ಜಿಲ್ಲೆಗಳು

ಹೆಗ್ಗೋಠಾರ: ದಲಿತ ಮಹಿಳೆಗೆ ಅವಮಾನಿಸಿದ ವ್ಯಕ್ತಿ ವಿರುದ್ಧ ದೂರು ದಾಖಲು

ಚಾಮರಾಜನಗರ: ತಾಲ್ಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ಭಾನುವಾರ ದಲಿತ ಕೇರಿಯ ಜನರೆಲ್ಲರೂ ಒಟ್ಟು ಸೇರಿ ಗ್ರಾಮದ ಎಲ್ಲ 42 ತೊಂಬೆ ( ಮಿನಿ‌ ಟ್ಯಾಂಕ್‌) ಗಳ ಬಳಿ ಹೋಗಿ ನೀರು ಕುಡಿದರು. ಅವರಿಗೆ ಇಷ್ಟೊಂದು ಕಡೆಗಳಲ್ಲಿ ನೀರು ಕುಡಿಯುವ ದಾಹವೇನೂ ಇರಲಿಲ್ಲ. ಆದರೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾದ ಬಳಿಕವೂ ಅಸ್ಪೃಶ್ಯತೆ ಆಚರಿಸುವ ಮನಸ್ಸುಗಳ ವಿರುದ್ಧ ಸೆಣಸುವ ದಾಹವಿತ್ತು.  

ಶುಕ್ರವಾರ ದಲಿತ ಮಹಿಳೆಯೊಬ್ಬರು ಗ್ರಾಮದ ಮಿನಿ ಟ್ಯಾಂಕ್‌ ನಲ್ಲಿಯಿಂದ ನೀರು ಕುಡಿದರು ಎಂಬ ಕಾರಣಕ್ಕೆ ಮೇಲ್ಜಾತಿಯ ವ್ಯಕ್ತಿಯೊಬ್ಬರು ಟ್ಯಾಂಕ್‌ನ ಎಲ್ಲ ನೀರು ಖಾಲಿ ಮಾಡಿಸಿ, ಗೋ ಮೂತ್ರ ಸಿಂಪಡಿಸಿ ಶುದ್ದೀಕರಿಸಿದ ಘಟನೆಗೆ ಪ್ರತಿಕ್ರಿಯೆಯಾಗಿ ಗ್ರಾಮಕ್ಕೆ ತೆರಳಿದ ಅಧಿಕಾರಿಗಳು ದಲಿತ ಮುಖಂಡರನ್ನು ಗ್ರಾಮದ ಎಲ್ಲ 42 ತೊಂಬೆಗಳ ಬಳಿ ಕರೆದೊಯ್ದು ನೀರು ಕುಡಿಸಿದರು. ಗ್ರಾಮದಲ್ಲಿರುವ ಕುಡಿಯುವ ನೀರಿನ ತೊಂಬೆಗಳು ಎಲ್ಲ ಸಮುದಾಯಗಳಿಗೂ ಸೇರಿದ್ದಾಗಿದೆ ಎಂದು ಸಂದೇಶ ಸಾರಿದರು.

ತಹಸೀಲ್ದಾರ್ ಬಸವರಾಜು, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ್, ಸಹಾಯಕ ನಿರ್ದೇಶಕ ಚಿಕ್ಕಬಸವಯ್ಯ, ಪಿಡಿಒ ಮಾದಪ್ಪ, ಗ್ರಾಮಾಂತರ ಠಾಣೆಯ ಸಬ್ ಇನ್‌ ಸ್ಪೆಕ್ಟರ್‌ ಜಯರಾಂ, ಹಾಸ್ಟೆಲ್ ವಾರ್ಡನ್ ರಾಜು ಹಾಗೂ ಇತರರ ಸಮ್ಮುಖದಲ್ಲಿ ದಲಿತ ಮುಖಂಡರು, ಯುವಕರು ಗ್ರಾಮದ ಎಲ್ಲ ಬೀದಿಗಳ ತೊಂಬೆಗಳನ್ನು ನಲ್ಲಿಯ ನೀರು ಕುಡಿದರು.

ಗ್ರಾಮದಲ್ಲಿರುವ ಕುಡಿಯುವ ನೀರಿನ ತೊಂಬೆಗಳು ಎಲ್ಲ ಸಮುದಾಯಗಳಿಗೂ ಸೇರಿದ್ದಾಗಿದೆ. ಯಾವುದೇ ಸಮುದಾಯಕ್ಕೆ ಸೀಮಿತವಲ್ಲ ಎಂಬುದರ ಕುರಿತು ಜಾಗೃತಿ ಮೂಡಿಸಿದರು. ಸ್ಥಳೀಯ ಗ್ರಾಮ ಪಂಚಾಯಿತಿಯಿಂದ “”ಇದು ಸಾರ್ವಜನಿಕರ ಕುಡಿಯುವ ನೀರಿನ ತೊಂಬೆಯಾಗಿದೆ. ಎಲ್ಲ ವರ್ಗದ ಸಾರ್ವಜನಿಕರು ಬಳಸಲು ಮುಕ್ತವಾಗಿದೆ ನೀರನ್ನು ಮಿತವಾಗಿ ಬಳಸಿʼʼ ಎಂದು ಎಲ್ಲ ಮಿನಿ ಟ್ಯಾಂಕ್‌ ಗಳ ಮೇಲೆ ಬರೆಸಲಾಯಿತು. ಇದಕ್ಕೂ ಮುನ್ನ ಉಪ ವಿಭಾಗಾಧಿಕಾರಿ ಗೀತಾ ಹುಡೇದ ಅವರು ಗ್ರಾಮಕ್ಕೆ ಆಗಮಿಸಿ ವಿವಾದಕ್ಕೆ ಕಾರಣವಾದ ತೊಂಬೆಯನ್ನು ಪರಿಶೀಲಿಸಿದರು.

ದೂರು ದಾಖಲು

ಇದೇ ವೇಳೆ ದಲಿತ ಮಹಿಳೆಯನ್ನು ಅವಮಾನಿಸಿದ ಘಟನೆ ಸಂಬಂಧ ಗ್ರಾಮದ ವ್ಯಕ್ತಿಯೊಬ್ಬರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟರ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಾಗಿದೆ. ಗ್ರಾಮದ ಗಿರಿಯಪ್ಪ ಅವರು ಮಹದೇವಪ್ಪ ಎಂಬುವರ ವಿರುದ್ದ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಗ್ರಾಮದಲ್ಲಿ ಶುಕ್ರವಾರ ನಡೆದ ಮದುವೆಗೆ ಬಂದಿದ್ದ ಸರಗೂರು ತಾಲ್ಲೂಕಿನಿಂದ ಬಂದಿದ್ದ ಮಹಿಳೆ ಶಿವಮ್ಮ ಗ್ರಾಮದ ಕೃಷ್ಣದೇವರಾಯ ದೇವಾಲಯ ಬಳಿಯ ತೊಂಬೆಯಿಂದ ನೀರು ಕುಡಿದಿದ್ದರು. ಇದನ್ನು ಗಮನಿಸಿದ ಮಹದೇವಪ್ಪ ಎಂಬವರು ಆಕೆಯನ್ನು ನಿಂದಿಸಿದ್ದಾರೆ ಎನ್ನಲಾಗಿದೆ. ತೊಂಬೆಯ ನೀರನ್ನೆಲ್ಲ ಖಾಲಿ ಮಾಡಿಸಿ ಗೋ ಮೂತ್ರದಿಂದ ಶುದ್ದಿಕರಿಸಿ ಅಸ್ಪೃಶ್ಯತೆ ಆಚರಿಸಿದ್ದಾರೆಂದು ಗ್ರಾಮದ ಯುವಕರು ಮೊಬೈಲ್ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದರು. ಮಹದೇವಪ್ಪ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ. ಸಂತ್ರಸ್ತ ಮಹಿಳೆ ಶಿವಮ್ಮ ಸೋಮವಾರ ಪೊಲೀಸ್ ಠಾಣೆಗೆ ತೆರಳಿ ಹೇಳಿಕೆ ನೀಡಲಿದ್ದಾರೆ. 

ಮುಖಂಡರ ಸಭೆ

ಭಾನುವಾರ ಬೆಳಗ್ಗೆ ಗ್ರಾಮಕ್ಕೆ ತೆರಳಿದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ, ತಹಸೀಲ್ಧಾರ್ ಅವರ ಸಮ್ಮುಖದಲ್ಲಿ ದಲಿತರ ಬೀದಿಯಲ್ಲಿ ಮುಖಂಡರ ಸಭೆಯಯನ್ನು ನಡೆಸಲಾಯಿತು. ಗ್ರಾಮಸ್ಥರಿಂದ ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಿದರು. 

ಸಭೆಗೆ ಸವರ್ಣೀಯ ಮುಖಂಡರನ್ನು ಆಹ್ವಾನಿಸಲಾಯಿತು. ಆದರೆ, ಯಾರೊಬ್ಬರೂ ಪಾಲ್ಗೊಳ್ಳಲಿಲ್ಲ. ಈ ಘಟನೆಗೆ ಕಾರಣರಾದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಅವರು ಆಗ್ರಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಸಂಬಂಧ ಮುಖಂಡರು ಯಾವುದೇ ಪ್ರಚೋದನೆಗೆ ಒಳಗಾಗಬಾರದು. ಗ್ರಾಮದಲ್ಲಿ ಶಾಂತಿ ಕಾಪಾಡಿಕೊಂಡು ಹೋಗಬೇಕು ಅಧಿಕಾರಿಗಳು ಎಚ್ಚರಿಸಿದರು.

ಸಭೆಯಲ್ಲಿ ಮುಖಂಡರಾದ ದುಂಡುಮಾದಯ್ಯ, ಕುಮಾರ್, ಗ್ರಾಪಂ ಸದಸ್ಯ ನಾಗೇಶ್, ದಿಲೀಪ್ ಇತರರು ಪಾಲ್ಗೊಂಡಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್‌ ಬಂದೋ ಬಸ್ತ್ ಮಾಡಲಾಗಿದೆ.

andolana

Recent Posts

ಬಿಡದಿ ಟೌನ್‌ಶಿಪ್‌ ಡಿಪಿಆರ್‌ಗೆ ಸಿದ್ಧತೆ : 26 ಕೋಟಿ ರೂ. ವೆಚ್ಚದ ಟೆಂಡರ್ ಕರೆಯಲು ತೀರ್ಮಾನ

ಬೆಂಗಳೂರು : ಬಿಡದಿ ಟೌನ್‌ಶಿಪ್ ಯೋಜನೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ, ರೈತರ ಪ್ರತಿಭಟನೆ ಹಾಗೂ ಆರೋಪ-ಪ್ರತ್ಯಾರೋಪಗಳ ನಡುವೆಯೂ ಗ್ರೇಟರ್…

6 hours ago

ದುಬಾರೆ ದುರಂತ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ ; ಆನೆ ಶಿಬಿರಗಳಿಗೆ ಹೊಸ ನಿಯಮ

ಬೆಂಗಳೂರು : ರಾಜ್ಯದ ಆನೆ ಶಿಬಿರಗಳು, ಸೆರೆಯಲ್ಲಿರುವ ಆನೆಗಳ ಕೇಂದ್ರಗಳು ಹಾಗೂ ಸಾರ್ವಜನಿಕ ವೀಕ್ಷಣಾ ಕೇಂದ್ರಗಳಿಗೆ ಕರ್ನಾಟಕ ಅರಣ್ಯ ಇಲಾಖೆ…

7 hours ago

ಬಿಡದಿ ಟೌನ್‌ಶಿಪ್: ಪೋಸ್ಟರ್ ಸಮರ

ಬೆಂಗಳೂರು : ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜಾ.ದಳ ನಡುವಿನ ವಾಕ್ ಸಮರ ತಾರಕಕ್ಕೇರಿದೆ.…

8 hours ago

UGC NET | ಪ್ರವೇಶ ಪತ್ರ ಬಿಡುಗಡೆ

ಹೊಸದಿಲ್ಲಿ : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಯುಜಿಸಿ ನೆಟ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗಾಗಿ ಪ್ರವೇಶ ಪತ್ರಗಳನ್ನು ಬುಧವಾರ ಅಧಿಕೃತವಾಗಿ ಬಿಡುಗಡೆ…

9 hours ago

ಧರ್ಮಸ್ಥಳ ಪ್ರಕರಣದಲ್ಲಿ ಪ್ರಕಾಶ್‌ ರಾಜ್‌ ಹೆಸರು: ನಟ ಏನಂದ್ರು ಗೊತ್ತಾ?

ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಕರಣದಲ್ಲಿ ತಮ್ಮ ಹೆಸರನ್ನು ಕೆಲವರು ಅನಗತ್ಯವಾಗಿ ಉಲ್ಲೇಖಿಸುತ್ತಿದ್ದಾರೆ. ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ.…

14 hours ago

ನೀಟ್‌ ವಿದ್ಯಾರ್ಥಿಗಳಿಗೆ ಪ್ರಯಾಣದಲ್ಲಿ 50% ರಿಯಾಯಿತಿ: ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಆದೇಶ

ಲಕ್ನೋ: ಜೂನ್.‌21ರಂದು ನಡೆಯಲಿರುವ ನೀಟ್-ಯುಜಿ ಮರುಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳ ಬಸ್‌ ಪ್ರಯಾಣದ ದರದಲ್ಲಿ ಶೇ.50ರಷ್ಟು ರಿಯಾಯಿತಿ ನೀಡುವುದಾಗಿ ಉತ್ತರ…

16 hours ago