ಜಿಲ್ಲೆಗಳು

ನಗರಪಾಲಿಕೆ: ಬಿಜೆಪಿ- ಜಾ.ದಳ ಹಗ್ಗಜಗ್ಗಾಟ : ಅಧ್ಯಕ್ಷರಿಲ್ಲದ ಸ್ಥಾಯಿ ಸಮಿತಿಗಳು

ಉಪ ಮಹಾಪೌರ ಪಟ್ಟಕಳೆದುಕೊಂಡ ಜಾ.ದಳದಿಂದ ನಾಲ್ಕು ಸ್ಥಾನಗಳಿಗೂ ಪಟ್ಟು

ವರದಿ: ಕೆ.ಬಿ.ರಮೇಶನಾಯಕ

ಮೈಸೂರು: ಕಾಂಗ್ರೆಸನ್ನು ಅಧಿಕಾರದಿಂದ ದೂರವಿಡಲು ಆಂತರಿಕವಾಗಿ ಅಧಿಕಾರದ ಹೊಂದಾಣಿಕೆ ಮಾಡಿಕೊಂಡಿದ್ದ ಬಿಜೆಪಿ-ಜಾ.ದಳವು ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳ ಹಂಚಿಕೆಯಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗದೆ ಪರಸ್ಪರ ಹಗ್ಗ-ಜಗ್ಗಾಟದಲ್ಲಿ ತೊಡಗಿರುವುದರಿಂದ ಚುನಾವಣೆಯು ನನೆಗುದಿಗೆ ಬಿದ್ದಿದೆ. ಮಹಾಪೌರ ಹಾಗೂ ಉಪ ಮಹಾಪೌರರ ಚುನಾವಣೆ ನಡೆದು ಐವತ್ತು ದಿನಗಳು ಕಳೆಯುತ್ತಿದ್ದರೂ ನಾಲ್ಕು ಸ್ಥಾಯಿ ಸಮಿತಿಗಳ ಚುನಾವಣೆ ನಡೆಯದಿರುವುದು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಎರಡೂ ಪಕ್ಷಗಳ ಸದಸ್ಯರಲ್ಲಿ ಅಸಮಾಧಾನ ಮೂಡಿಸಿದೆ.

ಇದರಿಂದಾಗಿ ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆ ಎರಡೂ ಪಕ್ಷಗಳ ನಾಯಕರು ಒಟ್ಟಿಗೆ ಕುಳಿತು ಅಧಿಕಾರ ಹಂಚಿಕೊಳ್ಳುವ ಕುರಿತು ಸಮಾಲೋಚನೆ ನಡೆಸಬೇಕೆಂಬ ಒತ್ತಡವು ಉಭಯ ಪಕ್ಷಗಳ ಸದಸ್ಯರಲ್ಲಿ ಜೋರಾಗಿದೆ. ಸೆ.೬ ರಂದು ನಡೆದ ಮೈಸೂರು ಮಹಾನಗರಪಾಲಿಕೆ ಮಹಾಪೌರ ಹಾಗೂ ಉಪ ಮಹಾಪೌರರ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಅಧಿಕಾರದಿಂದ ದೂರವಿಡುವ ಜತೆಗೆ ಮಹಾಪೌರ ಸ್ಥಾನವನ್ನು ಬಿಟ್ಟುಕೊಡಲು ನಿರಾಕರಿಸಿ ಕೊನೆಯ ಕ್ಷಣದಲ್ಲಿ ಜಾ.ದಳವು ಬಿಜೆಪಿಯೊಂದಿಗೆ ಕೊಡುಕೊಳ್ಳುವಿಕೆಯ ಜಾಣ ನಡೆಯನ್ನು ಅನುಸರಿಸಿತ್ತು. ಉಪ ಮಹಾಪೌರ ಚುನಾವಣೆಯಲ್ಲಿ ಬಿಜೆಪಿ ಸದಸ್ಯರು ಜಾ.ದಳ ಅಭ್ಯರ್ಥಿ ರೇಷ್ಮಾಬಾನು ಪರ ಕೈಎತ್ತಬೇಕಾಗಿತ್ತಾದರೂ ಅಭ್ಯರ್ಥಿ ನಾಮಪತ್ರವೇ ತಿರಸ್ಕೃತಗೊಂಡಿದ್ದರಿಂದ ಉಪ ಮಹಾಪೌರ ಸ್ಥಾನವು ಬಿಜೆಪಿ ಪಾಲಾಗುವಂತಾಯಿತು. ಇದರಿಂದಾಗಿ ತೀವ್ರ ನಿರಾಶೆ, ಮುಜುಗರ ಅನುಭವಿಸಿದ್ದ ಜಾ.ದಳದ ಮುಖಂಡರು ಸ್ಥಾಯಿ ಸಮಿತಿ ಸ್ಥಾನಕ್ಕೆ ಬೇಡಿಕೆ ಇಟ್ಟು, ಉಪಮಹಾಪೌರರ ಆಯ್ಕೆಗೆ ಬಿಜೆಪಿಗೆ ಬೆಂಬಲ ನೀಡಿದ್ದರು. ಹೀಗಾಗಿಯೇ, ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಜಾ.ದಳದ ಮುಖಂಡರು ಪಟ್ಟು ಹಾಕಿದ್ದರೆ, ಬಿಜೆಪಿ ಎರಡು ಸ್ಥಾನಗಳನ್ನು ಮಾತ್ರ ಕೊಡುವುದಾಗಿ ಪ್ರತಿಪಟ್ಟು ಹಿಡಿದು ಕುಳಿತಿರುವ ಕಾರಣದಿಂದಾಗಿ ಚುನಾವಣೆ ನನೆಗುದಿಗೆ ಬೀಳಲು ಕಾರಣವಾಗಿದೆ.

ಹಣಕಾಸು ಸ್ಥಾಯಿ ಸಮಿತಿ ಬಿಡದಿರಲು ಬಿಜೆಪಿ ನಿರ್ಧಾರ: ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ, ಲೆಕ್ಕಪತ್ರ ಸ್ಥಾಯಿ ಸಮಿತಿಗಳು ಇವೆ. ನಾಲ್ಕು ಸ್ಥಾನಗಳನ್ನೂ ಬಿಟ್ಟುಕೊಡಲು ಕೆಲವು ನಾಯಕರು ಒಲವು ತೋರಿದರೂ ಪಕ್ಷದ ಪ್ರಮುಖರು ಮಾತ್ರ ಎರಡನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಮಹಾಪೌರ, ಉಪ ಮಹಾಪೌರ ಸ್ಥಾನ ಬಿಜೆಪಿಗೆ ಇರುವ ಕಾರಣ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ, ಲೆಕ್ಕಪತ್ರ ಸ್ಥಾಯಿ ಸಮಿತಿಯನ್ನು ತನ್ನ ಬಳಿಯೇ ಇಟ್ಟುಕೊಂಡರೆ ಒಂದಿಷ್ಟು ಜನಪರವಾದ ನಿಲುವುಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎನ್ನುವ ಲೆಕ್ಕಾಚಾರ ಹೊಂದಲಾಗಿದೆ. ವಿಶೇಷವಾಗಿ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಮೇಲೆ ಎಂ.ಯು.ಸುಬ್ಬಯ್ಯ, ಮ.ವಿ.ರಾಮಪ್ರಸಾದ್ ಕಣ್ಣಿಟ್ಟಿದ್ದಾರೆ.

ದೀಪಾವಳಿ ಹಬ್ಬದ ನಂತರ ಸ್ಥಾಯಿ ಸಮಿತಿ ಚುನಾವಣೆ ನಡೆಸಲು ದಿನಾಂಕ ಪ್ರಕಟ ಮಾಡುತ್ತೇವೆ ಅಂತ ಹೇಳಿದ್ದಾರೆ. ಜಾ.ದಳಕ್ಕೆ ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳನ್ನು ಬಿಟ್ಟುಕೊಡಲು ಅವರೇ(ಬಿಜೆಪಿ) ಒಪ್ಪಿಕೊಂಡಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಂಡು ನಮಗೆ ಬಿಡುವ ವಿಶ್ವಾಸವಿದೆ.
-ಕೆ.ಟಿ.ಚೆಲುವೇಗೌಡ, ನಗರಾಧ್ಯಕ್ಷ, ಜಾ.ದಳ.

ನಗರಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳನ್ನು ಜಾ.ದಳಕ್ಕೆ ಬಿಟ್ಟುಕೊಡಬೇಕೆಂಬ ತೀರ್ಮಾನವಾಗಲಿ, ಚರ್ಚೆಯಾಗಲೀ ನಡೆದಿಲ್ಲ. ನಾಲ್ಕರಲ್ಲಿ ತಲಾ ಎರಡು ಅಧ್ಯಕ್ಷ ಸ್ಥಾನಗಳನ್ನು ಹಂಚಿಕೊಳ್ಳುವುದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಪಕ್ಷದ ವೇದಿಕೆಯಲ್ಲಿ ಈ ಬಗ್ಗೆ ಯಾವುದೇ ಚರ್ಚೆ ಮಾಡದೆ ನಿರ್ಧರಿಸಲಾಗದು. -ಟಿ.ಎಸ್.ಶ್ರೀವತ್ಸ, ನಗರಾಧ್ಯಕ್ಷ, ಬಿಜೆಪಿ.

ದಸರಾ ಮಹೋತ್ಸವ ಸೇರಿದಂತೆ ಇನ್ನಿತರ ಕಾರಣಕ್ಕಾಗಿ ಸ್ಥಾಯಿ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ. ದೀಪಾವಳಿ ಹಬ್ಬ ಮುಗಿದ ಬಳಿಕ ಆಯುಕ್ತರೊಂದಿಗೆ ಸಮಾಲೋಚಿಸಿ ದಿನಾಂಕ ಪ್ರಕಟಿಸಿ ಅಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ. -ಶಿವಕುಮಾರ್, ಮಹಾಪೌರರು.

 

 

andolana

Recent Posts

ಕುರ್ಚಿಗಾಗಿ ಜಾತಿ ಎಳೆದು ತಂದಿದ್ದಾರೆ ಎಂಬ ಎಚ್‌ಡಿಕೆ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ರಿಯಾಕ್ಷನ್‌

ಬೆಂಗಳೂರು: ಸಾಮಾಜಿಕ ದಿನದ ಆಚರಣೆಯ ಅಂಗವಾಗಿ ಪತ್ರಿಕೆಯೊಂದಕ್ಕೆ ನಾನು ಬರೆದಿದ್ದ ಲೇಖನ ರಾಜ್ಯದ ರಾಜಕೀಯ ವಲಯದಲ್ಲಿ ಬಹುಮುಖಿ ಚರ್ಚೆಗೆ ಒಳಗಾಗಿದೆ…

1 hour ago

ಹನೂರು| ಫೆ.25ರಂದು ವಾಂಗಾಳಿ ಅಮ್ಮನವರ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಚಂಗವಾಡಿ ಗ್ರಾಮದ ಭೋವಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ…

2 hours ago

ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಮತ್ತೆ ಆಸ್ಪತ್ರೆಗೆ ದಾಖಲು

ಮುಂಬೈ: ರಾಷ್ಟ್ರೀಯತಾವಾದಿ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥ ಶರದ್‌ ಪವಾಋ ಅವರನ್ನು ಇಂದು ಪುಣೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶರದ್‌ ಪವಾರ್‌…

2 hours ago

ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಶೀಘ್ರದಲ್ಲಿಯೇ ಬ್ಯಾನ್‌ ಆಗಲಿದೆ ಮೊಬೈಲ್?:‌ ಸಿಎಂ ಸಿದ್ದರಾಮಯ್ಯ ಸುಳಿವು

ಬೆಂಗಳೂರು: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಮೊಬೈಲ್‌ ಫೋನ್‌ ನಿಷೇಧ ಮಾಡುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಚಿಂತನೆ ನಡೆಸಿದೆ.…

3 hours ago

ಎಐ ಇಂಪ್ಯಾಕ್ಟ್‌ ಶೃಂಗಸಭೆ ಒಂದು ಮಹತ್ವದ ತಿರುವು: 131ನೇ ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಸಂತಸ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್‌ ಕಿ ಬಾತ್‌ನ 131ನೇ ಸಂಚಿಕೆಯಲ್ಲಿ…

3 hours ago

ಮಾಜಿ ಶಾಸಕ ಸುರೇಶ್‌ ಗೌಡ ಕಾರು ಅಪಘಾತ

ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ನಾಗಮಂಗಲದ ಜೆಡಿಎಸ್‌ ಮಾಜಿ ಶಾಸಕ ಸುರೇಶ್‌ ಗೌಡ ಕಾರು ಪಲ್ಟಿಯಾಗಿ ಅಪಘಾತ ಸಂಭವಿಸಿರುವ ಘಟನೆ…

3 hours ago