ಜಿಲ್ಲೆಗಳು

ಸಣ್ಣ ಹಿಡುವಳಿಯಲ್ಲಿ ವೈವಿಧ್ಯ‘ಕೃಷಿ ಬ್ರಹ್ಮಾಂಡ’

ಚಿರಂಜೀವಿ ಎಸ್. ಹುಲ್ಲಹಳ್ಳಿ

ಮೈಸೂರು: ಸಮಗ್ರ ಕೃಷಿ ಪದ್ಧತಿಯ ‘ಕೃಷಿ ಬ್ರಹ್ಮಾಂಡ’ ಸುತ್ತೂರು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದು, ಸಾರ್ವಜನಿಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಸಣ್ಣ ಹಿಡುವಳಿದಾರರು ಒಂದು ಎಕರೆ ಪ್ರದೇಶದಲ್ಲಿ ಹಲವು ಬಗೆಯ ಬೆಳೆಗಳನ್ನು ಬೆಳೆದು ಹೇಗೆ ಜೀವನ ನಿರ್ವಹಣೆ ಮಾಡಬಹುದು ಎಂಬುದನ್ನು ಕೃಷಿ ಬ್ರಹ್ಮಾಂಡದಲ್ಲಿ ತೋರಿಸಿಕೊಡಲಾಗುತ್ತಿದೆ. ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ತಾಂತ್ರಿಕತೆಯ ಬಗ್ಗೆ ರೈತರಿಗೆ ಹೆಚ್ಚಿನ ಮಾಹಿತಿಯೊಂದಿಗೆ ದೇಸಿ ಹಾಗೂ ವಿದೇಶಿ ತರಕಾರಿಗಳು ಗಮನಸೆಳೆಯುತ್ತಿವೆ.. ವಿಶೇಷವಾಗಿ ಸಿರಿಧಾನ್ಯ ಬೆಳೆಗಳ ಪ್ರಾತ್ಯಕ್ಷಿಕೆ, ಮಣ್ಣಿನ ಸವಕಳಿ ತಪ್ಪಿಸಲು ಹಾಗೂ ಔಷಧಿ ಬೆಳೆಯಾಗಿ ಲಾವಂಚ, ದ್ವಿದಳ ಧಾನ್ಯಗಳ ವಿವಿಧ ತಳಿಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರೈತರ ಅನುಕೂಲಕ್ಕಾಗಿ ನೂತನ ತಂತ್ರಜ್ಞಾನ ಡ್ರೋನ್ ಬಳಕೆ ಕುರಿತ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ. ಸಮಗ್ರ ಬೆಳೆ ನಿರ್ವಹಣೆ, ವೈವಿಧ್ಯಮಯೂ ಬೆಳೆಗಳ ಪ್ರಾತ್ಯಕ್ಷಿಕೆ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಮಾರಾಟದ ವ್ಯವಸ್ಥೆ ಮಾಡಲಾಗಿದೆ.

ಸಿರಿಧಾನ್ಯ ಬೆಳೆಗಳ ಪ್ರದರ್ಶನ, ವಿಚಾರಸಂಕಿರಣ, ಮಾರುಕಟ್ಟೆ ಕಂಡುಕೊಳ್ಳುವುದು ಮೌಲ್ಯವರ್ಧನೆ ಬಗ್ಗೆ ತಿಳಿಸಿಕೊಡುವುದು, ಚರ್ಚೆ, ಸಿರಿಧಾನ್ಯದಿಂದ ಅಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಹೊಸ ಸಾಧ್ಯತೆಗಳ ಬಗ್ಗೆ ರೈತರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಹಸು, ಕುರಿ, ಮೇಕೆ, ಕೋಳಿ ದೇಸಿ ತಳಿಗಳ ಪ್ರದರ್ಶನವೂ ಇದೆ. ಸೊಪ್ಪು ತರಕಾರಿ, ಕಾಳುಕಡ್ಡಿ ಸೇರಿದಂತೆ ಆಹಾರ ಪದಾರ್ಥಗಳನ್ನು ಮಾರುಕಟ್ಟೆಯಿಂದ ಖರೀದಿಸದೆ ಹೇಗೆ ಬದುಕಬಹುದು ಎಂಬುದನ್ನು ತಿಳಿಸುವುದೇ ಕೃಷಿ ಬ್ರಹ್ಮಾಂಡದ ವಿಶೇಷತೆಯಾಗಿದೆ.
ಕೃಷಿ ಜಮೀನಿನ ಸುತ್ತ ಸರ್ವೆ, ಸಿಲ್ವರ್ ಓಕ್, ಕತ್ತಾಳೆ, ಗ್ಲಿರಿಸೀಡಿಯಾ, ಚೊಗಚೆ, ಬಾಗೆ, ಬಿದಿರು, ಹೊಂಗೆ, ಬೇವು, ಸೀಬೆ, ಅಂಟುವಾಳ, ದಾಸವಾಳ ಇವೆ. ಸೊಪ್ಪುಗಳಾದ ಹಸಿರು ದಂಟು, ಬಿಳಿ ದಂಟು, ಸಬ್ಬಸಿಗೆ, ಮೆಂತ್ಯೆ, ಬಿಳಿಕೀರೆ, ತರಕಾರಿಗಳಾದ ಟೊಮೆಟೋ, ಹಸಿಮೆಣಸು, ಸಿಹಿಕುಂಬಳ, ಸೋರೆಕಾಯಿ, ಹಾಗಲ, ಹೀರೆ, ಈರುಳ್ಳಿ ನಡುವೆ ಎಲೆಕೋಸು ಮುಂತಾದವುಗಳನ್ನು ಬೆಳೆಯಲಾಗಿದೆ. ಅಲಸಂದೆ, ಅವರೆ, ತೊಗರಿ, ಬಟಾಣಿ, ಹೆಸರು, ಸೋಯಾ ಅವರೆ, ಸೂರ್ಯಕಾಂತಿ ಮುಂತಾದವುಗಳನ್ನು ಬೆಳೆಯಲಾಗಿದೆ.

ಜಮೀನಿನ ಇನ್ನೊಂದು ಭಾಗದಲ್ಲಿ ಪಪ್ಪಾಯಿ ಹಾಗೂ ಬಾಳೆಯನ್ನು ಬೆಳೆಯಲಾಗಿದ್ದು, ಬಾಳೆಯ ನಡುವೆ ವಿವಿಧ ಬಗೆಯ ಎಲೆಕೋಸು, ಅವರೆ, ಮರಗೆಣಸು, ಸಿಹಿಗೆಣಸನ್ನು ನೆಡಲಾಗಿದೆ. ಪಕ್ಕದಲ್ಲಿ ಔಷಧಿ ಗುಣಗಳ ಸಸ್ಯಗಳಾದ ಪುದಿನ, ಚಕ್ರಮುನಿ, ಆಡುಸೋಗೆ, ಅಮೃತಬಳ್ಳಿ, ನಾಗದಾಳಿ, ನಿಂಬೆ, ಗುಲಗಂಜಿ, ಬಸಳೆ, ಬೆಳ್ಳುಳ್ಳಿ ಹೀಗೆ ಹತ್ತು ಹಲವು ಸೊಪ್ಪು, ತರಕಾರಿ, ಹಣ್ಣುಗಳನ್ನು ಬೆಳೆಯಲಾಗಿದೆ.

ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ತರಕಾರಿ, ಇನ್ನಿತರ ಬೆಳೆಗಳನ್ನು ಬೆಳೆಯುವುದರಿಂದ ಖರ್ಚು ಕಡಿಮೆ. ಆರೋಗ್ಯದಾಯಕ ತರಕಾರಿ ಪದಾರ್ಥಗಳನ್ನು ಪಡೆಯಲು ಸಾಧ್ಯ ಎಂಬುದನ್ನು ಕೃಷಿ ಬ್ರಹ್ಮಾಂಡದ ಮೂಲಕ ತೋರಿಸಿಕೊಡಲಾಗಿದೆ ಎಂದು ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಪ್ರಭಾರ ಮುಖ್ಯಸ್ಥೆ ಎಚ್.ವಿ.ದಿವ್ಯಾ ಮಾಹಿತಿ ನೀಡಿದರು.


ಕೃಷಿ ಬ್ರಹ್ಮಾಂಡಕ್ಕೆ ಭೇಟಿ ನೀಡುವ ರೈತರಿಗೆ ಇಲ್ಲಿನ ಹಲವಾರು ವೈಶಿಷ್ಟಗಳನ್ನು ಮತ್ತು ದೇಶಿ ಹಾಗೂ ವಿದೇಶಿ ತಳಿಗಳ ಮತ್ತು ಕೃಷಿಗೆ ಸಂಬಂಧಿಸಿದ ತಾಂತ್ರಿಕತೆಯ ಬಗ್ಗೆ ಮೈಸೂರಿನ ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಸಸ್ಯಶಾಸ್ತ್ರದ ವಿದ್ಯಾರ್ಥಿಗಳು ತಿಳಿಸಿಕೊಡುತ್ತಿದ್ದಾರೆ. ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

– ಪ್ರೀತಮ್, ವಿದ್ಯಾರ್ಥಿ.


ಸುತ್ತೂರು ಜಾತ್ರೆಯು ಹಲವು ವೈಶಿಷ್ಟಗಳನ್ನು ಹೊಂದಿದ್ದರೂ ಕೃಷಿ ಮತ್ತು ವಸ್ತು ಪ್ರದರ್ಶನ ಮೇಳ ಪ್ರಮುಖ ಆಕರ್ಷಣೆಯಾಗಿದೆ. ನಾನು ಸುತ್ತೂರು ಜಾತ್ರೆಗೆ ಆಗಮಿಸಿದಾಗಲೆಲ್ಲವೂ ಕೃಷಿ ಬ್ರಹ್ಮಾಂಡ ನೋಡುತ್ತಿದ್ದೇನೆ. ಹೊಸ ಬಗೆಯ ವಿಧಾನಗಳನ್ನು ತಿಳಿದುಕೊಂಡು ನಮ್ಮ ಜಮೀನಿನ ಅಕ್ಕ ಪಕ್ಕದ ರೈತರೊಂದಿಗೆ ಚರ್ಚಿಸುತ್ತೇನೆ. ಒಟ್ಟಿಗೆ ಕೃಷಿ ಮೇಳ ಸೊಗಸಾಗಿದೆ.

– ಮನೋಜ್, ಯುವ ರೈತ.

andolanait

Recent Posts

ಶುಶ್ರೂಷೆ ವೃತ್ತಿಗೆ ಮೆರುಗು ನೀಡಿದ ಫ್ಲಾರೆನ್ಸ್ ನೈಟಿಂಗೇಲ್

ಎನ್.ಹರೀಶ್ ಕುಮಾರ್ ಆರೋಗ್ಯ ಕ್ಷೇತ್ರದಲ್ಲಿ ಪ್ರಮುಖವಾಗಿ ಮುಂಚೂಣಿಯಲ್ಲಿ ಬರುವ ಹೆಸರೆಂದರೆ ಅದು ವೈದ್ಯ ವೃತ್ತಿ. ಆದರೆ ಒಬ್ಬ ರೋಗಿಯು ಗುಣಮುಖ…

9 mins ago

ಜನಮೆಚ್ಚುಗೆ ಗಳಿಸಿದ ರಾಜ್ಯಮಟ್ಟದ ಯಿಫಾ ಹಾಕಿ

ಲಕ್ಷ್ಮೀಕಾಂತ್ ಕೊಮಾರಪ್ಪ ಉತ್ತಮ ಪ್ರದರ್ಶನ ನೀಡಿದ ಎಜಿಒಆರ್‌ಸಿ ತಂಡ ಚಾಂಪಿಯನ್; ಸದರ್ನ್ ಕಮಾಂಡ್ ತಂಡಕ್ಕೆ ದ್ವಿತೀಯ ಬಹುಮಾನ ಸೋಮವಾರಪೇಟೆ: ಸುಮಾರು…

13 mins ago

ಮಾರುಕಟ್ಟೆ ಬಂದ್ ಭೀತಿ; ಹೊಗೆಸೊಪ್ಪು ತಂದ ರೈತರ ಪರದಾಟ

ಮಂಜು ಕೋಟೆ ಕೋಟೆ: ಹೆಬ್ಬಾಳ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಬೇಲ್‌ಗಳ ರಾಶಿ; ಮಳೆ ಬಂದರೆ ನಷ್ಟದ ಆತಂಕ ಎಚ್.ಡಿ.ಕೋಟೆ: ಮಾರುಕಟ್ಟೆ…

20 mins ago

ಬಂಡೀಪಾಳ್ಯದಲ್ಲಿ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣ ಶೀಘ್ರ ಆರಂಭ

ಕೆ.ಬಿ.ರಮೇಶನಾಯಕ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ರೈತರಿಗೆ ಅನುಕೂಲ ರೈತರು ರೇಷ್ಮೆ ಬೆಳೆಯತ್ತ ಮುಖ ಮಾಡಿರುವ ಪರಿಣಾಮ ಉತ್ಪಾದನೆಯಲ್ಲಿ ಹೆಚ್ಚಳ…

25 mins ago

ನೂರು ಸಾವಿರದ ಗಡಿ ದಾಟಿದ ಆಂದೋಲನ ಇನ್ ಸ್ಟಾ ಪೇಜ್ ಹಿಂಬಾಲಕರು

‘ಆಂದೋಲನ’ ಪತ್ರಿಕೆಯ ಹೊಸ ಡಿಜಿಟಲ್ ಮೈಲಿಗಲ್ಲಿಗೆ ಹರಿದು ಬಂದ ಹಾರೈಕೆಗಳು " ಒಂದು ಲಕ್ಷ ಹಿಂಬಾಲಕರು ತಲುಪಿರುವುದು ಕೂಡ ಹೊಸ…

29 mins ago

ದುಸ್ಥಿತಿಯಲ್ಲಿ ಸರ್ಕಾರಿ ಮಹಾರಾಜ ಸಂಸ್ಕೃತ ಪಾಠಶಾಲೆ ಕಟ್ಟಡ

ಪ್ರಶಾಂತ್ ಎಸ್. ಮೈಸೂರು: ಸಂಸ್ಕೃತ, ವೇದ, ಆಗಮ ಮತ್ತು ಶಾಸ್ತ್ರಗಳನ್ನು ಬೋಽಸುವ ಪ್ರಮುಖ ಸಾಂಪ್ರದಾಯಿಕ ಶಿಕ್ಷಣ ನೀಡುತ್ತಿರುವ ನಗರದ ಸರ್ಕಾರಿ…

37 mins ago