ಚಾಮರಾಜನಗರ

ಆಧುನಿಕ ಭಾರತದ ಪರಂಜ್ಯೋತಿ ಬಾಬಾಸಾಹೇಬ್ ಅಂಬೇಡ್ಕರ್: ಯುವವಿದ್ವಾಂಸ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅಭಿಪ್ರಾಯ

ಕೊಳ್ಳೇಗಾಲ: “ಜಾನಪದ ಲೋಕದಲ್ಲಿ ಧರೆಗೆ ದೊಡ್ಡವರಾಗಿ ಸರ್ವಜನಾಂಗದ ಪಾಲಿನ ಪರಂಜ್ಯೋತಿಯಾದ ಮಂಟೇಸ್ವಾಮಿಯವರಂತೆ ಬಹು ಜನರಿಗೆ ಭಾರತ ಸಂವಿಧಾನವೆಂಬ ಮಹಾಬೆಳಕನ್ನಿತ್ತ ಆಧುನಿಕ ಭಾರತದ ಪರಂಜ್ಯೋತಿ ಬಾಬಾಸಾಹೇಬ್ ಅಂಬೇಡ್ಕರ್” ಎಂದು ಷ್ಟ್ರಪತಿ ಪ್ರಶಸ್ತಿ-ಮಹರ್ಷಿ ವ್ಯಾಸ್ ಸಮ್ಮಾನ್ ಪುರಸ್ಕೃತ ಯುವ ವಿದ್ವಾಂಸ ಹಾಗೂ ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರು ಅಭಿಪ್ರಾಯಪಟ್ಟರು.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕ ಹಾಗೂ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ “ಭಾರತ ಸಂವಿಧಾನ ದಿನ ಹಾಗೂ ಸಮಾನತೆಯ ಸಾಲುದೀಪ ನಮನ” ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಜನಸಂಸ್ಕೃತಿಯ ಮಹಾಸಂತರಾದ ಪರಂಜ್ಯೋತಿ ಮಂಟೇಸ್ವಾಮಿ ಅವರನ್ನು ಕುರಿತು ಜನಪದರು ಹಾಡಿರುವ ಮಹಾಕಾವ್ಯವು ಪ್ರಾತಃಸ್ಮರಣೀಯ. ಆ ಕಾವ್ಯದಲ್ಲಿ ಬರುವ ‘ತಿಪ್ಪೆ ಮೇಲೆ ಕಸಮಡಗಿದರೆ ಭಿನ್ನಭೇದವಿಲ್ಲದಂತೆ ಏಕವಾಗಿ ಉರಿವ ಪರಂಜ್ಯೋತಿ” ಎಂಬ ಜನನುಡಿಯು ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರ ನಾಯಕತ್ವದಲ್ಲಿ ರಚನೆಗೊಂಡ ಭಾರತ ಸಂವಿಧಾನಕ್ಕೆ ಅರ್ಥಪೂರ್ಣವಾಗಿ ಅನ್ವಯವಾಗುವಂಥದು. ಸಮಸ್ತ ಭಾರತೀಯರಿಗೂ ಯಾವುದೇ ಭೇದವಿಲ್ಲದೆ ಒಂದೇ ಸಮನಾದ ಹಕ್ಕು, ಬಾಧ್ಯತೆ, ಅವಕಾಶಗಳನ್ನು ನೀಡಿ ಸಹಭಾಗಿತ್ವ ಹಾಗೂ ಸಾಮರಸ್ಯದ ಬದುಕನ್ನಿತ್ತಿರುವುದು ನಮ್ಮ ಹೆಮ್ಮೆಯ ಸಂವಿಧಾನ. ಇದು ಏಕನೆಲೆಗೆ ಎಂದೂ ಸೀಮಿತವಾದುದಲ್ಲ. ಭಾರತದ ಬಹುನೆಲೆಗಳಲ್ಲಿ ಏಕವಾಗಿ ಉರಿವ ಪರಂಜ್ಯೋತಿಯೇ ಆಗಿದೆ ಎಂದು ಬಣ್ಣಿಸಿದರು.

ಅಂಬೇಡ್ಕರ್ ಅವರು ತಳನೆಲೆಯಿಂದ ಅಸಂಖ್ಯ ನೋವು, ಅವಮಾನಗಳನ್ನು ಅನುಭವಿಸಿ ಬಂದವರಾದರೂ ತಮ್ಮ ದೃಷ್ಟಿಯನ್ನು ವಿಶಾಲಗೊಳಿಸಿಕೊಂಡವರು. ಅವರ ಜ್ಞಾನವಾಗಲೀ ಕಾಯಕವಾಗಲೀ ಏಕಕೋನೀಯವಾಗಿರಲಿಲ್ಲ, ಬಹುಕೋನೀಯವಾಗಿತ್ತು. ೩೬೦ ಡಿಗ್ರಿಯಷ್ಟು ವಿಶಾಲವೂ ಆಳವೂ ಆಗಿದ್ದ ಅಂಬೇಡ್ಕರ್ ದೃಷ್ಟಿಕೋನದಿಂದಲೇ ಭಾರತ ಸಂವಿಧಾನವು ಸರ್ವಜನಾಂಗದ ಬದುಕುಗಳನ್ನು ನಿತ್ಯವೂ ಬೆಳಗುವಂತಾಗಿರುವುದು. ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನವೆಂಬ ಪ್ರಸಿದ್ಧಿಗೆ ಪಾತ್ರವಾಗಿರುವುದು. ಇಂತಹ ಸಂವಿಧಾನದ ಬೆಳಕನ್ನು ಆರಿಸಿ ಸರ್ವಾಧಿಕಾರದ ಏಕಮತೀಯ ಸಂವಿಧಾನ ತರ್ತೀವಿ ಅನ್ನೋಸು ಜನದ್ರೋಹಿ, ದೇಶದ್ರೋಹದ ಕೃತ್ಯವಲ್ಲವೆ ಎಂದು ತಿಳಿಸಿದರು.

ಭಾರತ ಸಂವಿಧಾನಕ್ಕೆ ಕನ್ನಡ ನೆಲದ ಸೃಜನಶೀಲ ಮನಸ್ಸು ನೀಡಿದ ಹೃದಯಸಂವಾದದ ಸಾಕ್ಷಿಯಾಗಿ ಮಹಾಕವಿ ಕುವೆಂಪು ವಿರಚಿತ ‘ ಶ್ರೀಸಾಮಾನ್ಯರ ದೀಕ್ಷಾಗೀತೆ’ ಕವಿತೆ ಕಾಣುತ್ತದೆ. ೧೯೫೦ರ ಜನವರಿ ೩೬ರಂದು ಮೈಸೂರಿನಲ್ಲಿ ಕುವೆಂಪು ಬರೆದ ಈ ಕವಿತೆಯು, ಕೊನೆಗೊಂಡಿತು ಓರೋರ್ವರ ಗರ್ವದ ಕಾಲ, ಇದು ಸರ್ವರ ಕಾಲ, ಶ್ರೀಸಾಮಾನ್ಯನೇ ಭಗವನ್ ಮಾನ್ಯಂ, ಶ್ರೀಸಾಮಾನ್ಯದ ಪೂಜೆಗೆ ದೀಕ್ಷೆಯ ಕೊಳ್ಳಿರಿ ಎಂದು ಸಾರುತ್ತದೆ. ಸಂವಿಧಾನ ರಚನಾ ಸಮಯದ ಚರ್ಚೆಯಲ್ಲಿ “ಶ್ರೀಸಾಮಾನ್ಯರೇ ನನ್ನ ದೇವರು” ಎಂದಿದ್ದ ಅಂಬೇಡ್ಕರ್ ಅವರ ಮಹದಾಶಯವನ್ನು ಹೃದಯಗಿವಿಯಿಂದ ಆಲಿಸಿ, ಆಲಂಗಿಸಿಕೊಂಡ ಮಹಾಕವಿಯ ಉಲಿಯಂತೆ ಕಾಣುತ್ತದೆ ಎಂದರು.

ಶೋಷಣೆ ಮಾಡಿದವರನ್ನು ದ್ವೇಷ ಮಾಡುತ್ತಲೋ ಅಥವಾ ಅಧಿಕಾರ ಸಿಕ್ಕಾಗ ಮರುಶೋಷಣೆ ಮಾಡುವುದರಿಂದಲೋ ಭಾರತ ಬೆಳಗುವುದಿಲ್ಲ, ಅಸಮಾನತೆ ಅಳಿಯುವುದಿಲ್ಲ. ದ್ವೇಷಿಸುವವರು ಹಾಗೂ ಶೋಷಿಸುವವರೇ ನಮ್ಮನ್ನು ಗೌರವಿಸುವಂಥ ಸಾಧನೆ ಬದುಕು ನಮ್ಮದಾಗಬೇಕು. ಅದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರೇ ನಮಗೆ ಬಹುದೊಡ್ಡ ಮಾದರಿ ಮತ್ತು ಮಾರ್ಗದಾತರಾಗಿದ್ದಾರೆ ಎಂದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಅಸಮಾನತೆಯ ಅಸ್ಪೃಶ್ಯಭಾರತ ಭೂಗರ್ಭದಿಂದ ಪುಟಿದೆದ್ದ ಕ್ರಾಂತಿವಜ್ರ. ಅವರ ಜ್ಞಾನ, ಶೀಲ ಹಾಗೂ ಕ್ರಾಂತಿಯಾನವು ವಜ್ರದಷ್ಟೇ ಹೊಳಪುಳ್ಳದ್ದು ಹಾಗೂ ಮೌಲ್ಯಯುತವಾದದ್ದು. ಇಂತಹ ವಜ್ರದೀಪ್ತಿಯುಳ್ಳ ಡೈಮಂಡ್ ಸ್ಟಾರ್ ಆದ ಅಂಬೇಡ್ಕರ್ ಅವರನದನು ನಮ್ಮೆಲ್ಲರ ಎದೆಗಳಲ್ಲಿ ಬೆಳಗಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಅಂತರಾಷ್ಟ್ರೀಯ ಜಾನಪದ ಕಲಾವಿದರೂ ದಲಿತ ಸಾಹಿತ್ಯ ಪರಿಷತ್ತಿನ ಚಾಮರಾಜನಗರ ಜಿಲ್ಲಾಧ್ಯಕ್ಷರೂ ಆದ ಸಿ.ಎಂ.ನರಸಿಂಹಮೂರ್ತಿ ಅವರು ಅಧ್ಯಕ್ಷತೆ ವಹಿಸಿದ್ದರು. ಸಮಾನತೆಯ ಸಾಲುದೀಪಗಳು ಕುರಿತಾದ ಉಪನ್ಯಾಸದಲ್ಲಿ ‘ಮಾನವತೆಯ ಕ್ರಾಂತಿಜ್ಯೋತಿ ಸಾವಿತ್ರಿ ಬಾಫುಲೆ’ ಕುರಿತು ಚಾಮರಾಜನಗರ ವಿವಿಯ ಕನ್ನಡ ಅಧ್ಯಾಪಕಿ ಡಾ.ಆರ್.ಶಶಿಕಲಾ ಅವರು ಮಾತನಾಡಿದರು. ‘ಬಾಬಾಸಾಹೇಬರ ಭೀಮಬಲ ರಮಾಬಾಯಿ ಅಂಬೇಡ್ಕರ್’ ಕುರಿತು ನಿವೃತ್ತ ಉಪನ್ಯಾಸಕಿಯಾದ ಡಾ.ಸರಸ್ವತಿ ಹೊನ್ನಪ್ಪ ಅವರು ವಿಚಾರ ಮಂಡಿಸಿದರು. ಕೊಳ್ಳೇಗಾಲ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಗರಾಜು ಕೊಂಗರಹಳ್ಳಿ ಹಾಗೂ ಸಾಹಿತ್ಯ ಮಿತ್ರಕೂಟದ ಅಧ್ಯಕ್ಷರಾದ ದೊರೆಸ್ವಾಮಿ ಅವರು ಮುಖ್ಯ ಅತಿಥಿಗಳಾಗಿದ್ದರು. ದಲಿತ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾದ ಡಾ.ಕವಿತಾ ಡಿ.ಎಲ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಷತ್ತಿನ ಪದಾಧಿಕಾರಿ ನಾಗರಾಜ್ ಸ್ವಾಗತಿಸಿದರು. ಕನ್ನಡ ಭಾಷಾ ಶಿಕ್ಷಕಿ ಪ್ರೇಮಕುಮಾರಿ ಅವರು ನಿರೂಪಿಸಿದರು. ಗಮಕಿಗಳಾದ ಶಿವಣ್ಣ ಇಂದ್ವಾಡಿ, ವಿದ್ವಾಂಸರಾದ ಡಾ.ಆದೆಪ್ಪ ಕೆ.ಹಂದಿಹಾಳ್, ದಸಾಪ ತಾಲ್ಲೂಕು ಕಾರ್ಯದರ್ಶಿ ಡಾ.ದಿಲಿಪ್ ಎನ್.ಕೆ, ಹಿರಿಯರಾದ ಪುಟ್ಟ ಅರಸ ಶೆಟ್ಟಿ, ರಾಜಪ್ಪಾಜಿ, ರಾಮಣ್ಣ, ಭಾಗ್ಯಮ್ಮ, ಆನಂದರಾಜ್, ಶಿವಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಆಂದೋಲನ ಡೆಸ್ಕ್

Recent Posts

ಹಾರ್ಮುಜ್ ಮೇಲೆ ಅಮೆರಿಕ ಸಂಪೂರ್ಣ ಹಿಡಿತ ; ಟ್ರಂಪ್ ಹೇಳಿಕೆಯಿಂದ ವಾಸ್ತವ ಬದಲಾಗಲ್ಲ : ಇರಾನ್ ತಿರುಗೇಟು

ಷರತ್ತುಗಳ ಒಪ್ಪದ ಹೊರತು ಜಲಸಂಧಿ ತೆರೆಯಲ್ಲ; ಸ್ಪಷ್ಟನೆ ಟೆಹರಾನ್ : ಹಾರ್ಮುಜ್ ಜಲಸಂಧಿಯ ಮೇಲೆ ಅಮೆರಿಕ ಸಂಪೂರ್ಣ ನಿಯಂತ್ರಣ ಸಾಧಿಸಿದೆ…

5 hours ago

ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆ ಪ್ರಕರಣ : ಡಿಐಜಿ ನೇತೃತ್ವದಲ್ಲಿ ತನಿಖೆ

ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚನೆ ಬೆಂಗಳೂರು : ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ…

6 hours ago

ಭಾಷಣ ಮಾಡಿದ ವೇದಿಕೆ ಸ್ಥಳದ ಶುದ್ಧೀಕರಣ : ಇದು ನನ್ನ ವಿರುದ್ಧ ತೋರಿದ ಅಸ್ಪೃಶ್ಯತೆ ; ಖರ್ಗೆ ಕಿಡಿ

ಹೊಸದಿಲ್ಲಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ತಾವು ಭಾಷಣ ಮಾಡಿದ್ದ ರಾಮಲೀಲಾ ಮೈದಾನದ ವೇದಿಕೆಯಲ್ಲಿ ‘ಶ್ರೀರಾಮ ಸೇನಾ’ ಸಂಘಟನೆಯು ಶುದ್ಧೀಕರಣ (ಹವನ) ನಡೆಸಿದ್ದಕ್ಕೆ…

7 hours ago

ಪ್ರತಿಭಟನೆಗೆ ಸೀಮಿತವಾದ ಕರ್ನಾಟಕ ಬಂದ್ ; ಮೈಸೂರು, ಮಂಡ್ಯದಲ್ಲೂ ಹೋರಾಟಕ್ಕೆ ಸೀಮಿತ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ಹರಿಸಬೇಕು ಎಂಬ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಖಂಡಿಸಿ ಹಾಗೂ…

9 hours ago

ಮೈಸೂರು: ಹೊಸ ಮಠದ ಚಿದಾನಂದ ಸ್ವಾಮೀಜಿ ಲಿಂಗೈಕ್ಯ

ಮೈಸೂರು: ಮೈಸೂರಿನ ಶಂಕರ ಮಠದ ರಸ್ತಯಲ್ಲಿರುವ ಹೊಸ ಮಠದ ಚಿದಾನಂದ ಸ್ವಾಮೀಜಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ…

15 hours ago

ಓದುಗರ ಪತ್ರ: ಹೋಟೆಲ್‌ಗಳ ಆಹಾರ ಶುದ್ಧತೆ, ಪದಾರ್ಥಗಳ ತಪಾಸಣೆ ನಿಯಮಿತವಾಗಿ ನಡೆಯಲಿ

ಅಧಿಕಾರಿಗಳ ತಪಾಸಣೆ ವೇಳೆ ಬೆಂಗಳೂರಿನ ಕೆಲವು ಪಂಚತಾರಾ ಹೋಟೆಲ್‌ಗಳಲ್ಲಿ, ಕೊಳೆತ ಮಾಂಸ, ಹಳೆಯ ತರಕಾರಿಗಳು ಇರುವುದು ಪತ್ತೆಯಾಗಿರುವುದೇ ಎಲ್ಲೆಲ್ಲೂ ಚರ್ಚಿತ…

21 hours ago