ಬೆಂಗಳೂರು : ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಸುಧಾಮೂರ್ತಿ ಅವರ ಹೆಸರನ್ನು ಬಳಸಿಕೊಂಡು ವಂಚನೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಸುಧಾಮೂರ್ತಿ ಅವರ ಪರ್ಸನಲ್ ಅಸಿಸ್ಟೆಂಟ್ ಮಮತ ಸಂಜಯ್ ಅವರು ಜಯನಗರ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ. ಶೃತಿ ಹಾಗೂ ಲಾವಣ್ಯ ಎಂಬವರ ವಿರುದ್ಧ ದೂರು ದಾಖಲಾಗಿದೆ.
ಕೆಕೆಎನ್ಸಿ ಯಿಂದ 50ನೇ ವರ್ಷದ ಕಾರ್ಯಕ್ರಮಕ್ಕೆ ಸುಧಾಮೂರ್ತಿಯವರಿಗೆ ಆಹ್ವಾನಿಸಲಾಗಿತ್ತು. ಆದರೆ ಅವರು ಇಮೇಲ್ ಮೂಲಕ ಅಮೆರಿಕದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಬರಲು ಆಗುವುದಿಲ್ಲ ಎಂದು ಸಂದೇಶ ಕಳುಹಿಸಿದ್ದರು. ಈ ನಡುವೆ ಸುಧಾಮೂರ್ತಿಯವರ ಫೋಟೋಗಳನ್ನು ಬಳಸಿಕೊಂಡು ಜಾಹೀರಾತುಗಳನ್ನು ನೀಡಲಾಗಿತ್ತು. ಇದನ್ನು ಪ್ರಶ್ನಿಸಿದಾಗ ವಂಚನೆ ಬೆಳಕಿಗೆ ಬಂದಿದೆ.
ಮೂರ್ತಿ ಟ್ರಸ್ಟ್ ನ ಕಚೇರಿ ಎಂದು ಹೆಸರು ಸೃಷ್ಠಿಸಿ ಸುಧಾಮೂರ್ತಿಯವರ ಅಸಿಸ್ಟೆಂಟ್ ಎಂದು ವಂಚಿಸಿರುವ ಆರೋಪ ಕೇಳಿ ಬಂದಿದೆ. ಆರೋಪಿ ಲಾವಣ್ಯ ಕಾರ್ಯಕ್ರಮಕ್ಕೆ ಸುಧಾಮೂರ್ತಿ ಮೇಡಂ ಬರುತ್ತಾರೆ ಎಂದು ಹೇಳಿ ವಂಚನೆ ಎಸಗಿದ್ದಾರೆ. ಹೀಗೆ ಅಮೆರಿಕದಲ್ಲಿ ಮೀಟ್ ಆಡ್ ಗ್ರೀಟ್ ವಿತ್ ಡಾ. ಸುಧಾಮೂರ್ತಿ ಕಾರ್ಯಕ್ರಮ ಆಯೋಜಿಸಿರುವುದಾಗಿ ಟಿಕೆಟ್ ಮಾರಾಟ ಮಾಡಿದ್ದಾರೆ. ಪ್ರತಿ ಟಿಕೆಟ್ಗೆ 40 ಡಾಲರ್ ಪಡೆದಿರುವುದಾಗಿ ಆರೋಪಿಸಲಾಗಿದೆ.
ಘಟನೆ ಸಂಬಂಧ ಜಯನಗರ ಠಾಣೆಯಲ್ಲಿ ಐಟಿ ಆಕ್ಟ್ 66ಸಿ, 66ಡಿ ಹಾಗೂ ಐಪಿಸಿ 419, 420 ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.