ಮೈಸೂರು : ಮಹಿಷ ಓರ್ವ ರಕ್ಷಕನಾಗಿದ್ದ. ಪುರಾಣದ ಕಥೆ ಕಟ್ಟಿ ವೈದಿಕರು ಅತನನ್ನು ರಾಕ್ಷಸನನ್ನಾಗಿ ಬಿಂಬಿಸಿದರು. ನಿಜ ಸತ್ಯವನ್ನು ಅರಿಯದ ಆತನ ವಂಶಸ್ಥರು ಇಂದಿಗೂ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂದು ಪೆರಿಯಾರ್ ಚಳವಳಿಗಾರ ಕೊಳತ್ತೂರು ಮಣಿ ಹೇಳಿದರು.
ನಗರದ ಪುರಭವನದ ಆವರಣದಲ್ಲಿ ಬುಧವಾರ ಮಹಿಷಾ ದಸರಾ ಆಚರಣಾ ಸಮಿತಿ ಏರ್ಪಡಿಸಿದ್ದ ಮಹಿಷ ಮಂಡಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸುರರು ಎಂದರೆ ಮದ್ಯ ಸೇವನೆ ಮಾಡುವವರು. ಅಸುರ ಎಂದರೆ ಮದ್ಯ ಸೇವಿಸದವರು ಎಂದು ಅರ್ಥ. ವಿಚಿತ್ರವೆಂದರೆ ಇಂದು ಸಮಾಜದಲ್ಲಿ ಮದ್ಯ ಸೇವನೆ ಮಾಡುವವರನ್ನು ದೇವರೆಂದು, ಮದ್ಯ ಸೇವನೆ ಮಾಡದವರನ್ನು ರಾಕ್ಷಸರೆಂದು ಬಿಂಬಿಸುವ ಕೆಲಸವಾಗುತ್ತಿದೆ. ಇದು ಸರಿಯೇ? ಎಂದು ಪ್ರಶ್ನಿಸಿದರು.
ಆರ್ಯರು ಹಾಗೂ ದ್ರಾವಿಡರ ನಡುವೆ ಅನೇಕ ಯುದ್ಧಗಳೇ ನಡೆದಿವೆ. ಮುರುಗ,ವೆಂಕಟೇಶ್ವರ, ಅಯ್ಯಪ್ಪ ಎಲ್ಲರೂ ಮೂಲತಃ ಬೌದ್ಧರು. ಆದರೆ, ವೈದಿಕರು ಅವರೆಲ್ಲರನ್ನೂ ದೇವತೆಗಳು ಎಂದು ಬದಲಾಯಿ ಸಿಬಿಟ್ಟಿದ್ದಾರೆ. ಅವರ ಮೂಲ ಉದ್ದೇಶ ದ್ರಾವಿಡ ಸಮುದಾಯ ಹಾಗೂ ಮುಖಂಡರ ವಿನಾಶ ಮಾತ್ರವಾಗಿತ್ತು ಎಂದರು.
ಇದನ್ನೂ ಓದಿ:-ಭೈರಪ್ಪ ನಿಧನಕ್ಕೆ ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಸಹಿತ ಗಣ್ಯರ ಸಂತಾಪ
ಇದೀಗ ಬುದ್ಧ ಮಹಾವಿಷ್ಣುವಿನ ಅವತಾರ ಎಂದು ಹೊಸ ವರಸೆಯನ್ನು ತೆಗೆದಿದ್ದಾರೆ. ಅವರ ವಾದವನ್ನು ನಾವುಗಳು ಮುಲಾಜಿಲ್ಲದೆ ತೊಡೆದುಹಾಕಬೇಕು. ಮುಂದಾದರೂ ತಳ ಸಮುದಾಯಗಳು ಸತ್ಯವನ್ನು ಅರಿತು ಎಚ್ಚರಿಕೆಯಿಂದ ಮುನ್ನಡೆಯಬೇಕು ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಗಾಂಧಿನಗರದ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ನಾಡಹಬ್ಬ ದಸರಾಗೆ ಖರ್ಚು ಮಾಡುವುದು ಜನರ ತೆರಿಗೆ ಹಣವಾದ್ದರಿಂದ ಮಹಿಷನನ್ನೂ ಸ್ಮರಿಸಬೇಕು. ಜೊತೆಗೆ ಸರ್ಕಾರದ ವತಿಯಿಂದಲೇ ಮಹಿಷ ದಸರಾ ಆಚರಿಸಬೇಕು ಎಂದು ಆಗ್ರಹಿಸಿದರು.
ಇತ್ತೀಚೆಗೆ ಲೇಖಕ ಕೃಷ್ಣಮೂರ್ತಿ ಅವರ ‘ಮಹಿಷ ಮರ್ದಿನಿ’ ಕೃತಿ ಬಿಡುಗಡೆಯಾಗಿದೆ. ಗೆಜೆಟಿಯರ್, ಬ್ರಿಟಿಷ್ ಲೇಖಕರು ಬರೆದಿರುವುದು ಸುಳ್ಳು. ಎಮ್ಮೆಯಿಂದ ಮೈಸೂರಿಗೆ ಹೆಸರು ಬಂದಿದೆ ಎಂದು ಉಲ್ಲೇಖಿಸಿದ್ದಾರೆ. ಹಾಗಾದರೆ ಎಮ್ಮೆ ಸಾಕುತ್ತಿದ್ದವರು ಯಾರು? ಕೋಣ ಯಾರ ಸಂಕೇತ? ಎಂದು ಪ್ರಶ್ನಿಸಿದರು.
ಮೈಸೂರು ಮಹಾರಾಜರನ್ನು ಮಹಿಷ ಮಂಡಲಾಧೀಶ ಬಹುಪರಾಕ್ ಎನ್ನಲಾಗುತ್ತದೆ. ಮಹಾರಾಜರು ಬರೆದ ಪತ್ರಗಳಲ್ಲಿ ಮಹಿಷಪುರವಾಸಿ ಎಂದು ಉಲ್ಲೇಖಿಸಿದ್ದಾರೆ. ಮಹಾರಾಣಿಯನ್ನು ಪಟ್ಟದ ಮಹಿಷಿ ಎನ್ನುತ್ತಿದ್ದರು. ಇವೆಲ್ಲ ಸುಳ್ಳೇ? ಯಾವುದನ್ನು ಸೃಷ್ಟಿ ಮಾಡಬೇಕಾದರೂ ದಾಖಲೆ ಇರಬೇಕು. ಚರಿತ್ರೆಯನ್ನು ದಮನ ಮಾಡಲಿಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.
ಹಿರಿಯ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ಅಮೆರಿಕದ ಚಿಕಾಗೋದಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ್ದ ಸ್ವಾಮಿ ವಿವೇಕಾನಂದರು, ಸಮಾನತೆ, ಮಾನವೀಯತೆ ಹಾಗೂ ಮನುಷ್ಯತ್ವ ಎತ್ತಿ ಹಿಡಿಯುವುದೇ ಬೌದ್ಧ ಧರ್ಮ. ನಾನು ಬುದ್ಧಿಸ್ಟ್ ಎಂದು ಹೇಳಿದ್ದಾರೆ ಎಂದರು.
ವೈದಿಕ, ಬ್ರಾಹ್ಮಣ, ಹಿಂದೂ, ಆರ್ಯ ಎಲ್ಲವೂ ಒಂದೇ. ಮನುಸ್ಮೃತಿಯಲ್ಲಿ ಶೂದ್ರರನ್ನು ಗುಲಾಮರು ಎಂದು ಹೇಳಲಾಗಿದೆ. ಹಿಂದೂ ಧರ್ಮವನ್ನು ವಿವೇಕಾನಂದರು ಟೀಕೆ ಮಾಡಿದಷ್ಟು ಬೇರೆ ಯಾರೂ ಮಾಡಿಲ್ಲ. ಇದನ್ನು ಶೂದ್ರರು ಅರ್ಥ ಮಾಡಿಕೊಳ್ಳಬೇಕು. ಈ ಮೂಲಕ ನೀವು ಸ್ವಾಭಿಮಾನಿಗಳಾಗಬೇಕು ಎಂದರು.
ನಿವೃತ್ತ ಡಿಸಿಪಿ ಸಿದ್ದರಾಮು ಮಾತನಾಡಿ, ಸರ್ಕಾರ ದಸರಾ ಹಬ್ಬವನ್ನು ಅದ್ಧೂರಿಯಿಂದ ಆಚರಿಸುತ್ತಿದೆ. ಇದರ ಜೊತೆಗೆ ಜನರಿಗೆ ಸತ್ಯವನ್ನು ತಿಳಿಸಿ ಆಚರಿಸಿದಲ್ಲಿ ಅರ್ಥಪೂರ್ಣವಾಗಿರುತ್ತದೆ. ದಸರಾದಲ್ಲಿ ಸಂವಿಧಾನ ಪುಸ್ತಕವನ್ನು ಶಾಂತಿಯ ಸಂಕೇತವಾದ ಆನೆಯ ಮೇಲಿಟ್ಟು ಮೆರವಣಿಗೆ ಮಾಡಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಮಹಾಪೌರ ಪುರುಷೋತ್ತಮ್, ಚಾಮುಂಡಿ ಬೆಟ್ಟದಲ್ಲಿರುವ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲು ಅವಕಾಶ ಕೊಡದೆ ಪೊಲೀಸರು ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಿ ಎಂದು ಯಾವ ಕಾನೂನು ಹೇಳಿದೆ ಎಂದು ಪ್ರಶ್ನಿಸಿದರು.
ಮುಂದಿನ ದಿನಗಳಲ್ಲಿ ಪ್ರತೀ ಹುಣ್ಣಿಮೆಯ ದಿನ ನಾವುಗಳು ಚಾಮುಂಡಿಬೆಟ್ಟಕ್ಕೆ ತೆರಳಿ ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಮಾಡುತ್ತೇವೆ. ಇದಕ್ಕಾಗಿ ಯಾರ ಬಳಿಯೂ ಅರ್ಜಿ ಹಾಕುವುದಿಲ್ಲ. ಅಪ್ಪಣೆಯನ್ನೂ ಕೇಳುವುದಿಲ್ಲ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಲೇಖಕ ಸಿದ್ದಸ್ವಾಮಿ, ಮಹಿಷಾಸುರ ಮೈಸೂರಿನ ಅಸ್ಮಿತೆ. ಮೌಢ್ಯತೆಯ ವಿರೋಽ. ಯಾರೊಂದಿಗೂ ವೈರತ್ವ ತಾಳಲು ಮಹಿಷಾ ದಸರಾ ಆಚರಿಸುತ್ತಿಲ್ಲ, ನಮ್ಮ ಅಸ್ತಿತ್ವ ಕಂಡುಕೊಳ್ಳಲು ಆಚರಿಸುತ್ತಿದ್ದೇವೆ ಎಂದರು.
ಲೇಖಕ ದಿಲೀಪ್ ನರಸಯ್ಯ ಮಾತನಾಡಿ, ಸಂಸ್ಕತದಲ್ಲಿ ಮಹಿಷ ಎಂದರೆ ಶ್ರೇಷ್ಠ, ಬಲಿಷ್ಠ ಎಂದರ್ಥವಿದೆ. ಅದು ರಾಕ್ಷಸ ಹೇಗಾಯಿತು? ಯಾವ ರೀತಿ ನರ ಭಕ್ಷಕನಾದ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದರು.
ಸವಿತಾನಂದ ಸ್ವಾಮೀಜಿ, ಪಾಲಿಕೆ ಮಾಜಿ ಸದಸ್ಯರಾದ ಪಲ್ಲವಿ ಬೇಗಂ, ಸಿದ್ದಪ್ಪ, ನಾಗರತ್ನ, ದಲಿತ ಮಹಸಭಾ ಅಧ್ಯಕ್ಷ ಸಿದ್ದರಾಜು, ಹೋರಾಟಗಾರ ಹರಿಹರ ಆನಂದಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…