ಜಿಲ್ಲೆಗಳು

ತಿಂಗಳೊಳಗೆ 425 ಕಿಲೋ ತೂಕ ಹೆಚ್ಚಿಸಿಕೊಂಡ ಬಲಭೀಮ!

90ರಿಂದ 425 ಕಿಲೋ ತನಕ ದೇಹ ತೂಕ ಹೆಚ್ಚಿಸಿಕೊಂಡ ದಸರೆ ಆನೆಗಳು

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ 14 ಆನೆಗಳ ತೂಕ ದಾಖಲಿಸುವ ಪ್ರಕ್ರಿಯೆ ಶುಕ್ರವಾರ ನಡೆಯಿತು.
ದಸರಾ ಗಜಪಡೆಗೆ ಸೇರಿದ ಆನೆಗಳ ತೂಕ ನೋಡುವ ಪ್ರಕ್ರಿಯೆಯು ಪ್ರತೀವರ್ಷ ಮೈಸೂರಿನ ಧನ್ವಂತ್ರಿ ರಸ್ತೆಯ ವೇ ಬ್ರಿಡ್ಜ್ ನಲ್ಲಿ ನಡೆಯುತ್ತದೆ. ಈ ಬಾರಿಯೂ ತೂಕದಲ್ಲಿ ಅರ್ಜುನನೇ ಬಲಶಾಲಿಯಾಗಿದ್ದು, ಬರೋಬ್ಬರಿ 5950 ಕೆ.ಜಿ ತೂಕ ಹೊಂದಿದ್ದಾನೆ. ಒಂದು ತಿಂಗಳ ಹಿಂದೆ ಅರಮನೆ ಪ್ರವೇಶಿಸಿದಾಗಲೂ ಎಲ್ಲ ಆನೆಗಳ ತೂಕ ದಾಖಲಿಸಲಾಗಿತ್ತು. ಆಗಷ್ಟ್ 10ರಂದು ಅರ್ಜುನನ ತೂಕ 5775 ಇತ್ತು. ಒಂದು ತಿಂಗಳಲ್ಲಿ 175 ಕಿಲೋ ತೂಕ ಹೆಚ್ಚಿಸಿಕೊಂಡಿದ್ದಾನೆ.


ಅರಮನೆಗೆ ಕಾಲಿಟ್ಟ ಕ್ಷಣದಿಂದಲೇ ಎಲ್ಲ ಆನೆಗಳಿಗೆ ವಿಶೇಷ ಆಹಾರ ನೀಡಿ ಆರೈಕೆ ಮಾಡಲಾಗುತ್ತದೆ. ಜಂಬೂ ಸವಾರಿ ವೇಳೆಗೆ ಈ ಎಲ್ಲ ಆನೆಗಳು ತೂಕ ಹೆಚ್ಚಿಸಿಕೊಂಡು ಸದೃಢವಾಗುತ್ತವೆ. ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಈಗ ಬರೋಬ್ಬರಿ 5000 ಕಿಲೋ ತೂಗುತ್ತಿದ್ದಾನೆ. ಕಳೆದ ತಿಂಗಳು ಈತನ ತೂಕ 4,770 ಇತ್ತು. ಒಂದು ತಿಂಗಳಲ್ಲಿ 230 ಕಿಲೋ ತೂಕ ಹೆಚ್ಚಿಸಿಕೊಂಡಿದ್ದಾನೆ.

ಇದೇ ರೀತಿ ಕಳೆದ ತಿಂಗಳು 5140 ಕಿಲೋ ದೇಹತೂಕವಿದ್ದ ಗೋಪಾಲಸ್ವಾಮಿ ಈಗ 320 ಕಿಲೋ ಹೆಚ್ಚಿಸಿಕೊಂಡು 5460 ಕಿಲೋ ತೂಕದ ಮಹಾಗಜನಾಗಿದ್ದಾನೆ. ಧನಂಜಯ ಒಂದು ತಿಂಗಳಲ್ಲಿ ಕೇವಲ 80 ಕಿಲೋ ಹೆಚ್ಚಿಸಿಕೊಂಡು 4890 ಕಿಲೋ ತಲುಪಿದ್ದಾನೆ. ಮಹೇಂದ್ರ 200 ಕಿಲೋ ಹೆಚ್ಚಿಸಿಕೊಂಡು 4450 ಕಿಲೋ ತೂಕದ ಬಲಶಾಲಿಯಾಗಿದ್ದಾನೆ. 2018ರಲ್ಲಿ ಜೀರ್ಣದ ಸಮಸ್ಯೆಯಿಂದ ಬಳಲುತ್ತಿದ್ದ ಭೀಮ ಕಳೆದ ತಿಂಗಳು 3,920 ಕಿಲೋ ತೂಗುತ್ತಿದ್ದ. ಈಗ ಬರೋಬ್ಬರಿ 425 ಕಿಲೋ ಹೆಚ್ಚಿಸಿಕೊಂಡು 4345 ಕಿಲೋ ತಲುಪಿದ್ದಾನೆ.

ಇನ್ನು ಮೊದಲ ಬಾರಿಗೆ ತೂಕ ಯಂತ್ರದ ಮೇಲೆ ನಿಂತ ಸುಗ್ರೀವ ಈಗ 4785 ಕಿಲೋ ಇದ್ದರೆ, ಗೋಪಿ 4670 ಕಿಲೋ ತೂಗುತ್ತಿದ್ದಾನೆ. ಇದೇ ಮೊದಲ ಬಾರಿಗೆ ದಸರೆಗೆ ಬಂದ ಶ್ರೀರಾಮ 4475 ಕಿಲೋ ತೂಕವಿದ್ದಾನೆ. ಗಜಪಡೆಯಲ್ಲಿ ಕಿರಿಯವನಾಗಿರುವ 18 ವರ್ಷದ ಪಾರ್ಥಸಾರಥಿ 3445 ಕಿಲೋ ತೂಕವಿದ್ದು ಬೆಳವಣಿಗೆಯ ಲಕ್ಷಣ ತೋರಿಸಿದ್ದಾನೆ.
ಗಂಡಾನೆಗಳಿಗೆ ಹೋಲಿಸಿದರೆ ಸ್ಲಿಮ್ ಆಗಿದ್ದ ಹೆಣ್ಣಾನೆಗಳೂ ಈಗ ತೂಕ ಹೆಚ್ಚಿಸಿಕೊಂಡು ದಸರೆಯ ಕಾರ್ಯಭಾರ ವಹಿಸಲು ಸಿದ್ದವಾಗಿವೆ. 3,050 ಕಿಲೋ ತೂಕದ ಚೈತ್ರ ಒಂದು ತಿಂಗಳಲ್ಲಿ 3235 ಕಿಲೋ, 3100 ಕಿಲೋ ತೂಕದ ಕಾವೇರಿ 3245 ಕಿಲೋಗೆ ದೇಹ ತೂಕ ಏರಿಸಿಕೊಂಡಿದ್ದಾರೆ. 2920 ಕಿಲೋ ಇದ್ದ ಲಕ್ಷ್ಮೀ ಬರೋಬ್ಬರಿ 230 ಕಿಲೋ ತೂಕ ಹೆಚ್ಚಿಸಿಕೊಂಡಿದ್ದಾಳೆ. ದಸರೆಯ ಹಳೆಯ ಆನೆಗಳಲ್ಲಿ ಒಂದಾದ ವಿಜಯ 2760 ಕಿಲೋ ತೂಗುವ ಮೂಲಕ ಎಲ್ಲರಿಗಿಂತ ಹೆಚ್ಚು ಸ್ಲಿಮ್ ಆಗಿದ್ದಾಳೆ.

ಡಾ.ವಿ. ಕರಿಕಾಳನ್, ಡಿಸಿಎಫ್
ಈ ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಮೊದಲ ಮತ್ತು ಎರಡನೇ ತಂಡದ ಆನೆಗಳು ಸೇರಿ ಒಟ್ಟು 14 ಆನೆಗಳನ್ನು ತೂಕ ಮಾಡಿದ್ದೇವೆ. ಗಂಡಾನೆಗಳು 4000 ದಿಂದ 4600 ಸಾವಿರ ಕೆಜಿ ಇದ್ದು, ಕಿರಿಯ ವಯಸ್ಸಿನ ಆನೆ ಪಾರ್ಥಸಾರಥಿ ಮಾತ್ರ 3445 ತೂಕ ಹೊಂದಿದೆ. ಮೊದಲನೇ ತಂಡದ ಎಲ್ಲ ಆನೆಗಳ ತೂಕದಲ್ಲಿ ಹೆಚ್ಚಾಗಿದ್ದು, ನಮ್ಮ ತಾಲೀಮುಗಳಿಗೂ ಕೂಡ ತುಂಬ ಚೆನ್ನಾಗಿ ಸಹಕರಿಸುತ್ತಿವೆ. ಶ್ರೀರಾಮ ಮತ್ತು ಪಾರ್ಥಸಾರಥಿ ಆನೆಗಳು ಮೊದಲನೇ ತಂಡದ ಆನೆಗಳ ಜೊತೆ ಸೇರಿ ನಿನ್ನೆಯಿಂದಲೇ ತಾಲೀಮಿನಲ್ಲಿ ಭಾಗವಹಿಸಿವೆ. ಸೆ.12 ರಿಂದ ಎಲ್ಲ ಆನೆಗಳು ನಿತ್ಯದ ತಾಲೀಮಿನಲ್ಲಿ ಭಾಗವಹಿಸಲಿವೆ. ದಸರೆ ಮುಗಿಯುವದರೊಳಗೆ ಎಲ್ಲ ಆನೆಗಳ ತೂಕ ಹೆಚ್ಚು ಕಡಿಮೆ 100 ರಿಂದ 500 ಕಿಲೋ ಏರುತ್ತದೆ.

andolanait

Recent Posts

ಬರಕ್ಕೆ ತತ್ತರಿಸುತ್ತಿರುವ ಕೃಷ್ಣ ಗೊಲ್ಲರು

ಡಾ.ರಘುಪತಿ ಮಹದೇಶ್ವರ ಬೆಟ್ಟಕ್ಕೆ ಹೋಗುವಾಗ ಹನೂರು ದಾಟಿದರೆ ನಿಮಗೆ ದೊಡ್ಡಿ ಹೆಸರಿನ ಹಲವು ಹಳ್ಳಿಗಳು ಸಿಗುತ್ತವೆ. ಹಾಗೆಯೇ ನೂರಾರು ದನಗಳೂ,ಅದೂ…

5 hours ago

ಕೊಡಗಿನಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಕಡಿವಾಣ

ನವೀನ್ ಡಿಸೋಜ ೧೬,೦೬೩ ಪ್ರಕರಣ ದಾಖಲು, ೧.೦೬ ಕೋಟಿ ರೂ. ದಂಡ ಸಂಗ್ರಹ ಹೆಲ್ಮೆಟ್, ಸೀಟ್‌ಬೆಲ್ಟ್ ಧರಿಸದಿರುವುದು, ದಾಖಲೆಗಳಿಲ್ಲದೆ ವಾಹನ…

5 hours ago

ತಮಿಳುನಾಡಿಗೆ ನೀರು; 72 ಅಡಿಗೆ ಕುಸಿದ ಕಬಿನಿ ಜಲಾಶಯ

ಮಂಜು ಕೋಟೆ ಹೊರಹರಿವಿನ ಪ್ರಮಾಣ ಕಡಿಮೆ ಮಾಡಿರುವ ಅಧಿಕಾರಿಗಳು; ರೈತರಿಗೆ, ಜನರಿಗೆ ನೀರಿನ ಸಮಸ್ಯೆ ಆತಂಕ  ಎಚ್.ಡಿ.ಕೋಟೆ: ಈ ಬಾರಿ…

5 hours ago

ಮೇವಿನ ಕೊರತೆ; ಹಸಿರು ಮೇವು ಖರೀದಿಗೆ ಮುಂದಾದ ರೈತರು

ಭೇರ್ಯ ಮಹೇಶ್ ಅವಳಿ ತಾಲ್ಲೂಕುಗಳಲ್ಲಿ ಮೇವಿಗೆ ಭರ್ಜರಿ ಬೇಡಿಕೆ; ಹಾಲು ಉತ್ಪಾದಕರಿಗೆ ಹೊಡೆತ ಕೆ.ಆರ್.ನಗರ: ಮಳೆ ಕೊರತೆಯಿಂದ ಬರಗಾಲ ಆವರಿಸಿದ್ದು,…

5 hours ago

ಗಜಪಯಣಕ್ಕೆ ನಡೆದಿದೆ ಭರದ ಸಿದ್ಧತೆ

ದಾ.ರಾ.ಮಹೇಶ್ ವೀರನಹೊಸಹಳ್ಳಿಯಲ್ಲಿ ಕಲಾತಂಡಗಳೊಡನೆ ಸ್ವಾಗತ ಕೋರಲು ಅರಣ್ಯ ಇಲಾಖೆ ಸಜ್ಜು  ವೀರನಹೊಸಹಳ್ಳಿ: ಆಗಸ್ಟ್ ೨೬ರಂದು ಆರಂಭವಾಗಲಿರುವ ಗಜ ಪಯಣಕ್ಕೆ ವಿವಿಧ…

5 hours ago