ಬುದ್ಧ ಇತರರ ಮಾನವೀಯ ಚಿಂತನೆಗಳೂ ಅವರಲ್ಲಿದ್ದವು
-ಪ್ರೊ.ವಿಜಯಕುಮಾರಿ ಎಸ್. ಕರಿಕಲ್
ಅದು ೧೯೮೨ ನೇ ಇಸ್ವಿ. ಕೆಲ ಸಮಯ ವಿಜಾಪುರ(ಈಗ ವಿಜಯಪುರ)ದಲ್ಲಿ ನಮ್ಮ ನಾದಿನಿಯ ಮನೆಯಲ್ಲಿದ್ದೆ. ನನ್ನ ನಾದಿನಿ ಮತ್ತು ಅವರ ಮನೆಯವರಿಬ್ಬರೂ ದಿನನಿತ್ಯ ಬೆಳ್ಳಿಗೆ ೬ರ ಹೊತ್ತಿಗೆ ಸ್ನಾನ ಮುಗಿಸಿ ಮೂರುಪಟ್ಟೆ ವಿಭೂತಿ ಧರಿಸಿ ಸಿದ್ದೇಶ್ವರ ಗುಡಿಯಲ್ಲಿಯ ಶಿವಾನುಭವ ಮಂಟಪಕ್ಕೆ ಹೊರಡುತ್ತಿದ್ದರು, ಅವರು ಪ್ರತಿದಿನ ನನ್ನನ್ನು ಬರುವಂತೆ ಬಲವಂತ ಮಾಡುತ್ತಿದ್ದರು. ಕೆಲವು ಬಾರಿ ನಾನು ಅವರೊಂದಿಗೆ ಹೋಗುತ್ತಿದ್ದೆ. ಆಗ ಶಿವಾನುಭವ ಮಂಟಪದಲ್ಲಿ ಬೆಳಗಿನ ಆರರಿಂದ ಏಳರ ಅವಧಿಯಲ್ಲಿ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಯವರ ಪ್ರವಚನವಿರುತ್ತಿತ್ತು. ಅಲ್ಲಿ ಆ ಬೆಳಗಿನ ಜಾವ ಕಿಕ್ಕಿರಿದು ನೆರೆದ ಜನರು, ಸುತ್ತ ಇರುವ ಗಿಡಮರಗಳಲ್ಲಿ ಹಾಡುವ ಹಕ್ಕಿಗಳ ಕೂಜನ ಇಂಪಾಗಿ ಕೇಳಿಸುತ್ತಿತ್ತು. ಅಲ್ಲಿಗೆ ೬ ಗಂಟೆಗೆ ಮಲ್ಲಿಕಾರ್ಜುನ ಸ್ವಾಮಿಗಳು ಬಂದರೆ ಪ್ರವಚನ ಶುರುವಾಗುತ್ತಿತ್ತು. ವಿಜಾಪುರ ಒಂದು ವ್ಯಾಪಾರಿ ಕೇಂದ್ರ. ಪ್ರವಚನ ಕೇಳಲು ಬರುತ್ತಿದ್ದವರಲ್ಲಿ ಉದ್ಯಮಿಗಳು ಹಾಗೂ ಶ್ರಮಿಕರು ಇರುತ್ತಿದ್ದರು. ಮಲ್ಲಿಕಾರ್ಜುನ ಸ್ವಾಮೀಜಿಗಳ ಜತೆಯಲ್ಲಿ ಆಗಾಗ ಬಿಳಿಯ ಬಟ್ಟೆ ಧರಿಸಿದ ಸೌಮ್ಯ ಸ್ವಭಾವದ ಒಬ್ಬ ವ್ಯಕ್ತಿ ಕಾಣಿಸಿಕೊಂಡಾಗ ಜನ ತಮ್ಮ ಪಿಸುಮಾತಿನಲ್ಲಿ ‘ಹಾಂ ಇವತ್ತು ಬುದ್ಧಿಜೀಯವರು ಬಂದಾರ ಎಂದು ಸಂತಸ ವ್ಯಕ್ತಪಡಿಸುತ್ತಿದರು.
ಬುದ್ಧಿಜೀ ಎಂದು ಗೌರವಪೂರ್ವಕವಾಗಿ ಕರೆಯಿಸಿಕೊಳ್ಳುತ್ತಿದ್ದವರೇ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು. ಅವರ ಬಗ್ಗೆ ಆಗಲೇ ಕೆಲವು ಕತೆಗಳಿದ್ದವು. ಭಕ್ತರು ರೊಕ್ಕ ಕೊಟ್ಟರೆ ತೆಗೆದುಕೊಳ್ಳಬೇಕಾಗಿ ಬರುತ್ತದೆ ಎನ್ನುವ ಕಾರಣಕ್ಕೆ ಅವರು ಕಿಸೆಯಿಲ್ಲದ ಅಂಗಿಯನ್ನು ತೊಟ್ಟುಕೊಳ್ಳುತ್ತಾರೆ ಎಂದೆಲ್ಲ ಜನ ಮಾತನಾಡುತ್ತಿದ್ದರು. ಅವರ ಬಗ್ಗೆ ಜನರಲ್ಲಿ ಅಪಾರ ಗೌರವವಿತ್ತು. ಬುದ್ಧೀಜಿ ಎನ್ನುವಾಗ ಬುದ್ಧ ಎಂದಂತೆಯೇ ಭಾಸವಾಗುತ್ತಿತ್ತು. ಅವರು ಮಹಾರಾಷ್ಟ್ರದೊಳಗೂ ಪ್ರವಚನ ಮಾಡುತ್ತಾರೆ.
ಅವರಿಗೆ ಮರಾಠಿ ಭಾಷೆ ಗೊತ್ತು ಅಮೆರಿಕದೊಳಗೂ ಪ್ರವಚನ ಕೊಡುತ್ತಾರೆ. ಒಳ್ಳೆಯ ಇಂಗ್ಲಿಷ್ ಬಲ್ಲವರು ಫ್ರಾನ್ಸ್, ಜರ್ಮನಿ, ಎಲ್ಲ ದೇಶಗಳಿಗೂ ಪ್ರವಚನ ಕೊಡಲು ಹೋಗುತ್ತಾರೆ. ಎಂದು ಜನ ಮಾತನಾಡಿಕೊಳ್ಳುತ್ತಿದ್ದರು.‘ಬುದ್ಧಿಜೀಯವರಿಗೆ ಕಾರು ನಡಸಾಕೂ ಬರ್ತದಂತ ಮೊನ್ನೆ ಅವರೇ ಕಾರು ಡ್ರೈವ್ ಮಾಡಿಕೊಂಡು ಹೋದರಂತೆ… ಹೀಗೆ ಅನೇಕ ವಿಚಾರಗಳು ಜನರಿಗೆ ಆಶ್ಚರ್ಯಜನಕವಾಗಿ ಕಾಣುತ್ತಿದ್ದವು.
ಸಿದ್ದೇಶ್ವರ ಸ್ವಾಮಿಗಳು ವಿಜಾಪುರದಲ್ಲಿದ್ದಾರೆಂದು ಅಲ್ಲಿಯ ಜನರಲ್ಲಿ ಎಂತಹ ಸಂಭ್ರಮವಿರುತ್ತಿತ್ತು ಎನ್ನುವುದು ಬಣ್ಣಿಸಲಸದಳ. ವಾರದ ಏಳು ದಿನಗಳು ಒಂದೊಂದು ಮನೆತನದವರು ಅವರ ಊಟಕ್ಕೆಂದು ಅಡುಗೆಮಾಡಿ ಆಶ್ರಮಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಹಾಗೆ ಬುಧವಾರದಂದು ನಮ್ಮ ನಾದಿನಿಯ ಮನೆಯಿಂದ ಅಡುಗೆ ಕಳಿಸುವ ಪರಿಪಾಟವಿತ್ತು. ಎಳೆ ಜವಾರಿ ಚವಳೀಕಾಯಿ, ಕಿರಕಸಾಲಿ ಸೊಪ್ಪು, ಎ ೆಸವತೇಕಾಯಿ, ಮೆಂತ್ಯೆಪಲ್ಲೆ, ರಾಜಗೀರಿ ಪಲ್ಲೆ, ಸಬ್ಬಸಿಗೆ ಪಲ್ಲೆ … ಹೀಗೆ ತಾಜ ತೊಪ್ಪಲುಪಲ್ಲೆಗಳನ್ನು ತಂದು ಸೋಸಿ ತೊಳೆದು ಸಜ್ಜುಗೊಳಿಸುತ್ತಿದ್ದರು. ನಮ್ಮ ದಿನನಿತ್ಯ ಅಡುಗೆಗಿಂತ ಈ ಅಡುಗೆ ವಿಶೇಷವಾಗಿರುತ್ತಿತ್ತು, ಉಳ್ಳಿಗಡ್ಡೆ ಬಳ್ಳೊಳ್ಳಿ ಬಳಸುವಂತಿಲ್ಲ. ಸ್ವಲ್ಪವೇ ಎಣ್ಣೆಯಲ್ಲಿ ಪಲ್ಲೆಗಳನ್ನು ತಾಳಿಸಿ ಹೌದೋ ಅಲ್ಲವೋ ಅನುವಷ್ಟು ಉಪ್ಪು ಹಾಕುವುದು ಖಾರ ಸೋಂಕಿಲ್ಲದ ಅಡುಗೆಯದು. ಹುಣಿಸೆಹುಳಿ ಬಳಸುವಂತಿಲ್ಲ. ಜತೆಗೆ ಒಂದಷ್ಟು ಸಪ್ಪೆಯ ಬೇಳೆ. ಪ್ರಾಣಿಜನ್ಯ ಪದಾರ್ಥಗಳನ್ನು ಬುದ್ಧಿಜೀಯವರು ಸೇವಿಸುತ್ತಿರಲಿಲ್ಲವಾದುದ್ದರಿಂದ ತುಪ್ಪ ಹಾಲು ಮೊಸರು ವರ್ಜ್ಯವಾಗಿದ್ದವು. ಸಿಹಿಪದಾರ್ಥವಾಗಿ ಗೋಧಿ ಹುಗ್ಗಿ ಮಾಡುತ್ತಿದ್ದರು. ಆದರೆ ಅತಿಕಡಿಮೆ ಬೆಲ್ಲ ಹಾಕಬೇಕಾಗಿತ್ತು.
ಆಹಾರವ ಕೆರಿದು ಮಾಡಿರಣ್ಣ ಎನ್ನುವ ಅಕ್ಕನ ನಡೆಯಂತೆ ಎಲ್ಲವೂ ಅತ್ಯಂತ ಮಿತವಾಗಿರುತ್ತಿತ್ತು. ನಾಲ್ಕೋ ಏದೋ ಬಿಳಿಜೋಳದ ರೊಟ್ಟಿ. ಸೊಪ್ಪಿನ ಪಲ್ಯ ಎಣ್ಣೆಯಲ್ಲಿ ತಾಳಿಸಿದ್ದು ಜೋಳದ ನುಚ್ಚು ಗೋಧಿಹುಗ್ಗಿ ಚವಳಿಕಾಯಿ ಸಣ್ಣ ಉರಿಯಲ್ಲಿ ಸ್ವಲ್ಪ ಎಣ್ಣೆ ಹಾಕಿಹುರಿದು ಮಾಡಿದ ಪಲ್ಯವನ್ನು ಡಬ್ಬಗಳಲ್ಲಿ ಕಟ್ಟಿಕೊಂಡು ಹೋಗುವ ಸಡಗರಕ್ಕೆ ಸಾಟಿಯಿರಲಿಲ್ಲ. ಜಪಾನಿನ ಝೆನ್ ಗುರು ಚೀನದ ತಾವೋ ಕನ್ಫ್ಯೂಷಿಯಸ್ ಟಿಬೆಟ್ಟಿನ ಬೌದ್ಧ ಗುರುಗಳು, ಬುದ್ಧನ ಚಿಂತನೆಗಳು, ಅರಿಸ್ಟಾಟಲ್, ಪ್ಲೆಟೋ, ಕ್ರಿಸ್ತ, ಪೈಗಂಬರ್ ಎಲ್ಲರ ಮಾನವೀಯ ಚಿಂತನೆಗಳನ್ನೂ ತಮ್ಮ ಮಾತಿನಲ್ಲಿ ಸಾಂದರ್ಭಿಕವಾಗಿ ಉದಾಹರಿಸುತ್ತಿದ್ದರು. ಅವರು ಮಾತನಾಡುತ್ತಿದ್ದರೆ ಇಡೀ ಸಭೆಗೆ ಸಭೆಯೇ ನಿಶ್ಯಬ್ಧವಾಗಿರುತ್ತಿತ್ತು. ಅವರ ವಾಣಿಯನ್ನು ಕೇಳಲು ಜನರು ಕಿವಿದೆರೆದು ಕುಳಿತಿರುತ್ತಿದ್ದರೆ ಬುದ್ಧಿಜೀಯವರು ಎಲ್ಲರಿಗೂ ಜ್ಞಾನಸುಧೆಯನ್ನೆರೆಯುತ್ತಿದ್ದರು.
ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಬದುಕುವುದಕ್ಕಾಗಿ ಮಾತ್ರ ಆಹಾರ ಸೇವಿಸುತ್ತಿದ್ದರು. ಅವರ ತೆಳುಶರೀರ, ತೇಜಃಪೂರ್ಣ ಕಣ್ಣುಗಳು ಸೌಮ್ಯಭಾವ ಮೇಲುಮಾತು ಮಾತಿನ ಮಧ್ಯದಲ್ಲಿ ಜಗತ್ತಿನ ನಾನಾ ಭಾಗದ ತತ್ವಜ್ಞಾನಿಗಳು ಅವರ ಚಿಂತನೆಗಳು ಎಡೆ ಪಡೆಯುತ್ತಿದ್ದರು.
ಚೆಟ್ಟಳ್ಳಿ: ಕಾಫಿ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಕಾರ್ಮಿಕನೊಬ್ಬ ಮತ್ತೊಬ್ಬ ಕಾರ್ಮಿಕನನ್ನು ಹತ್ಯೆಗೈದು ಪೊಲೀಸ್ ಠಾಣೆಗೆ ಬಂದು ಶರಣಾದ ಘಟನೆ…
ನವದೆಹಲಿ: ರಾಜ್ಯಸಭೆ ಚುನಾವಣೆಗೆ ಬಿಜೆಪಿ 9 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಬಿಹಾರದಿಂದ…
ಬೆಂಗಳೂರು: ಅಮೇರಿಕಾ, ಇಸ್ರೇಲ್-ಇರಾನ್ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ದುಬೈನಲ್ಲಿ ಸಿಲುಕಿ ಆತಂಕದಲ್ಲಿರುವ ಕನ್ನಡಿಗರ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಬರಪೀಡಿತ ಪ್ರದೇಶಗಳಲ್ಲಿ ಒಂದಾದ ಬೂದಬಾಳು ಕೆರೆಗೆ ಕಾವೇರಿ ನದಿ ಮೂಲದಿಂದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಷೇರುದಾರರು ನಿಮ್ಮ ಮೇಲೆ ವಿಶ್ವಾಸವಿಟ್ಟು ಕೃಷಿ ಪತ್ತಿನ ಸಹಕಾರ ಸಂಘದ…
ಟೆಹರಾನ್: ಅಮೇರಿಕಾ ಹಾಗೂ ಇಸ್ರೇಲ್ ದೇಶಗಳು ಇರಾನ್ ಜೊತೆ ನಡೆಸುತ್ತಿರುವ ಯುದ್ಧವು ಇದೀಗ ವಿಶ್ವದ ಅತ್ಯಂತ ನಿರ್ಣಾಯಕ ಇಂಧನ ಮಾರ್ಗಗಳಲ್ಲಿ…