ಮಹದೇವ ಮತ್ತು ತಂಡದಿಂದ ಕಂಸಾಳೆ, ಕೆರೆಮನೆ ಶಿವಾನಂದ ಹೆಗಡೆ ಯಕ್ಷಗಾನ
ಬಿ.ಎನ್.ಧನಂಜಯಗೌಡ
ಮೈಸೂರು: ಸಭಿಕರೆಡೆಯಿಂದ ನಾಟ್ಯದ ನಡಿಗೆಯಲ್ಲಿ ಬಂದ ನವಿಲೊಂದು, ವನರಂಗದ ವೇದಿಕೆಯ ಮೇಲೆ ಬಂದು ಗರಿಬಿಚ್ಚಿ ಕುಣಿದು ಕುಪ್ಪಳಿಸುತ್ತಾ ತನ್ನ ಗರಿಗಳಲ್ಲಿ ನಾನಾ ಬಗೆಯ ಜನಪದ ಕಲೆಗಳ ಚಿತ್ರಗಳನ್ನು ಅನಾವರಣಗೊಳಿಸಿತು.
ಇನ್ನು ಮೊದಲ ದಿನ ಕಾರ್ಯಕ್ರಮದಲ್ಲಿ ಬೀಸು ಕಂಸಾಳೆಯ ಸದ್ದುಗದ್ದಲ, ಯಕ್ಷಗಾನದ ತಾಳಮದ್ದಳೆ ನೆರೆದಿದ್ದ ಕಲಾಸ್ತರನ್ನು ರಂಜಿಸಿತು. ಇನ್ನು ಡಾ.ಪಿ.ಕೆ.ರಾಜಶೇಖರ್ ಅವರು ಮಾತಿನ ಮಧ್ಯೆ ಹೇಳಿದ ಜನಪದ ಹಾಡುಗಳು, ಜನಪದ ಒಗಟು, ಕಥೆಗಳನ್ನು ಹೇಳುವ ಮೂಲಕ ವೀಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತುವ ಮೂಲಕ ಇದೊಂದು ಜನಪದಹಾಸ್ಯ ಕಾರ್ಯಕ್ರಮವೂ ಆಯಿತು.
ನಂಜನಗೂಡಿನ ಮಹದೇವ ಮತ್ತು ತಂಡದವರು ಸುಮಾರು ೩೦ ನಿಮಿಷಗಳ ಕಾಲ ಪ್ರದರ್ಶಿಸಿದ ಕಂಸಾಳೆಯ ತಾಳಗಳಿಗೆ ವೀಕ್ಷಕರು ಕುಳಿತಲ್ಲಿಯೇ ಕಾಲು ಕುಣಿಸುತ್ತಾ, ಚಪ್ಪಾಳೆ ತಟ್ಟುತ್ತಾ ಎಂಜಾಯ್ ಮಾಡಿದರು. ಇನ್ನು ಕಂಸಾಳೆ ನೃತ್ಯದಲ್ಲಿ ಕಂಡು ಬಂದ ಸಾಹಸಮಯ ದೃಶ್ಯಗಳಿಗೆ ಚಪ್ಪಾಳೆಯ ಜೊತೆಗೆ ಸಿಳ್ಳೆಗಳು ಕೇಳಿ ಬಂದವು.
ಆ ನಂತರ ಕೆರೆಮನೆ ಶಿವಾನಂದ ಹೆಗಡೆಯವರು ಪ್ರದರ್ಶಿಸಿದ ‘ಪಂಚವಟಿ’ ಕಥೆಯಾಧಾರಿತ ಯಕ್ಷಗಾನ ವೀಕ್ಷಕರನ್ನು ಬಹುವಾಗಿ ಆಕರ್ಷಿಸಿತು. ಯಕ್ಷಗಾನದ ಪ್ರತಿ ದೃಶ್ಯಗಳನ್ನು ವೀಕ್ಷಕ ವೃಂದ ಸದ್ದುಗದ್ದಲಗಳನ್ನು ಮಾಡದೇ ತದೇಕಚಿತ್ತದಿಂದ ವೀಕ್ಷಿಸಿತು. ತಾಳಮದ್ದಳೆಯ ಸದ್ದು ಮತ್ತು ಯಕ್ಷಗಾನದ ಹಿಮ್ಮೇಳದ ಹಾಡು, ಹೌಹಾರಿಕೆ ಇಡೀ ರಂಗಾಯಣವನ್ನು ಸುತ್ತುವರೆದಿತ್ತು. ಎರಡೂ ತಂಡದ ಕಲಾವಿದರಿಗೆ ಪ್ರಶಸ್ತಿ ಮತ್ತು ಸ್ಮರಣಿಕೆಯನ್ನು ನೀಡುವ ಮೂಲಕ ಗೌರವಿಸಲಾಯಿತು.
ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಜನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್ ಮಾತನಾಡಿ, ನಮ್ಮ ಜನಪದ ಸಂಸ್ಕೃತಿ, ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಯುವಪಡೆಯನ್ನು ಸಿದ್ಧಗೊಳಿಸಬೇಕಾದ ಜವಾಬ್ದಾರಿ ಸರ್ಕಾರ ಸೇರಿದಂತೆ ನಮ್ಮೆಲ್ಲರ ಮೇಲಿದೆ ಎಂದರು.
ಈ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಜನಪದವನ್ನು ಪಠ್ಯದ ಮೂಲಕ ಬೋಧಿಸುವುದು, ಕಲೆಯಾಗಿ ಕಲಿಸುವ ಅಗತ್ಯವಿದೆ. ಮೈಸೂರು ವಿವಿಯಲ್ಲಿ ಬಹಳ ಉತ್ಸಾಹದಿಂದ ಜನಪದ ವಿಭಾಗವನ್ನು ಆರಂಭಿಸಲಾಯಿತು. ಆದರೆ, ಈಗ ಅದು ಮಾಮೂಲಿಯಾಗಿ ಒಂದು ವಿಷಯವಾಗಿದೆ. ಎಲ್ಲೂ ಸೀಟು ಸಿಗದೇ ಇದ್ದಾಗ ಡಿಗ್ರಿ ಸರ್ಟಿಫಿಕೇಟ್ ಪಡೆಯಲು ಅಂತಿಮವಾಗಿ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಸೇರುತ್ತಾರೆ ಎಂದರು.
ಜನಪದ ಅತ್ಯಂತ ಪ್ರಾಚೀನ ಕಲೆಯಾಗಿದ್ದು, ಇದಕ್ಕೆ ಪ್ರಸರಣ ಗುಣವೂ ಇದೆ. ಇಂತಹ ನಮ್ಮ ಸಂಸ್ಕೃತಿಯನ್ನು ಕಡೆಗಣಿಸಿ ಪಾಶ್ಚಾತ್ಯ ಸಂಸ್ಕೃತಿಯನ್ನು ಕಲಿಯತ್ತಾ, ಅನುಸರಿಸುತ್ತಾ ಹೋದರೆ ಎಲ್ಲರೂ ಪರಕೀಯರು, ಪರದೇಶಿಗಳು ಆಗುತ್ತೀರಾ. ಹಾಗಾಗಿ, ನಮ್ಮ ಸಂಸ್ಕೃತಿಯನ್ನು ಪಾಲನೆ ಮಾಡುತ್ತಾ ಸ್ವದೇಶಿಗಳಾಗಿಯೇ ನಾವಿರಬೇಕು ಎಂದರು.
ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ಮಾತನಾಡಿ, ಕಲೆಯ ವಿಷಯಕ್ಕೆ ಬಂದಾಗ ನಮ್ಮ ದೇಶಕ್ಕೆ ಯಾವುದೇ ದೇಶವು ಪ್ರತಿಸ್ಪರ್ಧಿಯಾಗಲಾರದು. ಅಷ್ಟು ಕಲೆಗಳು ನಮ್ಮಲ್ಲಿ ಇವೆ. ಅವುಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಅನುದಾನಗಳನ್ನು ನೀಡುವ ಮೂಲಕ ಆದ್ಯತೆ ನೀಡಬೇಕು ಎಂದರು.
ಎಲ್ಲ ಕಲೆಗಳು ನಮ್ಮ ಜನಪದ ಅಡಿಗಲ್ಲಿನ ಮೇಲೆ ನಿಂತಿವೆ. ಅದೇ ಇಲ್ಲವಾದರೆ, ಬೇರೆ ಎಲ್ಲ ಕಲೆಗಳು ಕುಸಿಯುತ್ತವೆ. ಪಾಶ್ಚಿಮಾತ್ಯ ಪ್ರಭಾವ ನಮ್ಮ ಅಸ್ಮಿತೆಯನ್ನು ಕುಂದಿಸುವ ಹಂತಕ್ಕೆ ಬಂದಿದೆ. ಹೀಗಾದರೆ, ನಮ್ಮ ಕಲೆಗಳು ಸಂಪೂರ್ಣವಾಗಿ ನಾಶವಾಗುತ್ತವೆ. ಅವುಗಳನ್ನು ನಾವುಗಳು ಗಟ್ಟಿಗೊಳಿಸಿ, ಕಟ್ಟಬೇಕು. ಮರೆಯಾಗುತ್ತಿರುವ ಕಲೆಗಳ ಬಗ್ಗೆ ಚಿಂತನೆ ನಡೆಸುವ ವೇದಿಕೆಯೂ ಇದಾಗಬೇಕು ಎಂದರು.
ಭಾರತದ ನೆಲದಲ್ಲಿ ನಿಂತು ಭಾರತೀಯತೆ ಬಗ್ಗೆ ಹೇಳುವ ಪರಿಸ್ಥಿತಿ ಬಂದಿರುವುದು ಆತಂಕ ಹುಟ್ಟಿಸುತ್ತದೆ. ಭಾರತವೇ ಬಹುರೂಪಿ. ಬಹುರೂಪಿ ಭಾರತವನ್ನು ನಮ್ಮ ಮನಸ್ಸಿಗೆ ತೆಗೆದುಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಉಪ ನಿರ್ದೇಶಕರಾದ ನಿರ್ಮಲ ಮಠಪತಿ, ರಂಗೋತ್ಸವದ ಸಂಚಾಲಕ ಜಗದೀಶ್ ಮನುವಾರ್ತೆ, ಜನಪದೋತ್ಸವದ ಸಂಚಾಲಕರಾದ ಗೀತ ಮೋಂಟಡ್ಕ ಹಾಜರಿದ್ದರು.
ಪೋಟೋಗಳು : ನವಿಲು ವೇಷಧಾರಿಯೊಬ್ಬರು ಸಭಿಕರೆಡೆಯಿಂದ ವೇದಿಕೆಗೆ ಬಂದು ಕುಣಿಯುವ ಮೂಲಕ ಬಹುರೂಪಿ ಜನಪದೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಡಾ.ಪಿ.ಕೆ.ರಾಜಶೇಖರ್, ಕೆರೆಮನೆ ಶಿವಾನಂದ ಹೆಗಡೆ ಇತರರು ಹಾಜರಿದ್ದರು.
ಕಣ್ಣೂರು: ಒಂದೇ ಕುಟುಂಬದ ನಾಲ್ವರು ಸದಸ್ಯರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಕೇರಳದಲ್ಲಿ ನಡೆದಿದೆ. ಉತ್ತರ ಕೇರಳ ಜಿಲ್ಲೆಯ ಮನೆಯಲ್ಲಿ ಒಂದೇ…
ಬೆಂಗಳೂರು: ಈ ಬಾರಿಯ 17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜನವರಿ 29ರಿಂದ ಫೆಬ್ರವರಿ 06ರವರೆಗೆ ನಡೆಯಲಿದೆ. ಹಿರಿಯ ಚಲನಚಿತ್ರ…
ಕಲಬುರ್ಗಿ: ಕಾಂಗ್ರೆಸ್ ಹೈಕಮಾಂಡ್ ಯಾರು ಅನ್ನೋದೆ ಗೊತ್ತಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟೀಕೆ ಮಾಡಿದ್ದಾರೆ. ರಾಜ್ಯದಲ್ಲಿ ಸಿಎಂ…
ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರ ತಾಲ್ಲೂಕಿನ ನಂಜೆದೇವಪುರ ಗ್ರಾಮದ ಸುತ್ತಮುತ್ತ ಹುಲಿಗಳನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಮುಂದುವರಿಸಲಾಗಿದೆ. ಚಾಮರಾಜನಗರ ತಾಲ್ಲೂಕಿನ…
ಬೆಂಗಳೂರು: ಕ್ರಿಕೆಟ್ ಪ್ರೇಮಿಗಳಿಗೆ ಶಾಕ್ ಎಂಬಂತೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾಳಿನ ಪಂದ್ಯಕ್ಕೆ ಅವಕಾಶ ಇಲ್ಲ ಎಂದು ತಿಳಿದುಬಂದಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ…
ಮೈಸೂರು: ಅಪಘಾತದಲ್ಲಿ ಗಾಯಗೊಂಡು ಬಿದ್ದಿದ್ದ ವ್ಯಕ್ತಿಯಿಂದ 80 ಸಾವಿರ ರೂ ದೋಚಿದ್ದ ಇಬ್ಬರನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ರಮೇಶ್ ಹಾಗೂ…