Babu Jagjivan Ram's thoughts are an inspiration to the youth
ಮೈಸೂರು : ಡಾ. ಬಾಬು ಜಗಜೀವನರಾಮ್ ಅವರು ಈ ರಾಷ್ಟ್ರ ಕಂಡ ಶ್ರೇಷ್ಠ ರಾಜಕೀಯ ಮುತ್ಸದಿ. ದಲಿತರ, ತುಳಿತಕ್ಕೊಳದವರ, ಶ್ರಮಿಕರ ಹಾಗೂ ಎಲ್ಲಾ ವರ್ಗದ ಅಭಿವೃದ್ಧಿಯ ಪೂರಕವಾಗಿ ಅವರ ಜೀವನವನ್ನು ಮುಡಾಪಾಗಿಟ್ಟ ಮಹಾನ್ ಚೇತನ. ಅವರ ಚಿಂತನೆಗಳು ಯುವಜನತೆಗೆ ಸದಾ ಪ್ರೇರಣೆಯಾಗಿವೆ ಎಂದು ಆಹಾರ ಮತ್ತು ನಾಗರಿಕ ಇಲಾಖೆಯ ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದರು.
ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲುಂದ ಘಟಿಕೋತ್ಸವ ಭವನದಲ್ಲಿ ಡಾ.ಬಾಬು ಜಗಜೀವನರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ಆಯೋಜಿಸಿದ್ದ ಭಾರತದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪ್ರಗತಿಗೆ ಡಾ.ಬಾಬು ಜಗಜೀವನರಾಮ್ ಅವರ ಕೊಡುಗೆಗಳು ಎಂಬ ವಿಷಯ ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಮೈಸೂರು ಭಾಗದಲ್ಲಿ ಸಾಹಿತಿಗಳು, ಪ್ರಗತಿಪರ ಚಿಂತಕರು, ಹೋರಾಟಗಾರರು, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಮ್, ಪ್ರೊ. ಬಿ. ಕೃಷ್ಣಪ್ಪ ಮುಂತಾದವರ ಚಿಂತನೆಗಳನ್ನು ವ್ಯವಸ್ಥಿತವಾಗಿ ತಲುಪಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಬಾಬು ಜಗಜೀವನರಾಮ್ ರವರ ಕೊಡುಗೆಗಳನ್ನು ನಾವು ತಿಳಿದುಕೊಳ್ಳಬೇಕಾಗಿದೆ ಹಾಗೂ ವಿಶ್ವ ವಿದ್ಯಾಲಯಗಳಲ್ಲಿ ವ್ಯಾಸಂಗಕ್ಕೆ ಬರುವ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ತಿಳಿಸುವಂತಹ ಕೆಲಸವನ್ನು ಮುಂದುವರೆಸಬೇಕಾಗಿದೆ ಎಂದು ಹೇಳಿದರು.
ಬಾಬೂಜಿ ಸಾಮಾಜಿಕ ಸಮಾನತೆ ಮತ್ತು ಶೋಷಿತ ವರ್ಗಗಳಿಗೆ ಸಮಾನ ಹಕ್ಕುಗಳ ಪ್ರತಿಪಾದಕರಾಗಿದ್ದರು. ಅವರು ವಿದ್ಯಾರ್ಥಿಯಾಗಿದ್ದಾಗಲೇ ತಮ್ಮನ್ನು ಹಲವಾರು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಹರಿಜನರ ಮಕ್ಕಳನ್ನು ಶಾಲೆಗೆ ಸೇರಿಸುವುದು, ಅವರ ಪುಸ್ತಕ ಬಟ್ಟೆ ಕೊಳ್ಳಲು ಮತ್ತು ಫೀಸು ಕಟ್ಟಲು ಕೈಲಾದ ಧನ ಸಹಾಯ ಮಾಡುವುದು ಮತ್ತು ದಲಿತರನ್ನು ಜೀತ ವಿಮುಕ್ತರಾಗಿ ಮಾಡುವುದು. ಅವರು ರಾಜಕೀಯ ರಂಗ ಪ್ರವೇಶಿಸಿದ ಮೇಲೆ ಸ್ವಾತಂತ್ರ್ಯ ಸಂಗ್ರಾಮ ದಲ್ಲಿ ಭಾಗವಹಿಸುವುದರ ಜೊತೆಗೆ ಹರಿಜನ ಸೇವ ಸಂಘ, ರವಿದಾಸ್ ಮಹಾಸಭಾ, ಡಿಪ್ರೆಸ್ಡ್ ಕ್ಲಾಸ್ ಲೀಗ್ ಮುಂತಾದ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದರು ಹಾಗೂ ಭಾರತದಾದ್ಯಂತ ಸಂಚಾರ ಮಾಡಿ ಹರಿಜನರ ಸಂಘಟನೆ ಮಾಡಿದರು. “ಕೃಷಿ ಕಾರ್ಮಿಕರ ಕನಿಷ್ಟ ವೇತನ, ಉಳುವವನಿಗೆ ಭೂಮಿ, ಮದ್ಯಪಾನ ನಿಷೇಧ ಮತ್ತು ಅಸ್ಪೃಶ್ಯತಾ ನಿವಾರಣೆ” ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಹೋರಾಟ ಮಾಡಿದರು ಎಂದು ತಿಳಿಸಿದರು.
ಸುಭಾಷ್ ಚಂದ್ರ ಬೋಸ್ ಇವರ ಸಂಘಟನಾ ಕೌಶಲ್ಯವನ್ನು ಗುರುತಿಸಿ, 1935 ರಲ್ಲಿ, All India Depressed Classes League ರಚನೆ ಮಾಡಲು ಜಗಜೀವನರಾಮ್ ರವರಿಗೆ ಸಹಾಯ ಮಾಡಿದರು. ಬಾಬೂಜಿ ನಂತರ ಕಾಂಗ್ರೆಸ್ ಪಕ್ಷವನ್ನು ಸೇರಿ, ಅಸ್ಪೃಶ್ಯ ಸಮಾಜದ ಅದ್ಭುತ ವಕ್ತಾರರಾಗಿ ಮೆಚ್ಚುಗೆ ಪಡೆದರು. 1935ರಲ್ಲಿ, ಅವರು ಹಿಂದೂ ಮಹಾಸಭಾದ ಅಧಿವೇಶನದಲ್ಲಿ ಕುಡಿಯುವ ನೀರಿನ ಬಾವಿಗಳು ಮತ್ತು ದೇವಾಲಯಗಳು ಅಸ್ಪೃಶ್ಯರಿಗೆ ಮುಕ್ತವಾಗಿರಬೇಕು ಎಂದು ಪ್ರಸ್ತಾಪಿಸಿದರು. 1940ರ ದಶಕದಲ್ಲಿ ಆರಂಭದಲ್ಲಿ ಬಾಬೂಜಿ ಸ್ವಾತಂತ್ರ್ಯ ಚಳವಳಿಯಲ್ಲೂ ಭಾಗವಹಿಸಿದರು ಸತ್ಯಾಗ್ರಹ ಮತ್ತು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ಎರಡು ಬಾರಿ ಸೆರೆವಾಸ ಅನುಭವಿಸಿದ್ದರು ಎಂದರು.
ಜವಾಹರಲಾಲ್ ನೆಹರು ತಾತ್ಕಾಲಿಕ ಸರ್ಕಾರವನ್ನು ರಚಿಸಿದಾಗ, ಜಗಜೀವನ್ ರಾಮ್ ಅದರ ಅತ್ಯಂತ ಕಿರಿಯ ಸಚಿವರಾದರು. ಸ್ವಾತಂತ್ರ್ಯದ ನಂತರ, ಅವರನ್ನು ದೇಶದ ಮೊದಲ ಕಾರ್ಮಿಕ ಸಚಿವರನ್ನಾಗಿ ನೇಮಿಸಲಾಯಿತು. ಜಗಜೀವನರಾಮ್ ರವರು ರೈಲ್ವೆ, ಆಹಾರ ಮತ್ತು ಕೃಷಿ, ಸಾರಿಗೆ ಮತ್ತು ಸಂವಹನ, ನೀರಾವರಿ ಮತ್ತು ರಕ್ಷಣೆ ಸೇರಿದಂತೆ ವಿವಿಧ ಖಾತೆಗಳನ್ನು ಸಹ ಹೊಂದಿದ್ದರು. ಅವರು ರಕ್ಷಣಾ ಸಚಿವರಾಗಿದ್ದಾಗ 1971ರ ಭಾರತ-ಪಾಕಿಸ್ತಾನ ಯುದ್ಧ ನಡೆಯಿತು. ತುರ್ತು ಪರಿಸ್ಥಿತಿಯ ನಂತರ ಮೊರಾರ್ಜಿ ದೇಸಾಯಿ ಪ್ರಧಾನಿಯಾದಾಗ ಅವರು ಭಾರತದ ಉಪ ಪ್ರಧಾನಿಯೂ ಆದರು. ಜಗಜೀವನ್ ರಾಮ್ 1936 ರಿಂದ 1986 ರವರೆಗೆ ನಿರಂತರವಾಗಿ ಸಂಸತ್ತಿನ ಸದಸ್ಯರಾಗಿದ್ದರು ಮತ್ತು ಇದು ವಿಶ್ವ ದಾಖಲೆಯಾಗಿದೆ. ಭಾರತದಲ್ಲಿ ಅತಿ ಹೆಚ್ಚು ಕಾಲ (30 ವರ್ಷಗಳು) ಕ್ಯಾಬಿನೆಟ್ ಮಂತ್ರಿಯಾಗಿ ಸೇವೆ ಸಲ್ಲಿಸಿದ ಮತ್ತೊಂದು ದಾಖಲೆಯನ್ನೂ ಅವರು ಹೊಂದಿದ್ದಾರೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಬೊಂಬಾಯಿ ಅಧಿವೇಶನದಲ್ಲಿನ ಅಧ್ಯಕ್ಷ ಭಾಷಣದಲ್ಲಿ “ಗರೀಬಿ ಹಠಾವ್” ಘೋಷಣೆಯನ್ನು ರಾಷ್ಟ್ರದ ಮುಂದಿಟ್ಟು ಕಾಂಗ್ರೆಸ್ ಸರಕಾರ ಈ ನಿಟ್ಟಿನಲ್ಲಿ ಕೆಲಸ ಮಾಡಲು ಪ್ರೇರೇಪಿಸಿದರು ಎಂದು ತಿಳಿಸಿದರು.
ಬಳಿಕ ಡಾ.ಬಾಬು ಜಗಜೀವನರಾಮ್ ಅವರ ಜೀವನ ಸಾಧನೆ ಕುರಿತಾದ ಗ್ರಂಥ ಬಿಡುಗಡೆಗೊಳಿಸಲಾಯಿತು. ಹಾಗೂ ೨೦೨೪-೨೫ರ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಶೇ.೯೫ಕ್ಕಿಂತ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಕರಾಮುವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಕುಲಸಚಿವರು ಪ್ರೊ.ಎಸ್. ನವೀನ್ ಕುವಾರ್, ಮೈಸೂರು ವಿವಿ ಮಹಾರಾಜ ಕಾಲೇಜು ಪ್ರೊ.ಆರ್ ತಿಮ್ಮರಾಂಪ್ಪ, ಡಾ.ಬಾಬು ಜಗಜೀವನರಾಮ್ ಅಧ್ಯುಂನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ನಿರ್ದೇಶಕಿ ಡಾ.ಆರ್ ಶರಣಮ್ಮ, ಡಾ.ಸಿ.ಎಸ್ ಆನಂದ ಕುಮಾರ್ ಉಪಸ್ಥಿತರಿದ್ದರು.
ಮೈಸೂರು : ಎಲ್ಲರಿಗೂ ಸಮಾನ ಅವಕಾಶ, ಸಮಾನ ಹಕ್ಕುಗಳನ್ನು ಒದಗಿಸಿರುವ ಸಂವಿಧಾನವನ್ನು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡರೆ ಮಾತ್ರ ಕೋಮು…
ಬೆಂಗಳೂರು : ಗೃಹಲಕ್ಷ್ಮಿ ಯೋಜನೆ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸದನಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ. ಆದ್ದರಿಂದ ಸಚಿವರು 1.20…
ಬೆಂಗಳೂರು: ಕಾರಾಗೃಹ ಹಾಗೂ ಸುಧಾರಣಾ ಇಲಾಖೆಯ ಡಿಜಿಪಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ರಾಜ್ಯದ…
ಬೆಳಗಾವಿ: ಬಿಜೆಪಿಯು ದ್ವೇಷ ರಾಜಕಾರಣದಲ್ಲಿ ತೊಡಗಿದ್ದು, ಕಾಂಗ್ರೆಸ್ ನಾಯಕರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಅಪಪ್ರಚಾರ ಮಾಡುತ್ತಿದೆ. ಬಿಜೆಪಿಯ ಈ…
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಎಸ್.ಎನ್.ಹೆಗ್ಡೆ ಅವರು ಇಂದು ಮೈಸೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಪ್ರೊ.ಎಸ್.ಎನ್.ಹೆಗ್ಡೆ…
ಮೈಸೂರು: ಎರಡು ದಿನಗಳ ಹಿಂದೆ ಮೈಸೂರಿನ ಅಶೋಕ ಪುರಂ ರೈಲ್ವೆ ವರ್ಕ್ ಶಾಪ್ ಬಳಿ ಇರುವ ಮರದ ಕೊಂಬೆ ಮೇಲೊಂದು…