ಜಿಲ್ಲೆಗಳು

ಚಾ.ನಗರ ಜಿಲ್ಲೆ: ನಿರೀಕ್ಷಿಸಿದ ಮುಖಗಳೇ ‘ಕೈ’ ಆಕಾಂಕ್ಷಿಗಳು

ಅರ್ಜಿ ಹಾಕಲು ಕಾಲಾವಕಾಶವಿದ್ದು ಇನ್ಯಾರಾದರೂ ಸಲ್ಲಿಸಬಹುದೇ ?

ಚಾಮರಾಜನಗರ: ಸಾರ್ವತ್ರಿಕ ಚುನಾವಣೆಗೆ ಇನ್ನೂ 6ತಿಂಗಳಿರುವಾಗಲೇ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಂದ ಕೆಪಿಸಿಸಿ ಅರ್ಜಿ ಸ್ವೀಕರಿಸುತ್ತಿದ್ದು ಇದುವರೆಗೆ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಿಂದ ಅರ್ಜಿ ಸಲ್ಲಿಸಿರುವವರಲ್ಲಿ ಬಹುತೇಕ ನಿರೀಕ್ಷಿಸಿದ್ದ ಅಭ್ಯರ್ಥಿಗಳೇ ಇದ್ದಾರೆ!
ಚಾಮರಾಜನಗರ, ಹನೂರು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಿಂದ ತಲಾ ಒಬ್ಬರು ಮತ್ತು ಕೊಳ್ಳೇಗಾಲ(ಮೀಸಲು) ಕ್ಷೇತ್ರದಿಂದ ಮೂವರು ಅರ್ಜಿ ಸಲ್ಲಿಸಿದ್ದು ಇದು ನ.15ರವರೆಗಿನ ಮಾಹಿತಿಯಾಗಿದೆ.
ವಾಸ್ತವವಾಗಿ, ನ.5ರಿಂದ 15ರವರೆಗಷ್ಟೇ ಅರ್ಜಿ ಸಲ್ಲಿಕೆಗೆ ಕಾಲಾವಕಾಶ ನೀಡಲಾಗಿತ್ತು. ಬಳಿಕ ನ.21ರವರೆಗೂ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಿದ್ದು ಈ ನಾಲ್ಕು ಕ್ಷೇತ್ರಗಳಿಂದ ಇನ್ಯಾರಾದರೂ ಈ ಅವಧಿಯಲ್ಲಿ ಅರ್ಜಿ ಹಾಕಬಹುದೇ ಎಂಬುದನ್ನು ಕಾದು ನೋಡಬೇಕಿದೆ.
ಚಾ.ನಗರ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದು ಇವರು ಈ ಕ್ಷೇತ್ರವನ್ನು ಸತತವಾಗಿ 3ಬಾರಿ ಪ್ರತಿನಿಧಿಸಿದ್ದಾರೆ. ಕಾಂಗ್ರೆಸ್ –ಜಾ.ದಳ ಸಮ್ಮಿಶ್ರಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಸಚಿವರಾಗಿ ಇಲ್ಲಿಯ ಉಸ್ತುವಾರಿ ಮಂತ್ರಿಯಾಗಿ ಕಾರ್ಯನಿರ್ವಹಿಸಿರುವುದಲ್ಲದೇ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮ ನಿಯಮಿತ ಅಧ್ಯಕ್ಷರಾಗಿ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ.
ಇನ್ನು ಹನೂರು ವಿಧಾನಸಭಾ ಕ್ಷೇತ್ರದಿಂದ ಶಾಸಕ ಆರ್.ನರೇಂದ್ರ ಅವರು ಬಿ.ಫಾರಂ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಸತತವಾಗಿ ಅವರು 3ನೇ ಬಾರಿ ಶಾಸಕರು. ನರೇಂದ್ರ ಅವರ ತಂದೆ ಮಾಜಿ ಸಚಿವ ದಿವಂಗತ ಜಿ.ರಾಜೂಗೌಡ ಅವರೂ ಕಾಂಗ್ರೆಸ್ ನಿಷ್ಠಾವಂತರಾಗಿದ್ದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿಯೂ ನರೇಂದ್ರ ಕಾರ್ಯನಿರ್ವಹಿಸಿದ್ದಾರೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಕೋರಿ ಯುವ ಮುಖಂಡ ಹೆಚ್.ಎಂ.ಗಣೇಶ್ ಪ್ರಸಾದ್ ಅರ್ಜಿ ಸಲ್ಲಿಸಿದ್ದಾರೆ. ಇದೇ ಮೊದಲ ಬಾರಿಗೆ ವಿಧಾನಸಭಾ ಟಿಕೆಟ್ ಬಯಸಿರುವ ಅವರಿಗೆ ತಂದೆ-ತಾಯಿಯ ರಾಜಕೀಯ ಪ್ರಭಾವವೇ ಶಕ್ತಿಯಾಗಿದೆ. ಮಾಜಿ ಸಚಿವ ಹೆಚ್.ಎಸ್.ಮಹದೇವಪ್ರಸಾದ್ ಅವರು 2ದಶಕಗಳಿಗೂ ಹೆಚ್ಚುಕಾಲ ಈ ಕ್ಷೇತ್ರ ಪ್ರತಿನಿಧಿಸಿ ವಿವಿಧ ನಾಯಕರ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ, ಉಸ್ತುವಾರಿ ಮಂತ್ರಿಯಾಗಿದ್ದರು. ಅವರ ನಿಧನ ನಂತರ ಡಾ.ಗೀತಾಮಹದೇವಪ್ರಸಾದ್ ಶಾಸಕರಾಗಿ, ಸಚಿವರಾಗಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿಯೂ ಕೆಲಸ ಮಾಡಿದ್ದಾರೆ.
ಕೊಳ್ಳೇಗಾಲ (ಮೀಸಲು) ವಿಧಾನಸಭಾ ಕ್ಷೇತ್ರದಿಂದ ಸಹಜವಾಗಿಯೇ ಮಾಜಿ ಶಾಸಕರಾದ ಎಸ್.ಜಯಣ್ಣ, ಎ.ಆರ್.ಕೃಷ್ಣಮೂರ್ತಿ, ಎಸ್.ಬಾಲರಾಜು ಅವರು ಟಿಕೆಟ್ ಕೋರಿ ಅರ್ಜಿ ಹಾಕಿದ್ದಾರೆ. ಎರಡು ಬಾರಿ ಶಾಸಕರಾಗಿದ್ದ ಎಸ್.ಜಯಣ್ಣ ಸಿದ್ದರಾಮಯ್ಯ ಅವರಿಗೆ ಅತ್ಯಾಪ್ತರು.
ಆದರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎ.ಆರ್.ಕೃಷ್ಣಮೂರ್ತಿ ಅವರು ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದಕ್ಕೆ ಸಿದ್ದರಾಮಯ್ಯ ಅವರ ಸಹಕಾರವೂ ಇತ್ತು. 2ಬಾರಿ ಶಾಸಕರಾಗಿದ್ದ  ಮಾಜಿ ರಾಜ್ಯಪಾಲರಾದ ದಿವಂಗತ ಬಿ.ರಾಚಯ್ಯ ಅವರ ಪುತ್ರ ಎಂಬ ಹಿನ್ನೆಲೆಯೂ ಪ್ರಮುಖವಾಗಿ ಕೆಲಸ ಮಾಡಿತ್ತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಎಸ್.ಬಾಲರಾಜು ದಶಕಗಳ ಹಿಂದೆಯೇ ಪಕ್ಷೇತರವಾಗಿ ಗೆದ್ದು ಶಾಸಕರಾಗಿದ್ದವರು. ಪ್ರಮುಖ ನಾಯಕರ ಜೊತೆ ಅದರಲ್ಲೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣರ ಜೊತೆ ಬಾಲರಾಜ್ ನಿಕಟ ಸಂಪರ್ಕ ಹೊಂದಿದ್ದಾರೆ.

*********************************
ಆಕಾಂಕ್ಷಿತ ಈ ಅಭ್ಯರ್ಥಿಗಳೆಲ್ಲಾ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ 5ಸಾವಿರ ರೂ. ಶುಲ್ಕ ಪಾವತಿಸಿ ನಿಗದಿತ ಫಾರಂ ಪಡೆದು 2ಲಕ್ಷ ರೂ. ಡಿಡಿ ಜೊತೆ ಅರ್ಜಿ ಸಲ್ಲಿಸಿದ್ದಾರೆ. 2ಲಕ್ಷ ಡಿಡಿಯೊಂದಿಗೆ ಅರ್ಜಿ ಹಾಕಬೇಕಿರುವುದರಿಂದ ನಾಮಕಾವಸ್ಥೆಗೆ ಅರ್ಜಿ ಹಾಕುವವರೆಲ್ಲಾ ಹಿಂದೆ ಸರಿಯುವಂತಾಗಿದೆ. ಆದರೆ ಪ್ರಾಮಾಣಿಕರು ಏನು ಮಾಡುವುದು ಎಂದು ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ಬೇಸರ ವ್ಯಕ್ತಪಡಿಸಿದರು.


ಗುಂಡ್ಲುಪೇಟೆಯಿಂದ ನಂಜಪ್ಪ ಇಂದು ಅರ್ಜಿ ಸಲ್ಲಿಕೆ
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೋರಿ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ ಅವರು ಗುರುವಾರ ಅರ್ಜಿ ಸಲ್ಲಿಸಲಿದ್ದಾರೆ. ಈ ವಿಚಾರವನ್ನು ಅವರು ‘ಆಂದೋಲನ’ಕ್ಕೆ ದೃಢಪಡಿಸಿದ್ದಾರೆ. 1999 ಮತ್ತು 2004ರ ಚುನಾವಣೆಯಲ್ಲಿ ಇವರು ಗುಂಡ್ಲುಪೇಟೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

3 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

4 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

4 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

5 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

6 hours ago