ಜಿಲ್ಲೆಗಳು

ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಗೌರವ ಸಲ್ಲಿಕೆ

ಮೈಸೂರು: ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಮೈಸೂರು ಜಿಲ್ಲೆಯ ಪತ್ರಕರ್ತರನ್ನು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಮಂಗಳವಾರ ಅಭಿನಂದಿಸಲಾಯಿತು.

ನಗರದ ಪತ್ರಕರ್ತರ ಭವನದ ರಾಜಶೇಖರ ಕೋಟಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ‘ಆಂದೋಲನ’ ದಿನ ಪತ್ರಿಕೆಯ ಹಿರಿಯ ಉಪಸಂಪಾದಕ ಮುಳ್ಳೂರು ಶಿವಪ್ರಸಾದ್, ಹಿರಿಯ ವರದಿಗಾರ ಕೆ.ಬಿ.ರಮೇಶ ನಾಯಕ, ವಿಜಯವಾಣಿ ಪತ್ರಿಕೆ ಹಿರಿಯ ಉಪಸಂಪಾದಕ ಮುಳ್ಳೂರು ರಾಜು, ದಿ ಹಿಂದೂ ಪತ್ರಿಕೆಯ ಹಿರಿಯ ವರದಿಗಾರ ಶಂಕರ್ ಬೆನ್ನೂರು, ವಿಜಯ ಕರ್ನಾಟಕದ ಹಿರಿಯ ಛಾಯಾಗ್ರಾಹಕ ನಾಗೇಶ್ ಪಾಣತ್ತಲೆ, ಪಬ್ಲಿಕ್ ಟಿವಿಯ ಹಿರಿಯ ವರದಿಗಾರ ಕೆ.ಪಿ.ನಾಗರಾಜ್, ಹುಣಸೂರು ತಾಲ್ಲೂಕು ವಿಜಯವಾಣಿ ವರದಿಗಾರ ಶಿವಕುಮಾರ್‌ ವಿ.ರಾವ್, ಉದಯವಾಣಿಯ ಗ್ರಾಮೀಣ ಸುದ್ದಿ ವಿಭಾಗದ ಮುಖ್ಯಸ್ಥ ಅ.ಮ.ಸುರೇಶ್ ಅವರಿಗೆ ಗೌರವ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಸಂಸದ ಪ್ರತಾಪಸಿಂಹ, ಮಾಧ್ಯಮದಲ್ಲಿ ಕೆಲಸ ಮಾಡಲು ಬಯಸುವ ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿಯೇ ಪತ್ರಿಕೆ ಕಚೇರಿಗೆ ಹೋಗಿ ವರದಿಗಾರಿಕೆ, ಸುದ್ದಿ ಮನೆಯ ಕಾರ್ಯಚಟುವಟಿಕೆಗಳನ್ನು ತಿಳಿದುಕೊಂಡಿರಬೇಕು. ನಾನು ರಾಜಕೀಯ ಕ್ಷೇತ್ರದಲ್ಲಿದ್ದರೂ ನನ್ನೊಳಗಿನ ಪತ್ರಕರ್ತ ಇನ್ನೂ ಜಾಗೃತನಾಗಿದ್ದಾನೆ. ಹಾಗಾಗಿ ನನ್ನನ್ನು ಸದಾ ವಿಮರ್ಶೆಗೆ ಒಳಪಡಿಸಿಕೊಳ್ಳುತ್ತೇನೆ. ಪತ್ರಿಕೆಗಳಲ್ಲಿ ಬರುವ ಟೀಕೆಗಳನ್ನು ಮತ್ತು ವರದಿಗಳನ್ನು ಸಕರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ. ಹೀಗಾಗಿ, ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗಲಿದೆ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಉದಯವಾಣಿ ಪತ್ರಿಕೆಯ ಗ್ರಾಮೀಣ ಸುದ್ದಿ ವಿಭಾಗದ ಮುಖ್ಯಸ್ಥ ಅ.ಮ.ಸುರೇಶ್, ಮುದ್ರಣ ಮಾಧ್ಯಮ ಇಂದು ಸಾಕಷ್ಟು ಬದಲಾವಣೆ ಕಂಡಿದೆ. ಇಂದು ಪತ್ರಿಕೆ ಹಂಚಲು ಜನ ಸಿಗದ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಟಿವಿ, ಸಾಮಾಜಿಕ ಜಾಲತಾಣಗಳ ಆರ್ಭಟಕ್ಕೆ ಪತ್ರಿಕೆಗಳ ಆದಾಯವೂ ಕ್ಷೀಣಿಸಿದೆ. ಪರಿಣಾಮ ಕೋವಿಡ್ ನಂತರ ಹಲವಾರು ಮಂದಿ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಹೇಗೆ ಮುಂದೆ ಸಾಗಬೇಕು ಹಾಗೂ ಮುಂದೆ ಬರುವ ಪತ್ರಕರ್ತರಿಗೆ ಹೇಗೆ ಮಾರ್ಗದರ್ಶನ ಮಾಡಬೇಕು ಎಂಬ ಬಗ್ಗೆ ಗಂಭೀರ ಚಿಂತನೆ ಆಗಬೇಕು ಎಂದು ಹೇಳಿದರು.

ಮೈಸೂರು ದಿಗಂತ ಪತ್ರಿಕೆ ಸಂಪಾದಕ ಮಳಲಿ ನಟರಾಜ್ ಕುವಾರ್ ಅವರ ಪುತ್ರ ಘನವಂತ, ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಹಿರಿಯ ವರದಿಗಾರ ಕೆ.ಶಿವಕುಮಾರ್, ಮಾಧ್ಯಮ ಅಕಾಡೆಮಿ ಸದಸ್ಯರಾದ ಸಿ.ಕೆ.ಮಹೇಂದ್ರ, ಕೂಡ್ಲಿ ಗುರುರಾಜ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ಉಪಾಧ್ಯಕ್ಷರಾದ ಎಂ.ಎಸ್. ಬಸವಣ್ಣ, ಧರ್ಮಾಪುರ ನಾರಾಯಣ್, ಕಾರ್ಯದರ್ಶಿಗಳಾದ ಪಿ.ರಂಗಸ್ವಾಮಿ, ಎಂ.ಮಹದೇವ್, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಪತ್ರಕರ್ತರು ಹಾಜರಿದ್ದರು.


ಇತ್ತೀಚಿನ ವರ್ಷಗಳಲ್ಲಿ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದು ಪತ್ರಿಕಾ ಕಚೇರಿಗಳಿಗೆ ಕೆಲಸಕ್ಕಾಗಿ ಬರುವವರಿಗೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ವ್ಯಾಕರಣ ದೋಷವಿಲ್ಲದೆ ವಾಕ್ಯ ರಚನೆ ಮಾಡಲು ಬರುವುದಿಲ್ಲ. ಭಾಷಾ ಜ್ಞಾನವೂ ಇರುವುದಿಲ್ಲ. ಇಂತಹ ಪರಿಸ್ಥಿತಿಗೆ ಯಾರು ಹೊಣೆ ಎಂದು ನಾವೆಲ್ಲ ಪ್ರಶ್ನಿಸಿಕೊಳ್ಳುವ ಅಗತ್ಯವಿದೆ.

-ಅ.ಮ.ಸುರೇಶ್, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು


ಇಂದು ಟಿವಿ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ಬಹುಪಾಲು ಮಂದಿಗೆ ಕನ್ನಡ ಭಾಷೆಯ ಮೇಲೆ ಹಿಡಿತವಿಲ್ಲ. ಹಾಗಾಗಿ ದೃಶ್ಯ ಮಾಧ್ಯಮಗಳಲ್ಲಿ ಕೆಲಸ ಮಾಡುವ ಮುಂಚೆ ಕನಿಷ್ಠ ಎರಡು ಮೂರು ವರ್ಷಗಳಾದರೂ ಮುದ್ರಣ ಮಾಧ್ಯಮದಲ್ಲಿ ಕೆಲಸ ಮಾಡಬೇಕು. ಅವರ ಭಾಷೆ ಸುಧಾರಿಸಬೇಕಾದರೆ ಕನಿಷ್ಠ ನಾಲ್ಕು ವರ್ಷಗಳ ಕಾಲ ಪತ್ರಿಕಾ ಕಚೇರಿಯಲ್ಲಿ ಅನುಭವ ಪಡೆದಿರಬೇಕು. ಪ್ರಸ್ತುತ ದೃಶ್ಯ ಮಾಧ್ಯಮಗಳಲ್ಲಿ ಉನ್ನತ ಸ್ಥಾನದಲ್ಲಿರುವವರೆಲ್ಲರೂ ಮುದ್ರಣ ಮಾಧ್ಯಮದಿಂದಲೇ ಬಂದವರಾಗಿದ್ದಾರೆ. ಮುದ್ರಣ ಮಾಧ್ಯಮದಲ್ಲಿ ಪತ್ರಿಕೋದ್ಯಮದ ಅನುಭವವನ್ನು ಪಡೆದರೆ ಇನ್ನೂ ಉತ್ತಮ ಪತ್ರಕರ್ತರು ಹೊರಬರಲಿದ್ದಾರೆ.

-ಪ್ರತಾಪ್ ಸಿಂಹ, ಸಂಸದ

andolanait

Recent Posts

ಹಾರ್ಮುಜ್ ಮೇಲೆ ಅಮೆರಿಕ ಸಂಪೂರ್ಣ ಹಿಡಿತ ; ಟ್ರಂಪ್ ಹೇಳಿಕೆಯಿಂದ ವಾಸ್ತವ ಬದಲಾಗಲ್ಲ : ಇರಾನ್ ತಿರುಗೇಟು

ಷರತ್ತುಗಳ ಒಪ್ಪದ ಹೊರತು ಜಲಸಂಧಿ ತೆರೆಯಲ್ಲ; ಸ್ಪಷ್ಟನೆ ಟೆಹರಾನ್ : ಹಾರ್ಮುಜ್ ಜಲಸಂಧಿಯ ಮೇಲೆ ಅಮೆರಿಕ ಸಂಪೂರ್ಣ ನಿಯಂತ್ರಣ ಸಾಧಿಸಿದೆ…

5 hours ago

ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆ ಪ್ರಕರಣ : ಡಿಐಜಿ ನೇತೃತ್ವದಲ್ಲಿ ತನಿಖೆ

ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚನೆ ಬೆಂಗಳೂರು : ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ…

6 hours ago

ಭಾಷಣ ಮಾಡಿದ ವೇದಿಕೆ ಸ್ಥಳದ ಶುದ್ಧೀಕರಣ : ಇದು ನನ್ನ ವಿರುದ್ಧ ತೋರಿದ ಅಸ್ಪೃಶ್ಯತೆ ; ಖರ್ಗೆ ಕಿಡಿ

ಹೊಸದಿಲ್ಲಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ತಾವು ಭಾಷಣ ಮಾಡಿದ್ದ ರಾಮಲೀಲಾ ಮೈದಾನದ ವೇದಿಕೆಯಲ್ಲಿ ‘ಶ್ರೀರಾಮ ಸೇನಾ’ ಸಂಘಟನೆಯು ಶುದ್ಧೀಕರಣ (ಹವನ) ನಡೆಸಿದ್ದಕ್ಕೆ…

7 hours ago

ಪ್ರತಿಭಟನೆಗೆ ಸೀಮಿತವಾದ ಕರ್ನಾಟಕ ಬಂದ್ ; ಮೈಸೂರು, ಮಂಡ್ಯದಲ್ಲೂ ಹೋರಾಟಕ್ಕೆ ಸೀಮಿತ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ಹರಿಸಬೇಕು ಎಂಬ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಖಂಡಿಸಿ ಹಾಗೂ…

9 hours ago

ಮೈಸೂರು: ಹೊಸ ಮಠದ ಚಿದಾನಂದ ಸ್ವಾಮೀಜಿ ಲಿಂಗೈಕ್ಯ

ಮೈಸೂರು: ಮೈಸೂರಿನ ಶಂಕರ ಮಠದ ರಸ್ತಯಲ್ಲಿರುವ ಹೊಸ ಮಠದ ಚಿದಾನಂದ ಸ್ವಾಮೀಜಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ…

15 hours ago

ಓದುಗರ ಪತ್ರ: ಹೋಟೆಲ್‌ಗಳ ಆಹಾರ ಶುದ್ಧತೆ, ಪದಾರ್ಥಗಳ ತಪಾಸಣೆ ನಿಯಮಿತವಾಗಿ ನಡೆಯಲಿ

ಅಧಿಕಾರಿಗಳ ತಪಾಸಣೆ ವೇಳೆ ಬೆಂಗಳೂರಿನ ಕೆಲವು ಪಂಚತಾರಾ ಹೋಟೆಲ್‌ಗಳಲ್ಲಿ, ಕೊಳೆತ ಮಾಂಸ, ಹಳೆಯ ತರಕಾರಿಗಳು ಇರುವುದು ಪತ್ತೆಯಾಗಿರುವುದೇ ಎಲ್ಲೆಲ್ಲೂ ಚರ್ಚಿತ…

21 hours ago