ಜಿಲ್ಲೆಗಳು

ದಸರೆ ನಂತರವೂ ಪ್ರವಾಸಿಗರ ಪ್ರವಾಹ

ಮೈಸೂರಿಗೆ ಹರಿದುಬರುತ್ತಿರುವ ಹೊರ ರಾಜ್ಯಗಳ ಪ್ರವಾಸಿಗರು * ದೀಪಾಲಂಕಾರ ಸೊಬಗು ಸವಿಯಲು ಸಂಜೆ ವೇಳೆ ಜನವೋ ಜನ

ಕೆ.ಬಿ.ರಮೇಶನಾಯಕ

ಮೈಸೂರು: ಕೊರೊನಾ ಕಾರಣದಿಂದ ಎರಡು ವರ್ಷಗಳ ಕಾಲ ಹಿನ್ನಡೆ ಅನುಭವಿಸಿದ್ದ ಪ್ರವಾಸೋದ್ಯಮಕ್ಕೆ ಈ ಬಾರಿಯ ದಸರಾ ಮಹೋತ್ಸವ ಭರ್ಜರಿ ಟಾನಿಕ್ ನೀಡಿ ಆದಾಯ ತಂದುಕೊಟ್ಟಿದ್ದು, ಪ್ರವಾಸಿತಾಣಗಳತ್ತ ಪ್ರವಾಸಿಗರ ಪ್ರವಾಹ ಹರಿದುಬರುತ್ತಿದೆ.

ಜಂಬೂಸವಾರಿ ಮುಗಿದು ನಾಲ್ಕು ದಿನಗಳು ಕಳೆದರೂ ಹೊರ ಜಿಲ್ಲೆ, ಹೊರರಾಜ್ಯಗಳಿಂದ ಪ್ರವಾಸಿಗರು ಮೈಸೂರಿನತ್ತ ದಾಂಗುಡಿ ಇಡುತ್ತಿರುವುದರಿಂದಾಗಿ ಪಂಚತಾರಾ ಹೋಟೆಲ್‌ಗಳು ಸೇರಿದಂತೆ ಮೈಸೂರಿನ ವಸತಿಗೃಹಗಳಲ್ಲಿ ಕೊಠಡಿಗಳು ಖಾಲಿ ಇಲ್ಲದೆ ಪ್ರವಾಸಿಗರು ಪರದಾಡುವಂತಾಗಿದೆ. ನವರಾತ್ರಿ ಆರಂಭದ ದಿನಗಳಿಂದ ಈತನಕ ತ್ರಿತಾರಾ, ಪಂಚತಾರಾ ಹೋಟೆಲ್‌ಗಳು, ಐಷಾರಾಮಿ ವಸತಿ ಗೃಹಗಳು, ಸಾಮಾನ್ಯ ಹೋಟೆಲ್‌ಗಳು ಸೇರಿದಂತೆ ೧೦,೫೦೦ ಕೊಠಡಿಗಳು ಭರ್ತಿಯಾಗಿದ್ದು, ಮುಂದಿನ ಬುಧವಾರದ ತನಕ ಬುಕ್ಕಿಂಗ್ ಆಗಿದೆ. ವಾರದ ರಜಾದಿನವಾದ ಭಾನುವಾರ ಅರಮನೆ ಸೇರಿದಂತೆ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರ ದಂಡೇ ನೆರೆದಿದ್ದನ್ನು ನೋಡಿದರೆ ಒಂದು ವಾರ ಕಾಲ ಪ್ರವಾಸೋದ್ಯಮಕ್ಕೆ ಮತ್ತಷ್ಟು ಆದಾಯ ಸಂಗ್ರಹವಾಗುವ ಸಾಧ್ಯತೆ ಇದೆ.

ಎತ್ತ ನೋಡಿದರೂ ಜನಜಂಗುಳಿ: ವಾರದ ರಜಾದಿನವಾದ ಭಾನುವಾರ ಅರಮನೆ, ಚಾಮರಾಜೇಂದ್ರ ಮೃಗಾಲಯ, ಕಾರಂಜಿಕೆರೆ, ದಸರಾ ವಸ್ತು ಪ್ರದರ್ಶನ, ಚಾಮುಂಡಿಬೆಟ್ಟ, ಕೆ.ಆರ್.ಎಸ್., ನಂಜನಗೂಡು, ಶ್ರೀರಂಗಪಟ್ಟಣ, ಗುಂಬಜ್, ನಿಮಿಷಾಂಬ ದೇವಾಲಯ ಸೇರಿದಂತೆ ಹಲವು ಪ್ರವಾಸಿ ತಾಣಗಳಲ್ಲಿ ಕಾಲಿಡಲೂ ಜಾಗವಿಲ್ಲದ ರೀತಿಯಲ್ಲಿ ಜನರು ಜಮಾಯಿಸಿದ್ದರು.

ಬೆಳಿಗ್ಗೆಯಿಂದಲೇ ಅರಮನೆ ಕಡೆಗೆ ಬರುತ್ತಿದ್ದ ಪ್ರವಾಸಿಗರು ಅರಮನೆ ಸೌಂದರ್ಯವನ್ನು ವೀಕ್ಷಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡು, ನೇರವಾಗಿ ಮೃಗಾಲಯದ ಕಡೆಗೆ ತೆರಳುತ್ತಿದ್ದು ದು ಸರ್ವೆ ಸಾಮಾನ್ಯವಾಗಿತ್ತು. ಹಲವರು ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿದೇವಿಯ ದರ್ಶನ ಪಡೆದುಕೊಂಡ ಬಳಿಕ ನೇರವಾಗಿ ಅರಮನೆಗೆ ಸಾಲು ಸಾಲಾಗಿ ಆಗಮಿಸುತ್ತಿದ್ದ ದೃಶ್ಯಗಳು ಕಂಡುಬಂದವು.

ಕೊಠಡಿಗಳಿಗೆ ಅಲೆದಾಟ: ಕುಟುಂಬ ಸಮೇತ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಹರಿದು ಬರುತ್ತಿರುವ ಪ್ರವಾಸಿಗರು ಕೊಠಡಿಗಳಿಗೆ ಅಲೆದಾಡುವಂತಾಗಿದೆ. ಒಂದು ಕೊಠಡಿಯೂ ಖಾಲಿ ಇಲ್ಲದೆ ಸರ್ಕಾರಿ ಅತಿಥಿಗೃಹ, ಸರ್ವಿಸ್ ಅಪಾರ್ಟ್‌ಮೆಂಟ್‌ಗಳಲ್ಲಿ ವಿಚಾರಿಸಿದರೂ ಖಾಲಿ ಇಲ್ಲ ಎನ್ನುವ ಸಂದೇಶ ಬರುತ್ತಿತ್ತು. ಇದರಿಂದಾಗಿ ಕೇರಳದಿಂದ ಕುಟುಂಬ ಸಮೇತ ಬರುತ್ತಿದ್ದವರೂ ಸಂಜೆ ತನಕ ವೀಕ್ಷಣೆ ಮಾಡಿ ವಾಪಸ್ ಹೋಗುತ್ತಿದ್ದರು.

ವಿದ್ಯುತ್ ದೀಪಾಲಂಕಾರ ನೋಡಿ ಮೈಸೂರಿನಲ್ಲಿ ವಾಸ್ತವ್ಯ ಮಾಡಿ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಹೋಗಬೇಕೆಂದು ದೂರದ ಚೆನ್ನೈನಿಂದ ಆಗಮಿಸಿದ್ದ ಕುಟುಂಬವೊಂದು ಕೊಠಡಿಗೆ ಅಲೆದಾಡಿದರೂ ಸಿಗಲಿಲ್ಲ. ಒಂದು ಕೊಠಡಿಗೆ ಹೆಚ್ಚುವರಿ ೨ ಸಾವಿರ ರೂ.ಕೊಡುತ್ತೇವೆಂದು ಹೇಳಿದರೂ ರೂಮ್ ಇಲ್ಲವೆನ್ನುವ ಉತ್ತರ ಬರುತ್ತಿದ್ದರಿಂದ ಬೇಸರದಿಂದಲೇ ಹೊರ ನಡೆದರು. ಮತ್ತೊಂದೆಡೆ ವಿದ್ಯುತ್ ದೀಪಾಲಂಕಾರ ಅವಧಿ ವಿಸ್ತರಣೆ ಮಾಡಿರುವುದರಿಂದ ಸ್ಥಳೀಯರು ಸೇರಿದಂತೆ ಹೊರಗಿನವರು ಕಣ್ತುಂಬಿಕೊಳ್ಳುತ್ತಿದ್ದಾರೆ. ಅರಮನೆ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಹನಗಳ ಸಂಚಾರ ನಿಷೇಧ ಮಾಡಿರುವ ಕಾರಣ ದೂರದಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ಸಂಜೆ ಹೊತ್ತು ಒಂದು ಸುತ್ತು ಹಾಕಿ ದೀಪಾಲಂಕಾರದ ಸೊಬಗು ಸವಿಯುತ್ತಿರುವುದು ಹೆಚ್ಚಾಗಿದೆ.


ರೂಮ್‌ಗಳಿಗಾಗಿ ಮೂರ್ನಾಲ್ಕು ದಿನಗಳಿಂದ ನಿತ್ಯ ೫೦ರಿಂದ ೬೦ ಫೋನ್ ಕರೆಗಳು ಬರುತ್ತಿವೆ. ಈಗ ಮುಂದಿನ ಬುಧವಾರದ ತನಕ ಕೊಠಡಿಗಳು ಭರ್ತಿಯಾಗಿವೆ. ಒಂದು ತಿಂಗಳ ಹಿಂದೆ ಬುಕ್ಕಿಂಗ್ ಮಾಡಿಕೊಂಡಿರುವ ಕಾರಣ ಅನೇಕರಿಗೆ ಅವಕಾಶ ಇಲ್ಲ. ಸುಮಾರು ವರ್ಷಗಳ ಬಳಿಕ ಇಷ್ಟೊಂದು ಭರ್ತಿ ಆಗಿದ್ದು ಇದೇ ಮೊದಲಾಗಿದೆ.

-ಸಿಂಚನ, ಸ್ವಾಗತಕಾರಿಣಿ.

andolanait

Recent Posts

ಮುಡಾಗೆ ಆರ್ಥಿಕ ಸಂಕಷ್ಟ; 20 ಕೋಟಿ ರೂ ನಷ್ಟ

ಮೈಸೂರು: ಬದಲಿ ನಿವೇಶನ ಹಂಚಿಕೆ, ೫೦:೫೦ ಅನುಪಾತದಲ್ಲಿ ನಿವೇಶನ ಅಕ್ರಮ ಹಂಚಿಕೆ ಹಗರಣದಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿರುವ ಮೈಸೂರು…

49 mins ago

ಆಂದೋಲನ ಫಲಶ್ರುತಿ: ಕೊನೆಗೂ ತೆರವಾಯ್ತು ಬೃಹತ್‌ ಮರದ ಕಾಂಡ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜುಂಬೂ ಸವಾರಿ ಸಾಗುವ ಮಾರ್ಗದಲ್ಲಿ ಕಳೆದ ಎರಡೂ ವರ್ಷಗಳಿಂದ ಬಿದ್ದಿದ್ದ ಬೃಹತ್ ಮರದ ಕಾಂಡವನ್ನು…

60 mins ago

ಜಂಬೂ ಸವಾರಿ ಮಾರ್ಗದಲ್ಲಿ ಸಣ್ಣ ಬದಲಾವಣೆ

ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿಯನ್ನು ವೀಕ್ಷಿಸಲು ಆಗಮಿಸಿದ ಎಲ್ಲರಿಗೂ ಚಿನ್ನದ ಅಂಬಾರಿ ನೋಡುವ ಅವಕಾಶ ಸಿಗಬೇಕು…

1 hour ago

ಪೈಲ್ವಾನರ ಕಸರತ್ತಿಗೆ ಗರಡಿ ಮನೆಗಳು ಸಜ್ಜು

ಮೈಸೂರು: ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ ಎಂದು ಕರೆಯುವ ಮೈಸೂರನ್ನು ಗರಡಿ ಮನೆಗಳ ನಗರಿ ಎಂದೂ ಇತ್ತೀಚಿನ ವರ್ಷಗಳಲ್ಲಿ ಕರೆಯುವುದು…

1 hour ago

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

9 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

11 hours ago