ಅಂಕಣಗಳು

ರಾಜಕೀಯ ಧ್ರುವೀಕರಣಕ್ಕೆ ನಾಂದಿ ಹಾಡಲಿದೆಯೇ ಹನಿಟ್ರ್ಯಾಪ್ ಪ್ರಕರಣ

ಆರ್.ಟಿ.ವಿಠ್ಠಲಮೂರ್ತಿ 

ಕರ್ನಾಟಕದ ರಾಜಕಾರಣ ಮತ್ತೊಮ್ಮೆ ಹನಿಟ್ರ್ಯಾಪ್ ಬಲೆಯಲ್ಲಿ ಸಿಲುಕಿಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ಸಿನ ಹೆಚ್.ವೈ.ಮೇಟಿ, ಬಿಜೆಪಿಯ ರಮೇಶ್ ಜಾರಕಿಹೊಳಿ ಅವರಂತಹ ಕೆಲ ನಾಯಕರಿಗೆ ಹನಿಟ್ರ್ಯಾಪ್ ಬಲೆ ಸುತ್ತಿಕೊಂಡಾಗ ಅವರು ಮಂತ್ರಿ ಪದವಿಗೆ ರಾಜೀನಾಮೆ ಕೊಡುವ ಸ್ಥಿತಿ ಸೃಷ್ಟಿಯಾಗಿತ್ತು.

ಆದರೆ ಕಳೆದ ವಾರ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ತುಂಬಿದ ವಿಧಾನಸಭೆಯಲ್ಲಿ ನಿಂತು; ತಮ್ಮನ್ನು ಹನಿಟ್ರ್ಯಾಪ್ ಬಲೆಗೆ ಸಿಲುಕಿಸುವ ಯತ್ನ ನಡೆದಿದೆ ಎಂದ ಮೇಲೆ ಚಿತ್ರಣ ಬದಲಾಗಿದೆ. ಅರ್ಥಾತ್, ಹನಿಟ್ರ್ಯಾಪ್‌ಗೆ ಒಳಗಾದವರಿಗಿಂತ ಮುಖ್ಯವಾಗಿ ಅದನ್ನು ಮಾಡಿಸುತ್ತಿರುವವರ ಮೇಲೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಕರ್ನಾಟಕದ ರಾಜಕಾರಣದಲ್ಲಿ ಇದುವರೆಗೂ ನಡೆಯುತ್ತಿದ್ದ ಆಟವನ್ನು ನಿರ್ಣಾಯಕ ಘಟ್ಟಕ್ಕೆ ತಂದು ನಿಲ್ಲಿಸುವ ಲಕ್ಷಣಗಳು ಸ್ಪಷ್ಟವಾಗಿವೆ. ಅದು ಹೇಗೆ? ಎಂಬುದನ್ನು ಗಮನಿಸುವ ಮುಂಚೆ ಸನ್ನಿವೇಶದ ಕೆಲ ಸಾಕ್ಷ್ಯಾಧಾರಗಳನ್ನು ಗಮನಿಸಬೇಕು.

ಗಮನಿಸಬೇಕಾದ ಮೊದಲ ಸಾಕ್ಷ್ಯಾಧಾರ ಕೆ.ಎನ್.ರಾಜಣ್ಣ ಅವರಾದರೆ, ಎರಡನೇ ಸಾಕ್ಷ್ಯಾಧಾರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ. ಅಂದ ಹಾಗೆ ರಾಜಣ್ಣ ಅವರು ಹನಿಟ್ರ್ಯಾಪ್ ಕುರಿತಂತೆ ವಿಧಾನಸಭೆಯಲ್ಲಿ ಮಾತನಾಡಿದರೆ, ಸತೀಶ್ ಜಾರಕಿಹೊಳಿ ವಿಧಾನಸಭೆಯ ಹೊರಗೆ ಮಾತನಾಡಿದರು. ಅವರ ಪ್ರಕಾರ, ದೇಶದ ನಾಲ್ಕು ನೂರರಷ್ಟು ಮಂದಿ ರಾಜಕಾರಣಿಗಳು, ಅಧಿಕಾರಿಗಳನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಲಾಗಿದೆ. ಸಮಯ ಬಂದಾಗ ಅದನ್ನು ತೋರಿಸಿ ಅವರನ್ನು ಬೆದರಿಸಿ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಇನ್ನು ಸನ್ನಿವೇಶದ ಪರೋಕ್ಷ ಸಾಕ್ಷಾ ಧಾರಗಳೆಂದರೆ ಹಲವು ನಾಯಕರು ಆಪ್ತ ವಲಯದಲ್ಲಿ ಮಾತನಾಡಿಕೊಳ್ಳುತ್ತಿರುವ ರೀತಿ.

ಇಂತಹ ಚರ್ಚೆಗಳಲ್ಲಿ ಹೊರಬೀಳುತ್ತಿರುವ ಸಂಗತಿಗಳೆಂದರೆ ಇತ್ತೀಚಿನ ದಿನಗಳಲ್ಲಿ ಕೆ.ಎನ್.ರಾಜಣ್ಣ ಮಾತ್ರವಲ್ಲ. ಬದಲಿಗೆ ರಾಜ್ಯ ಸಚಿವ ಸಂಪುಟದಲ್ಲಿರುವ ಹಲವರ ಮೇಲೆ ಇಂತಹ ಪ್ರಯೋಗ ನಡೆದಿವೆ. ಹೀಗೆ ಯಾವೆಲ್ಲ ಸಚಿವರನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸುವ ಪ್ರಯತ್ನ ನಡೆದಿದೆಯೋ? ಅವರೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಳೆಯದಲ್ಲಿ ಗುರುತಿಸಿಕೊಂಡವರು. ಅರ್ಥಾತ್, ಕರ್ನಾಟಕದಲ್ಲಿ ಅಧಿಕಾರ ಹಂಚಿಕೆ ಒಪ್ಪಂದದ ಕುರಿತು ಸಂಘರ್ಷ ನಡೆಯುತ್ತಿದೆಯಲ್ಲ? ಈ ಸಂಘರ್ಷದಲ್ಲಿ ಸದರಿ ಸಚಿವರೂ ಯೋಧರಂತೆ ಹೋರಾಡುತ್ತಿರುವವರು ಇವರು ಹೇಳುತ್ತಿರುವುದೇನು? ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಸಿಎಂ ಆಗಿ ಮುಂದುವರಿಯಬೇಕು ಅಂತ ತಾನೇ? ಅಂತಹವರನ್ನೇ ಗುರಿ ಮಾಡಿ ಹನಿಟ್ರ್ಯಾಪ್ ಯತ್ನ ನಡೆಸಲಾಗುತ್ತಿದೆ ಎಂದರೆ ಅದರರ್ಥವೇನು? ಎಂಬುದು ಇಂತಹ ಆಪ್ತ ಮಾತುಕತೆಯ ಸಾರಾಂಶ.

ಅದರ ಪ್ರಕಾರ, ರಾಜಧಾನಿ ಬೆಂಗಳೂರಿನ ಇಬ್ಬರು ಸಚಿವರನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸುವ ಯತ್ನ ನಡೆದಿದ್ದು, ಈ ಪೈಕಿ ಒಬ್ಬರು ಅದರ ಜಾಲಕ್ಕೆ ಸಿಲುಕಿದ್ದಾರೆ. ಇನ್ನೊಬ್ಬ ಸಚಿವರು ಎಚ್ಚೆತ್ತುಕೊಂಡು ಹನಿಟ್ರ್ಯಾಪ್ ಮಾಡಲು ಬಂದವರನ್ನು ಕೂಡಿ ಹಾಕಿದ್ದಾರೆ. ಅಷ್ಟೇ ಅಲ್ಲ. ಅವರಿಗೆ ಧರ್ಮದೇಟುಗಳನ್ನು ಕೊಟ್ಟು ಇದರ ರೂವಾರಿ ಯಾರು? ಎಂಬ ಮಾಹಿತಿಯನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಇದೇ ರೀತಿ ಇತ್ತೀಚೆಗೆ ಪಕ್ಷದ ಅಧ್ಯಕ್ಷ ಸ್ಥಾನ ತಮಗೆ ಬೇಕು ಎಂದು ಹೋರಾಡುತ್ತಿರುವ ಮುಂಬೈ-ಕರ್ನಾಟಕ ಭಾಗದ ಸಚಿವರೊಬ್ಬರನ್ನು ಖೆಡ್ಡಾಕ್ಕೆ ತಳ್ಳುವ ಯತ್ನ ನಡೆದಿದೆಯಾದರೂ ಅದು ಯಶಸ್ವಿಯಾಗಿಲ್ಲ.

ಈ ಮಧ್ಯೆ ಬೆಂಗಳೂರಿನ ಮತ್ತೊಬ್ಬ ಸಚಿವರು ಮತ್ತವರ ಪುತ್ರನನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವುವ ಯತ್ನ ಒಂದು ಮಟ್ಟದಲ್ಲಿ ಸಫಲವಾಗಿದೆ. ಈ ಮಧ್ಯೆ ಹಿರಿಯ ಸಚಿವರೊಬ್ಬರ ಪುತ್ರನೊಬ್ಬನನ್ನು ಹನಿಟ್ರ್ಯಾಪ್ ಬಲೆಯಲ್ಲಿ ಕೆಡವಲಾಗಿದೆ ಎಂಬುದು ಈ ಆಪ್ತ ಮಾತುಕತೆಯ ಮುಂದುವರಿದ ಭಾಗ.

ಯಾವಾಗ ಹನಿಟ್ರ್ಯಾಪ್ ಜಾಲದ ಅವಾಂತರ ಈ ಮಟ್ಟಕ್ಕೆ ಮುಂದುವರಿಯಿತೋ? ಇದಾದ ನಂತರ ಸದರಿ ಸಚಿವರು ಮುಖ್ಯ ಮಂತ್ರಿಗಳನ್ನು ಭೇಟಿಯಾಗಿ ಈ ಸಂಬಂಧ ದೂರು ನೀಡಿರುವುದಷ್ಟೇ ಅಲ್ಲ, ಇಂತಹ ಬೆಳವಣಿಗೆಗಳ ಬಗ್ಗೆ ಪಕ್ಷದ ಹೈಕಮಾಂಡ್ ವರಿಷ್ಠರಿಗೆ ನೀವು ವಿವರಿಸಬೇಕು ಅಂತ ಒತ್ತಾಯ ಮಾಡಿದ್ದಾರೆ ಎಂಬುದು ಇನ್ನೊಂದು ಮೂಲದ ಮಾತು. ಈ ಮೂಲದ ಪ್ರಕಾರ, ಹನಿಟ್ರ್ಯಾಪ್‌ನ ರೂವಾರಿ ಯಾರೇ ಆದರೂ, ಇಂತಹ ಜಾಲದಲ್ಲಿ ಕೆಲಸ ಮಾಡುತ್ತಿರುವ ಇಬ್ಬರು ರಾಜ್ಯದ ನಿಗಮ-ಮಂಡಳಿಗಳಲ್ಲಿ ಸೆಟ್ಲಾಗಿದ್ದಾರೆ. ಹೀಗವರು ಸೆಟ್ಲಾಗಲು ಕಾರಣರಾದವರು ಯಾರು ಅಂತ ಗಮನಿಸಿದರೆ ಹನಿ ಟ್ರ್ಯಾಪಿನ ರೂವಾರಿಯನ್ನು ಕಂಡು ಹಿಡಿಯುವುದು ಕಷ್ಟವಲ್ಲ.

ಹೀಗೆ ಹನಿಟ್ರ್ಯಾಪ್ ಕುರಿತು ಪುಂಖಾನುಪುಂಖವಾಗಿ ಹೊರಬರುತ್ತಿರುವ ಮಾಹಿತಿಗಳು ಅಂತಿಮವಾಗಿ ಕರ್ನಾಟಕದ ರಾಜಕಾರಣದ ಮೇಲೆ ಪರಿಣಾಮ ಬೀರುವುದು ಸುಳ್ಳಲ್ಲ. ಈಗಿನ ಸ್ಥಿತಿಯನ್ನು ಗಮನಿಸಿದರೆ ಸಿದ್ದರಾಮಯ್ಯ ಸಿಎಂ ಹುದ್ದೆಯಿಂದ ಕೆಳಗಿಳಿಯುವುದನ್ನು ಅವರ ಆಪ್ತ ಪಡೆ ಯಾವ ಕಾರಣಕ್ಕೂ ಒಪ್ಪುವುದಿಲ್ಲ. ಒಂದು ವೇಳೆ ಬದಲಾವಣೆ ಅನಿವಾರ್ಯವಾದರೆ ಅದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕು, ಇಲ್ಲವೇ ತಮ್ಮ ಪಡೆಯವರೊಬ್ಬರು ಸಿಎಂ ಆಗಬೇಕು ಅಂತ ಬಯಸುತ್ತದೆ. ಅದರ ಬಯಕೆಗೆ ಹೈಕಮಾಂಡ್ ಒಪ್ಪದೆ ಹೋದರೆ ದೊಡ್ಡದೊಂದು ಗುಂಪು ಪಕ್ಷಕ್ಕೆ ರಾಜೀನಾಮೆ ನೀಡಿ ಹೊರಹೋಗಲಿದೆ.

ಹೀಗೆ ಹೊರಹೋಗುವ ಗುಂಪು ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಬರಲಿ, ಆ ಮೂಲಕ ಮಧ್ಯಂತರ ಚುನಾವಣೆ ಅನಿವಾರ್ಯವಾಗಲಿ ಎಂದು ಬಯಸುತ್ತದೆ. ಹಾಗೇನಾದರೂ ಆದರೆ ಕರ್ನಾಟಕದ ರಾಜಕಾರಣದಲ್ಲಿ ಧ್ರುವೀಕರಣ ಸಂಭವಿಸಿ, ದೇವೇಗೌಡ-ಕುಮಾರಸ್ವಾಮಿ ನೇತೃತ್ವದ ಜಾ.ದಳ ದೊಡ್ಡ ಮಟ್ಟದ ಶಕ್ತಿ ಪಡೆಯಲಿದೆ. ಒಂದು ಸಲ ಅದಕ್ಕೆ ಶಕ್ತಿ ದೊರೆತರೆ ಮಧ್ಯಂತರ ವಿಧಾನಸಭಾ ಚುನಾವಣೆಯ ನಂತರ ಬಿಜೆಪಿ-ಜಾ.ದಳ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ನಿಶ್ಚಿತವಾಗುತ್ತದೆ. ಹಾಗಾಗುತ್ತದಾ? ಗೊತ್ತಿಲ್ಲ. ಆದರೆ ಅದು ಸಿಎಂ ಹುದ್ದೆಯಲ್ಲಿ ಸಿದ್ದರಾಮಯ್ಯ ಮುಂದುವರಿಯುತ್ತಾರೋ ಇಲ್ಲವೋ ಎಂಬುದನ್ನು ಅವಲಂಬಿಸಿದೆ.

” ಹನಿಟ್ರ್ಯಾಪ್ ಕುರಿತು ಪುಂಖಾನುಪುಂಖವಾಗಿ ಹೊರಬರುತ್ತಿರುವ ಮಾಹಿತಿಗಳು ಅಂತಿಮವಾಗಿ ಕರ್ನಾಟಕದ ರಾಜಕಾರಣದ ಮೇಲೆ ಪರಿಣಾಮ ಬೀರುವುದು ಸುಳ್ಳಲ್ಲ. ಈಗಿನ ಸ್ಥಿತಿಯನ್ನು ಗಮನಿಸಿದರೆ ಸಿದ್ದರಾಮಯ್ಯ ಸಿಎಂ ಹುದ್ದೆಯಿಂದ ಕೆಳಗಿಳಿಯುವುದನ್ನು ಅವರ ಆಪ್ತ ಪಡೆ ಯಾವ ಕಾರಣಕ್ಕೂ ಒಪ್ಪುವುದಿಲ್ಲ. ಒಂದು ವೇಳೆ ಬದಲಾವಣೆ ಅನಿವಾರ್ಯವಾದರೆ ಅದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕು, ಇಲ್ಲವೇ ತಮ್ಮ ಪಡೆಯವರೊಬ್ಬರು ಸಿಎಂ ಆಗಬೇಕು ಅಂತ ಬಯಸುತ್ತದೆ. ಅದರ ಬಯಕೆಗೆ ಹೈಕಮಾಂಡ್ ಒಪ್ಪದೆ ಹೋದರೆ ದೊಡ್ಡದೊಂದು ಗುಂಪು ಪಕ್ಷಕ್ಕೆ ರಾಜೀನಾಮೆ ನೀಡಿ ಹೊರಹೋಗಲಿದೆ.”

ಆಂದೋಲನ ಡೆಸ್ಕ್

Recent Posts

IPL 2025: 159ಕ್ಕೆ ರಾಜಸ್ಥಾನ್‌ ಆಲೌಟ್: ಗುಜರಾತ್‌ಗೆ 58 ರನ್‌ಗಳ ಭರ್ಜರಿ ಗೆಲುವು

ಅಹಮದಾಬಾದ್‌: ಸಂಘಟಿತ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಸಹಾಯದಿಂದ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಮಣಿಸಿದ ಗುಜರಾತ್‌ ಟೈಟನ್ಸ್‌ 2025ರ 18 ಆವೃತ್ತಿಯ…

19 mins ago

ಯಡಿಯೂರಪ್ಪ ಸರ್ಕಾರವಿದ್ದರೆ ನೆಟ್ಟಾರು ಹಂತಕನಿಗೆ ಮುತ್ತಿಕ್ಕಿದವನಿಗೆ ಗುಂಡಿಕ್ಕುತ್ತಿದ್ದೆವು: ಬಿ.ವೈ.ವಿಜಯೇಂದ್ರ

ಮಂಗಳೂರು: ಪ್ರವೀಣ್ ನೆಟ್ಟಾರು ಹಂತಕ ದೇಶದ್ರೋಹಿಗೆ ಮತ್ತೊಬ್ಬ ದೇಶದ್ರೋಹಿ ಮುತ್ತಿಡುತ್ತಾನೆ. ನಮ್ಮ ಸರ್ಕಾರ, ಯಡಿಯೂರಪ್ಪ ಸರ್ಕಾರವಿದ್ದಿದ್ದರೆ ಆ ದೇಶದ್ರೋಹಿಗೆ ಅಲ್ಲೇ…

2 hours ago

ಮಂಡ್ಯ ಮೈಶುಗರ್ ಕಾರ್ಖಾನೆಗೆ ನೂತನ‌ ಎಂ‌ಡಿ ಆಗಿ ಮಂಗಲ್‌ ದಾಸ್‌ ನೇಮಕ

ಮಂಡ್ಯ: ಮಂಡ್ಯ ಮೈಶುಗರ್ ಕಾರ್ಖಾನೆಗೆ ನೂತನ ಎಂಡಿಯಾಗಿ ಮಂಗಲ್‌ ದಾಸ್‌ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.…

2 hours ago

ಏಪ್ರಿಲ್‍.16ರಿಂದ ಶುರುವಾಗಲಿದೆ ಸುದೀಪ್‍ ಅಭಿನಯದ ‘ಬಿಲ್ಲ ರಂಗ ಭಾಷಾ’

‘ಏಪ್ರಿಲ್‍ 16’ ಎಂದಷ್ಟೇ ಬರೆದು ಕಿಚ್ಚ ಸುದೀಪ್‌ ಮೂರು ಫೋಟೋಗಳನ್ನು ಕೆಲವು ದಿನಗಳ ಹಿಂದೆ ಸೋಷಿಯಲ್‍ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಏಪ್ರಿಲ್‍.16ರಂದು…

3 hours ago

ಇದು ‘ಪ್ರೀತಿಯ ಹುಚ್ಚ’ನ ಕಥೆ: ನೈಜ ಘಟನೆ ಆಧರಿಸಿದ ಚಿತ್ರ ಏಪ್ರಿಲ್.18ಕ್ಕೆ ತೆರೆಗೆ

‘ಪ್ರೀತಿಯ ಹುಚ್ಚ’ ಎಂದರೆ ಮೊದಲಿಗೆ ನೆನಪಿಗೆ ಬರುವುದು ‘ಹುಚ್ಚ’ ಚಿತ್ರದ ಸುದೀಪ್‍ ಪಾತ್ರ. ಆ ನಂತರ ‘ಚೆಲುವಿನ ಚಿತ್ತಾರ’ ಚಿತ್ರದ…

3 hours ago

ಮಗನ ಚಿತ್ರಕ್ಕೆ ಅಮ್ಮನೇ ನಿರ್ಮಾಪಕಿ, ಅಪ್ಪನೇ ಕಥೆಗಾರ …

ಕನ್ನಡ ಚಿತ್ರರಂಗದಲ್ಲಿ ಹಲವರಿಗೆ ಸೂಕ್ತ ಅವಕಾಶ ಸಿಗದೆ, ಅವರ ಕುಟುಂಬದವರೇ ಚಿತ್ರ ನಿರ್ಮಾಣ ಮಾಡಿದ ಹಲವು ಉದಾಹರಣೆಗಳಿವೆ. ಈ ಸಾಲಿಗೆ…

3 hours ago