ಮಂಡ್ಯ : ಮಂಡ್ಯ ಜಿಲ್ಲಾ ನ್ಯಾಯಾಲಯಕ್ಕೆ ಮತ್ತೊಮ್ಮೆ ಬಾಂಬ್ ಬೆದರಿಕೆ ಬಂದಿದ್ದು, ಇ-ಮೇಲ್ ಮೂಲಕ “ಕೋರ್ಟ್ನಲ್ಲಿ ಬಾಂಬ್ ಇಟ್ಟಿದ್ದೇವೆ” ಎಂದು ಕಿಡಿಗೇಡಿಗಳು ಬೆದರಿಕೆ ಹಾಕಿದ್ದಾರೆ. ಕಳೆದ ಫೆಬ್ರವರಿ 16ರಂದು ಇದೇ ರೀತಿಯ ಬೆದರಿಕೆ ಬಂದಿದ್ದು, ಇದೀಗ ಮತ್ತೆ ಪುನರಾವರ್ತನೆಯಾಗಿದೆ.
ಬೆದರಿಕೆ ಇ-ಮೇಲ್ ಬಂದ ತಕ್ಷಣವೇ ಕೋರ್ಟ್ ಆವರಣದಲ್ಲಿ ಆತಂಕ ಹೆಚ್ಚಾಗಿದೆ. ವಕೀಲರು ಕಲಾಪ ನಿಲ್ಲಿಸಿ ಹೊರಗೆ ಬಂದಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಸೇರಿ ಕೋರ್ಟ್ ಆವರಣದಲ್ಲಿ ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ. ಅಗ್ನಿಶಾಮಕ ದಳವೂ ಸ್ಥಳದಲ್ಲಿದೆ.
ಬೆದರಿಕೆಯ ನಡುವೆಯೂ ಕೆಲವು ಕಲಾಪಗಳು ಮುಂದುವರಿದಿದ್ದರೂ, ಬಹುತೇಕ ವಕೀಲರು ಹಾಗೂ ಸಾರ್ವಜನಿಕರು ಆವರಣದಿಂದ ಹೊರಬಂದಿದ್ದಾರೆ. ಪೊಲೀಸರು ಇ-ಮೇಲ್ನ ಮೂಲ ಟ್ರೇಸ್ ಮಾಡುವ ಕೆಲಸ ಆರಂಭಿಸಿದ್ದಾರೆ.
ಫೆಬ್ರವರಿ 16ರಂದು ಸಹ ಬಂದಿತ್ತು ಬೆದರಿಕೆ
ಕಳೆದ ಫೆಬ್ರವರಿ 16ರಂದು ಧಾರವಾಡ ಹೈಕೋರ್ಟ್ ಪೀಠ ಸೇರಿದಂತೆ ಮಂಡ್ಯ, ಹಾವೇರಿ, ಕೊಡಗು, ದಾವಣಗೆರೆ ಸೇರಿ 10ಕ್ಕೂ ಹೆಚ್ಚು ನ್ಯಾಯಾಲಯಗಳಿಗೆ ಒಂದೇ ದಿನ ಇ-ಮೇಲ್ ಬಾಂಬ್ ಬೆದರಿಕೆ ಬಂದಿತ್ತು. ಆಗಲೂ ಬಾಂಬ್ ಸ್ಕ್ವಾಡ್, ಶ್ವಾನ ದಳದಿಂದ ಶೋಧ ನಡೆದು ಎಲ್ಲಾ ಬೆದರಿಕೆಗಳು ಹುಸಿ ಎಂದು ದೃಢಪಟ್ಟಿತ್ತು. ಆದರೆ ಈಗ ಮತ್ತೆ ಮಂಡ್ಯ ಕೋರ್ಟ್ಗೆ ಪುನರಾವರ್ತನೆಯಾಗಿದೆ.
ಪೊಲೀಸ್ ತನಿಖೆ ತೀವ್ರಗೊಂಡಿದೆ. ಬೆದರಿಕೆಯ ಮೂಲ ಗುರುತಿಸಲು ಸೈಬರ್ ಸೆಲ್ ಕೂಡ ಸಕ್ರಿಯವಾಗಿದೆ. ಕೋರ್ಟ್ ಕಲಾಪಗಳು ಸುರಕ್ಷತಾ ಕಾರಣದಿಂದ ಸ್ಥಗಿತಗೊಂಡಿವೆ. ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಿದೆ.





