ಮಂಡ್ಯ

ಸಾಹಿತ್ಯ ಸಮ್ಮೇಳನ: ಹಲವು ಹೊಸತು, ವಿಶೇಷತೆಗಳಿಗೆ ಸಾಕ್ಷಿಯಾದ ಮಾಧ್ಯಮ ಸಮನ್ವಯ ಸಮಿತಿ ಸಭೆ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಮಾಧ್ಯಮ ಸಮನ್ವಯ ಸಮಿತಿ ಮುನ್ನುಡಿ!.

ಮಂಡ್ಯ: ಡಿಸೆಂಬರ್ ಮಾಹೆಯಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕ್ಕರೆ ನಗರಿ ಮಂಡ್ಯದಲ್ಲಿ ಸಕಲ ಸಿದ್ಧತೆಗಳು ಜೋರಾಗಿವೆ. ಸಮ್ಮೇಳನದ ಯಶಸ್ಸಿಗಾಗಿ ರಚಿಸಿರುವ 28 ವಿವಿಧ ಸಮಿತಿಗಳು, ನಿರಂತರ, ಸರಣಿ ಸಭೆಗಳ ಮೂಲಕ ತಮ್ಮನ್ನ ತಾವು ಸಕ್ರಿಯಗೊಳಿಸಿಕೊಂಡಿವೆ. ಅದರಂತೆ ಮಂಡ್ಯ ನಗರದ ಹೊರವಲಯದ ಅಮರಾವತಿ ಹೋಟೆಲ್ ನಲ್ಲಿ ಇಂದು ಮಾಧ್ಯಮ ಸಮನ್ವಯ ಸಮಿತಿ ಹಾಗೂ ಸಾಂಸ್ಕೃತಿಕ ಸಮಿತಿಗಳ ಪ್ರತ್ಯೇಕ ಸಭೆಗಳು ನಡೆದವು.

ಮಾಧ್ಯಮ ಸಮನ್ವಯ ಸಮಿತಿ ಹಾಗೂ ಸಾಂಸ್ಕೃತಿಕ ಸಮಿತಿ ಎರಡಕ್ಕೂ ಅಧ್ಯಕ್ಷರಾಗಿರುವ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಮೊದಲಿಗೆ ನಡೆದ ಮಾಧ್ಯಮ ಸಮನ್ವಯ ಸಮಿತಿ ಸಭೆ ಹಲವು ವಿಶೇಷತೆಗಳು, ಹೊಸತುಗಳಿಗೆ ಸಾಕ್ಷಿಯಾಯಿತು. ಹಳೇ ಬೇರು, ಹೊಸ ಚಿಗುರು ಎಂಬಂತೆ ಹಿರಿಯರು, ಕಿರಿಯರು, ಮಾಧ್ಯಮ ಪ್ರತಿನಿಧಿಗಳು, ಮಾಧ್ಯಮ ಸಂಸ್ಥೆಯ ಮುಖ್ಯಸ್ಥರು, ಅಧಿಕಾರಿಗಳು, ರಾಜಕಾರಣಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನೊಳಗೊಂಡ ಸಮಿತಿಯಲ್ಲಿ ಹಲವು ಸಲಹೆ, ಸೂಚನೆ, ಮಾರ್ಗದರ್ಶನಗಳ ವಿನಿಮಯ ಆಯಿತು.

ಸಾಹಿತ್ಯ ಕ್ಷೇತ್ರಕ್ಕೂ ಮಾಧ್ಯಮ ರಂಗಕ್ಕೂ ಈ ಹಿಂದಿನಿಂದಲೂ ಅವಿನಾಭಾವ ಸಂಬಂಧ ಉಂಟು. ಹಲವಾರು ಮಾಧ್ಯಮ ಪ್ರತಿನಿಧಿಗಳು ಸಾಹಿತಿಯಾಗಿ, ಹಲವು ಸಾಹಿತಿಗಳು ಮಾಧ್ಯಮ ರಂಗದಲ್ಲಿ ಜೊತೆ ಜೊತೆಯಾಗೇ ಸಾಗುತ್ತಿರುವ ಅನೇಕ ಉದಾಹರಣೆಗಳು ಸಾಕಷ್ಟು ಇವೆ. ಹೀಗಾಗಿ, ಕನ್ನಡ ಸಾಹಿತ್ಯ ಸಮ್ಮೇಳನದಂತಹ ಕನ್ನಡದ ಹಬ್ಬದಲ್ಲಿ ಮಾಧ್ಯಮಗಳು, ಮಾಧ್ಯಮ ಪ್ರತಿನಿಧಿಗಳ ಪಾತ್ರ ಕೂಡ ಹೆಚ್ಚಿರುತ್ತೆ. ಇಂತಹ ಮಾಧ್ಯಮ ಸಮನ್ವಯ ಸಮಿತಿಗೆ ಅಧ್ಯಕ್ಷರಾಗಿರುವ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರ ಅನುಭವ, ಮಾಧ್ಯಮ ಕ್ಷೇತ್ರದಲ್ಲಿ ದಶಕಗಳಿಂದ ತಮ್ಮನ್ನ ತಾವು ತೊಡಗಿಸಿಕೊಂಡಿರುವ ಮಾಧ್ಯಮ ಪ್ರತಿನಿಧಿಗಳು, ಅನುಭವಿ, ಯುವ ಉತ್ಸಾಹಿ ಅಧಿಕಾರಿಗಳು ಈ ಸಮಿತಿಯಲ್ಲಿರುವುದು. ಜೊತೆಗೆ ಎಲ್ಲರಿಗೂ ತಮ್ಮ ಅನುಭವವನ್ನ ಹಂಚುತ್ತಾ ಸಲಹೆ ನೀಡಲು ಇರುವ ಹಿರಿಯರು ಇರೋದು ಇನ್ನೂ ವಿಶೇಷ.

ಇಂದಿನ ಸಭೆಯಲ್ಲೇ ಸಮ್ಮೇಳನದ ಯಶಸ್ಸಿನ ಸುಳಿವು ಸಿಕ್ಕಂತೆ ಆಗಿದೆ. ಸಮ್ಮೇಳನದ ಯಶಸ್ಸಿಗೆ ರಚಿತವಾಗಿರುವ 28 ಸಮಿತಿಗಳಲ್ಲೇ ಮಾಧ್ಯಮ ಸಮನ್ವಯ ಸಮಿತಿ ಎಲ್ಲಕ್ಕಿಂತ ಭಿನ್ನ, ವಿಶೇಷ ಎಂಬುದನ್ನ ಸಾಬೀತು ಮಾಡಿದೆ.

ಸಾಲದೆಂಬಂತೆ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸಂಚಾಲಕರು, ಕಾರ್ಯದರ್ಶಿ, ಸದಸ್ಯರೆಲ್ಲರಿಗೂ ಮೊದಲ ಬಾರಿಗೆ ಕನ್ನಡ ಮಯವಾದ, ವರ್ಣರಂಜಿತ ಗುರುತಿನ ಚೀಟಿ(ಐಡೆಂಟಿಟಿ ಕಾರ್ಡ್) ಕೊಟ್ಟು ಎಲ್ಲರನ್ನೂ ಗುರುತಿಸುವಂತೆ ಮತ್ತು ಗೌರವಿಸುವಂತೆ ಮಾಡಿರೋದು ಮತ್ತೊಂದು ವಿಶೇಷ.

ಈ ಎಲ್ಲಾ ಹೊಸತು, ವಿಶೇಷತೆಗಳನ್ನ ನೋಡಿದರೆ ಅಧ್ಯಕ್ಷರಾದ ದಿನೇಶ್ ಗೂಳಿಗೌಡರ ಅಧ್ಯಕ್ಷತೆ ಮತ್ತು ನೇತೃತ್ವದಲ್ಲಿ ಮಾಧ್ಯಮ ಸಮನ್ವಯ ಸಮಿತಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುವ ಸುಳಿವು ನೀಡುತ್ತಿದೆ. ಅಷ್ಟೇ ಅಲ್ಲ, ಹೊರ ಜಿಲ್ಲೆಗಳಿಂದ ಮಾತ್ರವಲ್ಲ, ಹೊರ ರಾಜ್ಯಗಳಿಂದ ಬರುವ ಕನ್ನಡ ಮಾಧ್ಯಮ ಪ್ರತಿನಿಧಿಗಳನ್ನ ಅಷ್ಟೇ ಮುತುವರ್ಜಿ, ಕಾಳಜಿಯಿಂದ, ಕ್ಷೇಮವಾಗಿ, ಉತ್ತಮ ಆತಿಥ್ಯದೊಂದಿಗೆ, ಸಮನ್ವಯ ಸಮಿತಿಯ ಎಲ್ಲರೂ ಸ್ವಾಗತಿಸಿ, ಬೀಳ್ಕೊಡುವ ಜವಾಬ್ದಾರಿ ನಿರ್ವಹಿಸುವುದು.

ಸಭೆಯಲ್ಲಿ ವ್ಯಕ್ತವಾದ ಹಲವರ ಅಭಿಪ್ರಾಯ, ಸಲಹೆಯಂತೆ ಮತ್ತು ಈ ಹಿಂದಿನ ಸಮ್ಮೇಳನಗಳಲ್ಲಿ ಆಗಿರುವ ಲೋಪ-ದೋಷಗಳು ಮರುಕಳಿಸದಂತೆ ಜಾಗ್ರತೆ ವಹಿಸಿ, ನಕಾರಾತ್ಮಕ ಸುದ್ದಿಗಳತ್ತ ಚಿತ್ತ ಹರಿಸದಂತೆ, ಸಕಾರಾತ್ಮಕ ಸುದ್ದಿಗಳಿಗೆ ಹೆಚ್ಚು ಒತ್ತು ನೀಡಬೇಕಿದೆ. ಅದೇ, ರೀತಿ ಹೊರಗಿನಿಂದ ಬರುವ ಪತ್ರಕರ್ತರಿಗೂ ಆ ನಿಟ್ಟಿನಲ್ಲಿ ನೆರವಾಗಿ ಸಮಿತಿ ಮತ್ತು ಮಂಡ್ಯದ ಗೌರವ ಹೆಚ್ಚಿಸುವ ಕೆಲಸಕ್ಕೆ ಕೈಜೋಡಿಸುವ ನಿರ್ಣಯ ಕೈಗೊಳ್ಳಲಾಯಿತು.

ಸಭೆಯ ಅಧ್ಯಕ್ಷತೆಯನ್ನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ವಹಿಸಿದ್ದರು. ಸಭೆಯಲ್ಲಿ ಸಾಹಿತ್ಯ ಸಮ್ಮೇಳನದ ಸಂಚಾಲಕರಾದ ಡಾ.ಮೀರಾಶಿವಲಿಂಗಯ್ಯ, ಸಮ್ಮೇಳನದ ವಿಶೇಷಾಧಿಕಾರಿ ಡಾ.ಚಂದ್ರಶೇಖರ, ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಪ್ರಕಾಶ್, ಅಶೋಕ್ ಜಯರಾಂ, ವಾರ್ತಾಧಿಕಾರಿ ನಿರ್ಮಲಾ, ಸಮಿತಿ ಸದಸ್ಯರಾದ ಆರ್.ಜಿ.ಸಿದ್ದು, ಡಿ.ಶಶಿಕುಮಾರ್, ಮಂಜುನಾಥ, ಆನಂದ್, ರಾಘವೇಂದ್ರ, ಪ್ರವೀಣ್, ಶಿವಕುಮಾರ್, ಆಶಾಲತಾ ಪುಟ್ಟೇಗೌಡ, ಬಸವೇಗೌಡ, ಹರ್ಷ, ಚೇತನ್, ಮಾನಸ, ಸುಬ್ರಹ್ಮಣ್ಯ ‌ಬಾಬು, ಶಿವರಾಮು, ಅರಸಯ್ಯ, ಸುಧಾಮ, ಹರೀಶ್, ತಳಗವಾದಿ ನಾಗರಾಜು, ಅನುಪಮ ಸೇರಿದಂತೆ ಹಲವರು ಭಾಗವಹಿಸಿದ್ದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಮೋದಿ ಸಂಪುಟಕ್ಕೆ ಮೇಜರಿ ಸರ್ಜರಿ: ಹಲವು ಸಚಿವರ ಖಾತೆ ಬದಲಾವಣೆ?

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಮಹತ್ವದ ಪುನಾರಚನೆ ನಡೆಯುವ…

22 mins ago

ಶಿವಾಜಿ ಗಣೇಶನ್‌ ಅವರ ದೆಹಲಿ ಕಣ್ಣೋಟ | ರಾಮಮಂದಿರ ಅಕ್ರಮ ಮಂಕಾಗಿಸಿದ ಬಿಜೆಪಿ ಭವಿಷ್ಯ

ಧಾರ್ಮಿಕ ಶ್ರದ್ಧಾ ಕೇಂದ್ರಗಳ ಬಗೆಗೆ ಭಕ್ತರು ಭಕ್ತಿಯಿಂದ ನಡೆದುಕೊಳ್ಳುವುದು ಮಾತ್ರವಲ್ಲ, ತಮ್ಮ ಇಚ್ಛೆಯ ಈಡೇರಿಕೆಗಾಗಿ ಹರಕೆ ಹೊತ್ತವರು , ದಾನ…

6 hours ago

ಭಾನುವಾರದ ಹಾಡುಪಾಡು | ಈಗ ಕೇರಳದಲ್ಲೂ ಫ್ರೀ ಬಸ್ ಪ್ರಿಯದರ್ಶಿನಿ

ಕೇರಳಂ ಎಂಬ ಈ ಸ್ತ್ರೀ ರಾಜ್ಯದ ಮಹಿಳೆಯರು ಉಚಿತ ಪ್ರಯಾಣದ ಸಂಪೂರ್ಣ ಸುಖವನ್ನು ಪಡೆಯುತ್ತಿದ್ದಾರೆ. ಈ ಸುಖ ಕ್ಷಣಿಕವೋ, ಶಾಶ್ವತವೋ…

6 hours ago

ಭಾನುವಾರದ ಹಾಡುಪಾಡು | ಕೊಡಗು ಕಾಡಿನ ಆ ಕಾಲದ ಮಳೆಗಾಲ ವೈಭವ

ಕೃಪಾ ದೇವರಾಜ್, ಮಡಿಕೇರಿ ಧೋ... ಎಂದು ಸುರಿಯುವ ಮಳೆ, ಅಜ್ಜ ಕಟ್ಟಿದ ಹಳೇ ನಾಡ ಹೆಂಚಿನ ಮನೆ, ನಿರಂತರವಾಗಿ ಸುರಿಯುವ…

7 hours ago

ಭಾನುವಾರದ ಹಾಡುಪಾಡು | ಹತ್ತನೆಯ ಸಾಹಿತ್ಯ ಸಂಭ್ರಮದ ಹೊತ್ತಲ್ಲಿ ಹದಿನಾರರ ಹರಯದ ಬುಕ್ ಕ್ಲಬ್ ಕುರಿತು

ಜುಲೈ ನಾಲ್ಕು ಮತ್ತು ಐದರ ಶನಿವಾರ ಮತ್ತು ಭಾನುವಾರ ಮೈಸೂರಿನ ಸದರ್ನ್ ಸ್ಟಾರ್‌ನಲ್ಲಿ ವಾರ್ಷಿಕ ಸಾಹಿತ್ಯ ರಸದೂಟ ಪೃಥ್ವಿ ಸುಧೀಂದ್ರ…

7 hours ago

ಅಗ್ನಿ ದುರಂತ | ಕೊನೆಗೂ ಅಬಕಾರಿ ಡಿಸಿ ತಲೆದಂಡ

ಮೈಸೂರು : ನಗರದ ದಟ್ಟಗಳ್ಳಿಯಲ್ಲಿರುವ ಮಾರಾ ಬಾರ್ ಅಂಡ್ ರೆಸ್ಟೋರೆಂಟ್ (ಫಾಕ್ಸ್ಡೆನ್‌ಬಾರ್) ನಲ್ಲಿ ಸಂಭವಿಸಿದ  ಅಗ್ನಿದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ…

23 hours ago