ಮೈಸೂರು: ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳಿಗೆ ಭದ್ರತೆ ಒದಗಿಸುವ ಎಂಎಸ್ಎಂಇ ಕಾಯ್ದೆ ಮೈಸೂರು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗುತ್ತಿದೆ. ಗ್ರಾಹಕರಿಂದ ವಂಚನೆಗೊಳಗಾಗಿದ್ದ 210 ಮಂದಿ ಕೈಗಾರಿಕಾ ಮಾಲೀಕರಿಗೆ ಈ ಕಾಯ್ದೆ ನ್ಯಾಯ ಒದಗಿಸಿದೆ.
ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳ ಮಾಲೀಕರು ತಾವು ಉತ್ಪಾದಿಸುವ ಸರಕುಗಳನ್ನು ಕೆಲವೊಮ್ಮೆ ಸಾಲದ ರೂಪದಲ್ಲಿ ಗ್ರಾಹಕರಿಗೆ ಮಾರಾಟ ಮಾಡುವ ಅನಿವಾರ್ಯತೆ ಇರುತ್ತದೆ. ಅಂತಹ ವೇಳೆ ಅವರು ನೀಡುವ ಉತ್ಪನ್ನಗಳ ಅಥವಾ ಸೇವೆಯ ಹಣ ವಾಪಸ್ ಬಾರದಿರುವ ಅವಕಾಶಗಳೂ ಹೆಚ್ಚಿರುತ್ತವೆ.
ಈ ಹಿಂದೆ ಇಂತಹ ಹಲವಾರು ಪ್ರಕರಣಗಳು ನಡೆದಿದ್ದರೂ ಕೈಗಾರಿಕೆಗಳ ಮಾಲೀಕರು ಏನೂ ಮಾಡದ ಸ್ಥಿತಿಯಲ್ಲಿದ್ದರು. ಹೀಗಾಗಿ ಕೇಂದ್ರ ಸರ್ಕಾರವು ಎಂಎಸ್ಎಂಇ ಕಾಯ್ದೆಯನ್ನು ಜಾರಿಗೊಳಿಸಿತು. ಈ ಮೂಲಕ ಕೈಗಾರಿಕೆಗಳ ,ಮಾಲೀಕರ ಹಣಕ್ಕೆ ಭದ್ರತೆ ನೀಡಿತ್ತು.
ಈ ಕಾಯ್ದೆ 2016ರಿಂದಲೂ ಮೈಸೂರಿನಲ್ಲಿ ಜಾರಿಯಲ್ಲಿದೆ. ಅಂದಿನಿಂದ ಇಲ್ಲಿಯವರೆಗೆ ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳ 346 ಮಂದಿ ಈ ಕಾಯ್ದೆಯನ್ನು ಬಳಸಿಕೊಂಡು ದೂರು ಸಲ್ಲಿಸಿದ್ದಾರೆ. ಅದರಲ್ಲಿ 210 ಮಂದಿ ಮಾಲೀಕರಿಗೆ ಗ್ರಾಹಕರು ಬಡ್ಡಿ ಸಮೇತ ಹಣವನ್ನು ವಾಪಸ್ ನೀಡಿದ್ದಾರೆ.
ಕಾಯ್ದೆ ಯಾರಿಗೆ: 1 ಕೋಟಿ ರೂ. ಒಳಗಿನ ಯಂತ್ರೋಪಕರಣ ಹೊಂದಿದ್ದಲ್ಲಿ ಅಂತಹ ಕೈಗಾರಿಕೆಯನ್ನು ಅತಿಸಣ್ಣ ಎಂದು 1ರಿಂದ 10 ಕೋಟಿ ರೂ. ಮೌಲ್ಯದ ಯಂತ್ರೋಪಕರಣ ಹೊಂದಿದ್ದಲ್ಲಿ ಅಂತಹ ಕೈಗಾರಿಕೆಗಳನ್ನು ಸಣ್ಣ ಕೈಗಾರಿಕೆಗಳು ಎಂದು ವರ್ಗೀಕರಿಸಲಾಗಿದೆ.
ಕೈಗಾರಿಕೆ ಆರಂಭಿಸಿರುವವರು ಕೇಂದ್ರ ಸರ್ಕಾರದ ಎಂಎಸ್ಎಂಇ ಸಚಿವಾಲಯದಲ್ಲಿ ಆನ್ಲೈನ್ ಮೂಲಕ ಉದ್ಯಮ್ ನೋಂದಣಿಯನ್ನು ಮಾಡಿಸಬೇಕು. ಇದು ಕಡ್ಡಾಯ. ಗ್ರಾಹಕನು ತಾನು ಖರೀದಿಸಿದ ಉತ್ಪನ್ನಗಳ ಹಣ ಪಾವತಿಸದಿದ್ದಲ್ಲಿ ದೂರು ನೀಡಲು ಈ ನೋಂದಣಿ ಪತ್ರ ಕಡ್ಡಾಯ..
ಪ್ರಾದೇಶಿಕ ಆಯುಕ್ತರು ದೂರು ಕೇಂದ್ರದ ಅಧ್ಯಕ್ಷರಾಗಿರುತ್ತಾರೆ. ಆಯಾ ಜಿಲ್ಲೆಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಉಳಿದಂತೆ ಕೈಗಾರಿಕೆ ಸಂಘದ ಪ್ರತಿನಿಧಿ, ಸರ್ಕಾರಿ ಅಭಿಯೋಜಕ ಹಾಗೂ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಸದಸ್ಯರಾಗಿರುತ್ತಾರೆ.
ದೂರು ಸಲ್ಲಿಸುವ ವೇಳೆ ಗ್ರಾಹಕರು ಖರೀದಿ ಮಾಡಿರುವ ವಸ್ತುಗಳು ಅಥವಾ ಸೇವೆಗಳ ವಿವರವುಳ್ಳ ರಸೀದಿ ಹಾಗೂ ಉದ್ಯಮ್ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ದೂರು ಸಲ್ಲಿಸಿದ 90 ದಿನಗಳ ಒಳಗಾಗಿ ಮಾಲೀಕರಿಗೆ ನ್ಯಾಯ ಸಿಗುವ ಎಲ್ಲ ಅವಕಾಶಗಳಿವೆ.
ಉತ್ಪನ್ನಗಳನ್ನು ಖರೀದಿಸಿ ಹಣ ಪಾವತಿಸದವರು ಈ ಕಾಯ್ದೆಯ ಮೂಲಕ ಅಸಲು ಹಾಗೂ ಮೂರುಪಟ್ಟು ಬಡ್ಡಿ ಹಣವನ್ನು ಮಾಲೀಕರಿಗೆ ನೀಡಬೇಕಾಗುತ್ತದೆ. ಈ ಕಾಯ್ದೆ ಉಪಯೋಗವನ್ನು ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳ ಮಾಲೀಕರು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ.ದಿನೇಶ್ ಮನವಿ ಮಾಡುತ್ತಾರೆ.
ದೂರು ಹೇಗೆ?
ಮೈಸೂರು: ಯಾವುದೇ ಗ್ರಾಹಕರು ತಾನು ಸಾಲವಾಗಿ ಖರೀದಿಸಿದ ಉತ್ಪನ್ನ ಹಾಗೂ ಪಡೆದ ಸೇವೆಯ ಹಣವನ್ನು ಕೈಗಾರಿಕಾ ಸಂಸ್ಥೆಯ ಮಾಲೀಕರಿಗೆ 45 ದಿನಗಳ ಒಳಗಾಗಿ ಪಾವತಿಸಬೇಕು. ಹಾಗೆ ಹಣ ಪಾವತಿಸದಿದ್ದಲ್ಲಿ. ಮಾಲೀಕರು ಎಂಎಸ್ಎಂಇ ಫೆಸಿಲಿಟೇಷನ್ ಕೇಂದ್ರಕ್ಕೆ ಆನ್ಲೈನ್ ಮೂಲಕ ದೂರು ಸಲ್ಲಿಸಬಹುದು.
ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳನ್ನು ಹೊಂದಿರುವ ಮಾಲೀಕರು ಕೇಂದ್ರ ಸರ್ಕಾರದ ಎಂಎಸ್ಎಂಇ ಸಚಿವಾಲಯದ ಮೂಲಕ ಉದ್ಯಮ್ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕು. ಹೀಗಾದಲ್ಲಿ ನೀವು ಮಾರಾಟ ಮಾಡಿದ ಉತ್ಪನ್ನಗಳ ಅಥವಾ ನೀಡಿದ ಸೇವೆಯ ಹಣಕ್ಕೆ ಭದ್ರತೆ ಇರುತ್ತದೆ. ಉದ್ಯಮ್ ಪ್ರಮಾಣ ಪತ್ರವನ್ನು ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ಪಡೆದುಕೊಳ್ಳಬಹುದು. ಈ ಕಾಯ್ದೆ ಮೂಲಕ ಬಡ್ಡಿ ಸೇರಿಸಿ 60 ಲಕ್ಷ ರೂ. ವರೆಗೆ ಕೈಗಾರಿಕೆ ಮಾಲೀಕರಿಗೆ ಹಣ ಕೊಡಿಸಿದ ಉದಾಹರಣೆ ಇದೆ.
-ಟಿ.ದಿನೇಶ್, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ
ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…
ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…
ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…
ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…
ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್ವಾಶ್ ಮಾಡಲಾಗಿದೆ ಎಂಬ…
ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…