು, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ.

andolanait

Recent Posts

ಪಿರಿಯಾಪಟ್ಟಣ | ನಿಲ್ಲದ ಸರ್ವರ್‌ ಸಮಸ್ಯೆ ; ಪಡಿತರ ಪಡೆಯಲು ಪರದಾಟ

ಪಿರಿಯಾಪಟ್ಟಣ : ಪಿರಿಯಾಪಟ್ಟಣದಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಜನರು ಪಡಿತರ ಪಡೆಯಲು ಪರದಾಟ ನಡೆಸುವ ಪರಿಸ್ಥಿತಿ ಎದುರಾಗಿದೆ. ಜನಸಾಮಾನ್ಯರು ಎಂದಿನಂತೆ ಪ್ರತಿ…

3 hours ago

ಗೌರವಯುತವಾಗಿ ನಡೆದುಕೊಂಡ ಸಿದ್ದರಾಮಯ್ಯ : ಮಾಜಿ ಸಂಸದ ಪ್ರತಾಪ್‌ ಸಿಂಹ

ಮೈಸೂರು : ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯನವರ ಮುಂದಿನ ಜೀವನ ಚೆನ್ನಾಗಿರಲಿ. ನೂತನ ಸಿಎಂ ಆಗಲಿರುವ ಡಿ.ಕೆ.ಶಿವಕುಮಾರ್ ಉತ್ತಮ…

5 hours ago

ನಾಳೆ ಸಿಎಲ್‌ಪಿ ಸಭೆ ಕರೆದಿದ್ದೇವೆ, ಸಿದ್ದರಾಮಯ್ಯ ಜತೆ ಚರ್ಚಿಸಿದ್ದೇನೆ : ಡಿ.ಕೆ.ಶಿವಕುಮಾರ್‌

ಹೊಸದಿಲ್ಲಿ : ಕಳೆದ ಎರಡ್ಮೂರು ದಿನಗಳಿಂದ ಮೌನಕ್ಕೆ ಶರಣಾಗಿದ್ದ ಡಿಕೆ ಶಿವಕುಮಾರ್ ಕೊನೆಗೂ ತುಟಿ ಬಿಚ್ಚಿ ಮಾತನಾಡಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ…

5 hours ago

ನಾನು ಸಹ ಹೊಸ ಸಚಿವ ಸಂಪುಟದಲ್ಲಿ ಸೇರುವ ಬಯಕೆ ಇದೆ: ಶಾಸಕ ತನ್ವೀರ್‌ ಸೇಠ್‌

ಮೈಸೂರು: ನಾನು ಸಹ ಹೊಸ ಸಚಿವ ಸಂಪುಟದಲ್ಲಿ ಸೇರುವ ಬಯಕೆ ಇದೆ ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದ್ದಾರೆ. ಈ…

10 hours ago

ರಾಜ್ಯ ಸಚಿವ ಸಂಪುಟ ವಿಸರ್ಜನೆ: ಸಚಿವರ ಸರ್ಕಾರಿ ವಾಹನಗಳು ವಾಪಸ್‌

ಬೆಂಗಳೂರು: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿದ್ದ ರಾಜೀನಾಮೆಯನ್ನು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಅಂಗೀಕರಿಸಿದ್ದಾರೆ. ರಾಜೀನಾಮೆ ಅಂಗೀಕಾರವಾದ ಬೆನ್ನಲ್ಲೇ…

11 hours ago

ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಡಿ.ಕೆ.ಶಿವಕುಮಾರ್‌

ಬೆಂಗಳೂರು: ದೇವರು ವರನೂ ಕೊಡಲ್ಲ. ಶಾಪನೂ ಕೊಡಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ಆ ಕೊಟ್ಟಿರುವ ಅವಕಾಶದಲ್ಲಿ ನಾವು ಏನು ಸಾಧನೆ…

11 hours ago