ಮಂಡ್ಯ: ಮಂಡ್ಯ: XUV 700 ಕಾರಿನ ಆಸೆ ತೋರಿಸಿ ಲಕ್ಷ ಲಕ್ಷ ರೂ.ಗಳನ್ನು ರೈತನಿಗೆ ಪಂಗನಾಮ ಹಾಕಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಜಕ್ಕನಹಳ್ಳಿ ಗ್ರಾಮದ ಸಂಜೀವ್ಗೌಡ ಎಂಬ ರೈತನೇ ಲಕ್ಷ ಲಕ್ಷ ರೂ.ಗಳನ್ನು ಕಳೆದುಕೊಂಡವರು.
ಹೊಸ ವರ್ಷದ ಆಫರ್ನಲ್ಲಿ ಮಿಶೋ ಆ್ಯಪ್ ಮೂಲಕ ರೈತ ಸಂಜೀವ್ಗೌಡ ಅವರು ಕೆಲ ವಸ್ತುಗಳನ್ನು ಖರೀದಿಸಿದ್ದಾರೆ. ವಸ್ತುಗಳನ್ನು ಖರೀದಿಸಿದ ಕೆಲವೇ ದಿನಗಳಲ್ಲಿ ಸಂಜೀವ್ಗೌಡರ ಮನೆಗೆ ಸೈಬರ್ ಚೋರರು ಪೋಸ್ಟ್ ಮೂಲಕ ಒಂದು ಕೂಪನ್ ಅನ್ನು ಕಳುಹಿಸಿದ್ದಾರೆ. ಕೂಪನ್ನನ್ನು ಸ್ಕ್ರ್ಯಾಚ್ ಮಾಡಿ ನೋಡಿದಾಗ ಮಹೇಂದ್ರ XUV 700 ಗೆದ್ದಿರುವುದಾಗಿ ಬಿಂಬಿಸಿದ್ದಾರೆ. ಲಕ್ಕಿ ಡ್ರಾದಲ್ಲಿ ನೀವು ಕಾರನ್ನ ಗೆದ್ದಿರುವುದಾಗಿ ಸಂಪರ್ಕಿಸಿದ್ದಾರೆ ಸೈಬರ್ ಖದೀಮರು.
ಕಾರು ಬೇಕಾ ಅಥವ ಹಣ ಬೇಕಾ ಎಂದು ಪ್ರಶ್ನಿಸಿದ್ದಾರೆ. ಹಣ ಬೇಕೆಂದು ಸಂಜೀವ ಗೌಡ ತಿಳಿಸಿದಾಗ 29 ಲಕ್ಷದ 60 ಸಾವಿರ ನಕಲಿ ಚೆಕ್ನ್ನು ವಾಟ್ಸಪ್ ಮೂಲಕ ಕಳುಹಿಸಿದ್ದಾರೆ. ಹಣ ಖಾತೆಗೆ ವರ್ಗಾವಣೆ ಮಾಡಬೇಕಾದರೆ ಕೆಲ ಚಾರ್ಜಸ್ ನೀಡಬೇಕೆಂದು ಪುಸಲಾಯಿಸಿದ್ದ ವಂಚಕರು ಅವರ ಮಾತನ್ನ ನಂಬಿ ಮನೆಯಲ್ಲಿದ್ದ ಚಿನ್ನಾಭರಣ ಗಿರವಿ ಇಟ್ಟು ಸೈಬರ್ ಚೋರರ ಖಾತೆಗೆ ಹಂತ ಹಂತವಾಗಿ 7ಲಕ್ಷದ 23 ಸಾವಿರ ಹಣ ಹಾಕಿದ್ದಾರೆ. ಪದೇ ಪದೇ ಹಣ ಪೀಕಿದ್ದರಿಂದ ಅನುಮಾನಗೊಂಡ ಸಂಜೀವ್ ಗೌಡ ಮಂಡ್ಯದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಇತ್ತ ಹಣವೂ ಇಲ್ಲದೆ ಅತ್ತ ಕಾರು ಸಿಗದೆ ಸಂಜೀವ್ ಗೌಡ ಹಾಗೂ ಆತನ ಪತ್ನಿ ಪರಿತಪ್ಪಿಸುತ್ತಿದ್ದಾರೆ. ಸದ್ಯ ಸೈಬರ್ ಚೋರರಿಗಾಗಿ ಪೊಲೀಸರಿಂದ ಶೋಧಕಾರ್ಯ ಆರಂಭ ಮಾಡಿದ್ದು, ಕೊಲ್ಕತ್ತಾದಿಂದ ಕರೆ ಮಾಡಿ ವಂಚಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.