ಮೈಸೂರು

MCDCC ಬ್ಯಾಂಕ್‌ : ಮತದಾರರ ಗುರುತಿನ ಚೀಟಿ ಪ್ರತಿ ಕೊಡಲು ನಿರಾಕರಣೆ, ಸಿಇಒಗೆ ಶಾಸಕರ ತರಾಟೆ

ಕೊಠಡಿಯಲ್ಲಿ ಪಟ್ಟಾಗಿ ಕುಳಿತ ಹರೀಶ್ ಗೌಡ, ಡೆಲಿಗೇಟ್ಸ್ ವೃಷಭೇಂದ್ರಪ್ಪ

ಮೈಸೂರು : ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಮತ ಚಲಾಯಿಸಲು ಮತದಾರರೊಬ್ಬರಿಗೆ ಗುರುತಿನ ಚೀಟಿಯ ನಕಲು ನೀಡಲು ಕುಂಟು ನೆಪ ಹೇಳಿದ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ರಮಕ್ಕೆ ಅತೃಪ್ತಿಗೊಂಡ ಶಾಸಕ ಜಿ.ಡಿ.ಹರೀಶ್ ಗೌಡ ಅವರು ಬ್ಯಾಂಕ್ ಸಿಇಒ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಚಾಮರಾಜನಗರ ತಾಲ್ಲೂಕು ಕ್ಷೇತ್ರದ ಪುಣಜನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮತದಾರ ಗುರುನಾಯಕ ಅವರು ತಮ್ಮ ಸಂಘದ ಪ್ರತಿನಿಧಿ ಅಥವಾ ಡೆಲಿಗೇಟ್ ಗುರುತಿನ ಚೀಟಿಯನ್ನು ಕಳೆದುಕೊಂಡಿದ್ದರು. ಹಾಗಾಗಿ, ಗುರುತಿನ ಚೀಟಿಯ ನಕಲು ಪ್ರತಿನ್ನು ಕೊಡುವಂತೆ ಜೂನ್ ೧೯ ರಂದು ಅರ್ಜಿ ಸಲ್ಲಿಸಿದ್ದರು. ಆದರೆ, ನಾಲ್ಕು ದಿನಗಳಿಂದ ಯಾವುದೇ ಕ್ರಮ ಕೈಗೊಳ್ಳದೆ ಮಂಗಳವಾರ ಮತದಾರರ ಗುರುತಿನ ಚೀಟಿ ನೀಡಲು ಸಾಧ್ಯವಿಲ್ಲ ಎಂದು ಹಿಂಬರಹ ನೀಡಿದ್ದರು.

ಈ ಕ್ರಮವನ್ನು ಪ್ರಶ್ನಿಸಿ ಚಾಮರಾಜನಗರ ತಾಲ್ಲೂಕು ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ವೃಷಭೇಂದ್ರಪ್ಪ ಅವರು ಎಂಸಿಡಿಸಿಸಿ ಬ್ಯಾಂಕ್‌ಗೆ ಆಗಮಿಸಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಗೆ ಸಮರ್ಪಕವಾದ ಉತ್ತರ ನೀಡದೆ ನಮ್ಮಲ್ಲಿ ಮತದಾರರ ಪಟ್ಟಿ ಇಲ್ಲ. ನೀವು ಚುನಾವಣಾ ರಿಟರ್ನಿಂಗ್ ಅಧಿಕಾರಿಗಳ ಬಳಿ ಹೋಗಿ ಕೇಳಬಹುದು ಎಂದು ಹೇಳಿ ಕಳುಹಿಸಿದ್ದಾರೆ. ಚುನಾವಣಾ ಅಧಿಕಾರಿಗಳ ಕಚೇರಿಗೆ ದೌಡಾಯಿಸಿ ವಿಚಾರಿಸಿದ್ದಾಗ ಉಪ ವಿಭಾಗಾಧಿಕಾರಿಗಳೂ ಆದ ರಿಟರ್ನಿಂಗ್ ಅಧಿಕಾರಿ ಆಶಪ್ಪ ಅವರು ಬ್ಯಾಂಕ್ ನಲ್ಲಿ ಒಂದು ಪ್ರತಿ ಇರುವ ಕಾರಣ ಅಲ್ಲಿಯೇ ಪಡೆಯಬಹುದೆಂದು ಹೇಳಿದ್ದರಿಂದಾಗಿ ಮತ್ತೆ ಅನಿವಾರ್ಯವಾಗಿ ಬ್ಯಾಂಕ್ ಗೆ ಹಿಂತಿರುಗಿ ಗುರುತಿನ ಚೀಟಿ ಕೊಡುವಂತೆ ಕೋರಿದ್ದಾರೆ.

ಆದರೆ, ನಮ್ಮಲ್ಲಿ ಮತದಾರರ ಪಟ್ಟಿ ಇಲ್ಲ ಎನ್ನುತ್ತಲೇ ಗುರುತಿನ ಚೀಟಿಯ ನಕಲು ಪ್ರತಿ ಕೊಡಲು ನಿರಾಕರಿಸಿದರು. ಈ ವಿಚಾರ ತಿಳಿದ ಶಾಸಕರೂ ಆದ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ ಅವರು ಆಗಮಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕೊಠಡಿಯಲ್ಲಿ ಕುಳಿತು ಬ್ಯಾಂಕಿನ ಮತದಾರರು ಮತ್ತು ಡೆಲಿಗೇಟ್ಸ್, ಕಾರ್ಯದರ್ಶಿ ನೇರವಾಗಿ ಆಗಮಿಸಿ ಅರ್ಜಿ ಹಾಕಿದ ಮೇಲೆ ಕೊಡಬೇಕು. ನೀವು ಕೊಡಲು ಆಗುತ್ತದೆಯೇ ಅಥವಾ ಇಲ್ಲವೇ ಎನ್ನುವುದನ್ನು ನೇರವಾಗಿ ಹೇಳಿಬಿಡಿ. ಬ್ಯಾಂಕಿನ ಅಧ್ಯಕ್ಷ, ಕಾರ್ಯದರ್ಶಿ ಅವರೇ ಬಂದು ಹೇಳಿದರೂ ಗುರುತಿನ ಚೀಟಿಕೊಡುವುದಿಲ್ಲ ಅಂದರೆ ಮತದಾರರ ಹಕ್ಕನ್ನು ಕಸಿಯಬೇಕು ಎನ್ನುವ ಉದ್ದೇಶ ಹೊಂದಿದ್ದೀರಾ? ನಿಮಗೆ ಏನಾದರೂ ಒತ್ತಡ ಇದೆಯೇ?, ಸಂವಿಧಾನದಲ್ಲಿ ಕೊಟ್ಟ ಅವಕಾಶವನ್ನು ಕಸಿದುಕೊಳ್ಳಬಾರದು ಎಂದು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಪರಿಶೀಲನೆ ನಡೆಸುತ್ತೇವೆ. ಮೂರು ಗುರುತಿನಚೀಟಿಗಳಲ್ಲಿ ಒಂದು ಚುನಾವಣಾ ಶಾಖೆ, ಮತದಾರರ ಪಟ್ಟಿ,ಮತ್ತೊಂದನ್ನು ಮತದಾರರಿಗೆ ವಿತರಿಸಲಾಗಿತ್ತು. ಹಾಗಾಗಿ, ಪೊಲೀಸ್ ದೂರು ಕೊಟ್ಟು ಬಂದರೆ ಪರಿಶೀಲನೆ ನಡೆಸಿ ಕೊಡುತ್ತೇವೆ ಎಂದಿದ್ದೆ. ಈಗ ದೂರು ಕೊಟ್ಟಿರುವ ಕಾರಣ ಮತ್ತೊಮ್ಮೆ ಪರಿಶೀಲನೆ ನಡೆಸುವೆ ಎಂದು ಸಮಜಾಯಿಷಿ ನೀಡಿದರು. ಇದನ್ನು ಒಪ್ಪದ ಜಿ.ಡಿ.ಹರೀಶ್ ಗೌಡ ಅವರು ನೀವು ಸಣ್ಣ ವಿಚಾರವನ್ನು ದೊಡ್ಡದು ಮಾಡುವುದು ಬೇಡ. ನಿಮಗೆ ಸಾಕಷ್ಟು ಒತ್ತಡ ಇದೆ ಎಂಬುದು ಗೊತ್ತಿದೆ. ನೀವು ಕಾನೂನಿನ ಪ್ರಕಾರ ಕಾರ್ಯ ನಿರ್ವಹಿಸಬೇಕು. ಒತ್ತಡದಿಂದ ಕಾರ್ಯ ನಿರ್ವಹಿಸಿ ಮತದಾನದ ಹಕ್ಕನ್ನು ಕಸಿದುಕೊಳ್ಳುವುದು ಬೇಡ ಎಂದು ಕಿಡಿಕಾರಿದರು. ಒಂದು ಗುರುತಿನ ಚೀಟಿಕೊಡಲು ಇಷ್ಟು ಕಾರಣಗಳನ್ನು ನೀಡಿದರೆ, ಮುಕ್ತ ಮತ್ತು ನ್ಯಾಯ ಸಮ್ಮತ ಮತದಾನ ನಡೆಯಲು ಹೇಗೆ ಸಾಧ್ಯ ಎಂದು ಖಾರವಾಗಿ ನುಡಿದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಇ ಆರ್.ಜೆ.ಕಾಂತರಾಜ್, ದಾಖಲೆಗಳನ್ನು ಮತ್ತೊಮ್ಮೆ ಪಡೆದುಕೊಂಡು ರಿಟರ್ನಿಂಗ್ ಅಧಿಕಾರಿಗಳಲ್ಲಿದ್ದ ಮತ್ತೊಂದು ಪ್ರತಿಯನ್ನು ಜೆರಾಕ್ಸ್ ಮಾಡಿಕೊಂಡು ತರಲು ಕಳುಹಿಸಿ ಅರ್ಧ ಗಂಟೆ ಸಮಯವನ್ನು ಕೇಳಿದರು. ಆದರೆ, ಇದನ್ನು ಒಪ್ಪದ ಹರೀಶ್ ಗೌಡ ಮತ್ತು ವೃಷಭೇಂದ್ರಪ್ಪ ಅವರು ನಮಗೆ ಗುರುತಿನ ಚೀಟಿ ಸಿಗುವ ತನಕವೂ ಇಲ್ಲಿಯೇ ಕುಳಿತಿರುತ್ತೇವೆ. ತೆಗೆದುಕೊಂಡು ಬರಲಿ ಎಂದು ಪಟ್ಟಾಗಿ ಕುಳಿತರು. ನಂತರ, ಬ್ಯಾಂಕಿನಿಂದ ಎಸಿ ಕಚೇರಿಗೆ ಕಳುಹಿಸಿದ್ದ ಸಿಬ್ಬಂದಿ ರಿಟರ್ನಿಂಗ್ ಅಧಿಕಾರಿಯನ್ನು ಭೇಟಿ ಮಾಡಿ ನಕಲು ಪ್ರತಿಯನ್ನು ತಂದರು. ನಂತರ, ಅದಕ್ಕೆ ದೃಢೀಕರಣ ಮಾಡಿ ಮತದಾರರಿಗೆ ನೀಡಲಾಯಿತು.

ಎಲ್ಲದಕ್ಕೂ ಮೌನ ; ಶಾಸಕ ಜಿ.ಡಿ.ಹರೀಶ್ ಗೌಡ ಅವರು ಕೇಳುತ್ತಿದ್ದ ಎಲ್ಲಾ ಪ್ರಶ್ನೆಗಳಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳದ್ದು ಮೌನವೇ ಉತ್ತರ ಆಗಿತ್ತು. ಪ್ರತಿಯೊಂದು ವಿಚಾರಕ್ಕೂ ನೋಡೋಣ, ಪರಿಶೀಲನೆ ಮಾಡೋಣ, ಒಂದು ಬಾರಿ ಕೊಟ್ಟ ನಂತರ ನಮ್ಮಲ್ಲಿ ಇರುವುದಿಲ್ಲ ಎನ್ನುವ ಮಾತನಾಡುತ್ತಿದ್ದು ಬಿಟ್ಟರೇ ಬೇರೇನೂ ಮಾತನಾಡಲೇ ಇಲ್ಲ. ಹೀಗಾಗಿ, ಶಾಸಕರೇ ಶಾಂತವಾಗಿ ಕುಳಿತರು.

ಆಂದೋಲನ ಡೆಸ್ಕ್

Recent Posts

ಇ-ಕೆವೈಸಿಗೆ ಗಡುವು ವಿಸ್ತರಣೆ

ಬೆಂಗಳೂರು : ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಬಿಪಿಎಲ್, ಎಪಿಎಲ್ ಪಡಿತರದಾರರಿಗೆ…

3 hours ago

ಯುಪಿಐ ಶುಲ್ಕ | ನಮ್ಮ ಕಿಸೆಯೊಳಗೆ ಸರ್ಕಾರದ ಕೈ

ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…

4 hours ago

ಓದಗರ ಪತ್ರ | ಮರಳಿಗೆ ಮೊಳೆ ಹೊಡೆಯದೇ ದೀಪಾಲಂಕಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…

4 hours ago

ಓದುಗರ ಪತ್ರ | ಮುಷ್ಕರದ ಉದ್ದೇಶವೇ ಭಂಗಗೊಳಿಸುವುದಲ್ಲವೇ ?

ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…

4 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಅನಂತ್‌ಗೆ ಫಾಲ್ಕೆ : ಕನ್ನಡ ಚಿತ್ರರಂಗಕ್ಕೆ ಅತ್ಯುನ್ನತ ಗೌರವ

ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…

4 hours ago

ಮಹಾಪಂಚ್ ಕಾರ್ಟೂನ್‌

ಮಹಾಪಂಚ್ ಕಾರ್ಟೂನ್‌ | ಸೆಪ್ಟಂಬರ್‌ 18 ಶುಕ್ರವಾರ

5 hours ago