ಹನೂರು: ಗ್ರಾಮಕ್ಕೆ ಲಗ್ಗೆ ಇಟ್ಟು ಬೆಳೆ ಹಾನಿ ಮಾಡುತ್ತಿದ್ದ ಎರಡು ಪುಂಡಾನೆ ಸೆರೆ ಕಾರ್ಯಾಚರಣೆ ಮಾದಪ್ಪನ ಬೆಟ್ಟದ ತಪ್ಪಲಾದ ತಾಲ್ಲೂಕಿನ ಪೊನ್ನಾಚಿ ಗ್ರಾಮದಲ್ಲಿ ನಡೆಯುತ್ತಿದೆ.
ಮಲೆಮಹದೇಶ್ವರ ವನ್ಯಜೀವಿಧಾಮದ ಡಿಎಪ್ಒ ಎಡುಕುಂಡಲು ನೇತೃತ್ವದಲ್ಲಿ ಎರಡು ಸಾಕಾನೆಗಳ ಮೂಲಕ ಪುಂಡಾನೆ ಸೆರೆ ಕಾರ್ಯಾಚರಣೆ ನಡೆಯುತ್ತಿದು, ಒಂದು ಆನೆಯನ್ನು ಗುರುತಿಸಿ ಅದನ್ನು ಹಿಡಿದಿಡುವ ಕೆಲಸ ನಡೆಯುತ್ತಿದೆ. ಸಂಜೆ ವೇಳೆಗೆ, ಅರವಳಿಕೆ ಮದ್ದು ಕೊಟ್ಟು ಆನೆಗೆ ರೇಡಿಯೋ ಕಾಲರ್ ಅಳವಡಿಸಲಿದ್ದು ಜಿಪಿಎಸ್ ಮೂಲಕ ಆನೆ ಗ್ರಾಮದ ಸರಹದ್ದಿಗೆ ಬಂದಾಗ ಮತ್ತೆ ಕಾಡಿಗಟ್ಟುವ ಕೆಲಸ ಮಾಡಲು ಅರಣ್ಯ ಇಲಾಖೆ ಮುಂದಾಗಿದೆ.
ಪೊನ್ನಾಚಿ ಗ್ರಾಮದಲ್ಲಿ ಎರಡು ಪುಂಡಾನೆಗಳ ಅಟಾಟೋಪಕ್ಕೆ ಗ್ರಾಮಸ್ಥರು ರೋಸಿ ಹೋಗಿದ್ದರು. ಗ್ರಾಮಕ್ಕೆ ಡಿಸಿ ಚಾರುಲತಾ ಸೋಮಲ್ ಬಂದ ಮೇಲೆ ಆನೆಗಳ ನಿತ್ಯ ದಾಳಿ ಬಗ್ಗೆ ಅಲವತ್ತುಕೊಂಡಾಗ ರೇಡಿಯೋ ಕಾಲರ್ ಅಳವಡಿಸಿ ಪರಿಹಾರ ಕಂಡುಕೊಳ್ಳಲು ಜಿಲ್ಲಾಧಿಕಾರಿ ನಿರ್ದೇಶಿಸಿದ್ದರಿಂದ ಈ ಕಾರ್ಯಾಚರಣೆ ನಡೆಯುತ್ತಿದೆ.