ಅಯೋಗ್ಯರ, ಅಸಮರ್ಥರ ಕಾರ್ಯಭಾರದ ವೈಖರಿ!

 

ಅಂತಿಮ ಭಾಗ

ಅಕ್ರಮ ಮಾರ್ಗದಲ್ಲೇ ಪಾಸಾಗುತ್ತಾ ಬಂದವರು, ದೊಡ್ಡ ಹುದ್ದೆಗಳನ್ನು ಅನಾಯಾಸವಾಗಿ ಗಿಟ್ಟಿಸಿದವರು ಇಂಥವರೆಲ್ಲ ಅದು ಹೇಗೆ ಇಲಾಖೆಯಲ್ಲಿ ಬರಕತ್ತಾಗುತ್ತಾರೆ? ಎಂಬ ಪ್ರಶ್ನೆಗಳನ್ನು ಕೇಳುವುದುಂಟು. ಸೊಣಗಗಳೆಲ್ಲ ಅಂದಣವನೇರುವುದಾದರೆ ಕಷ್ಟಪಟ್ಟೇಕೆ ಓದಬೇಕು? ಸರ್ಟಿಫಿಕೇಟ್ ಒಂದಿದ್ದರೆ ಸಾಕು. ಯಾವ ಹುದ್ದೆಯಲ್ಲಾದರೂ ಕೂರಬಹುದು ಎಂದಾದರೆ ಈ ಪರೀಕ್ಷೆ ಈ ಸಂದರ್ಶನವೆಲ್ಲವೂ ಬಲಿಷ್ಠರ, ಜಾತ್ಯಸ್ತರ ನಾಟಕವಲ್ಲವೇ? ಅದು ಹೇಗೆ ಇವರೆಲ್ಲಾ ದೊಡ್ಡ ಹುದ್ದೆಯ ಚುಕ್ಕಾಣಿ ಹಿಡಿಯಬಲ್ಲರು? ಇಲಾಖೆಯಲ್ಲಿ ಕೊನೆತನಕ ಉಳಿಯಬಲ್ಲರು?

ಅತ್ಯಂತ ಕಳವಳಕಾರಿಯಾದ ಸತ್ಯವೊಂದಿದೆ. ಸರ್ಕಾರಿ ಕೆಲಸಕ್ಕೆ ಸೇರಿಕೊಂಡಾದ ಮೇಲೆ ಮುಗಿಯಿತು. ಕೆಲಸವನ್ನೇ ಮಾಡಬೇಕಿಲ್ಲ. ಬರೋ ಸಂಬಳ ಬಂದೇ ಬರುತ್ತೆ. ಗಿಂಬಳಕ್ಕೆ ದಾರಿ ಮಾಡಿಕೊಂಡರಾಯ್ತು ಎಂಬುದು ಮೈಗಳ್ಳರ ಮಂತ್ರ.

ನಿನಗೆ ಕೆಲಸ ಬರೋದಿಲ್ಲ, ಮಾಡೋದಿಲ್ಲ ಎಂದರೆ ಮೇಲಿನವರು ಗೊಣಗಿ ಮೆಮೋ ನೀಡಬಹುದೇ ಹೊರತು ಕೆಲಸದಿಂದ ಕಿತ್ತು ಹಾಕಲಾರರು. ಅಬ್ಬಬ್ಬಾ ಎಂದರೆ ವರ್ಗಾಯಿಸಬಹುದಷ್ಟೇ? ಅದಕ್ಕೆಲ್ಲಾ ಪುಡಾರಿಗಳಿಲ್ವೇ? ವರ್ಗಾವಣೆ ರದ್ದು ಮಾಡಿಸಿ ಅಧಿಕಾರಿಗೇ ಕೊಕ್ ಕೊಡಿಸಿದರೆ ಆಯ್ತು. ಇಲಾಖೆಗೆ ಸೇರಿದ ಮೇಲೆ ಮುಗಿಯಿತು. ೩೦-೩೫ ವರ್ಷ ಸಂಬಳ ಎಣಿಸಿಕೊಳ್ಳುವುದಂತೂ ಖಾತ್ರಿ. ಕಾಟಾಚಾರದ ಕೆಲಸ ಮಾಡಿದರೂ ಅದರ ಕ್ವಾಲಿಟಿಯನ್ನು ಕೇಳುವವರಾರು? ಹೆಂಗೋ ಪೆಂಡಿಂಗ್ ಮುಗಿಯಿತಲ್ಲಾ ಎಂದು ಉಸಿರು ಬಿಡುವವರೇ ಹೆಚ್ಚು.

ನಿಜವೇ? ಕೆಲಸವನ್ನೇ ಮಾಡದೆ ಸಂಬಳ ಎಣಿಸಬಹುದೇ? ಐ್ಞಛ್ಛ್ಛಿಜ್ಚಿಜಿಛ್ಞಿಠಿ ಎಂದು ಮೇಲಿನವರು ಷರಾ ಬರೆಯಬಲ್ಲರೇ ಹೊರತು ಡಿಸ್ ಮಿಸ್ ಮಾಡಿ ನಿರ್ದಯವಾಗಿ ಮನೆಗೆ ಕಳಿಸಲಾರರು. ಅಂತಹ ಪರಿಸ್ಥಿತಿ ಬಂದರೆ ರಾಜಕಾರಣಿಗಳ ವಶೀಲಿಬಾಜಿ , ಚಮಚಾಗಿರಿಯಂತಹ ನಾನಾ ಮಾರ್ಗಗಳು ಸದಾ ತೆರೆದಿವೆ.

ಇನ್ನು ಕೆಲವು ನಕಲಿಗಳಿಗೆ ತಮ್ಮ ಕೆಪ್ಯಾಸಿಟಿ ತಮಗೇ ಗೊತ್ತು. ಅವರಂತೂ ಯುದ್ಧಕ್ಕೆ ಮೊದಲೇ ಶರಣಾಗತಿ. ಕೆಲಸವಂತೂ ಗೊತ್ತಿಲ್ಲ. ವಿದ್ಯೆ ನೈವೇದ್ಯೆ. ಅವರಿಗೆ ಹಿಕ್ಮತ್ತಿನ ಶಾಣ್ಯಾತನವೂ ಗೊತ್ತಿಲ್ಲ. ೧೦೦% ಮಫ್ ಪಾರ್ಟಿ. ಠಿ ್ಛಜ್ಞಿಜಿಜ್ಞಿಜ! ಹಾಗೆಂದು ತಾನು ದಡ್ಡನೆಂದು ಡಂಗೂರ ಹೊಡೆಯಲಾರರು. ಅದಕ್ಕೊಂದು ಕತೆ ಕಟ್ಟುತ್ತಾರೆ. ಏನೋ ಸಾರ್ ಈಗೊಂದು ನಾಲ್ಕು ವರ್ಷದಿಂದ ರಾವು ಹೊಡೆದು ಅದೇನೋ ಮಂಕು ಕವಿದಂಗಾಗಿದೆ. ಮೆಟ್ಟಿಲು ಜಾರಬಿದ್ದಾಗಲಿಂದ ಹಿಂಗಾಗಿದೆ. ಟ್ರೀಟ್ಮೆಂಟ್ ತಗೋಳ್ತಾ ಇದ್ದೀನಿ. ಇನ್ನೊಂದು ವರ್ಷದಲ್ಲಿ ಹುಷಾರಾಗುತ್ತಂತೆ ! ಜೊತೆಯಲ್ಲಿರುವವನೂ ತಕ್ಕ ಸುವ್ವೀ ಹಾಡುತ್ತಾನೆ. ಮಾನವೀಯ ಅನುಕಂಪ ಎಂದು ಮೇಲಧಿಕಾರಿಯೂ ತೆಪ್ಪಗಾಗುತ್ತಾನೆ. ಇದರ ಮೇಲೆ ಓವರ್ ಆಕ್ಟಿಂಗ್ ಬೇರೆ! ಇದೇ ನಾಟಕದಲ್ಲಿ ಸರ್ವೀಸು ಮುಗಿಯುತ್ತದೆ.

ಇನ್ನು ಕೆಲವು ನಕಲಿಗಳು ರಣಪ್ರಚಂಡರು. ಅಕ್ರಮವೆಸಗಿರುವುದೇ ಸಕ್ರಮ. ಇಲಾಖೆಯ ಎಲ್ಲ ಒಳಸುಳಿಗಳನ್ನೂ ಬಲ್ಲ ಚಾಣಾಕ್ಷರು. ಯಾವ ಮೇಲಧಿಕಾರಿಯೇ ಇರಲಿ. ಮೂರು ವರ್ಷಕ್ಕಿಂತ ಹೆಚ್ಚಿರಲಾರ. ಅಷ್ಟರಲ್ಲಿವರು ಮಂಕುಬೂದಿ ಎರಚಿ ತಮ್ಮದನ್ನು ಸಾಧಿಸಿಕೊಳ್ಳುತ್ತಾರೆ. ಮೇಲಿನವನಿಗೆ ಇವನೆಂಥವನು ಎಂದು ತಿಳಿಯುವ ಹೊತ್ತಿಗೆ ಅವನೇ ವರ್ಗವಾಗಿರುತ್ತಾನೆ. ಹೊಸ ಅಧಿಕಾರಿಯ ಎದುರು ಹೊಸ ಆಟ. ಅವನ ನಂತರದವರ ಎದುರು ನಾನಾ ರಂಗಿನಾಟ. ಈ ಡ್ರಾಮಾ ತಡೆಯಿಲ್ಲದೆ ಸಾಗುತ್ತದೆ.

ಓ ಎಂದರೆ ಠೋ ಎನ್ನಲು ಬಾರದ ನಕಲಿಗಳೆಲ್ಲ ಯಶಸ್ವಿ ಅಧಿಕಾರಿಗಳಾಗಿರುವುದೂ ಉಂಟು. ಅಕ್ರಮದ ಹಾದಿಯನ್ನೇ ಸಕ್ರಮ ಮಾಡಿಕೊಳ್ಳುವ ಶಾಣ್ಯರು ಇವರು. ಮೊದಲಿನಿಂದಲೂ ಕಂಡವರ ಹೆಗಲ ಮೇಲೆ ಸವಾರಿ ಮಾಡಿದವರಲ್ಲವೇ? ರಿಟೈರ್ಡ್ ಆದ ಅಥವಾ ತಮ್ಮ ಕಛೇರಿಯಲ್ಲೇ ಇರುವ ಕಷ್ಟಜೀವಿ ಮೂಗೆತ್ತನ್ನು ಜೀತಕ್ಕಿಟ್ಟುಕೊಂಡು ಸರ್ಕಾರಿ ದಫ್ತರಗಳನ್ನು ಬರೆಸುತ್ತಾರೆ. ತಾವು ಗೋರಿಕೊಂಡಿದ್ದರಲ್ಲಿ ಅವನಿಗೊಂದಿಷ್ಟು ತಳ್ಳಿ ಕೆಲಸ ಮುಗಿಸುತ್ತಾರೆ. ಮೇಲಧಿಕಾರಿಗಳಿಗೆ ಕಛೇರಿ ಕೆಲಸ ಅಪ್ ಡೇಟ್ ಆದರೆ ಸಾಕು. ಯಾವನು ಮಾಡಿದರೆ ಏನಂತೆ? ಸರ್ಕಾರಿ ದಫ್ತರಗಳನ್ನು ಕಡತಗಳನ್ನು ಖಾಸಗಿಯವರಿಗೆ ಕೊಡುವುದು ನಿಯಮ ಬಾಹಿರ. ಈ ಬೃಹಸ್ಪತಿಯನ್ನೇ ನಂಬಿದರೆ ಆಗುವ ಕೆಲಸವೂ ಆಗುವುದಿಲ್ಲ. ಒಟ್ಟಾರೆ ಕಛೇರಿ ಕಸ ಕ್ಲೀನಾದರೆ ಸಾಕು. ಇದು ಧೋರಣೆ.

ಸರ್ಕಾರಿ ಕೆಲಸವೆಂದರೆ ಅದೇ ತಾನೇ?

ಕ್ವಾಲಿಟಿ , ಅಚ್ಚುಕಟ್ಟುತನ , ಕರಾರುವಾಕ್ಕಾದ ಕೆಲಸ ಯಾರಿಗೆ ಬೇಕು? ಕೆಲಸ ಮುಗಿಸಲು ತಿಪ್ಪೆ ಸಾರಿಸಿದರೆ ಸಾಕು. ಕೊಳೆತಿರೋದು ಅಲ್ಲೇ ಕೂತಿರಲಿ! ಅದು ಮುಂದೆ ಬರುವವನ ತಲೆ ಮೇಲೆ ಕೂರಲಿ! ಏನಾದ್ರೂ ಹೆಚ್ಚು ಕಡಿಮೆಯಾದರೆ ಅದು ಅರ್ಜಿದಾರನ ಹಣೆಬರಹ. ಪ್ರತಿಯೊಂದು ಸರ್ಕಾರಿ ಕೆಲಸಗಳೂ ಗಬ್ಬೆದ್ದಿರುವುದಕ್ಕೆ ಇಂತಹ ಅಯೋಗ್ಯರ ,ಅಸಮರ್ಥರ ನೇಮಕಾತಿ ಕಾರಣ. ಬಿತ್ತಿದ್ದೇ ಬೇವು. ಮಾವನ್ನು ಬಯಸಿದರೆ ಬಂದೀತೇ?

ಅದೇ ತನಿಖಾಧಿಕಾರಿ ಹೇಳಿದ ಮತ್ತೊಂದು ಪ್ರಸಂಗ.

ಸ್ನಾತಕೋತ್ತರ ಕೇಂದ್ರದಲ್ಲಿ ತಾಂಡವವಾಡುವ ಜಾತೀಯತೆಯನ್ನು ಕಂಡು ಅವರಿಗೇ ಆಶ್ಚರ್ಯವಾಗುತ್ತಿತ್ತಂತೆ. ರಾಜಕೀಯದಲ್ಲಾದರೆ ಬೇಳೆ ಬೇಯಿಸಿ ಮಸಾಲೆ ಅರೆಯಲು ಜಾತೀಯತೆ ಬೇಕು. ಈ ವಿದ್ಯಾ ಕೇಂದ್ರಗಳಲ್ಲಿ ಅದರ ಆವಶ್ಯಕತೆಯೇ ಇಲ್ಲ. ಅದರೂ ಇಷ್ಟೊಂದು ಜಾತೀಯತೆ ತಾಂಡವವಾಡಲು ಕಾರಣವಾದರೂ ಏನು?

ಪರೀಕ್ಷಾ ಅವ್ಯವಹಾರಗಳು , ಕ್ಯಾಂಪಸ್ ಆಡಳಿತದಲ್ಲಿನ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಜಾತಿಯ ಗುರಾಣಿ ಬೇಕೇ ಬೇಕು. ಅನ್ಯರು ಆಕ್ರಮಣ ಮಾಡದಂತೆ ಸುಸೂತ್ರವಾಗಿ ನಾನಾ ಅವ್ಯವಹಾರ ನಡೆಸಲು ಜಾತೀಯತೆ , ಪಕ್ಷಬೆಂಬಲ, ಗೂಂಡಾಗರ್ದಿ ಬೇಕಿತ್ತು. ಕರೆದೊಡನೆ ಬರುವ ಪುಂಡರ ದಂಡು ಬೇಕಿತ್ತು. ಜಾತಿಯ ಹೆಸರೆತ್ತಿ ಪ್ರಚೋದಿಸಿದರೆ ಉದ್ರಿಕ್ತರಾಗುವ ವಿದ್ಯಾರ್ಥಿಗಳ ಪಡೆ ಕಟ್ಟಿಕೊಳ್ಳಬೇಕು. ತಂತಮ್ಮ ಜಾತಿಗಳ ಗುಂಪು ಬಲವಾಗಿದ್ದರೆ ಏಳಬಲ್ಲ ಆಕ್ಷೇಪಣೆಗಳು ಹಾಗೇ ಮುದುರಿ ಕೊಳ್ಳುತ್ತವೆ. ಆಗ ತಮ್ಮ ಧಂಧೆ ಸೇಫು. ಅಕಸ್ಮಾತ್ ಏನಾದರೂ ಫಜೀತಿಯಾದರೆ ರಕ್ಷಿಸಲು ದೊಡ್ಡದೊಂದು ವಿದ್ಯಾರ್ಥಿ ಪಡೆಯೇ ಇರುತ್ತದೆ.

‘ಅದು ಹೇಗೆ ಜಾತೀಯತೆಯನ್ನು ಈ ಕಾರಣಕ್ಕೆ ಪೋಷಿಸುತ್ತಾರೆ ಎಂದು ಹೇಳ್ತೀರಿ? ಕಾಲೇಜಿನ ವಿದ್ಯಾರ್ಥಿ ರಾಜಕೀಯಕ್ಕೂ ಜಾತಿಬಲ ಬೇಕಲ್ಲವೇ? ನಾನು ಕೇಳಿದೆ.

‘ಅದಕ್ಕೂ ಬೇಕು. ಇದುವರೆಗೆ ಪರೀಕ್ಷಾ ಅವ್ಯವಹಾರದಲ್ಲಿ ಸಿಕ್ಕಿ ಬಿದ್ದವರನ್ನು ಸ್ಟಡಿ ಮಾಡಿದಾಗ ಗೊತ್ತಾದ ಅಂಶ ಅಂದ್ರೆ , ಅವರೆಲ್ಲಾ ಜಾತಿ ಪೋಷಕರಾಗಿ , ಆಯಾಜಾತಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು. ಅವರ ಜಾತಿಪ್ರೇಮವೂ ನಿಜವಲ್ಲ. ಪೂರ್ತಿ ವ್ಯಾವಹಾರಿಕ. ಉಂಡೆಲೆಗಳನ್ನಾಗಿ ಬಳಸಿದ ವಿದ್ಯಾರ್ಥಿಗಳನ್ನು ಹಾಸಿ ಬೀಸಿ ಒಗೆಯುವುದಷ್ಟೇ !’ ಅವರೆಂದರು.

‘ಕ್ಯಾಂಪಸ್ಸುಗಳಲ್ಲಿ ಬೀಡು ಬಿಟ್ಟಿರೋ ಜಾತೀಯತೆ ನೋಡಿ ಈ ಜಾಗದಲ್ಲೇಕೆ ಈ ಪಿಡುಗು ಅಂತ ಆಶ್ಚರ್ಯಪಡ್ತಾ ಇದ್ದೆ‘ ಉದ್ಗರಿಸಿದೆ.

ಆ ತನಿಖಾಧಿಕಾರಿ ಸಲುಗೆಯವರು. ಛೇಡಿಸುತ್ತಾ ಅಂದರು, ‘ ಅಲ್ರೀ? ಜಾತೀಯತೆ ಅನ್ನೋದು ಎಲ್ಲಿದೇರೀ? ಏನಿದ್ರೂ ದುಡ್ಡು ಅಧಿಕಾರ ಎರಡೇ ಚಲಾವಣೆಯಲ್ಲಿರೋದು. ದುಡ್ಡು ಕೊಟ್ಟು ಕೆಲಸ ಮಾಡಿಸಿದೆ ಅಂತ ಹೇಳೋದಿಕ್ಕೆ ಆಗುತ್ತಾ?. ಅದನ್ನು ಮುಚ್ಚಿಕೊಳ್ಳೋದಿಕ್ಕೆ ಜಾತಿ , ವಶೀಲಿ ಹೆಸರನ್ನು ಹೇಳ್ತಾರೆ.’

‘ಅದೆಂಗೆ ಹೇಳ್ತೀರಾ?’

‘ತನಗೆ ಬೇಕಾದ ಜಾಗಕ್ಕೆ ವರ್ಗ ಮಾಡಿಸಿಕೊಂಡು ಬಂದವನು ಹೇಳೋ ಮಾತು ಒಂದೇ? , ‘ದುಡ್ಡು ನಾನ್ಯಾಕೆ ಕೊಡ್ಲೀ? ಸಕತ್ ಇನ್ ಫ್ಲುಯೆನ್ಸ್ ಇರುವಾಗ? ಎಲ್ಲಾ ನಮ್ಮ ಜಾತಿಯವರೇ ಇರೋದು. ಹಿಂಗಿಂಗೆ ವರ್ಗ ಆಗ್ಬೇಕು ಅಂದೆ, ಪಾಪ ಅವರೇ ಮುಂದೆ ನಿಂತು ಓಡಾಡಿ ಮನೇ ಬಾಗಿಲಿಗೇ ಆರ್ಡರ್ ತಂದು ಕೊಟ್ರು. ಒಂದು ನಯಾಪೈಸಾ ಕೂಡಾ ಖರ್ಚಾಗಲಿಲ್ಲ!’ ಅಂತೆಲ್ಲಾ ಬಿಲ್ಡಪ್ ಕೊಡ್ತಾರೆ. ಆದರೆ ಅವೆಲ್ಲಾ ಬರೀ ಓಳು ಅಷ್ಟೇ!. ಮಿನಿಷ್ಟ್ರು ಅವನ ಜಾತಿಯವನೇ ಆಗಿದ್ರೂ ಮೊದಲು ಕಾಸು ಮಡಗಿ ಮಾತಾಡು ಅಂತಾನೆ. ವ್ಯವಹಾರ ಅಂದ್ರೆ ಅದು ದುಡ್ಡಿನ ವ್ಯವಹಾರ ಮಾತ್ರ. ಕಾಸು ಕೊಟ್ಟು ಪೋಸ್ಟಿಂಗ್ ತಗೊಂಡೆ ಅಂತ ಹೇಳಿಕೊಂಡ್ರೆ ಇವರ ಪೊಸಿಶನ್ನೇ ವೀಕ್ ಆಗಿಬಿಡುತ್ತೆ. ತಮ್ಮ ಕೆಲಸ ಆಗಿದ್ದಕ್ಕೆ ಕಾರಣ ತಮ್ಮ ಜಾತಿಯ ಇನ್ಫ್ಲುಯೆನ್ಸು ಮತ್ತು ತಮ್ಮ ದಕ್ಷತೆ ಕಾರಣ ಎಂದೆಲ್ಲಾ ಬೋಂಗು ಬಿಡ್ತಾರೆ.

ಆಹಾ! ಹಣವೇ ನಿನ್ನಯ ಗುಣವನೇನೆಂದು ವರ್ಣಿಸಲಿ? ಆ ಕಾಲ ಈ ಕಾಲ ಸದಾ ಕಾಲದಲ್ಲೂ ನೀನೇ ನೀನೇ ನೀನೇ !

andolana

Recent Posts

ಪರವಾನಗಿ ಅಮಾನತ್ತು : ನಾಲ್ವರ ವಿರುದ್ಧ ಶಿಸ್ತು ಕ್ರಮ

ಚಾಮರಾಜನಗರ : ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ. ಎಚ್.ಕೃಷ್ಣ ಅವರು ತಮ್ಮ ದಿಢೀರ್ ಭೇಟಿ ಸಂದರ್ಭದಲ್ಲಿ ನ್ಯೂನತೆ ಕಂಡುಬಂದಿರುವ…

7 hours ago

ಸಿ.ಟಿ.ರವಿ ಯಾವ ಕಡೆಯಿಂದಲೂ ಒಳಗೆ ಬರತಕ್ಕದ್ದಲ್ಲ : ಚೀಫ್ ಮಾರ್ಷಲ್​​ಗೆ ಸಭಾಪತಿ ಸೂಚನೆ

ಬೆಂಗಳೂರು : ಸಭಾಪತಿಗಳ ಆದೇಶಕ್ಕೆ ಗೌರವ ನೀಡದೆ, ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರನ್ನು ವಿಧಾನ ಪರಿಷತ್ತಿನಿಂದ…

7 hours ago

ಮಂಡ್ಯ | 60 ಲಕ್ಷ ಲಂಚಕ್ಕೆ ಬೇಡಿಕೆ ; ಅಬಕಾರಿ ಉಪ ಆಯುಕ್ತ ಅಮಾನತು

ಮಂಡ್ಯ : ಹೊಸದಾಗಿ ಬಾರ್ ಆರಂಭಿಸಲು ಸಿಎಲ್ 7 ಲೈಸೆನ್ಸ್ ನೀಡಲು ಲಂಚ ಕೇಳಿದ ಆರೋಪದಡಿ ಮಂಡ್ಯ ಅಬಕಾರಿ ಉಪ…

8 hours ago

ಮೈಸೂರಿನಲ್ಲಿ ಮತ್ತೆ ಡ್ರಗ್ಸ್‌ ಪತ್ತೆ ; ಮೂವರ ಬಂಧನ

ಮೈಸೂರು : ಮೈಸೂರಲ್ಲಿ ಪದೇ ಪದೇ ಡ್ರಗ್ಸ್‌ ಪ್ರಕರಣಗಳು ಪತ್ತೆಯಾಗುತ್ತಿರುವುದು ಪೊಲೀಸರನ್ನು ನಿದ್ದೆಗೆಡಿಸಿದೆ. ಈ ಸಂಬಂಧ ಹೈಕೋರ್ಟ್‌ ಸಹ ಕಳವಳ…

8 hours ago

ಮೈ-ಬೆಂ ಹೆದ್ದಾರಿಯಲ್ಲಿ ಸುಲಿಗೆ,ದರೋಡೆ ; 34 ಪ್ರಕರಣಗಳಲ್ಲಿ 28 ಕೇಸ್‌ ಸಾಲ್ವ್‌!

ಮಂಡ್ಯ : ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್-275) ಹಾಗೂ ಸರ್ವಿಸ್ ರಸ್ತೆಗಳಲ್ಲಿ ತಡರಾತ್ರಿ ಪ್ರಯಾಣಿಕರನ್ನು ತಡೆದು ಸುಲಿಗೆ, ದರೋಡೆ ಮಾಡುತ್ತಿರುವುದಕ್ಕೆ…

9 hours ago

ಮೂರು ಬಾಲಕಿಯರನ್ನು ಬಲಿ ಪಡೆದ ಆನ್‌ಲೈನ್‌ ಗೇಮ್‌ ; ಮಹಡಿಯಿಂದ ಹಾರಿ ಆತ್ಮಹತ್ಯೆ

ಗಾಜಿಯಾಬಾದ್ : ಆನ್‌ಲೈನ್ ಗೇಮ್ ಆಡಬೇಡಿ ಎಂದಿದ್ದಕ್ಕೆ ಮೂವರು ಅಪ್ರಾಪ್ತ ಸಹೋದರಿಯರು ಹೌಸಿಂಗ್ ಸೊಸೈಟಿಯ 9ನೇ ಮಹಡಿಯಿಂದ ಹಾರಿ ಆತ್ಮಹತ್ಯೆ…

10 hours ago