ಮೈಸೂರು

ಸಂವಾದಕ್ಕೆ ಗೈರು: ಡಿಡಿಪಿಐ, ಬಿಇಒಗೆ ನೋಟಿಸ್ ಜಾರಿಗೆ ಸೂಚನೆ

ಪೌರಕಾರ್ಮಿಕರ ಕುಟುಂಬಕ್ಕೆ ಮನೆ ನಿರ್ಮಿಸಲು ಭೂಮಿ ಹಸ್ತಾಂತರಿಸದ ಮುಡಾ ವಿರುದ್ಧ ಕೋಟೆ ಎಂ.ಶಿವಣ್ಣ ಗರಂ

ಮೈಸೂರು: ಪೌರಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವುದು ಮತ್ತಷ್ಟು ಉನ್ನತೀಕರಿಸುವ ಸಂಬಂಧಿಸಿದಂತೆ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಏರ್ಪಡಿಸಿದ್ದ ಸಂವಾದಕ್ಕೆ ಭಾಗವಹಿಸದೆ ದೂರ ಉಳಿದ ಡಿಡಿಪಿಐ, ಬಿಇಒಗೆ ನೋಟಿಸ್ ಜಾರಿಗೊಳಿಸಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಗಂಗೋತ್ರಿ ಬಡಾವಣೆಯ ಕುದುರೆ ಮಾಳದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಗದಿಂದ ಏರ್ಪಡಿಸಿದ್ದ ಸಂವಾದದಲ್ಲಿ ಸಮಾಜ ಕಲ್ಯಾಣ ಇಲಾಖೆ, ನಗರಪಾಲಿಕೆ, ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಪಾಲ್ಗೊಂಡಿದ್ದರೂ ಪ್ರಾಥಮಿಕ ಶಿಕ್ಷಣ ಇಲಾಖೆ ಅಧಿಕಾರಿಗಳೇ ಗೈರಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ ನಾನೇನೂ ಕಾಟಾಚಾರಕ್ಕೆ ಶಾಲೆ ನೋಡಿಕೊಂಡು ಹೋಗಲು ಬಂದಿಲ್ಲ. ಸಂವಾದ ಎಂದರೆ ಏನು ಅಂದುಕೊಂಡಿದ್ದಾರೆ. ವಿಷಯ ತಿಳಿದಿದ್ದರೂ ಏಕೆ ಬಂದಿಲ್ಲ ಎಂದು ಪ್ರಶ್ನಿಸಿದರು.

ಈ ವೇಳೆ ನಗರಪಾಲಿಕೆ ಹೆಚ್ಚುವರಿ ಆಯುಕ್ತರಾದ ಎಂ.ಜಿ.ರೂಪಾ ಅವರು ದೂರವಾಣಿ ಮೂಲಕ ಡಿಡಿಪಿಐ ಬಿ.ಎಸ್.ರಾಮಚಂದ್ರರಾಜೇ ಅರಸ್ ಅವರನ್ನು ಸಂಪರ್ಕಿಸಿದಾಗ ಬಿಇಒ ಅವರನ್ನು ಕಳುಹಿಸುವೆ ಎಂದರು. ಇದರಿಂದ ಸಿಟ್ಟಾದ ಕೋಟೆ ಎಂ.ಶಿವಣ್ಣರವರು ಪೌರಕಾರ್ಮಿಕರ ಮಕ್ಕಳು ಓದುವ ಶಾಲೆ ಅಂದರೆ ಇಷ್ಟೊಂದು ತಾತ್ಸಾರವೇ? ಸಭೆಗೆ ಬರುವುದೇ ಬೇಡ. ಡಿಡಿಪಿಐ, ಬಿಇಒ ಅವರಿಗೆ ನೋಟಿಸ್ ಜಾರಿಗೊಳಿಸಿ ಅವರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಲು ಕಾರ್ಯದರ್ಶಿಗೆ ಸೂಚಿಸಿದರು.

ಶಿಥಿಲಗೊಂಡಿರುವ 8ಕೊಠಡಿಗಳು: ಪೌರಕಾರ್ಮಿಕರ ಮಕ್ಕಳೇ ಓದುವ ಈ ಶಾಲೆಯಲ್ಲಿ 8 ಕೊಠಡಿಗಳಿದ್ದು, ನಿರ್ವಹಣೆ ಕಾಣದೆ ಮಳೆ ಬಂದಾಗ ಸೋರುತ್ತಿವೆ. ಹಲವು ಬಾರಿ ಎಸ್‌ಡಿಎಂಸಿ ಅಧ್ಯಕ್ಷರು, ಶಾಲೆ ಮುಖ್ಯೋಪಾಧ್ಯಾಯರು ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ. ಹಿರಿಯ ಅಧಿಕಾರಿಗಳು ಬಂದು ಕಟ್ಟಡ ಪರಿಶೀಲಿಸಿ ಹೋಗಿದ್ದಾರೆಯೇ ಹೊರತು ದುರಸ್ತಿಯಾಗಿಲ್ಲ ಎಂದು ಕಾಲೋನಿಯ ಮುಖಂಡರು ಅಧ್ಯಕ್ಷರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯೋ ಪಾಧ್ಯಾಯಿನಿ ಜಯಲಕ್ಷ್ಮೀ, ಕಟ್ಟಡಗಳು ದುರಸ್ತಿಯಲ್ಲಿರುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಎರಡು ಬಾರಿ ದುರಸ್ತಿಗೆ ಶಾಲೆಯನ್ನು ಸೇರಿಸಲಾಗಿದೆ ಎನ್ನುವ ಮಾಹಿತಿ ಕೊಡಲಾಗಿತ್ತು. ಆದರೆ, ಈವರೆಗೆ ಹಣ ಬಂದಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯರಾದ ಸಿ.ವೇದಾವತಿ ಅವರು ಶಾಲಾ ಕೊಠಡಿಗಳ ದುರಸ್ತಿ ಮಾಡಿಸುವಂತೆ ನಾನೇ ಮನವಿ ಮಾಡಿದ್ದೇನೆ. ಪೌರಕಾರ್ಮಿಕರ ಮಕ್ಕಳು ಓದುವ ಶಾಲೆ ಅಂತ ಗೊತ್ತಿದ್ದರೂ ನಿರ್ಲಕ್ಷ್ಯವಹಿಸಲಾಗಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದರು. ಶಾಲೆಯಲ್ಲಿ 32 ಮಕ್ಕಳಿದ್ದು, ನಾಲ್ಕು ಶಿಕ್ಷಕರು ಇದ್ದಾರೆ. ಕೊಠಡಿಗಳ ದುರಸ್ತಿ, ಶೌಚಾಲಯದ ಸಮಸ್ಯೆ ಹಲವಾರು ಕಾರಣಗಳಿಂದ ಇಲ್ಲಿನ ಮಕ್ಕಳನ್ನು ಗಂಗೋತ್ರಿ ಮತ್ತು ಸರಸ್ವತಿಪುರಂ, ಕುವೆಂಪು ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಕಾಲೋನಿ ಶಾಲೆಗೆ ಮೂಲ ಸೌಲಭ್ಯವಿದ್ದರೆ ದೂರಕ್ಕೆ ಹೋಗುವುದು ತಪ್ಪಲಿದೆ ಎಂದು ಕಾಲೋನಿ ಮುಖಂಡರೊಬ್ಬರು ವಿವರಿಸಿದರು.

ಸಂವಾದದಲ್ಲಿ ಪಾಲ್ಗೊಂಡಿದ್ದ ವಿವಿಧ ತರಗತಿಯ ಮಕ್ಕಳು ವೈದ್ಯರಾಗುವುದು, ಪೊಲೀಸರಾಗುವ ಕುರಿತ ಮುಂದಿನ ಕನಸಗಳನ್ನು ಬಿಚ್ಚಿಟ್ಟರು.

ಕಾಲೋನಿಗೆ ಭೇಟಿ: ಶಾಲಾ ಮಕ್ಕಳ ಸಂವಾದದ ಬಳಿಕ ಕುದುರೆಮಾಳ ಕಾಲೋನಿಗೆ ತೆರಳಿ ವಾಸ್ತವ ಸ್ಥಿತಿ ಪರಿಶೀಲಿಸಿದರು. ವಲಯ ಸಹಾಯಕ ಆಯುಕ್ತರಾದ ಚಂದ್ರಮ್ಮ, ಆಯೋಗದ ಕಾರ್ಯದರ್ಶಿ ಚಂದ್ರಕಲಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಮಾಲತಿ, ಸ್ಲಂ ಬೋರ್ಡ್ ಎಇಇ  ಬಿ.ಎಸ್.ರಾಮಚಂದ್ರ ಇನ್ನಿತರರು ಹಾಜರಿದ್ದರು. 

 

ಭೂಮಿ ಹಸ್ತಾಂತರ ಮಾಡದಿದ್ದಕ್ಕೆ ಕಿಡಿ

ಮೈಸೂರು: ಕಾಲೋನಿಯ ನಿವಾಸಿಗಳಿಗೆ ಗುಂಪು ಮನೆ ಕಟ್ಟಲು ಮುಡಾ ವ್ಯಾಪ್ತಿಯಲ್ಲಿ 1.6 ಎಕರೆ ಜಮೀನು ಬಿಟ್ಟುಕೊಡಲು ಪ್ರಾಧಿಕಾರದ ಸಭೆಯಲ್ಲಿ ಅನುಮೋದನೆಯಾಗಿದ್ದರೂ ಈವರೆಗೆ ಹಸ್ತಾಂತರ ಮಾಡದಿರುವ ಬಗ್ಗೆ ಮುಡಾ ಅಧಿಕಾರಿಗಳ ಕಾರ್ಯವೈಖರಿಗೆ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ ಅಸಮಾಧಾನ ವ್ಯಕ್ತಪಡಿಸಿದರು.

2019ರಲ್ಲಿ ಹಸ್ತಾಂತರ ಮಾಡಲು ಒಪ್ಪಿಗೆ ಕೊಡಲಾಗಿದೆ. ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಹಣ ಕಟ್ಟಲು ರೆಡಿಯಾಗಿದ್ದೇವೆ. ಮುಡಾದಿಂದ ಒಪ್ಪಿಗೆ ಪತ್ರ ಸಿಗಬೇಕಿದೆ ಎಂದು ಇಇ ಹರೀಶ್ ಹೇಳಿದರು. ಇದಕ್ಕೆ ಸ್ಪಂದಿಸಿದ ಕೋಟೆ ಎಂ.ಶಿವಣ್ಣರವರು, ಮುಡಾ ಅಧಿಕಾರಿಗಳಿಗೆ ನೋಟಿಸ್ ಜಾರಿ ವಿವರಣೆ ಪಡೆಯಬೇಕು. ಏನಾದರೂ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಸರ್ಕಾರದ ಗಮನಕ್ಕೆ ತಂದು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ಪೌರಕಾರ್ಮಿಕರು ವಾಸವಿರುವ ಕುದುರೆಮಾಳದಲ್ಲಿ ಶಾಲೆಯ ಸ್ಥಿತಿ ಮತ್ತು ಮಕ್ಕಳ ಸಮಸ್ಯೆ ಆಲಿಸಲು ಶಾಲೆಗೆ ಭೇಟಿ ನೀಡಿದ್ದು, ಈ ವೇಳೆ ಕಟ್ಟಡ ಶಿಥಿಲವಾಗಿರುವುದು ಹಾಗೂ ಮೂಲ ಸೌಲಭ್ಯದ ಕೊರತೆ ಇರುವುದು ಕಂಡುಬಂದಿದೆ. ಈ ಬಗ್ಗೆ ಸೂಚನೆ ನೀಡಲು ಸಂಬಂಧಪಟ್ಟ ಅಧಿಕಾರಿಗಳು ಇಲ್ಲದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು.

-ಎಂ.ಶಿವಣ್ಣ, ಅಧ್ಯಕ್ಷರು, ರಾಜ್ಯ ಸಫಾಯಿ ಕರ್ಮಚಾರಿ ಆಯೋಗ.

andolana

Recent Posts

ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕುಡಿಯುವ ನೀರಿಗೆ ಅಭಾವ

ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕಪಿಲಾ ನದಿ ಪಕ್ಕದಲ್ಲೇ ಇದ್ದರೂ ಜನತೆಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ಹಳ್ಳಿಗಳಿಗೆ ನದಿ…

51 mins ago

ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಭಾರೀ ಮಳೆ

ಬೆಂಗಳೂರು: ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪೂರ್ವವ ಮಧ್ಯ…

1 hour ago

ಓದುಗರ ಪತ್ರ: ಸರಗಳ್ಳತನಕ್ಕೆ ಕಡಿವಾಣ ಹಾಕಿ

ಇತ್ತೀಚೆಗೆ ಮೈಸೂರಿನಲ್ಲಿ ಸರಗಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಮಹಿಳೆಯರು ಒಂಟಿಯಾಗಿ ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ. ಎರಡು ದಿನಗಳ ಹಿಂದಷ್ಟೇ ನಮ್ಮ ಸಂಬಂಧಿಕರೊಬ್ಬರು…

1 hour ago

ಓದುಗರ ಪತ್ರ: ಬಿಗ್‌ಬಾಸ್ ಕಾರ್ಯಕ್ರಮ ನಿಲ್ಲಲಿ

ಕನ್ನಡದ ಖಾಸಗಿ ಚಾನೆಲ್‌ವೊಂದರಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸೀಸನ್-11 ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದು, ಸ್ಪರ್ಧಿಗಳು ನಿತ್ಯ ಜಗಳವಾಡುತ್ತಿರುವುದರಿಂದ ಕಾರ್ಯಕ್ರಮ ವೀಕ್ಷಿಸುವವರಿಗೆ ಕಿರಿಕಿರಿಯಾಗುತ್ತಿದೆ. ವಿವಿಧ…

1 hour ago

ಓದುಗರ ಪತ್ರ: ಪೊಲೀಸರಿಗೆ ಧನ್ಯವಾದಗಳು

ನಾಡಹಬ್ಬ ದಸರಾ ಮಹೋತ್ಸವದಲ್ಲಿ ಈ ಬಾರಿ ಜನ ಸಾಗರವೇ ಹರಿದು ಬಂದಿತ್ತು. ದಸರಾ ಅಂಗವಾಗಿ ಆಯೋಜಿಸಿದ್ದ ಯುವ ಸಂಭ್ರಮ, ಯುವ…

1 hour ago

ಓದುಗರ ಪತ್ರ: ಮುಷ್ಕರ ಮುಂದುವರಿದಿದೆ

ಸರ್ಕಾರವೇ ನಮ್ಮ ದೇವರಾಗಿದೆ ಮೇಲಾಧಿಕಾರಿಗಳ ಮೇಲೆ ಗೌರವವಿದೆ ಜನರ ಸಮಸ್ಯೆಗಳ ಅರಿವಿದೆ ಅವರಿಗಾದ ಅಡಚಣೆಗೆ ವಿಷಾದವಿದೆ ನಮಗೂ ಬದುಕಿದೆ. ನಮ್ಮದೂ…

1 hour ago