ಮೈಸೂರು

ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹರಿಸಲು ನ.30ಕ್ಕೆ ಪಾಲಿಕೆ ಅದಾಲತ್

ನ.14ರಿಂದ ೧೯ ರವರೆಗೆ ಸಲ್ಲಿಸಿದ ಅರ್ಜಿಗಳಿಗೆ ಡಿ.27ರೊಳಗೆ ಇತ್ಯರ್ಥ

ಮೈಸೂರು: ಮಹಾನಗರ ಪಾಲಿಕೆಯಿಂದ ದೊರೆಯುವ ನಾಗರಿಕ ಸನ್ನದುಗಳು, ನಿವೇಶನ,ಮನೆ ಖಾತೆ ವರ್ಗಾವಣೆ, ಸೇವಾ ಸೌಲಭ್ಯಗಳಿಗೆ ಸಂಬಂಧಪಟ್ಟಂತೆ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳು, ಅವುಗಳ ಸಂಬಂಧಿಸಿದ ದೂರುಗಳ ಶೀಘ್ರ ಪರಿಹಾರಕ್ಕೆ ಮತ್ತು ಆಡಳಿತದಲ್ಲಿ ಸುಧಾರಣೆ, ಪಾರದರ್ಶಕತೆ ಆಡಳಿತವನ್ನು ತರಲು ನಗರಪಾಲಿಕೆ ಅದಾಲತ್‌ನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಾಪೌರ ಶಿವಕುಮಾರ್ ತಿಳಿಸಿದರು. ನಗರಪಾಲಿಕೆ ಹಳೆಯ ಕೌನ್ಸಿಲ್ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ. 14ರಿಂದ 19ರವರೆಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆಯಬೇಕು. ನ. 27ರೊಳಗೆ ಸಮಸ್ಯೆ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು. ಇಲ್ಲಿ ಬಗೆಹರಿಯದ ಸಮಸ್ಯೆಯನ್ನು ನ.30 ರಂದು ಪಾಲಿಕೆ ಮುಖ್ಯ ಕಚೇರಿಯಲ್ಲಿ ನಡೆಯುವ ಅದಾಲತ್‌ನಲ್ಲಿ ಪರಿಹರಿಸಲಾಗುವುದು ಎಂದು ಹೇಳಿದರು. ಪಾಲಿಕೆ ಅದಾಲತ್‌ನಲ್ಲಿ ಹೊಸದಾಗಿ ವಾಸಕ್ಕೆ ನಿವೇಶನ ಅಥವಾ ಮನೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಈ ಸಂಬಂಧ ಆಶ್ರಯ ಯೋಜನೆಯಡಿ ಅಧಿಕೃತ ಪ್ರಕಟಣೆ ಹೊರಡಿಸಿ ಅರ್ಜಿಗಳನ್ನು ಕರೆದಾಗ ಮಾತ್ರ ಅರ್ಜಿ ಸಲ್ಲಿಸಿಕೊಳ್ಳಬೇಕಾಗಿರುತ್ತದೆ. ಪಾಲಿಕೆ ಆದಾಲತ್ ಕಾರ್ಯಕ್ರಮದಲ್ಲಿ ಈಗಾಗಲೇ ವಲಯ ಕಚೇರಿಗಳಲ್ಲಿ ಅಥವಾ ಪಾಲಿಕೆಯ ಮುಖ್ಯ ಕಚೇರಿಯಲ್ಲಿ ಯಾವುದೇ ನಾಗರೀಕ ಸನ್ನದುಗಳನ್ನು ಅಥವಾ ಸಾರ್ವಜನಿಕ ಸೇವಾ ಸೌಲಭ್ಯಗಳನ್ನು ಕೋರಿ ಈ ಹಿಂದೆಯೇ, ಅರ್ಜಿದಾರರು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿದ್ದು, ಅನಗತ್ಯ ವಿಳಂಬ ಮಾಡಿದ್ದಲ್ಲಿ ಅಥವಾ ಹೊಸ ಸಾರ್ವಜನಿಕ ಸಮಸ್ಯೆಗಳು ಮತ್ತು ದೂರುಗಳೇನಾದರೂ ಇದ್ದಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಎಂದು ಹೇಳಿದರು.

ಅರ್ಜಿ ಸಲ್ಲಿಸಿರುವ ಪ್ರಕರಣಗಳು: ನಿವೇಶನ, ಮನೆ ಖಾತಾ ವರ್ಗಾವಣೆ  ನೋಂದಣಿ ಪ್ರಕರಣಗಳು. ಮನೆ ನಿವೇಶನ ಕಂದಾಯ ನಿಗಧಿಗೆ ಅರ್ಜಿ ಸಲ್ಲಿಸಿರುವ ಪ್ರಕರಣಗಳು, ಆಶ್ರಯ ಯೋಜನೆಯಡಿ (ಚಾಮರಾಜ ನರಸಿಂಹರಾಜ, ಕೃಷ್ಣರಾಜ ಕ್ಷೇತ್ರ) ಈಗಾಗಲೇ ಮನೆ ಹಾಗೂ ನಿವೇಶನ ಮಂಜೂರಾಗಿದ್ದು ಸ್ವಾಧೀನ ಪತ್ರ, ಹಕ್ಕು ಪತ್ರ, ಹಕ್ಕು ಖುಲಾಸೆ ಪತ್ರ, ಖಾತೆ ನೋಂದಣಿ, ವರ್ಗಾವಣೆ ಕೋರಿ ಸಲ್ಲಿಸಿರುವ ಪ್ರಕರಣಗಳು. ಕಟ್ಟಡ ನಿರ್ಮಾಣ ನಕ್ಷೆ ಕೋರಿ, ಕಟ್ಟಡ ಪೂರ್ಣಗೊಂಡ ಪ್ರಮಾಣ ಪತ್ರ ಕೋರಿ (ಸಿ.ಆರ್ ) ವಾಣಿಜ್ಯ ಪರವಾನಗಿ ಕೋರಿ, ಜಾಹಿರಾತು ಪ್ರಕಟಣೆ ಫಲಕ ಅರ್ಜಿ, ಜನನ ಮತ್ತು ಮರಣ ಧೃಡೀಕರಣ ಕೋರಿ ಅರ್ಜಿ ಸಲ್ಲಿಸಬೇಕು ಎಂದು ವಿವರಿಸಿದರು. ಅರ್ಜಿ ಸ್ವೀಕಾರಕ್ಕೆ ಪಾಲಿಕೆ ಕಚೇರಿಯಲ್ಲಿ ಐದು ಕೌಂಟರ್‌ಗಳನ್ನು ತೆರೆಯಲಾಗುವುದು. ಅರ್ಜಿ ಸಲ್ಲಿಕೆ ಸಂಬಂಧ ಹೆಚ್ಚಿನ ಮಾಹಿತಿಗೆ ಕಂಟ್ರೋಲ್ ರೂಂ ಮೊ.ಸಂ 944984196. ಸಂಪರ್ಕಿಸುವಂತೆ ತಿಳಿಸಿದರು. ಉಪ ಮಹಾಪೌರರಾದ ಡಾ.ಜಿ.ರೂಪಾ, ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತರೆಡ್ಡಿ ,ಹೆಚ್ಚುವರಿ ಆಯುಕ್ತರಾದ ಎಂ.ಕೆ.ಸವಿತಾ, ಸೋಮಶೇಖರ್ ಜಿಗಣಿ, ಅಧೀಕ್ಷಕ ಅಭಿಯಂತರ ಮಹೇಶ್ ಮುಂತಾದವರು ಹಾಜರಿದ್ದರು.

ಶೀಘ್ರ ಗುಂಡಿ ಮುಚ್ಚುತ್ತೇವೆ: ಶಿವಕುಮಾರ್

ಮೈಸೂರು: ನಗರ ಪ್ರದೇಶ ವ್ಯಾಪ್ತಿಯಲ್ಲಿ ನ.25ರೊಳಗೆ ಗುಂಡಿ ಮುಚ್ಚುವ ಗುರಿ ಹೊಂದಲಾಗಿದ್ದು, ನಿರಂತರವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಿಸಲು ಸಾಧ್ಯವಾಗಲಿಲ್ಲ. ನಾಳೆಯಿಂದಲೇ ಗುಂಡಿ ಮುಚ್ಚುವ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ಶಿವಕುಮಾರ್ ತಿಳಿಸಿದರು. ಪಾಲಿಕೆ ಕಚೇರಿ ಹಿಂಭಾಗದ ರಸ್ತೆ ಸೇರಿದಂತೆ ನಗರದ ಮುಖ್ಯರಸ್ತೆಗಳನ್ನು ಗುಂಡಿ ಮುಚ್ಚುತ್ತೇವೆ. ಆಧ್ಯತೆ ಮೇರೆಗೆ ಈ ಕೆಲಸ ಪ್ರಾರಂಭಿಸಿ ಶೀಘ್ರ ಪೂರ್ಣಗೊಳಿಸುತ್ತೇವೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪಾರಂಪರಿಕ ಕಟ್ಟಡಗಳಲ್ಲಿನ ಗೆಜ್ಜಲು ಮತ್ತು ಹೆಗ್ಗಣಗಳ ನಿಯಂತ್ರಣಕ್ಕೆ ಕ್ರಮವಹಿಸಲಾಗಿದೆ. ಶೀಘ್ರ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು. ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಕುರಿತಂತೆ ತಜ್ಞರೊಂದಿಗಿನ ಸಭೆಯ ಬಳಿಕ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಗಿದೆ.ಇಂಜಿನಿಯರ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೈಸೂರಿನ ಜನಪ್ರತಿನಿಧಿಗಳ ಸಹಕಾರದೊಂದಿಗೆ ಪ್ರಸ್ತಾವನೆ ಸಿದ್ಧಪಡಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು. ಗ್ಯಾಸ್‌ಪೈಪ್ ಲೈನ್ ವಿಚಾರವಾಗಿ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು, ಈಗಾಗಲೇ ಮೂರು ವಾರ್ಡ್‌ಗಳಲ್ಲಿ ಗ್ಯಾಸ್‌ಪೈಪ್ ಲೈನ್ ಅಳವಡಿಕೆ ಕಾರ್ಯ ಮುಗಿದಿದೆ. ಮೊದಲ ಹಂತದಲ್ಲಿ ಪಾಲಿಕೆಯಿಂದ 50 ಕಿ.ಮೀ. ಗ್ಯಾಸ್‌ಪೈಪ್ ಲೈನ್ ಅಳವಡಿಕೆಗೆ ಅನುಮತಿ ಪಡೆಯಲಾಗಿತ್ತು.45 ಕಿ.ಮೀ. ಪೂರ್ಣಗೊಂಡಿದೆ. ಎರಡನೇ ಹಂತದ ಕಾಮಗಾರಿಗೆ ಅರ್ಜಿ ಸಲ್ಲಿಸಿ ಶುಲ್ಕ ಕಟ್ಟಿದರೆ ಅನುಮತಿ ನೀಡುತ್ತೇವೆ ಎಂದು ಹೇಳಿದರು.

 

ನಗರದ ಟಿ.ಕೆ.ಬಡಾವಣೆಯಲ್ಲಿನ ಐಬಿ ನಿವೃತ್ತ ಅಧಿಕಾರಿ ಆರ್.ಎನ್.ಕುಲಕರ್ಣಿ ಮತ್ತು ಮಾದಪ್ಪ ಮನೆಗಳ ನಡುವೆ ಸೆಟ್ ಬ್ಯಾಕ್ ಜಾಗ ಬಿಡದ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಮಾದಪ್ಪ ಅವರಿಗೆ ನ. 2ರಂದು ಅಂತಿಮ ನೋಟೀಸ್ ನೀಡಲಾಗಿತ್ತು. ನೋಟೀಸ್‌ಗೆ ಉತ್ತರಿಸಿಲು 10 ದಿನಗಳ ಸಮಯವಿತ್ತು. ನಿಯಮದ ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಹತ್ತು ದಿನಗಳೊಳಗೆ ಉತ್ತರಿಸುವ ಜತೆಗೆ ಕಾನೂನುಬಾಹಿರವಾಗಿ ಕಟ್ಟಿರುವುದನ್ನು ನೆಲಸಮಗೊಳಿಸಬೇಕು. ಇಲ್ಲದಿದ್ದರೆ ಪಾಲಿಕೆ ವತಿಯಿಂದ ಕಾರ್ಯಾಚರಣೆ ನಡೆಸುತ್ತೇವೆ. ಇನ್ನು ಎರಡು ದಿನಗಳ ಕಾಲ ಸಮಯ ಇರುವುದರಿಂದ ಕಾದು ನೋಡುತ್ತೇವೆ

-ಜಿ.ಲಕ್ಷ್ಮೀಕಾಂತರೆಡ್ಡಿ, ಆಯುಕ್ತ, ನಗರಪಾಲಿಕೆ

ಮೈಸೂರು ನಗರಪಾಲಿಕೆ ಹಳೆಯ ಕೌನ್ಸಿಲ್ ಸಭಾಂಗಣದಲ್ಲಿ ಮಹಾಪೌರ ಶಿವಕುಮಾರ್ ಬುಧವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಉಪ ಮಹಾಪೌರರಾದ ಡಾ.ಜಿ.ರೂಪಾ, ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತರೆಡ್ಡಿ ,ಹೆಚ್ಚುವರಿ ಆಯುಕ್ತರಾದ ಎಂ.ಕೆ.ಸವಿತಾ, ಸೋಮಶೇಖರ್ ಜಿಗಣಿ, ಅಧೀಕ್ಷಕ ಅಭಿಯಂತರ ಮಹೇಶ್ ಹಾಜರಿದ್ದರು

andolana

Recent Posts

ಹನೂರು: ಅಲಗುಮೂಲೆ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆದ ಕೊಂಡೋತ್ಸವ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಅಲಗುಮೂಲೆ ಗ್ರಾಮದಲ್ಲಿ 3 ವರ್ಷಕ್ಕೊಮ್ಮೆ ನಡೆಯುವ ಶ್ರೀ ಬಸವೇಶ್ವರ…

10 hours ago

ನಂಜನಗೂಡು: 6.2 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ನಂಜನಗೂಡು: ಗ್ಯಾರಂಟಿ ಯೋಜನೆಗಳ ಜೊತೆ ಅಭಿವೃದ್ಧಿ ಕೆಲಸಗಳಿಗೂ ಆದ್ಯತೆ ನೀಡಲಾಗುತ್ತಿದ್ದು, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು…

10 hours ago

ಎಸ್‌ಎಸ್‌ಎಲ್‌ಸಿ 2ನೇ ಪರೀಕ್ಷೆಗೆ ಸರ್ಕಾರದಿಂದಲೇ ಶುಲ್ಕ ಪಾವತಿ: ಸಚಿವ ಮಧು ಬಂಗಾರಪ್ಪ

ಬೆಂಗಳೂರು: ಪ್ರಸಕ್ತ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾಗಿರುವ ಎಲ್ಲಾ ವಿದ್ಯಾರ್ಥಿಗಳನ್ನು ಮುಂಬರುವ ಪರೀಕ್ಷೆ-2ಕ್ಕೆ ಕಡ್ಡಾಯವಾಗಿ ನೋಂದಾಯಿಸಿ, ಅವರನ್ನು ಶೈಕ್ಷಣಿಕವಾಗಿ ಸಜ್ಜುಗೊಳಿಸಲು ಅಗತ್ಯ…

11 hours ago

ಮೇ.15ಕ್ಕೆ ಡಿ.ಕೆ.ಶಿವಕುಮಾರ್‌ ಸಿಎಂ ಆಗೋದು ಫಿಕ್ಸ್‌: ಇಕ್ಬಾಲ್‌ ಹುಸೇನ್‌

ರಾಮನಗರ: ಮೇ.15ಕ್ಕೆ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿ ಆಗುವುದು ಫಿಕ್ಸ್‌ ಎಂದು ಶಾಸಕ ಇಕ್ಬಾಲ್‌ ಹುಸೇನ್‌ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು,…

12 hours ago

ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ಸಹೋದರ ನಿಧನ: ಸಚಿವ ಚಲುವರಾಯಸ್ವಾಮಿ ಸಂತಾಪ

ಮಂಡ್ಯ: ಮಳವಳ್ಳಿ ಕ್ಷೇತ್ರದ ಶಾಸಕರಾದ ಪಿ.ಎಂ. ನರೇಂದ್ರಸ್ವಾಮಿ ಅವರ ಸಹೋದರ ಪಿ.ಎಂ. ಪರಶಿವಮೂರ್ತಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಪರಶಿವಮೂರ್ತಿ ಅವರ…

12 hours ago

ದಾವೂದ್‌ ಆಪ್ತ, ಡ್ರಗ್ಸ್‌ ಕಿಂಗ್‌ಪಿನ್‌ ಸಲೀಂ ಡೋಲಾ ಟರ್ಕಿಯಿಂದ ಭಾರತಕ್ಕೆ ಗಡಿಪಾರು

ನವದೆಹಲಿ: ಭಾರತದ ಮೋಸ್ಟ್ ವಾಂಟೆಡ್ ಭೂಗತಪಾತಕಿ ಹಾಗೂ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ರೂವಾರಿ ದಾವುದ್ ಇಬ್ರಾಹಿಂನ ಆಪ್ತ…

12 hours ago