ಮೈಸೂರು

ನಂದಿನಿ ತುಪ್ಪದ ಬ್ರ್ಯಾಂಡ್‌ ರಕ್ಷಣೆಗೆ ʼಕ್ಯೂಆರ್‌ʼ ಕೋಡ್‌

ಮೈಸೂರು : ಮಾರುಕಟ್ಟೆಯಲ್ಲಿ ನಂದಿನಿ ತುಪ್ಪದ ಬ್ರ್ಯಾಂಡ್‌ ರಕ್ಷಣೆಗೆ ಕರ್ನಾಟಕ ಹಾಲು ಮಹಾಮಂಡಳಿಯು ಕ್ಯೂ ಆರ್‌ ಕೋಡ್‌ ಇರುವ ನಂದಿನಿ ತುಪ್ಪ ಪ್ಯಾಕೆಟ್‌ನ್ನು ಪರಿಚಯಿಸಿದೆ.

ನಂದಿನಿ ಬ್ರಾಂಡ್‌ನ ನೂತನ ವಿನ್ಯಾಸದ ೫೦೦ ಎಂಎಲ್ ಹಾಗೂ ೧ ಲೀ ತುಪ್ಪದ ಪ್ಯಾಕೆಟ್‌ನ್ನು ಗುರುವಾರ ಕರ್ನಾಟಕ ಹಾಲು ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಬಿಡುಗಡೆ ಮಾಡಿದರು.

ಗುರುವಾರ ನಗರದ ಸಿದ್ದಾರ್ಥನಗರದಲ್ಲಿರುವ ಮೈಸೂರು ಜಿಲ್ಲಾ ಹಾಲು ಒಕ್ಕೂಟ ಸಹಕಾರ ಸಂಘಗಳ ಕಛೇರಿ ಆವರಣದಲ್ಲಿ ನಡೆದ ಸರಳ ಸಮಾರಂಭದ ನಂತರ ಮಾತನಾಡಿದ ಅವರು, ನಂದಿನಿ ತುಪ್ಪಕ್ಕೆ ಬಹಳ ಬೇಡಿಕೆ ಇದೆ. ಹೀಗಾಗಿ ನಕಲು ಆಗುವ ಸಾಧ್ಯತೆ ಕೂಡ ಇದೆ. ಆದ್ದರಿಂದ ನೂತನ ನಂದಿನಿ ತುಪ್ಪದ ಪ್ಯಾಕೆಟ್‌ನ ಮೇಲೆ ಹಾಲೋಗ್ರಾಮ್ ಮುದ್ರಿಸಲಾಗಿದ್ದು ಮಾರುಕಟ್ಟೆಗೆ ಪರಿಚಯಿಸಲಾಗಿದೆ ಎಂದರು.

ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡಿದರೆ ಸಿಗುತ್ತೆ ಮಾಹಿತಿ:- ಇದರಿಂದ ತುಪ್ಪವನ್ನು ನಕಲು ಮಾಡಲು ಅವಕಾಶವಿರುವುದಿಲ್ಲ. ತುಪ್ಪದ ಪ್ಯಾಕೆಟ್‌ನಲ್ಲಿನ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ತುಪ್ಪದ ಪ್ಯಾಕೆಟ್ ಬ್ಯಾಚ್ ನಂಬರ್, ತಯಾರಿಸಿದ ದಿನಾಂಕ ಹಾಗೂ ಯಾವ ದಿನಾಂಕದವರೆಗೆ ಬಳಸಬಹುದು ಎಂಬುದರ ಮಾಹಿತಿ ಸಿಗಲಿದೆ ಎಂದರು.

೫೦೦ ಎಂ.ಎಲ್ ಮತ್ತು ೧ ಲೀ ಪ್ಯಾಕೆಟ್‌ನ್ನು ನವೀಕರಿಸಿ ಬಿಡುಗಡೆ ಮಾಡಿದ್ದು, ತುಪ್ಪದ ಗುಣಮಟ್ಟ ಮತ್ತು ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿರುವುದಿಲ್ಲ. ಎಂದಿನಂತೆ ಅದೆ ಸ್ವಾದ ಹಾಗೂ ಪೌಷ್ಟಿಕಯುಕ್ತ ತುಪ್ಪವನ್ನು ಗ್ರಾಹಕರು ಸವಿಯಬಹುದಾಗಿರುತ್ತದೆ ಎಂದು ಹೇಳಿದರು.

೩ ಸಾವಿರ ಮೆಟ್ರಿಕ್ ಟನ್:- ಹಾಲು ಒಕ್ಕೂಟದ ಎಲ್ಲಾ ಮಂಡಳಗಳ ಮೂಲಕ ಪ್ರತೀ ದಿನ ೩ ಸಾವಿರ ಮೆಟ್ರಿಕ್ ಟನ್ ತುಪ್ಪವನ್ನು ಪ್ರತಿದಿನ ಉತ್ಪಾದಿಸಲಾಗುತ್ತಿದೆ. ಹೆಚ್ಚು ಬೇಡಿಕೆ ಇರುವ ಕಾರಣ ಅಷ್ಟೂ ತುಪ್ಪ ಮಾರಾಟವಾಗುತ್ತಿದೆ ಎಂದರು.

ತಿರುಪತಿಗೆ ತುಪ್ಪ:- ತಿರುಪತಿಯಲ್ಲಿ ಲಡ್ಡು ಹಾಗೂ ಇನ್ನಿತರ ತಿನಿಸುಗಳ ತಯಾರಿಕೆಗೆ ನಂದಿನಿ ತುಪ್ಪವನ್ನು ಬಳಸಲಾಗುತ್ತಿದೆ. ಇದೀಗ ತಿರುಪತಿಗೆ ೩ ಸಾವಿರ ಮೆಟ್ರಿಕ್ ಟನ್ ತುಪ್ಪ ಸರಬರಾಜಿಗೆ ಬೇಡಿಕೆ ಬಂದಿದೆ. ೨ ಸಾವಿರ ಮೆಟ್ರಿಕ್ ಟನ್ ತುಪ್ಪವನ್ನು ಸರಬರಾಜು ಮಾಡಲಾಗಿದೆ ಎಂದರು.

ಮುಜರಾಯಿ ಇಲಾಖೆಗೆ ಸರಬರಾಜು:- ರಾಜ್ಯದ ಪ್ರಮುಖ ದೇವಾಯಗಳಲ್ಲಿ ಪ್ರಸಾದ ತಯಾರಿಕೆಗೆ ನಂದಿನಿ ತುಪ್ಪವನ್ನು ಬಳಸಬೇಕು ಎಂಬ ಸರ್ಕಾರದ ಆದೇಶ ಪಾಲನೆಯಾಗುತ್ತಿದೆ. ಬಹುತೇಕ ಎಲ್ಲಾ ದೇವಾಲಯಗಳಿಗೆ ತುಪ್ಪ ಸರಬರಾಜು ಮಾಡಲಾಗುತ್ತಿದೆ ಎಂದರು.

ವಿದೇಶಕ್ಕೂ ತುಪ್ಪ:- ಕೇರಳ, ತಮಿಳುನಾಡು, ದಿಲ್ಲಿ ಸೇರಿದಂತೆ ಸಾಕಷ್ಟು ರಾಜ್ಯಗಳಿಗೆ ನಂದಿನಿ ಉತ್ಪನ್ನಗಳನ್ನು ಸರಬರಾಜು ಮಾಡಲಾಗುತ್ತಿದೆ. ಇದರ ಜೊತೆಗೆ ದುಬೈ, ಆಸ್ಟ್ರೇಲಿಯ, ಕೆನಡ ಸೇರಿದಂತೆ ೭ ರಾಷ್ಟ್ರಗಳಿಗೆ ನಂದಿನಿ ತುಪ್ಪ ಹಾಗೂ ಉತ್ಪನ್ನಗಳನ್ನು ಕಳುಹಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕಹಾಮದ ಮಾರುಕಟ್ಟೆ ನಿರ್ದೇಶಕರುಗಳು ಹಾಗೂ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್.ಸುರೇಶ್ ನಾಯ್ಕ ಹಾಗೂ ಹಿರಿಯ ನಿರ್ದೇಶಕರುಗಳು ಮತ್ತು ಎಲ್ಲಾ ಹಾಲು ಒಕ್ಕೂಟಗಳ ವ್ಯವಸ್ಥಾಪಕ ನಿರ್ದೇಶಕರುಗಳು ಉಪಸ್ಥಿತರಿದ್ದರು.

ಆಂದೋಲನ ಡೆಸ್ಕ್

Recent Posts

ಬಿಡದಿ ಹೋರಾಟಕ್ಕೆ ಜೆನ್‌-ಝೀ ಗಳು ಬರಲಿ ; ದೇವನೂರು ಮಹದೇವ ಕರೆ

ಮೈಸೂರು: ಫಲವತ್ತಾದ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವ ಆಕಾಂಕ್ಷೆ ಪ್ರಭುತ್ವಕ್ಕೆ ಇರಬೇಕು. ಭೂಮಿ ನೀಡುವ ರೈತರ ಬದುಕಿನ ಹೊಣೆಗಾರಿಕೆಯನ್ನು ಸರ್ಕಾರ ವಹಿಸಿಕೊಳ್ಳುತ್ತದೆಯೇ…

2 hours ago

ಕನ್ನಡ ಭಾಷ ಶಿಕ್ಷಕರ ಪ್ರತ್ಯೇಕ ನೇಮಕಕ್ಕೆ ಸರ್ಕಾರ ಅಸ್ತು ; ಸ್ವಾಗತಾರ್ಹ

ಮೈಸೂರು : ಶಾಲಾ ಶಿಕ್ಷಣ ಇಲಾಖೆಯ ಜಿಪಿಎಸ್‌ಟಿಆರ್ ಹಾಗೂ ಎಚ್‌ಎಸ್‌ಟಿಆರ್ ಶಿಕ್ಷಕರ ನೇಮಕಾತಿಯಲ್ಲಿ ಕನ್ನಡ ಭಾಷಾ ಶಿಕ್ಷಕರ ಹುದ್ದೆಗಳನ್ನು ಪ್ರತ್ಯೇಕವಾಗಿ…

6 hours ago

ಶೀಘ್ರದಲ್ಲೇ ರಾಜ್ಯದಲ್ಲಿ ಗುಟ್ಕಾ ನಿಷೇಧ ಆದೇಶ ವಾಪಸ್?‌

ಬೆಂಗಳೂರು: ಗುಟ್ಕಾ ನಿಷೇಧ ಆದೇಶವನ್ನು ರಾಜ್ಯ ಸರ್ಕಾರ ಶೀಘ್ರದಲ್ಲೇ ವಾಪಸ್‌ ಪಡೆಯುವ ಸಾಧ್ಯತೆಯಿದೆ. ಆಡಳಿತರೂಢ ಕಾಂಗ್ರೆಸ್‌ ಶಾಸಕರಿಂದಲೇ ಸರ್ಕಾರದ ನಿರ್ಧಾರಕ್ಕೆ…

10 hours ago

6 ದಿನಗಳಾದರೂ ಸಿಗದ ಟೆಕ್ಕಿ ಅದ್ವೈತ್‌ ಸುಳಿವು: ಶಿವಗಂಗೆ ಬೆಟ್ಟದಲ್ಲಿ ಶೋಧ ಕಾರ್ಯಾಚರಣೆ ಸ್ಥಗಿತ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಟದಲಲಿ ಟ್ರೆಕ್ಕಿಂಗ್‌ಗೆ ತೆರಳಿ ನಾಪತ್ತೆಯಾಗಿದ್ದ ಟೆಕ್ಕಿ ಟದ್ವೈತ್‌ಗಾಗಿ ನಡೆಸುತ್ತಿದ್ದ ಶೋಧ ಕಾರ್ಯಾಚರಣೆಗೆ…

12 hours ago

ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಜಿ.ಎಸ್.ಪಾಟೀಲ್‌ ಅವಿರೋಧ ಆಯ್ಕೆ

ಬೆಂಗಳೂರು: ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಜಿ.ಎಸ್.ಪಾಟೀಲ್‌ ಸರ್ವಾನುಮತದಿಂದ ಆಯ್ಕೆಯಾದರು. ಸಂಪ್ರದಾಯದಂತೆ ವಿಪಕ್ಷ ನಾಯಕ ಆರ್.‌ಅಶೋಕ್‌ ಹಾಗೂ ಸಿಎಂ ಡಿ.ಕೆ.ಶಿವಕುಮಾರ್‌…

13 hours ago

ಉತ್ತರಾಖಂಡದಲ್ಲಿ ನಿರ್ಮಾಣ ಹಂತದ ಸುರಂಗಕ್ಕೆ ನುಗ್ಗಿದ ನೀರು: 7 ಮಂದಿ ಕಾರ್ಮಿಕರು ಸಾವು

ಡೆಹ್ರಾಡೂನ್:‌ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್‌ ಯೋಜನೆಗೆ ಸಂಬಂಧಿಸಿದ ಸುರಂಗದೊಳಗೆ ಏಕಾಏಕಿ ನೀರು ಮತ್ತು ಮಣ್ಣಿನ ಅವಶೇಷಗಳು…

14 hours ago