ಜಿಲ್ಲೆಗಳು

ಇತಿಹಾಸ ಸೇರಲಿದೆಯೇ ಮಹಾರಾಣಿ ಕಾಲೇಜು ಕಟ್ಟಡ?

ಸಂರಕ್ಷಣೆ ಕಾರ್ಯ ಕೈಗೆತ್ತಿಕೊಳ್ಳದಿದ್ದರೆ ಪಾಳು ಬಂಗಲೆಯಾಗಿ ಉಳಿಯುವ ಸಾಧ್ಯತೆ?; ಚುನಾವಣೆಗೂ ಮುನ್ನ ಎಚ್ಚೆತ್ತರೆ ಒಳಿತು

ಗಿರೀಶ್ ಹುಣಸೂರು

ಮೈಸೂರು: ಸ್ವಾತಂತ್ರ್ಯ ಪೂರ್ವದಲ್ಲಿಯೇ ಮಹಿಳೆಯರೂ ಶಿಕ್ಷಿತರಾಗಬೇಕೆಂಬ ಮಹದುದ್ದೇಶದಿಂದ ರಾಜಮಾತೆ ಕೆಂಪರಾಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನ ಅವರು ಕಟ್ಟಿಸಿರುವ ಮಹಾರಾಣಿ ವಿಜ್ಞಾನ ಕಾಲೇಜು ಕಟ್ಟಡ ಇತಿಹಾಸದ ಕಾಲಗರ್ಭದಲ್ಲಿ ಸೇರಿ ಹೋಗಲಿದೆಯೇ? ಚುನಾವಣೆ ಘೋಷಣೆಯಾಗುವ ಮುನ್ನ ಸಂರಕ್ಷಣೆ ಕಾರ್ಯ ಕೈಗೆತ್ತಿಕೊಳ್ಳದಿದ್ದರೆ ಸುಂದರವಾದ ಕಾಲೇಜು ಕಟ್ಟಡ ನಗರದ ಹೃದಯ ಭಾಗದಲ್ಲಿ ಪಾಳು ಬಂಗಲೆಯಾಗಿ ಉಳಿಯಲಿದೆ.
ನಗರದ ಜೆಎಲ್‌ಬಿ ರಸ್ತೆಯಲ್ಲಿ ೧೮೮೧ರಲ್ಲಿ ಆರಂಭಿಸಲಾದ ಪ್ರಾಥಮಿಕ ಶಾಲೆ, ನಂತರದಲ್ಲಿ ಪ್ರಥಮ ದರ್ಜೆ ಕಾಲೇಜಾಗಿ ಮಾರ್ಪಟ್ಟು ಕಲಾ ಮತ್ತು ವಿಜ್ಞಾನ ವಿಭಾಗ ಒಟ್ಟಿಗೆ ನಡೆಯುತ್ತಿತ್ತು. ೧೯೭೯ರಲ್ಲಿ ಕಲಾ ಕಾ ಲೇಜಿನಿಂದ ಬೇರ್ಪಟ್ಟು, ವಿಜ್ಞಾನ ಕಾಲೇಜು ಆರಂಭವಾಯಿತು. ೫ ಎಕರೆ ಪ್ರದೇಶದ ವಿಶಾಲವಾದ ಜಾಗದಲ್ಲಿ ಸುಂದರವಾಗಿ ನಿರ್ಮಿಸಿರುವ ಈ ಕಲಾತ್ಮಕ ಕಟ್ಟಡಕ್ಕೆ ಇದೀಗ ಬರೋಬ್ಬರಿ ೧೦೫ ವರ್ಷಗಳಾಗಿವೆ.
ಕಟ್ಟಡದ ನಿರ್ವಹಣೆ ಇಲ್ಲದ ಕಾರಣಕ್ಕೆ ಸ್ಲ್ಯಾಬ್ ಮತ್ತು ಗೋಡೆಗಳಲ್ಲಿ ಬಿರುಕು ಬಿಟ್ಟು ಪಾಚಿ ಕಟ್ಟಿದೆ. ವಿಶಾಲವಾದ ಕಾಲೇಜು ಆವರಣದಲ್ಲಿ ನೆರಳಿಗಾಗಿ ಬೆಳೆಸಿರುವ ಮರಗಳು ಬೃಹದಾಕಾರವಾಗಿ ಬೆಳೆದು ನಿಂತಿ ದ್ದು, ಅದರ ಎಲೆಗಳು ಕಟ್ಟಡದ ಮೇಲೆ ಉದುರಿಬಿದ್ದು ಕಸ ಸಂಗ್ರಹಣೆಯಾಗುತ್ತಿದೆ. ಇದು ಮಳೆ ನೀರು ಹರಿದು ಹೋಗಲು ಅಳವಡಿಸಿರುವ ಪೈಪ್‌ಗಳಲ್ಲಿ ಶೇಖರಗೊಂಡು ನೀರು ಹೊರ ಹೋಗಲಾಗದೆ ಮಹಡಿಯ ಮೇಲೆ ನಿಂತು ಇಡೀ ಕಟ್ಟಡ ಶಿಥಿಲಗೊಳ್ಳುವಂತಾಗಿದೆ. ಜೊತೆಗೆ ಮಹಡಿಯ ನಾಲ್ಕು ದಿಕ್ಕುಗಳಲ್ಲೂ ಅರಳೀ ಮರಗಳು ಬೆಳೆದು ನಿಂತು ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿವೆ. ಅಲ್ಲದೇ ಆಗಿನ ಕಾಲಕ್ಕೆ ಕಟ್ಟಡದ ಮೇಲೆ ಹಾಕಲಾಗಿರುವ ಮದ್ರಾಸ್ ಆರ್‌ಸಿಸಿಯ ಮೇಲೆ ಆಗಾಗ್ಗೆ ಟೈಲ್ಸ್‌ಗಳನ್ನು ಅಳವಡಿಸಿರುವುದರಿಂದ ಭಾರ ಹೆಚ್ಚಾಗಿದೆ. ಕಟ್ಟಡ ನಿರ್ಮಿಸುವ ಕಾಲಕ್ಕೆ ಬಳಸಲಾಗಿರುವ ಇಟ್ಟಿಗೆಯನ್ನು ಲೋಕೋಪಯೋಗಿ ಇಲಾಖೆ ಗುಣಮಟ್ಟದ ಪರೀಕ್ಷೆಗೆ ಕಳುಹಿಸಿ ವರದಿ ತರಿಸಿಕೊಂಡಿದ್ದು, ಆಗಿನ ಕಾಲದ ಸುಟ್ಟ ಇಟ್ಟಿಗೆ ಗಟ್ಟಿಯಾಗಿಯೇ ಇದೆ ಎಂದು ವರದಿ ಹೇಳಿದೆ. ಜತೆಗೆ ಕಟ್ಟಡ ನಿರ್ಮಾಣಕ್ಕೆ ಬಳಸಲಾಗಿರುವ ಸುಣ್ಣದ ಗಾರೆ ಗಟ್ಟಿಯಾಗಿದ್ದರೂ ಮಳೆ ನೀರು ಬಿದ್ದು ಕಟ್ಟಡದ ಗೋಡೆ ಮತ್ತು ಆರ್‌ಸಿಸಿ ಶಿಥಿಲವಾಗಿದ್ದರೆ, ಕಾಲೇಜು ಆವರಣದಲ್ಲಿ ಬೆಳೆದು ನಿಂತಿರುವ ಬೃಹತ್ ಮರಗಳ ಬೇರುಗಳು ತಳಪಾಯವನ್ನೇ ಸಡಿಲಗೊಳಿಸಿರುವುದರಿಂದ ಇಡೀ ಕಾಲೇಜು ಕಟ್ಟಡ ಅವಸಾನದ ಅಂಚಿಗೆ ಬಂದು ನಿಂತಿದೆ. ಶೀಘ್ರ ಸಂರಕ್ಷಣೆ ಕಾರ್ಯ ನಡೆಯದಿದ್ದರೆ ಭಾರೀ ದೊಡ್ಡ ಅನಾಹುತವಾಗಲಿದೆ ಎಂದು ತಜ್ಞರು ಮತ್ತು ಇಂಜಿನಿಯರುಗಳೇ ಹೇಳುತ್ತಾರೆ.
ಅ.೨೧ರಂದು ಇನ್ನೇನು ಕಾಲೇಜು ಆರಂಭವಾಗಬೇಕು ಆ ಸಂದರ್ಭದಲ್ಲಿಯೇ ಈ ಕಟ್ಟಡದಲ್ಲಿನ ಮೊದಲ ಮಹಡಿಯಲ್ಲಿದ್ದ ಪ್ರಯೋಗಾಲಯದ ಎರಡು ಕೊಠಡಿಗಳು ಕುಸಿದು ಬಿದ್ದು ಆತಂಕಕ್ಕೆ ಕಾರಣ ವಾಗಿತ್ತು. ವಿದ್ಯಾರ್ಥಿಗಳು ಮತ್ತು ಪೋಷಕರು ಸುರಕ್ಷತೆ ದೃಷ್ಟಿಯಿಂದ ಟೀಸಿ ಕೊಟ್ಟುಬಿಡಿ ಬೇರೆ ಕಾಲೇಜಿಗೆ ಸೇರಿಕೊಳ್ಳುತ್ತೇವೆ ಎಂದು ದುಗುಡ ತೋಡಿಕೊಂಡಿದ್ದರಿಂದ ಸ್ವತಃ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ರವಿ ಅವರ ಕೋರಿಕೆ ಮೇರೆಗೆ ಪುರಾತತ್ವ ಇಲಾಖೆ ಅಧಿಕಾರಿಗಳು, ಮಹಾ ನಗರಪಾಲಿಕೆ ಇಂಂಜಿನಿಯರುಗಳು ಹಾಗೂ ಪಾರಂಪರಿಕ ತಜ್ಞರು ಭೇಟಿ ನೀಡಿ ಪರಿಶೀಲಿಸಿ ಸಂರಕ್ಷಣೆ ಕಾರ್ಯವನ್ನು ತ್ವರಿತಗತಿಯಲ್ಲಿ ಕೈಗೊಳ್ಳಬೇಕು ಎಂದು ವರದಿ ನೀಡಿದೆ. ಸಂರಕ್ಷಣಾ ಕಾರ್ಯಕ್ಕೆ ಸಾಕಷ್ಟು ಹಣ ಮತ್ತು ಸಮಯ ಬೇಕಿರುವುದರಿಂದ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಪಕ್ಕದ ಹೊಸ ಕಟ್ಟಡಕ್ಕೆ ಕಾಲೇಜಿನ ತರಗತಿಗಳನ್ನು ಸ್ಥಳಾಂತರಿಸಲಾಗಿದೆ.
ವಿಳಂಬ ನೀತಿ ಸರಿಯಲ್ಲ: ಕಟ್ಟಡ ಕುಸಿದು ತಿಂಗಳಾಗುತ್ತಾ ಬಂದರೂ ಪರಿಶೀಲನೆ, ವರದಿ ಇಷ್ಟರಲ್ಲೇ ಕಾಲಹರಣವಾಗುತ್ತಿದ್ದು, ಕಟ್ಟಡದ ಸಂರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಹೇಳಿ ಕೇಳಿ ೨೦೨೩ ಚುನಾವಣಾ ವರ್ಷ. ಈ ವರ್ಷಾಂತ್ಯದೊಳಗೆ ಕಟ್ಟಡದ ಸುರಕ್ಷತೆ ಕಾರ್ಯಕ್ಕೆ ಸರ್ಕಾರ ಹಣ ಬಿಡುಗಡೆ ಮಾಡಿ ಆದೇಶ ಹೊರಡಿಸಿ, ಏಜೆನ್ಸಿ ನಿಗದಿಪಡಿಸದಿದ್ದರೆ, ಚುನಾವಣೆ ಮುಗಿದು, ಹೊಸ ಸರ್ಕಾರ ರಚನೆಯಾಗಿ ಈ ಕಡೆ ಗಮನಹರಿಸುವವರೆಗೆ ಸುಂದರವಾದ ಈ ಕಟ್ಟಡ ಪಾಳು ಬೀಳಲಿದೆ ಎಂಬ ಆತಂಕವಿದೆ.


ಕಾಲೇಜು ಕಟ್ಟಡ ಕುಸಿದು ಬಿದ್ದ ನಂತರ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಕಾಲೇಜಿನ ಶೇ.೯೦ರಷ್ಟು ತರಗತಿಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿದ್ದೇವೆ. ಕಾಲೇಜು ಶಿಕ್ಷಣ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಪಾರಂಪರಿಕ ಇಲಾಖೆ ಅಧಿಕಾರಿಗಳನ್ನೊಳಗೊಂಡ ಪಾರಂಪರಿಕ ಕಟ್ಟಡಗಳ ಸಂರಕ್ಷಣಾ ಸಮಿತಿಯವರು ಭೇಟಿ ನೀಡಿ ಪರಿಶೀಲಿಸಿ ಹೋಗಿದ್ದಾರೆ. ಇನ್ನುಳಿದ ಕೆಲಸ ಸರ್ಕಾರದ ಮಟ್ಟದಲ್ಲಿ ಆಗಬೇಕಿದೆ.
-ಡಾ.ಡಿ.ರವಿ, ಪ್ರಾಂಶುಪಾಲರು.


ಈ ಹಿಂದೆ ಮಹಾರಾಜ ಕಾಲೇಜು ಹಾಗೂ ಜಲದರ್ಶಿನಿ ಅತಿಥಿ ಗೃಹದ ಒಂದು ಭಾಗ ಸಂರಕ್ಷಣೆ ಮಾಡಿದಂತೆಯೇ ಪಾರಂಪರಿಕ ತಜ್ಞರ ಸಮಿತಿ ಸಲಹೆ-ಸೂಚನೆ ಪಡೆದು ಮಹಾರಾಣಿ ವಿಜ್ಞಾನ ಕಾಲೇಜು ಕಟ್ಟಡದ ಸಂರಕ್ಷಣೆ ಮಾಡುವ ಸಂಬಂಧ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ.
-ಗೌರೀಶ್ ಗೌಡ, ಎಇಇ, ಲೋಕೋಪಯೋಗಿ ಇಲಾಖೆ

andolanait

Recent Posts

ವೈಯಕ್ತಿಕ ದ್ವೇಷ: ಕಾರ್ಮಿಕನನ್ನು ಕೊಲೆಗೈಯ್ದು ಶರಣಾದ ಆರೋಪಿ

ಚೆಟ್ಟಳ್ಳಿ: ಕಾಫಿ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಕಾರ್ಮಿಕನೊಬ್ಬ ಮತ್ತೊಬ್ಬ ಕಾರ್ಮಿಕನನ್ನು ಹತ್ಯೆಗೈದು ಪೊಲೀಸ್ ಠಾಣೆಗೆ ಬಂದು ಶರಣಾದ ಘಟನೆ…

5 hours ago

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೇ ಈಗ ರಾಜ್ಯಸಭೆ ಅಭ್ಯರ್ಥಿ

ನವದೆಹಲಿ: ರಾಜ್ಯಸಭೆ ಚುನಾವಣೆಗೆ ಬಿಜೆಪಿ 9 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬಿನ್‌ ಅವರು ಬಿಹಾರದಿಂದ…

5 hours ago

ದುಬೈನಲ್ಲಿ ಸಿಲುಕಿರುವ ಕನ್ನಡಿಗರಿಗೆ ವಿಡಿಯೋ ಕಾಲ್‌ ಮಾಡಿ ಧೈರ್ಯ ಹೇಳಿದ ವಿಜಯೇಂದ್ರ

ಬೆಂಗಳೂರು: ಅಮೇರಿಕಾ, ಇಸ್ರೇಲ್‌-ಇರಾನ್‌ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ದುಬೈನಲ್ಲಿ ಸಿಲುಕಿ ಆತಂಕದಲ್ಲಿರುವ ಕನ್ನಡಿಗರ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ…

5 hours ago

ಬೂದಬಾಳು ಗ್ರಾಮದ ಕೆರೆಗೆ ಬಾಗಿನ ಸಮರ್ಪಿಸಿದ ಶಾಸಕ ಎಂ.ಆರ್.ಮಂಜುನಾಥ್

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಬರಪೀಡಿತ ಪ್ರದೇಶಗಳಲ್ಲಿ ಒಂದಾದ ಬೂದಬಾಳು ಕೆರೆಗೆ ಕಾವೇರಿ ನದಿ ಮೂಲದಿಂದ…

5 hours ago

ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಪ್ರತಿಯೊಬ್ಬ ರೈತರಿಗೂ ದೊರಕಿಸಿ: ಬಿಜೆಪಿ ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ಷೇರುದಾರರು ನಿಮ್ಮ ಮೇಲೆ ವಿಶ್ವಾಸವಿಟ್ಟು ಕೃಷಿ ಪತ್ತಿನ ಸಹಕಾರ ಸಂಘದ…

6 hours ago

ಹಾರ್ಮುಜ್‌ ಜನಸಂಧಿಯನ್ನು ಮುಚ್ಚಿದ ಇರಾನ್: ತೈಲ ಬೆಲೆಯಲ್ಲಿ ಭಾರೀ ಏರಿಕೆ

ಟೆಹರಾನ್:‌ ಅಮೇರಿಕಾ ಹಾಗೂ ಇಸ್ರೇಲ್‌ ದೇಶಗಳು ಇರಾನ್‌ ಜೊತೆ ನಡೆಸುತ್ತಿರುವ ಯುದ್ಧವು ಇದೀಗ ವಿಶ್ವದ ಅತ್ಯಂತ ನಿರ್ಣಾಯಕ ಇಂಧನ ಮಾರ್ಗಗಳಲ್ಲಿ…

6 hours ago