ಬೆಟ್ಟಕ್ಕೆ ಹೊರಟಿದ್ದವನ ಮೇಲೆ ದಾಳಿ ಮಾಡಿದ ಚಿರತೆ
ತಿ. ನರಸೀಪುರ: ಮೈಸೂರು ಭಾಗದಲ್ಲಿ ಚಿರತೆ ಉಪಟಳ ಹೆಚ್ಚಾಗಿರುವ ನಡುವೆಯೇ ಕಾರ್ತಿಕ ಜಾತ್ರೆಗೆಂದು ಹೊರಟಾಗ ಚಿರತೆ ದಾಳಿ ಮಾಡಿ ವಿದ್ಯಾರ್ಥಿ ಮೃತಪಟ್ಟ ಘಟನೆ ತಾಲ್ಲೂಕಿನ ಮದ್ಗಾರ್ ಲಿಂಗಯ್ಯನ ಹುಂಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಮೈಸೂರಿನ ಮಹಾರಾಜ ಕಾಲೇಜಿನ ವಿದ್ಯಾರ್ಥಿ, ಗ್ರಾಮದ ಚನ್ನಮಲ್ಲದೇವರು ಎಂಬುವವರ ಪುತ್ರ ಮಂಜುನಾಥ್( ೧೯) ಮೃತ ಯುವಕ. ತಿ.ನರಸೀಪುರ ತಾಲ್ಲೂಕಿನ ಸೋಸಲೆ ಹೋಬಳಿ ಉಕ್ಕಲಗೆರೆ ಸುತ್ತಮುತ್ತ ಚಿರತೆ ಕಾಟವಿದ್ದರೂ ಎಂದೂ ಜನರಿಗೆ ತೊಂದರೆ ನೀಡಿರಲಿಲ್ಲ. ಆದರೆ ಜನಸಂದಣಿ ಇದ್ದರೂ ಚಿರತೆ ದಾಳಿಗೆ ವಿದ್ಯಾರ್ಥಿ ಬಲಿಯಾಗಿರುವುದು ಈ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ. ಚಿರತೆ ಸೆರೆಗೆ ಅರಣ್ಯ ಇಲಾಖೆ ಮುಂದಾಗಿದ್ದು, ಎಚ್ಡಿಕೋಟೆ ಎಸಿಎಫ್ ಶಿವರಾಮ್, ಆರ್ಎಫ್ಒ ಅವರ ನೇತೃತ್ವದ ತಂಡ ಮೂರು ಬೋನುಗಳನ್ನು ಇರಿಸಿದೆ. ಮೃತನ ಶವವನ್ನು ಮೈಸೂರು ಕೆಆರ್ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಶವ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು.
ಕಾರ್ತಿಕ ಸೋಮವಾರ ಇದ್ದುದರಿಂದ ಮಲ್ಲಪ್ಪನ ಬೆಟ್ಟದ ಸಮೀಪವಿರುವ ಮುದ್ದು ಮಾರಮ್ಮ ದೇವಾಲಯದ ಬಳಿ ಸ್ನೇಹಿತರ ಜತೆ ಪೂಜೆಗೆಂದು ಮಂಜುನಾಥ್ ಹೋಗಿದ್ದರು. ಮುಂದೆ ಸಾಗುತ್ತಿದ್ದ ವೇಳೆ ಪೊದೆಯಿಂದ ಜಿಗಿದ ಚಿರತೆ ಮಂಜುನಾಥ್ ಮೇಲೆ ದಾಳಿ ನಡೆಸಿ, ಎಳೆದಾಡಿ ಕತ್ತಿನ ನಾಳವನ್ನು ಕಚ್ಚಿ ರಕ್ತ ಹೀರಿದೆ. ಸ್ನೇಹಿತರು ಕಲ್ಲು ಹೊಡೆದು ರಕ್ಷಿಸಲು ಪ್ರಯತ್ನ ಮಾಡಿದ್ದಾದರೂ ಪ್ರಯೋಜನವಾಗದೆ ಗ್ರಾಮಸ್ಥರಿಗೆ ತಿಳಿಸಿದಾಗ ಬಂದು ನೋಡುವಷ್ಟರಲ್ಲಿ ಮಂಜುನಾಥನ ಪ್ರಾಣಪಕ್ಷಿ ಹಾರಿ ಹೋಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕೆಲ ದಿನಗಳಿಂದ ಈ ಭಾಗದಲ್ಲಿ ಚಿರತೆ ಕಾಟವಿದೆ. ಮಹದೇವಮ್ಮ ಎಂಬುವರ ಮನೆಗೆ ನುಗ್ಗಿ ಮೇಕೆಗಳನ್ನು ಚಿರತೆ ಹೊತ್ತೊಯ್ದಿತ್ತು. ನಾಯಿಗಳ ಮೇಲೂ ದಾಳಿ ಮಾಡಿದೆ. ಮಲ್ಲಪ್ಪನ ಬೆಟ್ಟದ ಸುತ್ತ ಮುತ್ತಲಿನ ಗ್ರಾಮದ ಜನ ರಾತ್ರಿ ವೇಳೆ ಹೊರಗೆ ಬರಲು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಗಸ್ತು ತಿರುಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.
ಅರಣ್ಯ ಇಲಾಖೆ ದೌಡು: ವಿಷಯ ತಿಳಿದ ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ವಿಶೇಷ ಕಾರ್ಯಪಡೆಯ ೧೫ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಟ್ಟದ ಸುತ್ತಮುತ್ತಲ ಪೊದೆಗಳನ್ನು ತೆರವುಗೊಳಿಸಿದರು. ಸಿಎಫ್ ಡಾ.ಮಾಲತಿಪ್ರಿಯ, ಡಿಸಿಎಫ್ ಕಮಲಾ ಕರಿಕಾಳನ್ ಅವರ ಮಾರ್ಗದರ್ಶನದಲ್ಲಿ ಎಸಿಎಫ್ ಶಿವರಾಮ್ ಹಾಗೂ ತಂಡ ಗ್ರಾಮದಲ್ಲಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಿತು.
ಈಗಾಗಲೇ ಘಟನೆ ಕುರಿತು ಮೇಲಾಧಿಕಾರಿಗಳಿಗೆ ವರದಿ ನೀಡಲಾಗಿದೆ. ೨ ಲಕ್ಷ ರೂ. ಪರಿಹಾರವನ್ನು ಕುಟುಂಬಕ್ಕೆ ನೀಡಲಾಗುತ್ತದೆ. ಪ್ರಕ್ರಿಯೆ ಮುಗಿದ ನಂತರ ಉಳಿಕೆ ೫.೫೦ ಲಕ್ಷ ರೂ.ಗಳನ್ನು ಅರಣ್ಯ ಇಲಾಖೆಯಿಂದ ನೀಡಲಾಗುತ್ತದೆ ಎಂದು ಡಿಸಿಎಫ್ ಕಮಲಾ ಕರಿಕಾಳನ್ ತಿಳಿಸಿದರು.
ಸ್ಥಳಕ್ಕೆ ಬನ್ನೂರು ಪೊಲೀಸ್ ಠಾಣೆಯವರು ಭೇಟಿ ನೀಡಿದ್ದರು ಶಾಸಕ ಎಂ. ಅಶ್ವಿನ್ ಕುಮಾರ್ ಕೂಡ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ಮೃತನ ಕುಟುಂಬಕ್ಕೆ ಸರ್ಕಾರದಿಂದ ಸಿಗಬಹುದಾದ ಪರಿಹಾರ ದೊರಕಿಸುವ ಭರವಸೆ ನೀಡಿದ್ದಾರೆ.
ಮೃತನ ಮನೆಗೆ ಮೈಮುಲ್ ವಾಜಿ ಅಧ್ಯಕ್ಷ ಸಿ.ಓಂಪ್ರಕಾಶ್, ಉಕ್ಕಲಗೆರೆ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಅಡುಗೆ ಕುವಾರ್, ರೈತ ಮುಖಂಡ ಕಳ್ಳಿಪುರ ಮಹದೇವಸ್ವಾಮಿ, ಕೊನಿಕ್ಸ್ ವಾಜಿ ನಿರ್ದೇಶಕ ಉಕ್ಕಲಗೆರೆ ಬಸವಣ್ಣ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
೧೫ ಚಿರತೆ ಸೆರೆ!
ಮೈಸೂರು ಭಾಗದಲ್ಲಿ ಈ ವರ್ಷದ ಏಪ್ರಿಲ್ ನಂತರ ೧೫ ಚಿರತೆಗಳನ್ನು ಸೆರೆ ಹಿಡಿಯಲಾಗಿದೆ. ಕೆಆರ್ಎಸ್, ಮೈಸೂರಿನ ಆರ್ಬಿಐ ಘಟಕದ ಆವರಣದಲ್ಲಿ ಚಿರತೆ ಕಾಟ ಇರುವ ದೂರು ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಈ ಭಾಗದಲ್ಲಿ ಈವರೆಗೂ ಚಿರತೆ ದಾಳಿ ಅಲ್ಲಲ್ಲಿ ಆಗಿದ್ದರೂ ವ್ಯಕ್ತಿ ಮೃತಪಟ್ಟಿರುವುದು ಇದೇ ಮೊದಲು. ಚಿರತೆ ಸೆರೆಗೆ ಬೋನುಗಳನ್ನು ಇರಿಸಲಾಗಿದ್ದು, ಜನರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡುತ್ತೇವೆ.
–ಡಾ.ಮಾಲತಿ ಪ್ರಿಯ, ಸಿಎಫ್ ಮೈಸೂರು ವೃತ
ಟೆಹ್ರಾನ್ : ಪಶ್ಚಿಮ ಏಷ್ಯಾದಲ್ಲಿನ ಯುದ್ಧಕ್ಕೆ ಶೀಘ್ರವೇ ಅಂತ್ಯ ಹಾಡುವುದಾಗಿ ಶನಿವಾರವಷ್ಟೆ ಹೇಳಿದ್ದ ಟ್ರಂಪ್, ಈಗ ಇರಾನ್ ಮೇಲಿನ ದಾಳಿಗಳನ್ನು…
ಸೌದಿ ಅರೇಬಿಯಾ : ಇರಾನ್-ಇಸ್ರೇಲ್ ಸಂಘರ್ಷದ ನಡುವೆ ಗಲ್ಫ್ ದೇಶಗಳ ಮೇಲಿನ ದಾಳಿಗಳು ಹೆಚ್ಚಾಗುತ್ತಿದ್ದು, ಇರಾನ್ನ ಎರಡು ಕ್ಷೀಪಣಿಗಳನ್ನು ಹೊಡೆದುರುಳಿಸಿರುವುದಾಗಿ…
ಬಾಗಲಕೋಟೆ : ಬಾಗಲಕೋಟೆ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ ಅಭ್ಯರ್ಥಿ ಉಮೇಶ್ ಮೇಟಿ ಅವರು ಇಂದು (ಮಾ.23)…
ಹವಾನಾ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗೊಡ್ಡು ಬೆದರಿಕೆಗಳಿಗೆ ನಾವು ಜಗ್ಗುವುದಿಲ್ಲ ಎಂದು ಕ್ಯೂಬಾ ದೇಶದ ವಿದೇಶಾಂಗ…
ಹನೂರು : ಪಟ್ಟಣದ ಇಂದಿರಾ ಕ್ಯಾಂಟೀನ್ಗೆ ಶಾಸಕ ಎಂ.ಆರ್ ಮಂಜುನಾಥ್ ದಿಢೀರ್ ಭೇಟಿ ನೀಡಿ ಗ್ರಾಹಕರಿಗೆ ತಯಾರಿಸಿದ್ದ ಅನ್ನ ಸಾಂಬಾರ್…
ನ್ಯೂಯಾರ್ಕ್ : ಲ್ಯಾಂಡಿಂಗ್ ವೇಳೆ ಏರ್ ಕೆನಡಾ ಎಕ್ಸ್ಪ್ರೆಸ್ ವಿಮಾನ ಫೈರ್ ಟ್ರಕ್ಗೆ ಡಿಕ್ಕಿಯಾಗಿ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದು, 100ಕ್ಕೂ…