ಚಾಮರಾಜನಗರ

ಮಹಾಲಯ ಅಮಾವಾಸ್ಯೆ: ಮಲೆ ಮಹದೇಶ್ವರ ಬೆಟ್ಟದಲ್ಲಿ ಎಣ್ಣೆಮಜ್ಜನ ಸೇವೆ

ಹನೂರು: ಗಡಿ ಜಿಲ್ಲೆ ಚಾಮರಾಜನಗರದ ಹನೂರು ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾದ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ಇಂದು ಸ್ವಾಮಿಗೆ ಎಣ್ಣೆಮಜ್ಜನ ಸೇವೆಯನ್ನು ಸಾಂಪ್ರದಾಯಿಕವಾಗಿ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಮಹಾಲಯ ಜಾತ್ರೆ ಅಮಾವಾಸ್ಯೆ ಅಂಗವಾಗಿ ದೇಗುಲವನ್ನು ವಿವಿಧ ಬಗೆಯ ಪುಷ್ಪಗಳು ಹಾಗೂ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ದೇವಸ್ಥಾನದ ಹೊರ ಆವರಣ, ಒಳ ಆವರಣ ರಾಜಗೋಪುರ, ಬಸ್ ನಿಲ್ದಾಣ ಸೇರಿದಂತೆ ಇನ್ನಿತರ ಕಡೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಇಂದು ಸಂಜೆ ಬೇಡಕಂಪಣ ಸರದಿ ಅರ್ಚಕರು ಮಾದಪ್ಪನಿಗೆ ವಿವಿಧ ಅಭಿಷೇಕ ನೆರವೇರಿಸಿದರು. ಬಳಿಕ ಎಣ್ಣೆ ಮಜ್ಜನ ಸೇವೆ ನೆರವೇರಿಸಿ ಮಾದಪ್ಪನ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲಾಯಿತು. ದೀಪ ದೀಪದಾರತಿ ಹಾಗೂ ಮಹಾಮಂಗಳಾರತಿ ಬೆಳಗಿಸಲಾಯಿತು. ಈ ಮೂಲಕ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆಯು ಸಾಂಪ್ರದಾಯಿಕವಾಗಿ ನೆರವೇರಿತು.

ಇಂದು ಬೆಳಿಗ್ಗೆ 8 ಗಂಟೆಯ ಸಮಯದಲ್ಲಿ ನಡೆದ ಬೆಳ್ಳಿ ರಥೋತ್ಸವ, ಹುಲಿವಾಹನ, ರುದ್ರಾಕ್ಷಿ ಮಂಟಪ ಬಸವ ವಾಹನ, ರಾತ್ರಿ ಚಿನ್ನದ ರಥೋತ್ಸವದಲ್ಲಿ ಸಾವಿರಾರು ಸಾರ್ವಜನಿಕರು ಪಾಲ್ಗೊಂಡಿದ್ದರು. ಹರಕೆ ಹೊತ್ತು ಸಾರ್ವಜನಿಕರು ದೇಗುಲದ ಸುತ್ತ ದಂಡಿನ ಕೋಲು ಹೊತ್ತು ಪ್ರದಕ್ಷಿಣೆ ಹಾಕುವುದರ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾದರು. ಅಲ್ಲಿ ನೆರೆದಿದ್ದ ಎಲ್ಲರೂ ಮಹದೇಶ್ವರನಿಗೆ ಘೋಷಣೆ ಕೂಗಿ ಭಕ್ತಿ ಭಾವ ಮೆರೆದರು.

ಮಹಾಲಯ ಅಮಾವಾಸ್ಯೆ ಜಾತ್ರೆಗೆ ಆಗಮಿಸಿದ್ದ ಸಾವಿರಾರು ಜನರು ಮುಡಿ ಸೇವೆ, ಉರುಳು ಸೇವೆ, ಪಂಜಿನ ಸೇವೆ ಹಾಗೂ ರಜಾ ಹೊಡೆಯುವ ಸೇವೆಗಳಲ್ಲಿ ಭಾಗವಹಿಸಿ ಸರತಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರು.

ದೇವಸ್ಥಾನದ ಹೊರ ಆವರಣದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದ ಹಿನ್ನೆಲೆ ಉರುಳು ಸೇವೆಗೆ ತೊಂದರೆಯಾಗಿತ್ತು. ಈ ನಿಟ್ಟಿನಲ್ಲಿ ಪ್ರಾಧಿಕಾರದ ವತಿಯಿಂದ ದೇವಸ್ಥಾನದ ಹೊರ ಆವರಣದಲ್ಲಿ ಬಿಸಿಲಿನ ವೇಳೆ ನಿರಂತರವಾಗಿ ನೀರು ಸಿಂಪಡಣೆ ಮಾಡುವ ಮೂಲಕ ಸಾರ್ವಜನಿಕರ ಉರುಳು ಸೇವೆಗೆ ಅವಕಾಶ ಮಾಡಿಕೊಟ್ಟರು.

ಸಾರ್ವಜನಿಕರಿಗೆ ಸಂತಸ: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ದಾಸೋಹ ಭವನದಲ್ಲಿ ಇತ್ತೀಚೆಗೆ ಕೆಲವೊಂದು ಬದಲಾವಣೆ ತಂದು ಬೆಳಗಿನ ಸಮಯದಲ್ಲಿ ಉಪ್ಪಿಟ್ಟು, ಕೇಸರಿಬಾತು, ಪಲಾವ್, ಚಿತ್ರಾನ್ನ ಪುಳಿಯೋಗರೆ ಮಾಡಲಾಗುತ್ತಿದೆ. ಅದೇ ರೀತಿ ಮಧ್ಯಾಹ್ನದ ಊಟಕ್ಕೆ ಪಾಯಸ, ಸಿಹಿ ಬೂಂದಿ, ಅನ್ನ, ಸಾಂಬಾರ್, ಪಲ್ಯ, ಮಜ್ಜಿಗೆ ಹುಳಿ ವಿತರಣೆ ಮಾಡಲಾಗುತ್ತಿದೆ. ದಾಸೋಹ ಭವನದಲ್ಲಿ ಪ್ರಸಾದ ಬದಲಾವಣೆ ಮಾಡಿರುವುದಕ್ಕೆ ಬೆಂಗಳೂರಿನ ಶಾಂತಿ ಸಾಗರ್ ಹೋಟೆಲ್ ಮಾಲೀಕರು ಪ್ರಸಾದ ಸ್ವೀಕರಿಸಿ ಪ್ರಾಧಿಕಾರದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಸಾದ ಬಡಿಸಿದ ಕಾರ್ಯದರ್ಶಿ: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ದಾಸೋಹ ಭವನದ ಪರಿಶೀಲನೆಗೆ ತೆರಳಿದ ಕಾರ್ಯದರ್ಶಿಗಳು ಸ್ವತಃ ಸಾರ್ವಜನಿಕರಿಗೆ ಪ್ರಸಾದ ಬಡಿಸಿದ್ದಾರೆ. ಬಳಿಕ ಅಲ್ಲಿ ಜನರ ಜೊತೆಯಲ್ಲಿ ಕುಳಿತು ಪ್ರಸಾದ ಸ್ವೀಕರಿಸುವ ಮೂಲಕ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ.

ಮಹಾಲಯ ಜಾತ್ರಾ ಮಹೋತ್ಸವ ಪ್ರಯುಕ್ತ ಸಾರ್ವಜನಿಕರಿಗೆ ದಾಸೋಹದಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಿ, ಗುಣಮಟ್ಟದ ತರಕಾರಿ ಹಾಗೂ ಆಹಾರ ಪದಾರ್ಥಗಳನ್ನು ಬಳಸಿಕೊಂಡು ಪ್ರಸಾದ ತಯಾರು ಮಾಡಿ ವಿತರಿಸಲಾಗುತ್ತಿದೆ. ಸರತಿ ಸಾಲಿನಲ್ಲಿ ದೇವರ ದರ್ಶನ ಪಡೆಯುವ ಜನರಿಗೆ ಶುದ್ಧ ಕುಡಿಯುವ ನೀರು, ಜರ್ಮನ್ ಟೆಂಟ್ ಗಳನ್ನು ಹಾಕುವ ಮೂಲಕ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಆಂದೋಲನ ಡೆಸ್ಕ್

Recent Posts

ಗುಂಡ್ಲುಪೇಟೆ | ಉಪಟಳ ನೀಡುತಿದ್ದ ಹುಲಿ ಸೆರೆ ; ಮತ್ತೊಂದು ದರ್ಶನ

ಗುಂಡ್ಲುಪೇಟೆ : ತಾಲ್ಲೂಕಿನ ಬೊಮ್ಮಲಾಪುರ ಬಳಿ ಅನೇಕ ದಿನಗಳಿಂದ ರೈತರಿಗೆ ಉಪಟಳ ನೀಡಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿಯನ್ನು…

7 hours ago

ಬೆಳ್ತಂಗಡಿ | ಮಹೇಶ್‌ ಶೆಟ್ಟಿ ತಿಮರೋಡಿ ಮತ್ತೆ ಗಡಿಪಾರು

ಬೆಳ್ತಂಗಡಿ : ಧರ್ಮಸ್ಥಳ ವಿರುದ್ಧ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಎರಡನೇ ಬಾರಿಗೆ ಗಡಿಪಾರು ಮಾಡಿ ಪುತ್ತೂರು ಎ.ಸಿ.ಆದೇಶ…

7 hours ago

ಲೋಕಸಭೆ | ವಿಭಾ ಜಿರಾಮ್‌ ಮಸೂದೆ ಅಂಗೀಕಾಋ : ಪ್ರತಿಪಕ್ಷಗಳಿಂದ ಪ್ರತಿ ಹರಿದು ಆಕ್ರೋಶ

ಹೊಸದಿಲ್ಲಿ : ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಅಸ್ತಿತ್ವದಲ್ಲಿರುವ ‘ಮನ್ರೇಗಾ ಯೋಜನೆ’(ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಯಿಂದ…

7 hours ago

ಸಿಎಂ ಕುಟುಂಬ ನಿವೇಶನ ಪಡೆದ ಪ್ರಕರಣ : ಡಿ.23ಕ್ಕೆ ವಿಚಾರಣೆ ಮುಂದೂಡಿಕೆ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ಸದಸ್ಯರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಈಗ ಎಂಡಿಎ)ದಿಂದ ಕಾನೂನು ಬಾಹಿರವಾಗಿ…

7 hours ago

ಭಾರತ-ಒಮಾನ್‌ ಮುಕ್ತ ವ್ಯಾಪಾರ ಒಪ್ಪಂದ : ಉಭಯ ದೇಶಗಳಿಗೂ ಶಕ್ತಿ ; ಮೋದಿ ಬಣ್ಣನೆ

ಒಮಾನ್ : ಭಾರತ ಮತ್ತು ಒಮಾನ್ ನಡುವಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ವಿಶ್ವಾಸ…

8 hours ago

ನೇಮಕಾತಿ ವಿಳಂಬ | ಪ್ರತಿಧ್ವನಿಸಿದ ಪ್ರತಿಭಟನೆಗಳು

ಬೆಳಗಾವಿ : ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿ ವಿಳಂಬ ಮತ್ತು ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗಳು ವಿಧಾನಸಭೆಯಲ್ಲಿ ಪ್ರತಿಧ್ವನಿಸಿದವು. ಪ್ರತಿಪಕ್ಷದ ನಾಯಕ ಆರ್.ಅಶೋಕ್…

9 hours ago