ಮೈಸೂರು

ಚಾಮುಂಡೇಶ್ವರಿಯಲ್ಲಿ ಸಿದ್ದೇಗೌಡ ಅಭ್ಯರ್ಥಿ ಮಾತ್ರ ನಾನೇ ಸ್ಪರ್ಧೆ ಮಾಡಿದ್ದೇನೆ ಎಂದುಕೊಳ್ಳಿ : ಸಿದ್ದರಾಮಯ್ಯ

ಮೈಸೂರು : ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದೇಗೌಡ ನಮ್ಮ ಅಭ್ಯರ್ಥಿ ಮಾತ್ರ, ಇಲ್ಲಿ ನಾನೇ ಸ್ಪರ್ಧೆ ಮಾಡಿದ್ದೇನೆ ಎಂದು ನೀವೆಲ್ಲ ಪರಿಗಣಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು.

ಗುರುವಾರ ಆಯೋಜಿಸಿದ್ದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿ,ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಪಕ್ಷದಿಂದ 11 ಜನ ಅಭ್ಯರ್ಥಿಗಳು ಅರ್ಜಿ ಹಾಕಿದ್ದರು, ಈ ಹನ್ನೊಂದೂ ಜನ ಕೂಡ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ, ಆದರೆ ಎಲ್ಲರ ಅಭಿಪ್ರಾಯ ಪಡೆದು ಮಾವಿನಹಳ್ಳಿ ಸಿದ್ದೇಗೌಡರನ್ನು ಅಂತಿಮವಾಗಿ ಹೈಕಮಾಂಡ್‌ ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಇಲ್ಲಿನ ಕಾರ್ಯಕರ್ತರು ಮುಖಂಡರ ಅಭಿಪ್ರಾಯವನ್ನು ಹೈಕಮಾಂಡ್‌ ಮುಂದೆ ಹೇಳಿದ್ದೆ, ನಿಮ್ಮ ಅಭಿಪ್ರಾಯದ ಮೇರೆಗೆ ಸಿದ್ದೇಗೌಡರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ ಎಂದರು.

ನಾನು ಈ ಸಭೆಗೆ ಬಂದಿರುವ ಮುಖ್ಯ ಉದ್ದೇಶವೇ ನಮ್ಮಲ್ಲಿ ಇರುವ ಎಲ್ಲಾ ಭಿನ್ನಾಭಿಪ್ರಾಯವನ್ನು ಮರೆತು ಒಂದಾಗಿ ಕೆಲಸ ಮಾಡಬೇಕು ಎಂಬುದನ್ನು ಮನವರಿಕೆ ಮಾಡಿಕೊಡಲು. ಸಿದ್ದೇಗೌಡರು ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಸೇರಿದ್ದಾರೆ, ಅವರು ವಲಸಿಗ ಎಂಬ ಅಭಿಪ್ರಾಯ ಯಾರಲ್ಲೂ ಬರಬಾರದು,ಒಮ್ಮೆ ಕಾಂಗ್ರೆಸ್‌ ಸೇರಿದ ಮೇಲೆ ಅವರು ಕಾಂಗ್ರೆಸಿಗ. ಇಲ್ಲಿ ಮೂಲ, ವಲಸಿಗ ಎಂಬುದು ಯಾವುದೂ ಇಲ್ಲ. ನಿಮ್ಮೆಲ್ಲರ ಸಹೋದರ, ಈ ಕಾರಣದಿಂದ ತಾವೆಲ್ಲ ಒಗ್ಗಟ್ಟನ್ನು ಪ್ರದರ್ಶಿಸಬೇಕು, ಈ ಮನವಿ ಮಾಡಲು ಇಂದು ಸಭೆ ಕರೆದಿದ್ದೇವೆ. ಇಂದು ಬಹಳಷ್ಟು ಜನ ಮುಖಂಡರು ಬಿಜೆಪಿ ಮತ್ತು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ, ಮುಂದೆ ಸೇರುವವರೂ ಇದ್ದಾರೆ, ಅವರೆಲ್ಲರಿಗೂ ಪಕ್ಷದ ವತಿಯಿಂದ ಮತ್ತು ವೈಯಕ್ತಿಕವಾಗಿ ಹಾರ್ದಿಕ ಸ್ವಾಗತ ಎಂದರು.

ಈ ಚುನಾವಣೆ ರಾಜ್ಯದ ಹಿತದೃಷ್ಟಿಯಿಂದ ಬಹಳ ಪ್ರಾಮುಖ್ಯವಾದುದ್ದು. ನಾವು ಯಾರು ಕೂಡ ಈ ಚುನಾವಣೆಯನ್ನು ಲಘುವಾಗಿ ಪರಿಗಣಿಸಬಾರದು, ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ನಮ್ಮ ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ. ಕಳೆದ ಚುನಾವಣೆಯಲ್ಲಿ ಬೇರೆ ಬೇರೆ ರಾಜಕೀಯ ಬೆಳವಣಿಗೆಗಳಿಂದಾಗಿ ಜಿ.ಟಿ ದೇವೇಗೌಡ ಅವರು ನನ್ನನ್ನು ಸೋಲಿಸಿದರು. ಈ ಬಾರಿ ಅಂತಹ ಯಾವುದೇ ರಾಜಕೀಯ ಬೆಳವಣಿಗೆಗಳು ಆಗಿಲ್ಲ, ನಾನು 5 ವರ್ಷ ಮುಖ್ಯಮಂತ್ರಿಯಾಗಿ ಸಾಕಷ್ಟು ಒಳ್ಳೆ ಕೆಲಸಗಳನ್ನು ಮಾಡಿದ್ದರೂ ಕೂಡ ಚಾಮುಂಡೇಶ್ವರಿಯ ಜನ ನನ್ನನ್ನು ಸೋಲಿಸಿದರು ಎಂದರು.

ನಾಡಿನ ಸಾಮರಸ್ಯ ಹಾಳುಮಾಡುವ, ಧರ್ಮ – ಧರ್ಮಗಳನ್ನು ಎತ್ತಿಕಟ್ಟಿ ಸಮಾಜ ಒಡೆಯುವ, ಅಶಾಂತಿ ಸೃಷ್ಟಿಸುವ ಕೋಮುವಾದಿ ಪಕ್ಷ ಬಿಜೆಪಿ ಅಧಿಕಾರಕ್ಕೆ ಬರಬಾರದು, ಬಹುತ್ವದ ಭಾರತ ದೇಶದ ಸೌಹಾರ್ದತೆಯನ್ನು ಕಾಪಾಡಿಕೊಂಡು ಹೋಗಬೇಕು ಎಂಬ ಕಾರಣಕ್ಕೆ ಜೆಡಿಎಸ್‌ ಗೆ ಬೆಂಬಲ ನೀಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಜಿ.ಟಿ ದೇವೇಗೌಡ ಅವರನ್ನು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಉನ್ನತ ಶಿಕ್ಷಣ ಸಚಿವನಾಗಿ ಮಾಡಲಾಗಿತ್ತು. ಆಮೇಲೆ ಅವರೊಳಗೆ ವೈಮನಸು ಬಂದು ವಾಚಾಮಗೋಚರವಾಗಿ ಬೈದುಕೊಂಡು ತಿರುಗಾಡುತ್ತಾ ಇದ್ದರು. ಆಮೇಲೆ ನನ್ನತ್ರ ಬಂದು “ನಾನು ಕಾಂಗ್ರೆಸ್‌ ಸೇರಿಕೊಳ್ಬೇಕು ಎಂದುಕೊಂಡಿದ್ದೇನೆ, ನೀವು ಟಿಕೆಟ್‌ ಕೊಡಿಸಬೇಕು” ಎಂದಿದ್ದರು. ಕೊನೆಗೆ ನನ್ನ ಜತೆಯಲ್ಲೇ ಇದ್ದರು, ಚುನಾವಣೆ ಸಂದರ್ಭದಲ್ಲಿ ಕೆಲಸವನ್ನು ಮಾಡಿದ್ದರು, ಕೊನೆಗೆ ಮತ್ತೆ ಜೆಡಿಎಸ್‌ ಗೆ ವಾಪಾಸು ಹೋದರು. ಅವರೇ ಬಂದು ಅವರೇ ವಾಪಾಸು ಹೋಗಿದ್ದಾರೆ. ನಾನು ಅವರನ್ನು ಕರೆದಿರಲಿಲ್ಲ ಎಂದರು.

ಕುಮಾರಸ್ವಾಮಿ ಎಷ್ಟೇ ಪಂಚರತ್ನ ಯಾತ್ರೆ ಮಾಡಿದ್ರೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಇನ್ನೊಬ್ಬರ ಹೆಗಲಮೇಲೆ ಕೂತುಕೊಂಡು ಅಧಿಕಾರ ಮಾಡಬೇಕು ಎಂದು ಬಯಸುವವರು ಅವರು. ನಾನು ಜೆಡಿಎಸ್‌ ನಲ್ಲಿದ್ದಾಗ 2004ರಲ್ಲಿ 59 ಜನ ಜೆಡಿಎಸ್‌ ನಿಂದ ಗೆದ್ದಿದ್ದೆವು. 2005ರಲ್ಲಿ ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದರು, ಆಗ ಜೆಟಿಡಿ ನನ್ನ ಜೊತೆ ಬರಲಿಲ್ಲ, ಮಂತ್ರಿ ಮಾಡುತ್ತೇವೆ ಎಂದು ಹೇಳಿದ್ದಕ್ಕೆ ಅಲ್ಲೇ ಉಳಿದುಕೊಂಡರು. ಹುಣಸೂರಿನಲ್ಲಿ ಯಾರು ಗೆಲ್ಲಿಸಿದರು ಎಂದು ಅವರು ಹೇಳಬೇಕು. ದೇವೇಗೌಡರು ಇವರನ್ನು ಮಂತ್ರಿ ಮಾಡಿದರು, ಇವೆರಲ್ಲ ಅವಕಾಶವಾದಿಗಳು. ನಂತರ ಕುಮಾರಸ್ವಾಮಿ ಮುಖ್ಯಮಂತ್ರಿ ಆದರು, ಮತ್ತೆ ಜೆಡಿಎಸ್‌ 59 ಸ್ಥಾನವನ್ನು ಮುಟ್ಟಿದರೇ? ಇಲ್ಲ ಅಲ್ವಾ? 28 ಸ್ಥಾನಗಳಲ್ಲಿ ಮಾತ್ರ ಗೆದ್ದಿದ್ದು. ಆಮೇಲೆ 40 ಗೆದ್ದರು, ಮತ್ತೆ 37 ಗೆದ್ದರು. ಈಗ 20 ರಿಂದ 22 ಗೆಲ್ಲಬಹುದು. ಹೇಗೆ ಸರ್ಕಾರ ಮಾಡ್ತಾರೆ? ಪಂಚರತ್ನ ಮಾಡಿದ ಕೂಡಲೇ ಬಹುಮತ ಸಿಗುತ್ತಾ? ಅವರಿಗೆ ಬಿಜೆಪಿ ಮತ್ತು ಕಾಂಗ್ರೆಸ್‌ ಯಾವ ಪಕ್ಷವೂ ಪೂರ್ಣ ಬಹುಮತ ಪಡೆಯಬಾರದು. ಆಗ ಕುಮಾರಸ್ವಾಮಿ ನನಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟರೆ ನಿಮ್ಮ ಜೊತೆ ಬರುತ್ತೇನೆ ಎಂದು ಷರತ್ತು ಹಾಕುತ್ತಾರೆ, ಈ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ನಡೆಸಲು ಆಗುತ್ತಾ? ನಾವೆಲ್ಲ ಬೆಂಬಲ ಕೊಟ್ಟರೂ 1 ವರ್ಷ 2 ತಿಂಗಳಿಗೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು ಎಂದರು.

ಹಿಂದೆ ಕುಮಾರಸ್ವಾಮಿಗೆ ನೀವು ಅಮೆರಿಕಾಗೆ ಹೋಗಬೇಡಿ, ಇಲ್ಲಿ ಶಾಸಕರು ಪಕ್ಷಾಂತರ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದ್ದೆ. ನನ್ನ ಮಾತು ಕೇಳಿಲ್ಲ ಹೋಗಿ 9 ದಿನ ಅಮೇರಿಕಾದಲ್ಲಿ ಕೂತುಕೊಂಡರು. ಅಷ್ಟರಲ್ಲಿ ಬಿಜೆಪಿಯವರು ವ್ಯವಹಾರ ಕುದುರಿಸಿ ಎಲ್ಲರನ್ನು ಕೊಂಡುಕೊಂಡರು. ನಂತರ ಸಿದ್ದರಾಮಯ್ಯ ಅವರು ಬಿಜೆಪಿಗೆ ಕಳಿಸಿದರು ಎಂದು ನನ್ನ ಮೇಲೆ ಗೂಬೆ ಕೂರಿಸಲು ಶುರು ಮಾಡಿದರು. ಕಾಂಗ್ರೆಸ್‌ ನವರನ್ನು ನಾನು ಕಳಿಸಿದ್ದಾದರೆ ಹೆಚ್‌, ವಿಶ್ವನಾಥ್‌, ಗೋಪಾಲಯ್ಯ, ನಾರಾಯಣಗೌಡರನ್ನು ಕಳಿಸಿದ್ದು ಯಾರಪ್ಪ? ಹೊಟೇಲ್‌ ನಲ್ಲಿ ಕೂತು ಆಡಳಿತ ಮಾಡಿದರೆ ಯಾವ ಶಾಸಕರು, ಕಾರ್ಯಕರ್ತರು ಉಳ್ಕೊತಾರೆ. ಯಾರನ್ನೂ ಭೇಟಿ ಮಾಡಲ್ಲ, ಮಂತ್ರಿಗಳು, ಶಾಸಕರನ್ನು ಹೊಟೇಲ್‌ ಒಳಗೆ ಬಿಡುತ್ತಿರಲಿಲ್ಲ. ಹೀಗಾಗಿ ಸರ್ಕಾರ ಬಿದ್ದುಹೋಯಿತು ಎಂದರು.

ಬಿಜೆಪಿಯವರು ಆಪರೇಷನ್‌ ಕಮಲ ಮಾಡಿ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರು. ಎರಡು ವರ್ಷಕ್ಕೆ ಅವರನ್ನು ಅಧಿಕಾರದಿಂದ ಕಿತ್ತುಹಾಕಿದರು, ಪಾಪ ಯಡಿಯೂರಪ್ಪ ಅಳುತ್ತಾ ಇದ್ರು. ಯಡಿಯೂರಪ್ಪ ಅವರೇ ಹೇಳಿ ಬೊಮ್ಮಾಯಿಯನ್ನು ಮುಖ್ಯಮಂತ್ರಿ ಮಾಡಿಸಿದರು. ಒಂದು ತಿಂಗಳು ಅವರ ಜತೆ ಚನ್ನಾಗಿದ್ದು, ನಂತರ ಇಬ್ಬರ ಮಧ್ಯ ವೈಮನಸ್ಸು ಶುರುವಾಯಿತು. ಬೊಮ್ಮಾಯಿ 6 ಸಚಿವ ಸ್ಥಾನಗಳನ್ನು ಭರ್ತಿ ಮಾಡಲಿಲ್ಲ, ಕಾರಣ ಏನಪ್ಪಾ ಅಂದ್ರೆ ಮಂತ್ರಿ ಮಂಡಲ ವಿಸ್ತರಣೆ ಮಾಡಿದ್ರೆ ಯಡಿಯೂರಪ್ಪ ಅವರ ಮಗ ವಿಜಯೇಂದ್ರನನ್ನು ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳಬೇಕಾಗುತ್ತೆ ಎನ್ನುವುದು. ಒಂದು ಮುಕ್ಕಾಲು ವರ್ಷ ಮಂತ್ರಿಮಂಡಲ ವಿಸ್ತರಣೆ ಮಾಡದೆ ಸರ್ಕಾರ ತಳ್ಳಿದರು ಎಂದರು.

lokesh

Recent Posts

ಸೇವಾ ತೀರ್ಥ ಸಂಕೀರ್ಣ ಉದ್ಘಾಟಿಸಿದ ಪ್ರಧಾನಿ ಮೋದಿ

ಹೊಸದಿಲ್ಲಿ : ಪ್ರಧಾನ ಮಂತ್ರಿ ಕಾರ್ಯಾಲಯ (ಪಿಎಂಒ), ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ಸಂಪುಟ ಸಚಿವಾಲಯಗಳನ್ನು ಒಳಗೊಂಡಿರುವ ‘ಸೇವಾ…

16 mins ago

T20 World Cup | ಕೆನಡಾ ವಿರುದ್ಧ ಯುಎಇಗೆ ರೋಚಕ ಜಯ

ಹೊಸದಿಲ್ಲಿ : ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ‘ಡಿ’ಗುಂಪಿನ ಪಂದ್ಯದಲ್ಲಿ ಯುಎಇ ಕ್ರಿಕೆಟ್ ತಂಡವು ಕೆನಡಾ ತಂಡವನ್ನು ಐದು…

25 mins ago

ದಳಪತಿ ವಿಜಯ್‌ ರ‍್ಯಾಲಿಯಲ್ಲಿ ನಿಲ್ಲದ ದುರಂತ : ಮತ್ತೊಬ್ಬನ ಸಾವು

ಸೇಲಂ : ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ರ‍್ಯಾಲಿ ವೇಳೆ ಕುಸಿದು ಬಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದ ಮಧ್ಯೆ…

1 hour ago

ರೈಲ್‌ಒನ್‌ ಆಪ್‌ : ಒಂದೇ ಕಡೆ ಸಿಗಲಿದೆ ರೈಲು ಸೌಲಭ್ಯಗಳು

ಬೆಂಗಳೂರು : ಭಾರತೀಯ ರೈಲ್ವೆಯು ತನ್ನ ಅಧಿಕೃತ ಆಪ್ ‘ರೈಲ್‌ಒನ್’ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದರಲ್ಲಿ ರೈಲ್ವೆ ಸೇವೆಗಳೆಲ್ಲವೂ…

1 hour ago

ತಾರಿಖ್‌ ರೆಹಮಾನ್‌ ಬಾಂಗ್ಲಾದೇಶದ ನೂತನ ಪ್ರಧಾನಿ

ಢಾಕಾ : ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ(ಬಿಎನ್‌ಪಿ) ಗೆದ್ದು ಬೀಗಿದೆ. ಸಂಸತ್ತಿನ ಒಟ್ಟು 300 ಸ್ಥಾನಗಳ ಪೈಕಿ…

1 hour ago

ಶಾಲಾ ಮಕ್ಕಳಿಗೆ ಕಳಪೆ ಊಟ ; ಮುಖ್ಯ ಶಿಕ್ಷಕಿ ಅಮಾನತ್ತು

ಕೊಳ್ಳೇಗಾಲ : ತಾಲ್ಲೂಕಿನ ಸತ್ತೇಗಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಕಳಪೆ ಊಟ ನೀಡಿದ್ದ ಆರೋಪದ ಮೇಲೆ…

2 hours ago