ಮೈಸೂರಿನಿಂದ ಬೆಂಗಳೂರು ವಿಮಾನ ನಿಲ್ದಾಣದ ತನಕ ಪ್ರಯಾಣ ಬೆಳೆಸಿದ ದಿವ್ಯ ಜ್ಯೋತಿ ಚಾರಿಟಬಲ್ ಟ್ರಸ್ಟ್ನ ಮಕ್ಕಳು
ಮೈಸೂರಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪಯಣ
ಮೈಸೂರು: ಹಣವುಳ್ಳವರು ತಮ್ಮ ಮಕ್ಕಳ ಆಸೆಯನ್ನು ಪೂರೈಸಲು ಲಕ್ಷಾಂತರ ರೂ. ವ್ಯಯಿಸಿ ದೇಶ-ವಿದೇಶ ಪ್ರಯಾಣಕ್ಕೆ ಕಳುಹಿಸುವುದು ಸಾಮಾನ್ಯ. ಆದರೆ, ಸಮಾಜದಲ್ಲಿ ನೆಲೆ ಕಂಡುಕೊಳ್ಳಲು ಪರದಾಡುವ ಅಂಧ ಮಕ್ಕಳನ್ನು ಮೈಸೂರಿನಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ತನಕ ವಿಮಾನದಲ್ಲಿ ಕರೆದೊಯ್ದು ಅವರ ಆಸೆಯನ್ನು ಪೂರೈಸಿರುವುದು ವಿಶೇಷ.
ವಿಮಾನದಲ್ಲಿ ಒಂದು ಬಾರಿಯಾದರೂ ಪ್ರಯಾಣಿಸಬೇಕೆಂಬ ಅಂಧ ಮಕ್ಕಳ ಕನಸನ್ನು ದಾನಿಗಳ ನೆರವಿನೊಂದಿಗೆ ದಿವ್ಯದೀಪ ಚಾರಿಟಬಲ್ ಟ್ರಸ್ಟ್ ನೆನಸಾಗಿಸಿದ್ದು, ಆ ಮೂಲಕ ಮಕ್ಕಳ ಬದುಕಿನಲ್ಲಿ ಮರೆಯಲಾಗದ ದಿನವನ್ನು ದಾಖಲಿಸಿದೆ. ಮೈಸೂರಿನ ದಟ್ಟಗಳ್ಳಿ ಮೂರನೇ ಹಂತದ ವರ್ತುಲ ರಸ್ತೆ ಬಳಿ ಇರುವ ದಿವ್ಯ ಜ್ಯೋತಿ ಚಾರಿಟಬಲ್ ಟ್ರಸ್ಟ್ನಲ್ಲಿ ಆಶ್ರಯ ಪಡೆದು ವ್ಯಾಸಂಗ ಮಾಡುತ್ತಿರುವ ಅಂಧ ಮಕ್ಕಳಿಗಾಗಿ ಈ ತನಕ ಚಾಮುಂಡಿಬೆಟ್ಟಕ್ಕೆ ಟ್ರಕ್ಕಿಂಗ್, ಗಣಪತಿ ಸಚ್ಚಿದಾನಂದ ಆಶ್ರಮದ ಶುಕವನದಲ್ಲಿರುವ ಪಕ್ಷಿಗಳ ಸ್ಪರ್ಶ, ಶ್ರೀರಂಗಪಟ್ಟಣದ ಪಕ್ಷಿಧಾಮದಲ್ಲಿನ ದೋಣಿವಿಹಾರ, ಜಿಆರ್ಎಸ್ ಫ್ಯಾಂಟಿಸಿ ಪಾರ್ಕ್ನ ಮನರಂಜನೆಯ ಆಟ, ಸ್ಟಾರ್ ಹೋಟೆಲ್ನಲ್ಲಿ ಊಟದ ವ್ಯವಸ್ಥೆ, ಟ್ಯಾನ್ಡಂ ಸೈಕಲ್ನಲ್ಲಿ ಬೈಸಿಕಲ್ ತುಳಿಯುವ ಅನುಭವ ಒದಗಿಸಲಾಗಿದೆ.
ಈ ಬಾರಿ ಆಕಾಶದಲ್ಲಿ ಹಾರಬೇಕೆಂಬ ಮಕ್ಕಳ ಮನದಾಸೆಯನ್ನು ಈಡೇರಿಸಲು ಮುಂದಾದ ಸಂಸ್ಥೆ ಶುಕ್ರವಾರ ಸಂಸ್ಥೆಯಲ್ಲಿರುವ 36 ವಿದ್ಯಾರ್ಥಿನಿಯರು, ಹದಿನೈದು ಮಂದಿ ಸಹಾಯಕರಿಗೆ ವಿಮಾನ ಪ್ರಯಾಣ ವ್ಯವಸ್ಥೆ ಮಾಡಿತ್ತು. ವಿದ್ಯಾರ್ಥಿನಿಯರು ಮಂಡಕಳ್ಳಿ ವಿವಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಅಲ್ಲಿ ತಮ್ಮ ಗುರುತಿನ ಚೀಟಿ ಹಾಗೂ ಟಿಕೆಟ್ ತೋರಿಸಿ ನಿಲ್ದಾಣ ಪ್ರವೇಶ ಪಡೆದು ಅಲ್ಲಿಂದ ಬೋರ್ಡಿಂಗ್ ಪಾಸ್ ಪಡೆದು ಚೆಕ್ಕಿಂಗ್ ಆಗಿ ವಿಮಾನ ಏರಿದರು.
ಈ ಎಲ್ಲ ಅನುಭವಗಳನ್ನು ಸ್ವತಃ ಅವರೇ ಪಡೆಯುವಂತೆ ವ್ಯವಸ್ಥೆ ಮಾಡಲಾಗಿತ್ತು. ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಿ ಹಣಕಾಸು ವಿನಿಮಯ, ಸರಕು ಸಾಗಾಣಿಕೆ ವಿಮಾನಗಳ ಪರಿಚಯ, ಅವುಗಳ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಸ್ವಯಂ ಸೇವಕರು ಕಣ್ಣಿಗೆ ಬಟ್ಟೆಕಟ್ಟಿಕೊಂಡು ಅಂಧರು ಅನುಭವಿಸುವ ಕಷ್ಟಗಳನ್ನು ಖುದ್ದು ತಾವೇ ಅನುಭವಿಸಿದರು.
ಯಾನದ ಸಂದರ್ಭದಲ್ಲಿ ಸ್ವಯಂ ಸೇವಕರು ಅಂಧರಿಗೆ ವಿಮಾನದಲ್ಲಿನ ವೈಶಿಷ್ಟೆತೆಗಳನ್ನು ವಿವರಿಸಿದರು. ವಿಮಾನ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಗಳು, ಗಗನ ಸಖಿುಯರು ನೀಡುತ್ತಿದ್ದ ಸಂದೇಶಗಳನ್ನು ಅನುಸರಿಸಿದರು. ಯಾನದ ಅಂತ್ಯದಲ್ಲಿ ಗಗನಸಖಿಯರು, ಪೈಲಟ್, ಕೋ ಪೈಲಟ್ಗಳ ಪರಿಚಯ ಮಾಡಿಕೊಡಲಾಯಿತು.
ನನ್ನ ಆಸೆಗಳನ್ನು ಈಡೇರಿಸಿಕೊಳ್ಳುವುದು ಕಷ್ಟ ಎಂಬ ಅರಿವಿತ್ತು. ನಾನು ಬಾಲ್ಯ ಕಳೆದಿದ್ದು ಅಜ್ಜಿ ಮನೆಯಲ್ಲಿ. ಅಪ್ಪ ಅಮ್ಮ ತೀರಿಹೋದ ಮೇಲೆ ಬದುಕಿನ ಆಸೆೆಯೇ ಬತ್ತಿ ಹೋಗಿತ್ತು. ನಾನು ಓದಬೇಕು, ಸೈಕಲ್ ಓಡಿಸಬೇಕು, ವಿಮಾನದಲ್ಲಿ ಹಾರಬೇಕು ಎನ್ನುವ ಆಸೆ ಇತ್ತು. ನನ್ನ ಕನಸುಗಳನ್ನು ದಿವ್ಯಜ್ಯೋತಿ ಚಾರಿಟಬಲ್ ಟ್ರಸ್ಟ್ ನನಸು ಮಾಡಿದೆ. ಇದು ನನಗೆ ಮರೆಯಲಾಗದ ದಿನವಾಗಿದೆ.
-ಮಂಜುಳಾ, ಅಂಧ ವಿದ್ಯಾರ್ಥಿನಿ.
ಅಂಧ ಬಾಲಕಿಯರಿಗೆ ಆಸರೆ ನೀಡಿ, ಅವರ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಸೃಷ್ಟಿಸಿ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ದಿವ್ಯ ಜ್ಯೋತಿ ಚಾರಿಟಬಲ್ ಟ್ರಸ್ಟ್ ಹೆಗಲಾಗಿದೆ. ಪದವಿಪೂರ್ವ ಶಿಕ್ಷಣ ಪಡೆಯಲಿಚ್ಛಿಸುವ ಅಂಧ ವಿದ್ಯಾರ್ಥಿಗಳು ಟ್ರಸ್ಟನ್ನು ಸಂಪರ್ಕಿಸಬಹುದು. ಇಲ್ಲಿ ಎಲ್ಲವೂ ಉಚಿತವಾಗಿ ದೊರೆಯಲ್ಲಿದ್ದು ದಾನಿಗಳು, ಸಂಘ ಸಂಸ್ಥೆಗಳು, ಸಾಮಾಜಿಕ ಹೊಣೆಗಾರಿಕೆ ಹೊರುವ ಕೈಗಾರಿಕೆಗಳ ಸಹಕಾರ ಮತ್ತು ಸಹಾಯದಿಂದ ಅಂಧ ಮಕ್ಕಳಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ.
-ಎಂ.ಎಂ.ಶಿವಪ್ರಕಾಶ್, ಮ್ಯಾನೇಜಿಂಗ್ ಟ್ರಸ್ಟಿ, ದಿವ್ಯಜ್ಯೋತಿ ಚಾರಿಟಬಲ್ ಟ್ರಸ್ಟ್
ಮೈಸೂರಿನಿಂದ ಬೆಂಗಳೂರಿಗೆ ವಿಮಾನ ಯಾಕೆ ಇಷ್ಟು ಬೇಗ ಬಂದು ಬಿಟ್ಟಿತು ಅನ್ನಿಸಿತು. ವಿಮಾನ ಪ್ರಯಾಣ ಅಂದರೆ ಮನಸ್ಸಿನಲ್ಲಿ ಏನೋ ಆತಂಕ ಇತ್ತು. ಆದರೆ, ವಿಮಾನದಲ್ಲಿ ಬಂದ ಮೇಲೆ ತುಂಬಾ ಸಂತೋಷವಾಯಿತು.
-ಮಾಲತಿ, ವಿದ್ಯಾರ್ಥಿನಿ.
ಹುಣಸೂರು : ಸದಾ ಜನನಿಬಿಡ ಪ್ರದೇಶವಾದ ಹುಣಸೂರು ಬಸ್ ನಿಲ್ದಾಣ ಹಿಂಭಾಗದ ಸ್ಕೈ ಗೋಲ್ಡ್ ಅಂಡ್ ಡೈಮಂಡ್ ಜ್ಯುಯಲರಿ ಅಂಗಡಿಯಲ್ಲಿ…
ತಿ.ನರಸೀಪುರ : ಮುಡುಕುತೊರೆಯು ಪ್ರಸಿದ್ಧ ಧಾರ್ಮಿಕ ಸ್ಥಳವಾಗಿದ್ದು, ಪ್ರವಾಸೋದ್ಯಮ ಕೇಂದ್ರವೂ ಆಗಿದೆ. ಈ ಹಿನ್ನೆಲೆಯಲ್ಲಿ ಈ ಭಾಗವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು…
ಮೈಸೂರು : ರಂಗಾಯಣದ ಪ್ರತಿಷ್ಠಿತ ಉತ್ಸವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವು ಜನವರಿ 11 ರಿಂದ 18 ರವರೆಗೆ ನಡೆಯಲಿದೆ ಎಂದು…
ಬೆಂಗಳೂರು : ಹೊಸ ವರ್ಷಾಚರಣೆ ವೇಳೆ ಬೆಂಗಳೂರು ನಗರದಲ್ಲಿ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ…
ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಸ್ಥಾನದಿಂದಲೇ ಅನರ್ಹಗೊಂಡು ನ್ಯಾಯಾಲಯದ ತಡೆಯಾಜ್ಞೆಯಿಂದ ಬಚಾವ್ ಆಗಿದ್ದ ಮಾಜಿ ಸಚಿವ ಹಾಗೂ ಶಾಸಕ…
ನವದೆಹಲಿ: ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದ ದೆಹಲಿ…