‘ಸ್ವಾಭಿಮಾನದ ಬದುಕಿಗೆ ಮಾದರಿಯಾದ ಹಿರಿಯ ಜೀವ’
ಬಿ.ಎನ್.ಧನಂಜಯಗೌಡ
ಮೈಸೂರು: ‘ನಮ್ಮ ಯಜಮಾನ್ರು ಪೊಲೀಸ್ ಆಗಿದ್ರು. ಆದ್ರೆ, ತುಂಬಾ ದಿನ ಅವರು ಆ ಕೆಲಸದಲ್ಲೂ ಇರಲಿಲ್ಲ. ಅವರೊಂದಿಗೆ ಜೀವನ ನಡೆಸುವ ಭಾಗ್ಯವನ್ನು ಆ ದೇವ್ರ ನನಗೂ ಕೊಡಲಿಲ್ಲ. ಆ ನಂತರ ಬದುಕಿಗೆ ಆಸರೆಯಾಗಿದ್ದು ಮಲ್ಲಿಗೆ, ಸಂಪಿಗೆ, ಸೇವಂತಿಗೆ, ಇರುವಂತಿಗೆ, ಕನಕಾಂಬರ, ಗುಲಾಬಿ…’
ಹೀಗೆ ಅಂದಿದ್ದು ೮೩ ವರ್ಷ ವಯಸ್ಸಿನಲ್ಲಿಯೂ ಹೂವು ಮಾರುವ ‘ಲಕ್ಷ್ಮಮ್ಮ’. ಮೈಸೂರಿನ ಸಬ್ ಅರ್ಬನ್ ಬಸ್ ನಿಲ್ದಾಣದಿಂದ ಇರ್ವೀನ್ ರಸ್ತೆ ಕಡೆಗೆ ಬರುವ ಮಾರ್ಗದ ಮೂಲೆಯೊಂದರಲ್ಲಿ ಕಣ್ಣಗಲಿಸಿಕೊಂಡು ಸೂಜಿಗೆ ದಾರ ಪೋಣಿಸಿ, ಹೂವು ಕಟ್ಟುತ್ತಾ, ಮಾರುವ ಈ ಲಕ್ಷ್ಮಜ್ಜಿಯ ಕಥೆ ಎಂತಹವರಿಗೂ ಪ್ರೇರಣದಾಯಕವಾದುದು.
ಸಬ್ ಅರ್ಬನ್ ಬಸ್ ನಿಲ್ದಾಣದಲ್ಲಿ ಬೆಂಗಳೂರು ಕಡೆಗೆ ಹೋಗುವ ಬಸ್ಸುಗಳು ನಿಲ್ಲುವ ಇರ್ವೀನ್ ರಸ್ತೆ ಕಡೆಗೆ ಹೋಗುವ ಮೂಲೆಯಲ್ಲಿ ೪೫ ವರ್ಷಗಳಿಂದ ಹೂವು ಮಾರುವ ಈ ಲಕ್ಷ್ಮಮ್ಮನಿಗೆ ಈಗಲೂ ದುಡಿಯುವ ಹುರುಪು.
‘ಇಷ್ಟು ವರ್ಷವಾದ್ರೂ ನನಗೆ ಯಾವ ಕಾಯಿಲೆ ಇಲ್ಲ. ಮನೆಯಲ್ಲಿ ಕುಂತ್ರೆ ಏನೇನೋ ಕೆಟ್ಟ ಯೋಚನೆ. ಕೈಯಲ್ಲಿ ಆಗೋವರೆಗೂ, ಹೂವು ಮಾರೋದಾ ಬಿಡೋದಿಲ್ಲ’ ಎನ್ನುತ್ತಾ ಹೆಬ್ಬಾಳದ ಭೈರವೇಶ್ವರ ನಗರದಲ್ಲಿ ವಾಸಿಸುತ್ತಿರುವ ಲಕ್ಷ್ಮಮ್ಮ. ಬೆಳಿಗ್ಗೆ ೭ ಗಂಟೆ ಆಗುತ್ತಿದ್ದಂತೆ ತನ್ನ ಕಾಯಕ ಸ್ಥಳಕ್ಕೆ ಹಾಜರಾಗುತ್ತಾರೆ.
ಪೊಲೀಸಪ್ಪನ ಹೆಂಡತಿ ಕಥೆ: ಕುಂಬಾರಕೊಪ್ಪಲಿನ ಲಕ್ಷ್ಮಮ್ಮ ಅವರು ಮಂಡಿ ಮೊಹಲ್ಲಾದ ವೆಂಕಟರಾಮಯ್ಯ ಎಂಬವರನ್ನು ವಿವಾಹವಾಗುತ್ತಾರೆ. ವೆಂಕಟರಾಮಯ್ಯ ಅವರು ಪೊಲೀಸ್ ಕಾನ್ಸ್ಟೇಬಲ್ ಆಗಿದ್ದವರು. ಆದರೆ, ಅನಾರೋಗ್ಯ ಕಾರಣದಿಂದ ವೃತ್ತಿಗೆ ರಾಜೀನಾಮೆ ನೀಡುವ ಅವರು, ಮದುವೆಯಾದ ಹೆನ್ನೆರಡು-ಹದಿಮೂರು ವರ್ಷಗಳಿಗೆಲ್ಲ ಅನಾರೋಗ್ಯದಿಂದ ನಿಧನರಾಗುತ್ತಾರೆ. ಆನಂತರದಲ್ಲಿ ಕುಟುಂಬದ ಹೊರೆ ಲಕ್ಷ್ಮಮ್ಮ ಅವರ ಮೇಲೆ ಬೀಳುತ್ತದೆ. ಇದಕ್ಕಾಗಿ ಹೂವು ಮಾರುವ ಕಾಯಕ ಹಿಡಿದ ಅವರು ೪೫ ವರ್ಷಗಳಿಂದ ಒಂದೇ ಜಾಗದಲ್ಲಿ ಹೂವು ಮಾರಾಟ ಮಾಡುತ್ತಿದ್ದಾರೆ.
ಮಗ ಮತ್ತು ಮಗಳನ್ನು ಸಾಕಿ ಮದುವೆ ಮಾಡಿರುವ ಅವರು, ಹೂವು ಮಾರಾಟ ಮಾಡುತ್ತಲೇ ಭೈರವೇಶ್ವರ ನಗರದಲ್ಲಿ ೨೫ ವರ್ಷಗಳ ಹಿಂದೆ ಸ್ವಂತ ನಿವೇಶನ ಖರೀದಿಸಿ, ಮೂರು ಅಂತಸ್ತಿನ ಸ್ವಂತ ಮನೆಯನ್ನು ಮಾಡಿದ್ದಾರೆ. ಒಂದು ಅಂತಸ್ತಿನ ಮನೆಯನ್ನು ಭೋಗ್ಯಕ್ಕೆ ನೀಡಿದ್ದು, ಇನ್ನುಳಿದ ಎರಡು ಅಂತಸ್ತನ್ನು ಇಬ್ಬರೂ ಮಕ್ಕಳಿಗೂ ಭಾಗವಾಗಿ ನೀಡಿದ್ದಾರೆ. ಇವರು ಮಗನ ಮನೆಯಲ್ಲಿಯೇ ಇದ್ದಾರೆ.
ವ್ಯಾಪಾರ ಮುಂಚೆ ತರ ಇಲ್ಲ. ಅಷ್ಟೋ, ಇಷ್ಟೋ ಆಗುತ್ತೆ ಎನ್ನುವ ಲಕ್ಷ್ಮಮ್ಮ. ಪ್ರತಿನಿತ್ಯ ಬೆಳಿಗ್ಗೆ ೭ ಗಂಟೆಗೆ ಹೂವು ಮಾರಲು ಬರುತ್ತಾರೆ. ಮನೆಯಿಂದ ನಾನಿರುವಲ್ಲಿಗೆ ತಿಂಡಿ ಬರುತ್ತದೆ. ಮಧ್ಯಾಹ್ನ ಇಲ್ಲೇ ಹೋಟೆಲ್ ಅಲ್ಲಿ ಏನಾದ್ರೂ ತಿನ್ಕೋತಿನಿ. ರಾತ್ರಿ ೮ ಗಂಟೆಗೆ ಮನೆಗೆ ಆಟೋದಲ್ಲಿ ವಾಪಸ್ಸು ಆಗುತ್ತೇನೆ. ಮುಂಚೆ ಬೆಳಿಗ್ಗೆ ೫ ಗಂಟೆಯಿಂದ ವ್ಯಾಪಾರ ಶುರು ಮಾಡುತ್ತಿದ್ದೆ. ಈಗ ಅಷ್ಟು ಹೊತ್ತಿಗೆ ಎದ್ದು ಬರೋಕೆ ಆಗಲ್ಲ ಎಂದು ತಮ್ಮ ಪರಿಶ್ರಮವನ್ನು ವಿವರಿಸುತ್ತಾರೆ.
‘ಕಾಸಿಲ್ಲ ಕಷ್ಟ ಅಂದಾಗ ಮಕ್ಕಳಿಗೂ…ಅಷ್ಟೋ ಇಷ್ಟೋ ಕೊಡ್ಬೇಕಲ್ಲ’
ಮಗ ಆಟೋ ಓಡಿಸ್ತಾನೆ. ಈ ಕಾಲದಲ್ಲಿ ಅವರವರ ಸಂಸಾರ ಸಾಕೋದೆ ಕಷ್ಟವಾಗುತ್ತೆ. ಹೀಗಿರುವಾಗ ನನ್ನ ಖರ್ಚಿಗೆ ಅವರನ್ನು ಕಾಸು ಕೇಳೋಕೆ ಆಗುತ್ತಾ. ಅದ್ಕೆ, ನನ್ನ ಕೈಯಲಿ ಆಗೋವರೆಗೂ ಹೂವು ಮಾರಿ ಕಾಸು ಕೂಡಿ ಹಾಕ್ತಿನಿ. ಈಗೇನೋ ಆರೋಗ್ಯ ಚೆನ್ನಾಗಿದೆ. ಮುಂದೆನೋ?, ಹಿಂಗೆ ಇರುತ್ತೇ ಅಂಥ ಯಾರಿಗೆ ಗೊತ್ತು. ಆಗ ಖರ್ಚುಗಿರ್ಚು ಅಂತ ಬರಲ್ವಾ ಎಂದು ಮುಗ್ಧತೆಯಿಂದ ಮಾತನಾಡುವ ಲಕ್ಷ್ಮಮ್ಮ ‘ಕಾಸಿಲ್ಲ ಕಷ್ಟ ಅಂದಾಗ ಮಕ್ಕಳಿಗೂ…ಅಷ್ಟೋ ಇಷ್ಟೋ ಕೊಡ್ಬೇಕಲ್ಲ’ ಎಂದು ಹೇಳುವ ಮೂಲಕ ತಾಯ್ಕರುಳಿನ ಪ್ರೀತಿಯನ್ನು ತೆರೆದಿಡುತ್ತಾರೆ.
ಬೆಂಗಳೂರು: ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿ ಹಾಗೂ ಅದಕ್ಕೆ ಪೂರಕ ವ್ಯವಸ್ಥೆಯನ್ನು ಸೃಷ್ಟಿಸುವ ದಿಸೆಯಲ್ಲಿ ಕೇಂದ್ರದ ಬೃಹತ್ ಕೈಗಾರಿಕೆ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಅವರಿಗೆ ಈಗ ಜೈಲಿನ ಊಟವೇ ಗತಿಯಾಗಿದೆ. ಈ…
ಮಂಡ್ಯ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾರ್ಚ್.11ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ…
ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನ ಮಂಚಹಳ್ಳಿ ಹಾಗೂ ಸವಕನಹಳ್ಳಿ ಪಾಳ್ಯದಲ್ಲಿ ಕಾಡಾನೆಗಳ ದಾಳಿಯಿಂದ ಫಸಲು ನಾಶವಾಗುತ್ತಿದ್ದು,…
ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನ ಪಡಗೂರು ಗ್ರಾಮದ ಶಿವಕುಮಾರ್ ಎಂಬುವವರ ಜಮೀನಿನಲ್ಲಿ ಎರಡು ಚಿರತೆ ಮರಿಗಳನ್ನು…
ಚಾಮರಾಜನಗರ: ಕಾವೇರಿ ನದಿಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಹ್ಯಾಂಡ್ಪೋಸ್ಟ್ ಬಳಿ ನಡೆದಿದೆ. ರಶ್ಮಿ…