ಕೊಡಗು

ಮಲ್ಲಳ್ಳಿ ಫಾಲ್ಸ್ ಗೆ ಜೀವಕಳೆ ; ನೋಡುಗರ ಕಣ್ಮನ ಸೆಳೆಯುವ ಜಲಧಾರೆ

ಸೋಮವಾರಪೇಟೆ: ಎತ್ತ ನೋಡಿದರೂ ಹಚ್ಚಹಸಿರಿನ ಸುಂದರ ಪ್ರಕೃತಿಯ ಸೊಬಗು… ನಿಮಿಷಕೊಮ್ಮೆ ಮಂಜಿನಿಂದ ಮುಸುಕಿ ಕಣ್ಮರೆಯಾಗುವ ಜಲಧಾರೆ… ಒಬ್ಬರ ಮಾತುಗಳು ಇನ್ನೊಬ್ಬರಿಗೆ ಕೇಳದಷ್ಟು ಭೋರ್ಗೆರೆಯುವ ನೀರಿನ ಶಬ್ದ… ಇದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಮಲ್ಲಳ್ಳಿ ಜಲಪಾತದಲ್ಲಿ ಸದ್ಯದ ಚಿತ್ರಣ.

ಹೌದು. ದಕ್ಷಿಣದ ಕಾಶ್ಮೀರ, ಭಾರತದ ಸ್ಕಾಟ್‌ಲ್ಯಾಂಡ್ ಖ್ಯಾತಿಯ ಕೊಡಗು ಜಿಲ್ಲೆಯ ಜಲಪಾತಗಳಿಗೆ ಈಗ ಜೀವ ಕಳೆ ಬಂದಿದೆ. ಅದರಲ್ಲೂ ಹಚ್ಚ ಹಸಿರಿನ ಪರಿಸರದ ನಡುವೆ ಭೋರ್ಗರೆಯುತ್ತಿರುವ ಮಲ್ಲಳ್ಳಿ ಜಲಪಾತ ನೋಡುಗರ ಕಣ್ಮನ ಸೆಳೆಯುತ್ತಿದೆ.

ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶಗಳಲ್ಲಿ ಕಳೆದ ಒಂದು ವಾರ ವರುಣ ಆರ್ಭಟಿಸಿದ್ದರಿಂದ ಮಲ್ಲಳ್ಳಿ ಜಲಪಾತದ ಸೌಂದರ್ಯವನ್ನು ದ್ವಿಗುಣಗೊಂಡು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಮಲ್ಲಳ್ಳಿ ಜಲಧಾರೆಯನ್ನು ನೋಡಲು ಸಾವಿರಾರು ಮಂದಿ ಪ್ರವಾಸಿಗರು ಆಗಮಿಸುತ್ತಿದ್ದು, ಪ್ರಾಕೃತಿಕ ಸೌಂದರ್ಯಕ್ಕೆ ಮಾರುಹೋಗುತ್ತಿದ್ದಾರೆ.

ನಿಸರ್ಗ ರಮಣೀಯತೆಯನ್ನು ತನ್ನೊಡಲಲ್ಲಿರಿಸಿಕೊಂಡಿರುವ ಪುಷ್ಪಗಿರಿ ಬೆಟ್ಟತಪ್ಪಲಿನಲ್ಲಿ ಹುಟ್ಟುವ ಕುಮಾರಧಾರಾ ನದಿ ಮಲ್ಲಳ್ಳಿ ಗ್ರಾಮದ ಬೃಹತ್ ಕಲ್ಲು ಬಂಡೆಯಿಂದ ಕೆಳಭಾಗಕ್ಕೆ ಭೋರ್ಗರೆಯುತ್ತಾ ಧುಮುಕಿ ಜಲಧಾರೆಯಾಗಿ ಪ್ರವಹಿಸುವ ದೃಶ್ಯ ಮನಮೋಹಕವಾಗಿದೆ.

ಜಲಪಾತದಲ್ಲಿ ನಡೆಯುವ ಅವಘಡಗಳನ್ನು ತಪ್ಪಿಸಲು ನೀರಿನೊಳಗೆ ಯಾರೂ ಇಳಿಯದಂತೆ ಪ್ರವಾಸೋದ್ಯಮ ಇಲಾಖೆಯಿಂದ ಬ್ಯಾರಿಕೇಡ್ ಆಳವಡಿಸಲಾಗಿದೆ. ಜಲಪಾತದ ಮೇಲ್ಬಾಗದಲ್ಲಿರುವ ಬೃಹತ್ ಗಾತ್ರದ ಕಲ್ಲುಗಳು ಅತ್ಯಂತ ಆಕರ್ಷಣೀಯ ಸ್ಥಳವಾಗಿದ್ದು, ಇಲ್ಲಿ ನಿಂತು ಜಲಪಾತದ ಸೌಂದರ್ಯವನ್ನು ಕುಂಬಿಕೊಳ್ಳುತ್ತಾ ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಜಲಪಾತದ ಅಂದವನ್ನು ಸೆರೆಹಿಡಿದು ಪ್ರವಾಸಿಗರು ಸಂಭ್ರಮಿಸುತ್ತಿದ್ದಾರೆ.

ಗೆಳೆಯರೊಂದಿಗೆ ಸೆಲ್ಸಿ ತೆಗೆದುಕೊಂಡು ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗುತ್ತಿದ್ದಾರೆ. ಕೊಡಗು ಸೇರಿದಂತೆ ಹೊರ ಜಿಲ್ಲೆಗಳ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವುದು ವಿಶೇಷವಾಗಿದೆ. ಬೆಂಗಳೂರಿನಿಂದಲೇ ಅತೀ ಹೆಚ್ಚು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿರುವುದು ಜಲಪಾತದ ಆಕರ್ಷಣೀಯ ಸೌಂದರ್ಯಕ್ಕೆ ಸಾಕ್ಷಿಯಾಗಿದೆ.

ಪ್ರವಾಸಿಗರ ರಕ್ಷಣೆ, ಮಾಹಿತಿಗಾಗಿ ಇಲಾಖೆಯಿಂದ ಪ್ರವಾಸಿ ಮಿತ್ರರನ್ನು ಇಲ್ಲಿಗೆ ನಿಯೋಜಿಸಲಾಗಿದ್ದು, ಇವರು ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರ ಮಾಹಿತಿ ನೀಡುತ್ತಿದ್ದಾರೆ. ಜಲಪಾತದ ನೀರಿಗೆ ಇಳಿಯದಂತೆ, ಆಪಾಯಕಾರಿ ಸ್ಥಳಗಳತ್ತ ತೆರಳದಂತೆ ಎಚ್ಚರಿಕೆಯನ್ನು ನೀಡುತ್ತಾರೆ.

ಮಲ್ಲಳ್ಳಿ ಜಲಪಾತದವರೆಗೂ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿರುವದರಿಂದ ಪ್ರವಾಸಿಗರು ನಡೆಯುವ ಪ್ರಯಾಸ ತಪ್ಪಿದಂತಾಗಿದೆ. ಹಾಲ್ನೊರೆಯಂತಹ ನೀರಿನ ವೈಭವ, ಜುಳುಜುಳು ನಾದದೊಂದಿಗೆ ಹೃನ್ಮನ ತಣಿಸುವ ಸೌಂದರ್ಯದ ಮಲ್ಲಳ್ಳಿ ಜಲಪಾತ ವೀಕ್ಷಣೆಗೆ ಇದು ಸುಸಂದರ್ಭವಾಗಿದ್ದು, ವಾರಾಂತ್ಯದ ದಿನಗಳಲ್ಲಿ ಸಾವಿರಾರು ಮಂದಿ ಭೇಟಿ ನೀಡುತ್ತಿದ್ದಾರೆ. ಭಾರಿ ಮಳೆಯ ಸಂದರ್ಭ ಜಲಪಾತದ ಬುಡದಲ್ಲಿ ನಿಂತು ನೋಡುವುದು ಕಷ್ಟ. ಜಲಪಾತದ ಸಮೀಪಕ್ಕೆ ತೆರಳಲು ೪೦೦ಕ್ಕೂ ಅಧಿಕ ಮೆಟ್ಟಿಲನ್ನು ನಿರ್ಮಿಸಲಾಗಿದೆ. ಮೆಟ್ಟಿಲುಗಳನ್ನು ಇಳಿದು ಹೋಗಬಹುದಾಗಿದೆ.

ತಲುಪುವುದು ಹೇಗೆ?
ಸೋಮವಾರಪೇಟೆ ತಾಲ್ಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಳ್ಳಿ ಎಂಬ ಗ್ರಾಮದಲ್ಲಿ ಜಲಪಾತವಿದೆ. ಪಟ್ಟಣದಿಂದ ೨೫ ಕಿ.ಮೀ. ದೂರ ಕ್ರಮಿಸಿದರೆ, ಜಲಪಾತ ಸಿಗುತ್ತದೆ. ಯಡೂರು, ಶಾಂತಳ್ಳಿ, ಕುಮಾರಳ್ಳಿ ಮಾರ್ಗವಾಗಿ ೨೦ ಕಿ.ಮೀ. ಕ್ರಮಿಸಿ, ಹಂಚಿನಳ್ಳಿ ಗ್ರಾಮವನ್ನು ತಲುಪಿ, ಬಲಕ್ಕೆ ತಿರುಗಿ ೪ ಕಿ.ಮೀ. ತೆರಳಿದರೆ ಮಲ್ಲಳ್ಳಿ ಜಲಪಾತದ ದರ್ಶನವಾಗುತ್ತದೆ. ಜಲಪಾತದವರೆಗೂ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿರುವುದರಿಂದ ಸ್ಥಳಕ್ಕೆ ವಾಹನಗಳಲ್ಲಿ ತೆರಳಬಹುದು. ಮಲ್ಲಳ್ಳಿ ಜಲಪಾತವನ್ನು ಹತ್ತಿರದಿಂದ ನೋಡುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಜಲಪಾತ ನೋಡಲು ಎಷ್ಟು ಸುಂದರವಾಗಿದೆಯೋ ಅಷ್ಟೇ ಅಪಾಯಕಾರಿಯಾಗಿದೆ. ಸಾಕಷ್ಟು ಮಂದಿ ನೀರಿಗಿಳಿದು ಇಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ಪ್ರವಾಸಿಗರು ನೀರಿಗೆ ಇಳಿಯಬಾರದು. ಈ ಬಗ್ಗೆ ಎಚ್ಚರಿಕೆ ಫಲಕ, ಮೆಸ್ ಅಳವಡಿಕೆ, ಹೋಂ ಗಾರ್ಡ್‌ಗಳನ್ನ ನೇಮಕದ ಬಳಿಕವೂ ಅವರ ಕಣ್ಣು ತಪ್ಪಿಸಿ ನೀರಿಗಿಳಿಯುವ ಕೆಲಸಕ್ಕೆ ಮುಂದಾಗುವುದು ಹಾಗೂ ಅನಾಹುತ ಸಂಭವಿಸುತ್ತಿರುವುದು ವಿಪರ್ಯಾಸ. ಪ್ರವಾಸಿಗರು ತಾವಾಗಿಯೇ ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕು.

-ರಕ್ಷಿತ್ ಕೂತಿ, ಸ್ಥಳೀಯರು, ಸೋಮವಾರಪೇಟೆ

ಈ ಜಲಪಾತಕ್ಕೆ ಹಲವು ವರ್ಷಗಳಿಂದ ಬರುತ್ತಿದ್ದೇವೆ. ಈ ಜಲಪಾತವನ್ನು ನೋಡಲು ತುಂಬಾ ಖುಷಿಯಾಗುತ್ತದೆ. ಮೊದಲು ಜಲಪಾತದ ಸಮೀಪಕ್ಕೆ ತೆರಳಲು ಮೆಟ್ಟಿಲಿನ ವ್ಯವಸ್ಥೆ ಇಲ್ಲದೇ ಕಷ್ಟವಾಗಿತ್ತು. ಇತ್ತೀಚಿನ ದಿನಗಳಲ್ಲಿ ಮೆಟ್ಟಿಲಿನ ಸೌಕರ್ಯದೊಂದಿಗೆ ಜಲಪಾತದ ಪಕ್ಕದಲ್ಲಿ ಮೆಸ್ ಅಳವಡಿಸಲಾಗಿದೆ. ಎತ್ತರದಿಂದ ಬೀಳುವ ನೀರನ್ನು ಸಮೀಪದಲ್ಲಿ ನೋಡುವಾಗ ರೋಮಾಂಚನವಾಗುತ್ತದೆ.

-ಸಂಕಿತ್ ಹರಪಳ್ಳಿ, ಪ್ರವಾಸಿ.

ಆಂದೋಲನ ಡೆಸ್ಕ್

Recent Posts

ಹನೂರು| ಆಟೋ ಹಾಗೂ ಕಾರಿನ ನಡುವೆ ಡಿಕ್ಕಿ: ಮೂವರಿಗೆ ಗಂಭೀರ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ‌ ಮಹದೇಶ್ವರಬೆಟ್ಟ ರಸ್ತೆಯ ತಾಳುಬೆಟ್ಟ–ಕೋಣನಕೆರೆ ಮಾರ್ಗದಲ್ಲಿ ಮಂಗಳವಾರ ಬೆಳ್ಳಂಬೆಳಿಗ್ಗೆ ಆಟೋ…

2 hours ago

ನೀಟ್‌ ಪರೀಕ್ಷೆಯ ರದ್ದು, ಕೇಂದ್ರ ಸರ್ಕಾರದ ಬಹು ದೊಡ್ಡ ಹಗರಣ: ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್

ಬೆಂಗಳೂರು: ನೀಟ್‌ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸದ ಕೇಂದ್ರ ಸರ್ಕಾರ, ಪರೀಕ್ಷೆ ರದ್ದು ಮಾಡುವ ಮೂಲಕ ವೈದ್ಯರಾಗಬೇಕು ಎಂಬ ಕನಸು ಹೊತ್ತಿದ್ದ…

2 hours ago

ಪಾಕಿಸ್ತಾನದಲ್ಲಿ ಭೀಕರ ಬಾಂಬ್‌ ಸ್ಫೋಟ: 9 ಮಂದಿ ಸಾವು

ಪಾಕಿಸ್ತಾನ: ಇಲ್ಲಿನ ವಾಯುವ್ಯ ಭಾಗದ ಮಾರುಕಟ್ಟೆಯೊಂದರಲ್ಲಿ ರಿಕ್ಷಾಗೆ ಅಳವಡಿಸಿದ್ದ ಬಾಂಬ್‌ ಸ್ಫೋಟಗೊಂಡ ಪರಿಣಾಮ 9 ಮಂದಿ ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ…

2 hours ago

ನಾಳೆಯಿಂದ ಎರಡು ದಿನ ಸಿದ್ದರಾಮಯ್ಯ ಮೈಸೂರು ಪ್ರವಾಸ

ಮೈಸೂರು: ನಾಳೆಯಿಂದ ಎರಡು ದಿನಗಳ ಕಾಲ ಸಿಎಂ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ನಾಳೆ ಸಂಜೆ 5.30ಕ್ಕೆ ವಿಶೇಷ…

2 hours ago

ವನ್ಯಜೀವಿ ಸಂಚಾರವಿರುವ ಚಾರಣಪಥ, ಸಂಚಾರಪಥ ಸ್ಥಗಿತಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು: ಚಾಮರಾಜನಗರದ ನಾಗಮಲೆ ಅರಣ್ಯದಲ್ಲಿ ಚಿರತೆ ದಾಳಿಯಿಂದ 10 ವರ್ಷದ ಬಾಲಕ ಮೃತಪಟ್ಟಿರುವ ಹಿನ್ನೆಲೆಯಲ್ಲಿ ವನ್ಯಜೀವಿ ಸಂಚಾರ ಇರುವ ಎಲ್ಲ…

2 hours ago

ನಾಗಮಲೆ ಗ್ರಾಮದಲ್ಲಿ ಎರಡು ಮೇಕೆ ಹೊತ್ತೊಯ್ದ ಚಿರತೆ: ಮತ್ತಷ್ಟು ಆತಂಕ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ…

2 hours ago