ಅಂಕಣಗಳು

ರಾಜಕೀಯ ಧ್ರುವೀಕರಣಕ್ಕೆ ನಾಂದಿ ಹಾಡಲಿದೆಯೇ ಹನಿಟ್ರ್ಯಾಪ್ ಪ್ರಕರಣ

ಆರ್.ಟಿ.ವಿಠ್ಠಲಮೂರ್ತಿ 

ಕರ್ನಾಟಕದ ರಾಜಕಾರಣ ಮತ್ತೊಮ್ಮೆ ಹನಿಟ್ರ್ಯಾಪ್ ಬಲೆಯಲ್ಲಿ ಸಿಲುಕಿಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ಸಿನ ಹೆಚ್.ವೈ.ಮೇಟಿ, ಬಿಜೆಪಿಯ ರಮೇಶ್ ಜಾರಕಿಹೊಳಿ ಅವರಂತಹ ಕೆಲ ನಾಯಕರಿಗೆ ಹನಿಟ್ರ್ಯಾಪ್ ಬಲೆ ಸುತ್ತಿಕೊಂಡಾಗ ಅವರು ಮಂತ್ರಿ ಪದವಿಗೆ ರಾಜೀನಾಮೆ ಕೊಡುವ ಸ್ಥಿತಿ ಸೃಷ್ಟಿಯಾಗಿತ್ತು.

ಆದರೆ ಕಳೆದ ವಾರ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ತುಂಬಿದ ವಿಧಾನಸಭೆಯಲ್ಲಿ ನಿಂತು; ತಮ್ಮನ್ನು ಹನಿಟ್ರ್ಯಾಪ್ ಬಲೆಗೆ ಸಿಲುಕಿಸುವ ಯತ್ನ ನಡೆದಿದೆ ಎಂದ ಮೇಲೆ ಚಿತ್ರಣ ಬದಲಾಗಿದೆ. ಅರ್ಥಾತ್, ಹನಿಟ್ರ್ಯಾಪ್‌ಗೆ ಒಳಗಾದವರಿಗಿಂತ ಮುಖ್ಯವಾಗಿ ಅದನ್ನು ಮಾಡಿಸುತ್ತಿರುವವರ ಮೇಲೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಕರ್ನಾಟಕದ ರಾಜಕಾರಣದಲ್ಲಿ ಇದುವರೆಗೂ ನಡೆಯುತ್ತಿದ್ದ ಆಟವನ್ನು ನಿರ್ಣಾಯಕ ಘಟ್ಟಕ್ಕೆ ತಂದು ನಿಲ್ಲಿಸುವ ಲಕ್ಷಣಗಳು ಸ್ಪಷ್ಟವಾಗಿವೆ. ಅದು ಹೇಗೆ? ಎಂಬುದನ್ನು ಗಮನಿಸುವ ಮುಂಚೆ ಸನ್ನಿವೇಶದ ಕೆಲ ಸಾಕ್ಷ್ಯಾಧಾರಗಳನ್ನು ಗಮನಿಸಬೇಕು.

ಗಮನಿಸಬೇಕಾದ ಮೊದಲ ಸಾಕ್ಷ್ಯಾಧಾರ ಕೆ.ಎನ್.ರಾಜಣ್ಣ ಅವರಾದರೆ, ಎರಡನೇ ಸಾಕ್ಷ್ಯಾಧಾರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ. ಅಂದ ಹಾಗೆ ರಾಜಣ್ಣ ಅವರು ಹನಿಟ್ರ್ಯಾಪ್ ಕುರಿತಂತೆ ವಿಧಾನಸಭೆಯಲ್ಲಿ ಮಾತನಾಡಿದರೆ, ಸತೀಶ್ ಜಾರಕಿಹೊಳಿ ವಿಧಾನಸಭೆಯ ಹೊರಗೆ ಮಾತನಾಡಿದರು. ಅವರ ಪ್ರಕಾರ, ದೇಶದ ನಾಲ್ಕು ನೂರರಷ್ಟು ಮಂದಿ ರಾಜಕಾರಣಿಗಳು, ಅಧಿಕಾರಿಗಳನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಲಾಗಿದೆ. ಸಮಯ ಬಂದಾಗ ಅದನ್ನು ತೋರಿಸಿ ಅವರನ್ನು ಬೆದರಿಸಿ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಇನ್ನು ಸನ್ನಿವೇಶದ ಪರೋಕ್ಷ ಸಾಕ್ಷಾ ಧಾರಗಳೆಂದರೆ ಹಲವು ನಾಯಕರು ಆಪ್ತ ವಲಯದಲ್ಲಿ ಮಾತನಾಡಿಕೊಳ್ಳುತ್ತಿರುವ ರೀತಿ.

ಇಂತಹ ಚರ್ಚೆಗಳಲ್ಲಿ ಹೊರಬೀಳುತ್ತಿರುವ ಸಂಗತಿಗಳೆಂದರೆ ಇತ್ತೀಚಿನ ದಿನಗಳಲ್ಲಿ ಕೆ.ಎನ್.ರಾಜಣ್ಣ ಮಾತ್ರವಲ್ಲ. ಬದಲಿಗೆ ರಾಜ್ಯ ಸಚಿವ ಸಂಪುಟದಲ್ಲಿರುವ ಹಲವರ ಮೇಲೆ ಇಂತಹ ಪ್ರಯೋಗ ನಡೆದಿವೆ. ಹೀಗೆ ಯಾವೆಲ್ಲ ಸಚಿವರನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸುವ ಪ್ರಯತ್ನ ನಡೆದಿದೆಯೋ? ಅವರೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಳೆಯದಲ್ಲಿ ಗುರುತಿಸಿಕೊಂಡವರು. ಅರ್ಥಾತ್, ಕರ್ನಾಟಕದಲ್ಲಿ ಅಧಿಕಾರ ಹಂಚಿಕೆ ಒಪ್ಪಂದದ ಕುರಿತು ಸಂಘರ್ಷ ನಡೆಯುತ್ತಿದೆಯಲ್ಲ? ಈ ಸಂಘರ್ಷದಲ್ಲಿ ಸದರಿ ಸಚಿವರೂ ಯೋಧರಂತೆ ಹೋರಾಡುತ್ತಿರುವವರು ಇವರು ಹೇಳುತ್ತಿರುವುದೇನು? ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಸಿಎಂ ಆಗಿ ಮುಂದುವರಿಯಬೇಕು ಅಂತ ತಾನೇ? ಅಂತಹವರನ್ನೇ ಗುರಿ ಮಾಡಿ ಹನಿಟ್ರ್ಯಾಪ್ ಯತ್ನ ನಡೆಸಲಾಗುತ್ತಿದೆ ಎಂದರೆ ಅದರರ್ಥವೇನು? ಎಂಬುದು ಇಂತಹ ಆಪ್ತ ಮಾತುಕತೆಯ ಸಾರಾಂಶ.

ಅದರ ಪ್ರಕಾರ, ರಾಜಧಾನಿ ಬೆಂಗಳೂರಿನ ಇಬ್ಬರು ಸಚಿವರನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸುವ ಯತ್ನ ನಡೆದಿದ್ದು, ಈ ಪೈಕಿ ಒಬ್ಬರು ಅದರ ಜಾಲಕ್ಕೆ ಸಿಲುಕಿದ್ದಾರೆ. ಇನ್ನೊಬ್ಬ ಸಚಿವರು ಎಚ್ಚೆತ್ತುಕೊಂಡು ಹನಿಟ್ರ್ಯಾಪ್ ಮಾಡಲು ಬಂದವರನ್ನು ಕೂಡಿ ಹಾಕಿದ್ದಾರೆ. ಅಷ್ಟೇ ಅಲ್ಲ. ಅವರಿಗೆ ಧರ್ಮದೇಟುಗಳನ್ನು ಕೊಟ್ಟು ಇದರ ರೂವಾರಿ ಯಾರು? ಎಂಬ ಮಾಹಿತಿಯನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಇದೇ ರೀತಿ ಇತ್ತೀಚೆಗೆ ಪಕ್ಷದ ಅಧ್ಯಕ್ಷ ಸ್ಥಾನ ತಮಗೆ ಬೇಕು ಎಂದು ಹೋರಾಡುತ್ತಿರುವ ಮುಂಬೈ-ಕರ್ನಾಟಕ ಭಾಗದ ಸಚಿವರೊಬ್ಬರನ್ನು ಖೆಡ್ಡಾಕ್ಕೆ ತಳ್ಳುವ ಯತ್ನ ನಡೆದಿದೆಯಾದರೂ ಅದು ಯಶಸ್ವಿಯಾಗಿಲ್ಲ.

ಈ ಮಧ್ಯೆ ಬೆಂಗಳೂರಿನ ಮತ್ತೊಬ್ಬ ಸಚಿವರು ಮತ್ತವರ ಪುತ್ರನನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವುವ ಯತ್ನ ಒಂದು ಮಟ್ಟದಲ್ಲಿ ಸಫಲವಾಗಿದೆ. ಈ ಮಧ್ಯೆ ಹಿರಿಯ ಸಚಿವರೊಬ್ಬರ ಪುತ್ರನೊಬ್ಬನನ್ನು ಹನಿಟ್ರ್ಯಾಪ್ ಬಲೆಯಲ್ಲಿ ಕೆಡವಲಾಗಿದೆ ಎಂಬುದು ಈ ಆಪ್ತ ಮಾತುಕತೆಯ ಮುಂದುವರಿದ ಭಾಗ.

ಯಾವಾಗ ಹನಿಟ್ರ್ಯಾಪ್ ಜಾಲದ ಅವಾಂತರ ಈ ಮಟ್ಟಕ್ಕೆ ಮುಂದುವರಿಯಿತೋ? ಇದಾದ ನಂತರ ಸದರಿ ಸಚಿವರು ಮುಖ್ಯ ಮಂತ್ರಿಗಳನ್ನು ಭೇಟಿಯಾಗಿ ಈ ಸಂಬಂಧ ದೂರು ನೀಡಿರುವುದಷ್ಟೇ ಅಲ್ಲ, ಇಂತಹ ಬೆಳವಣಿಗೆಗಳ ಬಗ್ಗೆ ಪಕ್ಷದ ಹೈಕಮಾಂಡ್ ವರಿಷ್ಠರಿಗೆ ನೀವು ವಿವರಿಸಬೇಕು ಅಂತ ಒತ್ತಾಯ ಮಾಡಿದ್ದಾರೆ ಎಂಬುದು ಇನ್ನೊಂದು ಮೂಲದ ಮಾತು. ಈ ಮೂಲದ ಪ್ರಕಾರ, ಹನಿಟ್ರ್ಯಾಪ್‌ನ ರೂವಾರಿ ಯಾರೇ ಆದರೂ, ಇಂತಹ ಜಾಲದಲ್ಲಿ ಕೆಲಸ ಮಾಡುತ್ತಿರುವ ಇಬ್ಬರು ರಾಜ್ಯದ ನಿಗಮ-ಮಂಡಳಿಗಳಲ್ಲಿ ಸೆಟ್ಲಾಗಿದ್ದಾರೆ. ಹೀಗವರು ಸೆಟ್ಲಾಗಲು ಕಾರಣರಾದವರು ಯಾರು ಅಂತ ಗಮನಿಸಿದರೆ ಹನಿ ಟ್ರ್ಯಾಪಿನ ರೂವಾರಿಯನ್ನು ಕಂಡು ಹಿಡಿಯುವುದು ಕಷ್ಟವಲ್ಲ.

ಹೀಗೆ ಹನಿಟ್ರ್ಯಾಪ್ ಕುರಿತು ಪುಂಖಾನುಪುಂಖವಾಗಿ ಹೊರಬರುತ್ತಿರುವ ಮಾಹಿತಿಗಳು ಅಂತಿಮವಾಗಿ ಕರ್ನಾಟಕದ ರಾಜಕಾರಣದ ಮೇಲೆ ಪರಿಣಾಮ ಬೀರುವುದು ಸುಳ್ಳಲ್ಲ. ಈಗಿನ ಸ್ಥಿತಿಯನ್ನು ಗಮನಿಸಿದರೆ ಸಿದ್ದರಾಮಯ್ಯ ಸಿಎಂ ಹುದ್ದೆಯಿಂದ ಕೆಳಗಿಳಿಯುವುದನ್ನು ಅವರ ಆಪ್ತ ಪಡೆ ಯಾವ ಕಾರಣಕ್ಕೂ ಒಪ್ಪುವುದಿಲ್ಲ. ಒಂದು ವೇಳೆ ಬದಲಾವಣೆ ಅನಿವಾರ್ಯವಾದರೆ ಅದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕು, ಇಲ್ಲವೇ ತಮ್ಮ ಪಡೆಯವರೊಬ್ಬರು ಸಿಎಂ ಆಗಬೇಕು ಅಂತ ಬಯಸುತ್ತದೆ. ಅದರ ಬಯಕೆಗೆ ಹೈಕಮಾಂಡ್ ಒಪ್ಪದೆ ಹೋದರೆ ದೊಡ್ಡದೊಂದು ಗುಂಪು ಪಕ್ಷಕ್ಕೆ ರಾಜೀನಾಮೆ ನೀಡಿ ಹೊರಹೋಗಲಿದೆ.

ಹೀಗೆ ಹೊರಹೋಗುವ ಗುಂಪು ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಬರಲಿ, ಆ ಮೂಲಕ ಮಧ್ಯಂತರ ಚುನಾವಣೆ ಅನಿವಾರ್ಯವಾಗಲಿ ಎಂದು ಬಯಸುತ್ತದೆ. ಹಾಗೇನಾದರೂ ಆದರೆ ಕರ್ನಾಟಕದ ರಾಜಕಾರಣದಲ್ಲಿ ಧ್ರುವೀಕರಣ ಸಂಭವಿಸಿ, ದೇವೇಗೌಡ-ಕುಮಾರಸ್ವಾಮಿ ನೇತೃತ್ವದ ಜಾ.ದಳ ದೊಡ್ಡ ಮಟ್ಟದ ಶಕ್ತಿ ಪಡೆಯಲಿದೆ. ಒಂದು ಸಲ ಅದಕ್ಕೆ ಶಕ್ತಿ ದೊರೆತರೆ ಮಧ್ಯಂತರ ವಿಧಾನಸಭಾ ಚುನಾವಣೆಯ ನಂತರ ಬಿಜೆಪಿ-ಜಾ.ದಳ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ನಿಶ್ಚಿತವಾಗುತ್ತದೆ. ಹಾಗಾಗುತ್ತದಾ? ಗೊತ್ತಿಲ್ಲ. ಆದರೆ ಅದು ಸಿಎಂ ಹುದ್ದೆಯಲ್ಲಿ ಸಿದ್ದರಾಮಯ್ಯ ಮುಂದುವರಿಯುತ್ತಾರೋ ಇಲ್ಲವೋ ಎಂಬುದನ್ನು ಅವಲಂಬಿಸಿದೆ.

” ಹನಿಟ್ರ್ಯಾಪ್ ಕುರಿತು ಪುಂಖಾನುಪುಂಖವಾಗಿ ಹೊರಬರುತ್ತಿರುವ ಮಾಹಿತಿಗಳು ಅಂತಿಮವಾಗಿ ಕರ್ನಾಟಕದ ರಾಜಕಾರಣದ ಮೇಲೆ ಪರಿಣಾಮ ಬೀರುವುದು ಸುಳ್ಳಲ್ಲ. ಈಗಿನ ಸ್ಥಿತಿಯನ್ನು ಗಮನಿಸಿದರೆ ಸಿದ್ದರಾಮಯ್ಯ ಸಿಎಂ ಹುದ್ದೆಯಿಂದ ಕೆಳಗಿಳಿಯುವುದನ್ನು ಅವರ ಆಪ್ತ ಪಡೆ ಯಾವ ಕಾರಣಕ್ಕೂ ಒಪ್ಪುವುದಿಲ್ಲ. ಒಂದು ವೇಳೆ ಬದಲಾವಣೆ ಅನಿವಾರ್ಯವಾದರೆ ಅದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕು, ಇಲ್ಲವೇ ತಮ್ಮ ಪಡೆಯವರೊಬ್ಬರು ಸಿಎಂ ಆಗಬೇಕು ಅಂತ ಬಯಸುತ್ತದೆ. ಅದರ ಬಯಕೆಗೆ ಹೈಕಮಾಂಡ್ ಒಪ್ಪದೆ ಹೋದರೆ ದೊಡ್ಡದೊಂದು ಗುಂಪು ಪಕ್ಷಕ್ಕೆ ರಾಜೀನಾಮೆ ನೀಡಿ ಹೊರಹೋಗಲಿದೆ.”

ಆಂದೋಲನ ಡೆಸ್ಕ್

Recent Posts

ಹೆಚ್ಚಾಯ್ತು ಸಫಾರಿ ವಿರೋಧ : 25ಕ್ಕೂ ಹೆಚ್ಚು ಗ್ರಾ.ಪಂ ಪಿಡಿಒಗಳಿಗೆ ಮನವಿ ಸಲ್ಲಿಸಿ ರೈತರು

ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಪುನರಾರಂಭಿಸುವ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಕರ್ನಾಟಕ ರಾಜ್ಯ…

4 hours ago

ಟ್ರಂಪ್‌ ಸುಂಕ ರದ್ದುಪಡಿಸಿದ ಅಮೆರಿಕಾ ಸುಪ್ರೀಂಕೋರ್ಟ್‌ : ಭಾರತ ಹೇಳಿದ್ದೇನು?

ಹೊಸದಿಲ್ಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿವಿಧ ದೇಶಗಳ ಮೇಲೆ ಹೇರಿರುವ ಹೆಚ್ಚುವರಿ ಸಾಮೂಹಿಕ ಸುಂಕಗಳನ್ನು ಅಮೆರಿಕ…

5 hours ago

ಗಡಿ ಭದ್ರತೆಗೆ ಒತ್ತು : ತಮಿಳುನಾಡು ಚುನಾವಣೆಗೆ ಕರ್ನಾಟಕ ಪೊಲೀಸ್ ಸಹಕಾರ ಭರವಸೆ

ಹನೂರು : ಮುಂದಿನ ದಿನಗಳಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು ಯಶಸ್ವಿಯಾಗಿ ನಡೆಸಲು ಕರ್ನಾಟಕ ಪೊಲೀಸರು ಹಾಗೂ ಅಬಕಾರಿ ಇಲಾಖೆ…

5 hours ago

ಶಾರ್ಟ್ ಸರ್ಕ್ಯೂಟ್ : ಎಲೆಕ್ಟ್ರಾನಿಕ್ಸ್ ಅಂಗಡಿ ಸುಟ್ಟು ಭಸ್ಮ, ಲಕ್ಷಾಂತರ ರೂ. ನಷ್ಟ

ಕೆ.ಆರ್.ಪೇಟೆ : ಪಟ್ಟಣದ ಪಿ.ಎಲ್.ಡಿ ಬ್ಯಾಂಕ್ ಮುಂಭಾಗದಲ್ಲಿ ಶಫಿಉಲ್ಲಾ ಅವರು ನಡೆಸುತ್ತಿದ್ದ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ಸ್ ಅಂಗಡಿಯು ವಿದ್ಯುತ್ ಶಾರ್ಟ್…

6 hours ago

ಇವಿ ಹಬ್ ಆಗಿ ಕರ್ನಾಟಕ ರೂಪಾಂತರ ; ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ವಿಶ್ವಾಸ

ಬೆಂಗಳೂರು : ಬೆಂಗಳೂರು ನಗರ ಮಾತ್ರವಲ್ಲದೆ ಇಡೀ ಕರ್ನಾಟಕ ಎಲೆಕ್ಟ್ರಿಕ್ ವಾಹನ ಉದ್ಯಮದ ಹಬ್ ಆಗಿ ಅಭಿವೃದ್ಧಿ ಹೊಂದುತ್ತಿದ್ದು, ಅದಕ್ಕೆ…

6 hours ago

ಶೇ.10 ರಷ್ಟು ಜಾಗತಿಕ ಸುಂಕ ಘೋಷಿಸಿದ ಡೊನಾಲ್ಡ್ ಟ್ರಂಪ್

ಸುಪ್ರೀಂ ತೀರ್ಪಿಗೆ ಆಕ್ರೋಶ ವ್ಯಕ್ತಪಡಿಸಿದ ಅಮೆರಿಕ ಅಧ್ಯಕ್ಷ ವಾಷಿಂಗ್ಟನ್ : ವಿವಿಧ ದೇಶಗಳ ಸರಕುಗಳ ಮೇಲೆ ವಿಧಿಸಿದ್ದ ಭಾರಿ ಸುಂಕಗಳನ್ನು…

6 hours ago