ಜಿಲ್ಲೆಗಳು

ಪೊಲೀಸಪ್ಪನ ಪತ್ನಿ ಲಕ್ಷ್ಮಮ್ಮ ಈಗ ಹೂವು ಮಾರುವಾಕೆ!

‘ಸ್ವಾಭಿಮಾನದ ಬದುಕಿಗೆ ಮಾದರಿಯಾದ ಹಿರಿಯ ಜೀವ’

ಬಿ.ಎನ್.ಧನಂಜಯಗೌಡ

ಮೈಸೂರು: ‘ನಮ್ಮ ಯಜಮಾನ್ರು ಪೊಲೀಸ್ ಆಗಿದ್ರು. ಆದ್ರೆ, ತುಂಬಾ ದಿನ ಅವರು ಆ ಕೆಲಸದಲ್ಲೂ ಇರಲಿಲ್ಲ. ಅವರೊಂದಿಗೆ ಜೀವನ ನಡೆಸುವ ಭಾಗ್ಯವನ್ನು ಆ ದೇವ್ರ ನನಗೂ ಕೊಡಲಿಲ್ಲ. ಆ ನಂತರ ಬದುಕಿಗೆ ಆಸರೆಯಾಗಿದ್ದು ಮಲ್ಲಿಗೆ, ಸಂಪಿಗೆ, ಸೇವಂತಿಗೆ, ಇರುವಂತಿಗೆ, ಕನಕಾಂಬರ, ಗುಲಾಬಿ…’
ಹೀಗೆ ಅಂದಿದ್ದು ೮೩ ವರ್ಷ ವಯಸ್ಸಿನಲ್ಲಿಯೂ ಹೂವು ಮಾರುವ ‘ಲಕ್ಷ್ಮಮ್ಮ’. ಮೈಸೂರಿನ ಸಬ್ ಅರ್ಬನ್ ಬಸ್ ನಿಲ್ದಾಣದಿಂದ ಇರ್ವೀನ್ ರಸ್ತೆ ಕಡೆಗೆ ಬರುವ ಮಾರ್ಗದ ಮೂಲೆಯೊಂದರಲ್ಲಿ ಕಣ್ಣಗಲಿಸಿಕೊಂಡು ಸೂಜಿಗೆ ದಾರ ಪೋಣಿಸಿ, ಹೂವು ಕಟ್ಟುತ್ತಾ, ಮಾರುವ ಈ ಲಕ್ಷ್ಮಜ್ಜಿಯ ಕಥೆ ಎಂತಹವರಿಗೂ ಪ್ರೇರಣದಾಯಕವಾದುದು.
ಸಬ್ ಅರ್ಬನ್ ಬಸ್ ನಿಲ್ದಾಣದಲ್ಲಿ ಬೆಂಗಳೂರು ಕಡೆಗೆ ಹೋಗುವ ಬಸ್ಸುಗಳು ನಿಲ್ಲುವ ಇರ್ವೀನ್ ರಸ್ತೆ ಕಡೆಗೆ ಹೋಗುವ ಮೂಲೆಯಲ್ಲಿ ೪೫ ವರ್ಷಗಳಿಂದ ಹೂವು ಮಾರುವ ಈ ಲಕ್ಷ್ಮಮ್ಮನಿಗೆ ಈಗಲೂ ದುಡಿಯುವ ಹುರುಪು.
‘ಇಷ್ಟು ವರ್ಷವಾದ್ರೂ ನನಗೆ ಯಾವ ಕಾಯಿಲೆ ಇಲ್ಲ. ಮನೆಯಲ್ಲಿ ಕುಂತ್ರೆ ಏನೇನೋ ಕೆಟ್ಟ ಯೋಚನೆ. ಕೈಯಲ್ಲಿ ಆಗೋವರೆಗೂ, ಹೂವು ಮಾರೋದಾ ಬಿಡೋದಿಲ್ಲ’ ಎನ್ನುತ್ತಾ ಹೆಬ್ಬಾಳದ ಭೈರವೇಶ್ವರ ನಗರದಲ್ಲಿ ವಾಸಿಸುತ್ತಿರುವ ಲಕ್ಷ್ಮಮ್ಮ. ಬೆಳಿಗ್ಗೆ ೭ ಗಂಟೆ ಆಗುತ್ತಿದ್ದಂತೆ ತನ್ನ ಕಾಯಕ ಸ್ಥಳಕ್ಕೆ ಹಾಜರಾಗುತ್ತಾರೆ.
ಪೊಲೀಸಪ್ಪನ ಹೆಂಡತಿ ಕಥೆ: ಕುಂಬಾರಕೊಪ್ಪಲಿನ ಲಕ್ಷ್ಮಮ್ಮ ಅವರು ಮಂಡಿ ಮೊಹಲ್ಲಾದ ವೆಂಕಟರಾಮಯ್ಯ ಎಂಬವರನ್ನು ವಿವಾಹವಾಗುತ್ತಾರೆ. ವೆಂಕಟರಾಮಯ್ಯ ಅವರು ಪೊಲೀಸ್ ಕಾನ್‌ಸ್ಟೇಬಲ್ ಆಗಿದ್ದವರು. ಆದರೆ, ಅನಾರೋಗ್ಯ ಕಾರಣದಿಂದ ವೃತ್ತಿಗೆ ರಾಜೀನಾಮೆ ನೀಡುವ ಅವರು, ಮದುವೆಯಾದ ಹೆನ್ನೆರಡು-ಹದಿಮೂರು ವರ್ಷಗಳಿಗೆಲ್ಲ ಅನಾರೋಗ್ಯದಿಂದ ನಿಧನರಾಗುತ್ತಾರೆ. ಆನಂತರದಲ್ಲಿ ಕುಟುಂಬದ ಹೊರೆ ಲಕ್ಷ್ಮಮ್ಮ ಅವರ ಮೇಲೆ ಬೀಳುತ್ತದೆ. ಇದಕ್ಕಾಗಿ ಹೂವು ಮಾರುವ ಕಾಯಕ ಹಿಡಿದ ಅವರು ೪೫ ವರ್ಷಗಳಿಂದ ಒಂದೇ ಜಾಗದಲ್ಲಿ ಹೂವು ಮಾರಾಟ ಮಾಡುತ್ತಿದ್ದಾರೆ.
ಮಗ ಮತ್ತು ಮಗಳನ್ನು ಸಾಕಿ ಮದುವೆ ಮಾಡಿರುವ ಅವರು, ಹೂವು ಮಾರಾಟ ಮಾಡುತ್ತಲೇ ಭೈರವೇಶ್ವರ ನಗರದಲ್ಲಿ ೨೫ ವರ್ಷಗಳ ಹಿಂದೆ ಸ್ವಂತ ನಿವೇಶನ ಖರೀದಿಸಿ, ಮೂರು ಅಂತಸ್ತಿನ ಸ್ವಂತ ಮನೆಯನ್ನು ಮಾಡಿದ್ದಾರೆ. ಒಂದು ಅಂತಸ್ತಿನ ಮನೆಯನ್ನು ಭೋಗ್ಯಕ್ಕೆ ನೀಡಿದ್ದು, ಇನ್ನುಳಿದ ಎರಡು ಅಂತಸ್ತನ್ನು ಇಬ್ಬರೂ ಮಕ್ಕಳಿಗೂ ಭಾಗವಾಗಿ ನೀಡಿದ್ದಾರೆ. ಇವರು ಮಗನ ಮನೆಯಲ್ಲಿಯೇ ಇದ್ದಾರೆ.
ವ್ಯಾಪಾರ ಮುಂಚೆ ತರ ಇಲ್ಲ. ಅಷ್ಟೋ, ಇಷ್ಟೋ ಆಗುತ್ತೆ ಎನ್ನುವ ಲಕ್ಷ್ಮಮ್ಮ. ಪ್ರತಿನಿತ್ಯ ಬೆಳಿಗ್ಗೆ ೭ ಗಂಟೆಗೆ ಹೂವು ಮಾರಲು ಬರುತ್ತಾರೆ. ಮನೆಯಿಂದ ನಾನಿರುವಲ್ಲಿಗೆ ತಿಂಡಿ ಬರುತ್ತದೆ. ಮಧ್ಯಾಹ್ನ ಇಲ್ಲೇ ಹೋಟೆಲ್ ಅಲ್ಲಿ ಏನಾದ್ರೂ ತಿನ್ಕೋತಿನಿ. ರಾತ್ರಿ ೮ ಗಂಟೆಗೆ ಮನೆಗೆ ಆಟೋದಲ್ಲಿ ವಾಪಸ್ಸು ಆಗುತ್ತೇನೆ. ಮುಂಚೆ ಬೆಳಿಗ್ಗೆ ೫ ಗಂಟೆಯಿಂದ ವ್ಯಾಪಾರ ಶುರು ಮಾಡುತ್ತಿದ್ದೆ. ಈಗ ಅಷ್ಟು ಹೊತ್ತಿಗೆ ಎದ್ದು ಬರೋಕೆ ಆಗಲ್ಲ ಎಂದು ತಮ್ಮ ಪರಿಶ್ರಮವನ್ನು ವಿವರಿಸುತ್ತಾರೆ.

‘ಕಾಸಿಲ್ಲ ಕಷ್ಟ ಅಂದಾಗ ಮಕ್ಕಳಿಗೂ…ಅಷ್ಟೋ ಇಷ್ಟೋ ಕೊಡ್ಬೇಕಲ್ಲ’
ಮಗ ಆಟೋ ಓಡಿಸ್ತಾನೆ. ಈ ಕಾಲದಲ್ಲಿ ಅವರವರ ಸಂಸಾರ ಸಾಕೋದೆ ಕಷ್ಟವಾಗುತ್ತೆ. ಹೀಗಿರುವಾಗ ನನ್ನ ಖರ್ಚಿಗೆ ಅವರನ್ನು ಕಾಸು ಕೇಳೋಕೆ ಆಗುತ್ತಾ. ಅದ್ಕೆ, ನನ್ನ ಕೈಯಲಿ ಆಗೋವರೆಗೂ ಹೂವು ಮಾರಿ ಕಾಸು ಕೂಡಿ ಹಾಕ್ತಿನಿ. ಈಗೇನೋ ಆರೋಗ್ಯ ಚೆನ್ನಾಗಿದೆ. ಮುಂದೆನೋ?, ಹಿಂಗೆ ಇರುತ್ತೇ ಅಂಥ ಯಾರಿಗೆ ಗೊತ್ತು. ಆಗ ಖರ್ಚುಗಿರ್ಚು ಅಂತ ಬರಲ್ವಾ ಎಂದು ಮುಗ್ಧತೆಯಿಂದ ಮಾತನಾಡುವ ಲಕ್ಷ್ಮಮ್ಮ ‘ಕಾಸಿಲ್ಲ ಕಷ್ಟ ಅಂದಾಗ ಮಕ್ಕಳಿಗೂ…ಅಷ್ಟೋ ಇಷ್ಟೋ ಕೊಡ್ಬೇಕಲ್ಲ’ ಎಂದು ಹೇಳುವ ಮೂಲಕ ತಾಯ್ಕರುಳಿನ ಪ್ರೀತಿಯನ್ನು ತೆರೆದಿಡುತ್ತಾರೆ.

andolanait

Recent Posts

ಇರಾನ್ ಮೇಲೆ ಇಸ್ರೇಲ್ ದಾಳಿ: ಇರಾನ್ ದೇಶದ ಸರ್ವೋಚ್ಚ ನಾಯಕ ಬಲಿ

ಟೆಹರಾನ್‌: ಇರಾನ್ ಮೇಲೆ ಜಂಟಿಯಾಗಿ ಇಸ್ರೇಲ್ ಮತ್ತು ಅಮೇರಿಕಾ ದಾಳಿ ನಡೆಸಿದೆ. ದಾಳಿಯ ಪರಿಣಾಮ ಇರಾನ್ ದೇಶದ ಸರ್ವೋಚ್ಚ ನಾಯಕ…

1 hour ago

ಓದುಗರ ಪತ್ರ: ರೈಲು ನಿಲ್ದಾಣದಲ್ಲಿ ಪ್ರೀಪೇಯ್ಡ್  ಆಟೋ ಕೌಂಟರ್ ಆರಂಭಿಸಿ

ಮೈಸೂರು ರೈಲು ನಿಲ್ದಾಣದಲ್ಲಿ ದಿನದ ೨೪ ಗಂಟೆಯೂ ಕಾರ್ಯನಿರ್ವಹಿಸುವ ಪ್ರೀಪೇಯ್ಡ್ ಆಟೋ ಕೌಂಟರ್ ಇಲ್ಲದೆ ಬೆಳಗಿನ ಜಾವ ಬೇರೆ ಊರುಗಳಿಂದ…

4 hours ago

ಓದುಗರ ಪತ್ರ: ನ್ಯಾಯಾಂಗದ ಬಗ್ಗೆ ಗೌರವ ಮೂಡಿಸಿ

ಕೇಂದ್ರೀಯ ಪಠ್ಯಕ್ರಮದ (ಎನ್ ಸಿಇಆರ್ ಟಿ) ೮ನೇ ತರಗತಿಯ ಪಠ್ಯ ಪುಸ್ತಕದಲ್ಲಿ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲೂ ಭ್ರಷ್ಟಾಚಾರ ಇದೆ…

4 hours ago

ಓದುಗರ ಪತ್ರ: ಅಂಬೇಡ್ಕರ್ ಸಮುದಾಯ ಭವನ ಅಭಿವೃದ್ಧಿಪಡಿಸಿ

ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಡಾ.ಬಿ .ಆರ್.ಅಂಬೇಡ್ಕರ್ ಸಮುದಾಯ ಭವನವನ್ನು ಅಂದಿನ ಸಚಿವರಾಗಿದ್ದ ಶ್ರೀನಿವಾಸ ಪ್ರಸಾದ್…

4 hours ago

ಓದುಗರ ಪತ್ರ: ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಿ

ಸರಗೂರು ತಾಲ್ಲೂಕಿನ ಮುಳ್ಳೂರು, ಚಾಮಲಾಪುರ, ಕುಂದೂರು, ಕಲ್ಲಂಬಾಳು, ನಂಜೀಪುರ, ಕಟ್ಟೆಹುಣಸೂರು ಈ ಗ್ರಾಮಗಳ ಮಾರ್ಗವಾಗಿ ಹೆಚ್ಚಿನ ಸರ್ಕಾರಿ ಬಸ್ಸುಗಳ ಸಂಚಾರವಿಲ್ಲದೆ…

4 hours ago

ದಿ ಕೇರಳ ಸ್ಟೋರಿ-2 : ಸತ್ಯ V/S ಅಜೆಂಡಾ..!

ವಿವಾದಾಸ್ಪದ ‘ದಿ ಕೇರಳ ಸ್ಟೋರಿ-೨ ಗೋಸ್ ಬಿಯಾಂಡ್’ ಚಲನಚಿತ್ರ ಪ್ರದರ್ಶನಕ್ಕೆ ಕೇರಳದ ಹೈಕೋರ್ಟ್‌ನ ವಿಭಾಗೀಯ ಪೀಠ ಶುಕ್ರವಾರ ಹಸಿರು ನಿಶಾನೆ…

4 hours ago