Mandya-Thubinakere service road
ಮಂಡ್ಯ : ತಾಲ್ಲೂಕಿನ ತೂಬಿನಕೆರೆ ಗ್ರಾಮ ಹಾಗೂ ಮಂಡ್ಯದಿಂದ ಪಾಂಡವಪುರ ಸರ್ವಿಸ್ ರಸ್ತೆಗೆ ತಿರುವು ಪಡೆಯುವ ಮತ್ತು ಬೆಂಗಳೂರು-ಮೈಸೂರು ಸರ್ವಿಸ್ ರಸ್ತೆಯ ಅವೈಜ್ಞಾನಿಕ ಕಾಮಗಾರಿಯನ್ನು ಖಂಡಿಸಿ ಕದಂಬ ಸೈನ್ಯ ಮತ್ತು ಭಾರತೀಯ ಕಿಸಾನ್ ಸಂಘ ಮತ್ತು ಕದಂಸ (ಸ್ವಾಭಿಮಾನ ಕೃಷ್ಣಪ್ಪ ಬಣ) ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ-275 ವಿರುದ್ಧ ತೂಬಿನಕೆರೆ ಸಮೀಪ ಪ್ರತಿಭಟಿಸಿದರು.
ತೂಬಿನಕೆರೆ-ಮಂಡ್ಯ- ಪಾಂಡವಪುರ ತಿರುವು ರಸ್ತೆ ಹಾಗೂ ಮೈಸೂರು-ಬೆಂಗಳೂರು ಸರ್ವಿಸ್ ರಸ್ತೆಯಲ್ಲಿ ಯಾವುದೇ ತಡೆಗೋಡೆ ನಿರ್ಮಾಣ ಮಾಡದೇ ಇರುವುದರಿಂದ ಸುಮಾರು 15 ಅಡಿ ಆಳದಲ್ಲಿ ರಸ್ತೆಗೆ ಹೊಂದಿಕೊಂಡಂತೆ ಕೆಲವು ಕುಟುಂಬಗಳವರು (ದನ-ಕರು ಹಸುಗಳು, ಆಡು ಕುರಿಗಳು) ಭಯದಿಂದ ಹಗಲು-ರಾತ್ರಿ ಎನ್ನದೇ ವಾಸಿಸುತ್ತಿದ್ದಾರೆ. ಈಗಾಗಲೇ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ಪ್ರತಿನಿತ್ಯ ಸಾವಿರಾರು ಭಾರೀ ವಾಹನಗಳು, ಲಘು ವಾಹನಗಳು, ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ಒಂದು ವೇಳೆ ಮನೆಯ ಮೇಲೆ ಬಿದ್ದರೆ ಹೆಚ್ಚಿನ ಪ್ರಾಣಾಪಾಯ ಸಂಭವಿಸಬಹುದು. ಇದಕ್ಕೆ ಸಂಪೂರ್ಣವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಹೊಣೆ ಆಗುತ್ತದೆ. ಆದ್ದರಿಂದ ಈ ಮನೆಗಳ ನಿವಾಸಿಗಳಿಗೆ ಬೇರೆ ನಿವೇಶನ ಕಲ್ಪಿಸಿ ಮನೆ ಕಟ್ಟಿಕೊಳ್ಳಲು ಹೆಚ್ಚಿನ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಮಂಡ್ಯ-ಮೈಸೂರು ಸರ್ವಿಸ್ ರಸ್ತೆಯಲ್ಲಿ ಪದಾಚಾರಿಗಳಿಗೆ ವ್ಯವಸ್ಥಿತವಾದ ರಸ್ತೆ ಇಲ್ಲದೆ ರಸ್ತೆಯ ಬದಿಯಲ್ಲಿ ಬಿಸಿಲು-ಮಳೆಯಲ್ಲೇ ನಿಂತು ಜನರು, ವಿದ್ಯಾರ್ಥಿಗಳು, ರೋಗಿಗಳು, ಹಿರಿಯ ನಾಗರಿಕರು ವಾಹನಗಳನ್ನು ಹತ್ತಬೇಕಿದೆ. ತೂಬಿನಕೆರೆ ಗ್ರಾಮ ಪಂಚಾಯಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಶಾಲೆಗಳು, ಖಾಸಗಿ ಶಾಲಾ-ಕಾಲೇಜುಗಳಿದ್ದು, ವ್ಯಾಪಾರ ಕೇಂದ್ರವಾಗಿದೆ. ಎರಡೂ ಕಡೆಗಳಲ್ಲಿ ತಂಗುದಾಣ ನಿರ್ಮಾಣ ಮಾಡಿಲ್ಲ. ಒಳಚರಂಡಿ ನಿರ್ಮಾಣ ಮಾಡದೇ ಇರುವುದರಿಂದ ತ್ಯಾಜ್ಯದ ನೀರು ರಸ್ತೆಗೆ ಹರಡಿಕೊಂಡು ವಾಹನ ಸವಾರರಿಗೆ ಕಿರಿಕಿರಿ ಆಗುತ್ತಿದೆ.
ತೂಬಿನ ಕೆರೆ ಗ್ರಾಮ ಸೇರಿದಂತೆ ಎಂಟು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ-275ದವರು ಅಪಾಯದಲ್ಲಿರುವ ಮನೆಗಳನ್ನು ತೆರವುಗೊಳಿಸಿ ರಸ್ತೆ ಅಗಲೀಕರಣ ಮಾಡಿ ನಿವಾಸಿಗಳಿಗೆ ಬದಲಿ ನಿವೇಶನ ಕಲ್ಪಿಸಬೇಕು. ರಸ್ತೆಯ ಎರಡೂ ಬದಿಗಳಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡಬೇಕು. ಒಳ ಚರಂಡಿ ನಿರ್ಮಾಣ ಮಾಡಬೇಕು. ಒಂದು ವೇಳೆ ಪ್ರತಿಭಟನೆಗೆ ಸ್ಪಂದಿಸದಿದ್ದರೆ ಮೈಸೂರಿನಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ-275 ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ಭಾರತೀಯ ಕಿಸಾನ್ ಸಂಘದ ಪ್ರಾಂತ ಅಧ್ಯಕ್ಷ ಹಾಡ್ಯ ರಮೇಶ್ ರಾಜು, ಜಿಲ್ಲಾ ಅಧ್ಯಕ್ಷ ಬಿ.ಪಿ.ಅಪ್ಪಾಜಿ ಹಳೇಬೂದನೂರು, ಕದಸಂಸ ಸ್ವಾಭಿಮಾನ ಕೃಷ್ಣಪ್ಪ ಬಣದ ಜಿಲ್ಲಾ ಸಂಚಾಲಕ ಮೋಹನ್ ಚಿಕ್ಕಮಂಡ್ಯ, ಮುಖಂಡರಾದ ಪ್ರಕಾಶ್, ರಾಮಲಿಂಗಯ್ಯ, ಅಚ್ಯುತ, ಜಯರಾಮ, ಸ್ವಾಮಿ ಎಲೆಚಾಕನಹಳ್ಳಿ ಶ್ರೀಧರ್, ರಾಮಣ್ಣ, ಸಿದ್ದಲಿಂಗು, ರೇವಣ್ಣ, ನಾಗಣ್ಣ, ಚನ್ನೇಗೌಡ, ಕುಮಾರ್, ಜಯಮ್ಮ, ಕದಂಬ ಸೈನ್ಯ ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ಆರಾಧ್ಯ ಗುಡಿಗೇನಹಳ್ಳಿ, ಕಿಸಾನ್ ಸಂಘದ ಪದಾಧಿಕಾರಿಗಳಾದ ರುದ್ರಪ್ಪ ಬೂದನೂರು, ಬಸವರಾಜು, ಕಲ್ಲೇಶ್ ಹಾಗೂ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕೃಷಿ ಚಳವಳಿಯ ಪ್ರಮುಖ ನಾಯಕರಾದ ರಾಕೇಶ್ ಟಿಕಾಯತ್ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾದ ಪ್ರಮುಖ ಮುಖಂಡರಾದ ಯುದ್ಧವೀರ್ ಸಿಂಗ್…
ಹತ್ತಿ ಬೆಳೆಗಾರರು ರಾಜ್ಯದಲ್ಲಿ ವಾರ್ಷಿಕ ಸುಮಾರು 200 ಕೋಟಿ ರೂ.ಗೂ ಅಧಿಕ ನಷ್ಟ ಅನುಭವಿಸುತ್ತಿದ್ದಾರೆ. ಬಿತ್ತನೆ ಬೀಜ ಮಾರಾಟ ಮಾಡುವ…
ಹೊಸದಿಲ್ಲಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಹತ್ವದ ಸುದ್ದಿಯೊಂದನ್ನು ನೀಡಿದೆ.…
ಹೊಸದಿಲ್ಲಿ : ಪ್ರಧಾನ ಮಂತ್ರಿ ಕಾರ್ಯಾಲಯ (ಪಿಎಂಒ), ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ಸಂಪುಟ ಸಚಿವಾಲಯಗಳನ್ನು ಒಳಗೊಂಡಿರುವ ‘ಸೇವಾ…
ಹೊಸದಿಲ್ಲಿ : ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ‘ಡಿ’ಗುಂಪಿನ ಪಂದ್ಯದಲ್ಲಿ ಯುಎಇ ಕ್ರಿಕೆಟ್ ತಂಡವು ಕೆನಡಾ ತಂಡವನ್ನು ಐದು…