ಹತ್ಯೆಯಂತಹ ಪ್ರಕರಣಗಳಿಗೆ ಕೊನೆ ಎಂದು?

ಜಿಡ್ಡು ಗಟ್ಟಿದ ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆಯೇ ಅಪಸಹ್ಯವೆನಿಸುವ ವಿಕ್ಷಿಪ್ತತೆ ಮುಂದುವರಿಯುತ್ತಿರುವುದು ನಿಜಕ್ಕೂ ಖೇದಕರ. ಸರ್ವಜನಾಂಗದ ಶಾಂತಿಯ ತೋಟವೆಂಬುದಕ್ಕೆ ಸೂಕ್ತವಾದ ಮೈಸೂರಿನಲ್ಲಿ ಮರ್ಯಾದೆಗೇಡು ಹತ್ಯೆಯಂತಹ ಕುಕೃತ್ಯಗಳು ನಡೆಯುತ್ತಿರುವುದು ಸ್ವೀಕಾರ್ಹವಲ್ಲ. ಪ್ರೇಮಾಂಕುರವಾಗಿ ಅರಳಬೇಕಾದ ಹೂವುಗಳು ವಿದಳನ ಹೊಂದುವಂತಹ ಸ್ಥಿತಿಗೆ ಈ ವ್ಯವಸ್ಥೆ ಬಾಗಿದೆ ಎಂಬುದನ್ನು ಇಂದಿನ ಆಧುನಿಕ ಯುಗದಲ್ಲಿ ಉಲ್ಲೇಖಿಸುವುದು ಒಂದು ರೀತಿಯ ವ್ಯವಸ್ಥೆಯ ದೌರ್ಬಲ್ಯ ಎಂದೇ ಪರಿಗಣಿಸಬೇಕಾಗುತ್ತದೆ. ಅದೂ ಮಾನವೀಯ ಮನಸ್ಸುಗಳನ್ನು ಬೆಚ್ಚಿಬೀಳಿಸಿದೆ ಕೂಡ. ಜಾತಿ ಮತದ ಬೇಲಿ ದಾಟಿ ಬೆಳೆಯುವ ಪ್ರೀತಿಗೆ ಸಾಮಾನ್ಯವಾಗಿ ಮೈಸೂರು ಆಶ್ರಯತಾಣವೇ ಆಗಿದೆ. ಅದಕ್ಕೆ ಹಿರಿಯ ಚಿಂತಕರಾಗಿದ್ದ ಪ್ರೊ.ಕೆ.ರಾಮದಾಸ್, ಪ್ರೊ.ಎಚ್.ಗೋವಿಂದಯ್ಯ ಅವರಂತಹ ಪ್ರಗತಿಪರರು ಸ್ಥಾಪಿಸಿದ್ದ ‘ಮಾನವ ಮಂಪಟ’ ವೇದಿಕೆಯೇ ಸಾಕ್ಷಿ ಎನ್ನಬಹುದು.

1980ರ ದಶಕದಲ್ಲಿ ಇಡೀ ರಾಜ್ಯದಲ್ಲಿ ಯಾವುದೇ ಅಂತರ್ಜಾತಿ, ಅಂತರ್ಧರ್ಮೀಯ ಪ್ರೇಮಿಗಳು ಮದುವೆಯಾಗಲು ಧಾವಿಸುತ್ತಿದ್ದುದು ಸಾಂಸ್ಕೃತಿಕ ನಗರಿ ಮೈಸೂರಿಗೆ. ಅಂತಹ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕಗ್ಗುಂಡಿ ಎಂಬ ಹಳ್ಳಿಯಲ್ಲಿ ಅನ್ಯ ಕೋಮಿನ ಯುವಕನನ್ನು ಪ್ರೇಮಿಸಿದ ಒಂದೇ ಕಾರಣಕ್ಕೆ ಸ್ವಂತ ಮಗಳನ್ನೇ ಹೆತ್ತವರು ಹತ್ಯೆ ಮಾಡಿರುವುದು ಮಾನವ ಕುಲ ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಪೊಲೀಸ್ ಠಾಣೆಯಲ್ಲಿ ಪ್ರೀತಿಯನ್ನು ಬಹಿರಂಗಪಡಿಸಿದ್ದರೂ ಕಾನೂನು ಕೈಹಿಡಿಯಲಿಲ್ಲವೇ? ಎಂಬ ಪ್ರಶ್ನೆ ಕೂಡ ಉದ್ಭವಿಸುತ್ತದೆ. ಸಂವಿಧಾನದಲ್ಲಿ ಯಾರೇ ಯಾವುದೇ ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳಬಹುದಾದ ಮತ್ತು ಆಯ್ಕೆ ಮಾಡಿಕೊಳ್ಳಬಹುದಾದ ಸ್ವಾತಂತ್ರ್ಯವಿದ್ದರೂ, ಜಾತ್ಯತೀತತೆ ಎಂಬ ಪದವೂ ಸಂವಿಧಾನದಲ್ಲಿ ಅಡಕವಾಗಿದ್ದರೂ ಸಮಾಜವನ್ನು ಬೆನ್ನು ಬಿಡದೆ ಕಾಡುತ್ತಿರುವ ಚಾತುರ್ವರ್ಣ ಪದ್ಧತಿಯ ಬೇರುಗಳು ಇಂದಿಗೂ ಚೋದ್ಯವಾಗಿ ಮುನ್ನುಗ್ಗುತ್ತಿರುವುದು ನಾವೇ ಪಾಲಿಸುವ ಸಂವಿಧಾನದಕ್ಕೆ ಮತ್ತು ನೈತಿಕತೆಗೆ ಮಾಡಿಕೊಂಡ ಅಪಮಾನವೇ ಸರಿ. ವಿದ್ಯಾರ್ಥಿನಿಗೆ ಸಿಡಿಪಿಒ ಕಚೇರಿಯಲ್ಲಿ ಕೌನ್ಸಿಲಿಂಗ್ ನಡೆಸಿ, ಬಾಲಮಂದಿರಕ್ಕೆ ಕಳುಹಿಸಲಾಗಿತ್ತು. ಅಲ್ಲಿಂದ ಪತ್ರ ಬರೆದುಕೊಟ್ಟು ಪೋಷಕರು ಮಗಳನ್ನು ಮನೆಗೆ ಕರೆತಂದು ನಡೆಸಿರುವ ಹೇಯಕೃತ್ಯ ೨೧ನೇ ಶತಮಾನದಲ್ಲೂ ಜಾತಿ, ಧರ್ಮಗಳ ಬಗ್ಗೆ ಇರುವ ಅಂಧಾಭಿಮಾನ ಕರುಳು ಕುಡಿಗಳನ್ನೇ ನಾಶ ಮಾಡುವಷ್ಟು ಕ್ರೂರವಾಗಿರುವುದು ವಿಪರ್ಯಾಸ. ಮೈಸೂರಿನಲ್ಲೇ ಕೆಲ ವರ್ಷಗಳ ಹಿಂದೆ ಇಂತಹದೇ ಕಾರಣಕ್ಕೆ ಒಡಹುಟ್ಟಿದ ಅಣ್ಣನೇ ತಂಗಿಯನ್ನು ಕೊಲೆಗೈದಿದ್ದ. ಮಂಡ್ಯದಲ್ಲಿಯೂ ಕೆಲ ವರ್ಷಗಳ ಹಿಂದೆ ಇಂತಹ ಎರಡು ಪ್ರಕರಣಗಳು ನಡೆದಿದ್ದವು. ಆಯಾ ಘಟನೆ ನಡೆದ ಸಂದರ್ಭದಲ್ಲಿ ಪೊಲೀಸರು ಎಷ್ಟೇ ಬಿಸಿ ಮುಟ್ಟಿಸಿದರೂ, ಮಾಧ್ಯಮಗಳಲ್ಲಿ ವ್ಯಾಪಾಕ ಪ್ರಚಾರ ಮಾಡಿದರೂ ವೈಯಕ್ತಿಕ ನೆಲಗಟ್ಟಿಗೆ ಬಂದಾಗ ಮನುಷ್ಯ ಕ್ರುದ್ಧರಾಗುವ ದುರಿತ ದಿನಗಳನ್ನು ನೋವುಂಡ ಮನಸ್ಸುಗಳು ಪದೇ ಪದೇ ನೋಡುವಂತಾಗಿದೆ. ಹೆತ್ತವರು ಮಕ್ಕಳನ್ನೇ ಕೊಲೆಗೈಯ್ಯುವಷ್ಟು ಕಠಿಣ ಹೃದಯಿಗಳಾಗಲು ಕಾರಣಗಳನ್ನು ಊಹಿಸಬಹುದು. ಸ್ವಜಾತಿಯ ಬಂಧುಗಳು, ಸ್ನೇಹಿತರ ಅಣಕು, ಕುಹಕ, ವ್ಯಂಗ್ಯಗಳ ಭರಾಟೆಯನ್ನು ನೆನೆದೇ ಬಹುತೇಕ ಇಂತಹ ಘಟನೆಗಳಿಗೆ ಪೋಷಕರು ಮುಂದಾಗುತ್ತಾರೆ ಎಂಬ ಮಾತುಗಳಿವೆ. ಅಂದರೆ ಅವರಿಗೆ ನಿಜವಾಗಿ ಜಾತಿ ಮೇಲೆ ಪ್ರೀತಿ ಇರುವುದಿಲ್ಲ ಎನ್ನಬಹುದು. ಇಂತಹ ಕೃತ್ಯಗಳು ಮರುಕಳಿಸದಂತೆ ನಿಜವಾದ ಪ್ರೀತಿಯ ಮುಂದೆ ಜಾತಿ, ಧರ್ಮಗಳು ನಗಣ್ಯ ಎಂಬುದರ ಬಗ್ಗೆ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ.

ವಾಸ್ತವವಾಗಿ ಸಮಾಜ ಕಲ್ಯಾಣ ಇಲಾಖೆ ಮಧ್ಯ ಪ್ರವೇಶಿಸಿ ಎರಡೂ ಕುಟುಂಬಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೈಜ ಸ್ಥಿತಿ ನಿಭಾಯಿಸುವ ಜವಾಬ್ದಾರಿ ನಿರ್ವಹಿಸಬೇಗಾಗಿದೆ. ಇದಕ್ಕೆ ಸಾಮಾಜಿಕ ಸಂಘಟನೆಗಳು ಕೈಜೋಡಿಸಬೇಕಿದೆ. ಆದರೆ, ರಾಜ್ಯದಲ್ಲಿ ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದರೆ ಇದು ‘ದುರಾಸೆ’ ಅನಿಸಬಹುದು. ಇಂತಹದ್ದಕ್ಕೆಲ್ಲ ಕಡಿವಾಣ ಬಿದ್ದು, ಕಠಿಣ ಕಾನೂನು ಕ್ರಮದ ಬಿಗಿ ಹಿಡಿತಗೊಳಿಸಿದರೆ ಮತ್ತಷ್ಟು ಪ್ರೇಮಿಗಳಿಗೆ ನೈತಿಕವಾಗಿ ಬೆಂಬಲ ನೀಡಿದಂತಾಗುತ್ತದೆ. ಹೆತ್ತ ಮಗಳ ಪ್ರಾಣವನ್ನೇ ತೆಗೆದಿರುವ ಆರೋಪಿಗಳಿಗೆ ಕೌನ್ಸಿಲಿಂಗ್ ನಡೆಸಿ, ನಿಜವಾದ ಕಾರಣವನ್ನು ಹೊರತೆಗೆಯುವ ಹೊಣೆಗಾರಿಕೆಯನ್ನು ಪೊಲೀಸರು ಪ್ರದರ್ಶಿಸಬೇಕಾಗುತ್ತದೆ. ಸರ್ಕಾರ ಕೂಡ ಆಗಾಗ ಸಮಾಜದಲ್ಲಿ ಪ್ರತಿಯೊಬ್ಬರೂ ತಮಗಿಷ್ಟದಂತೆ ಬದುಕಲು, ಸಂವಿಧಾನ ಬದ್ಧವಾಗಿ ಆಯ್ಕೆ ಮಾಡಿಕೊಳ್ಳುವಂತಹ ಸ್ವಾತಂತ್ರ್ಯ ನೀಡಬೇಕಾಗುತ್ತದೆ.

ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಹಿರಿದು. ಅದನ್ನು ನಗಣ್ಯ ಮಾಡುವಂತಿಲ್ಲ. ಆದರೆ, ವಯಸ್ಸಿಗೆ ಬಂದ ಮಕ್ಕಳಿಗೂ ಆಯ್ಕೆ ನೀಡುವ ಔದಾರ್ಯ ನೀಡುವಂತಹ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ಮೈಸೂರಿನಲ್ಲಿ ಮದ್ಯವ್ಯಸನಿಗಳಿಗೆ ಚಟ ಬಿಡಿಸಲು ಎರಡು ಮೂರು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವಂತಹ ಇಂತಹ ಸಂದಿಗ್ಧ ಸ್ಥಿತಿ ಎದುರಿಸುತ್ತಿರುವ ಪ್ರೇಮಿಗಳಿಗೆ ನೆರವಾಗಲು ಎನ್‌ಜಿಒಗಳ ಅವಶ್ಯಕತೆಯಿದೆ. ಮನುಷ್ಯ ತಾನು ಎಷ್ಟೇ ಹಣ ಸಂಪಾದಿಸಿದರೂ, ಆಧುನಿಕ ಯುಗಕ್ಕೆ ತೆರೆದುಕೊಂಡರೂ ಮರ್ಯಾದೆಯಂತಹ ವಿಚಾರಗಳು ಎದುರಾದಾಗ ಬುದ್ಧಿಗೆ ಕೆಲಸ ಕೊಡದೆ ಕೋಪಕ್ಕೆ ಎಡೆಮಾಡಿಕೊಟ್ಟು ನಡೆಸುವ ಅಚಾತುರ್ಯ ಕೇವಲ ವೈಯಕ್ತಿಕ ನಷ್ಟವಲ್ಲ, ಸಾಮಾಜಿಕ ನೆಲಗಟ್ಟಿನಲ್ಲಿಯೂ ಅತ್ಯಂತ ಕುಬ್ಜ ಮನಸ್ಥಿತಿಯ ತೋರ್ಪಡಿಕೆಯಾಗುತ್ತದೆ.

(ಚಿತ್ರಕೃಪೆ- ಸಬ್ರಂಗ್ ಇಂಡಿಯ)

andolana

Recent Posts

ಕೊಲೆ | ಶವವನ್ನು ಪಾಳು ಮನೆ ಮುಂದೆ ಎಸೆದು ಹೋದ ದುಷ್ಕರ್ಮಿ

ಮಳವಳ್ಳಿ : ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು ಶವವನ್ನು ಆತನ ಪಾಳು ಮನೆ ಮುಂದೆ ಎಸೆದು ಹೋಗಿರುವ ದುಷ್ಕೃತ್ಯವೊಂದು ಮಳವಳ್ಳಿ…

6 hours ago

ಟಿ-20 ವಿಶ್ವಕಪ್‌ : ಇಟಲಿ ಮಣಿಸಿ ದಾಖಲೆ ಬರೆದ ಸ್ಕಾಟ್ಲೆಂಡ್‌

ಕೋಲ್ಕತ್ತಾ : ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಸೋಮವಾರ ನಡೆದ ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡ ಇಟಲಿ ವಿರುದ್ಧ…

7 hours ago

ಈ ಊರಲ್ಲಿ ಕುಡಿದು ಗಲಾಟೆ ಮಾಡಿದ್ರೆ, ಹೆಣ್ಣು ಮಕ್ಕಳ ವಿಡಿಯೋ ಮಾಡಿದೆ ಬೀಳುತ್ತೆ 30 ಸಾವಿರ ದಂಡ

ನಂಜನಗೂಡು : ಗ್ರಾಮದೇವತೆ ಜಾತ್ರೇಲಿ ಕುಡಿದು ಗಲಾಟೆ ಮಾಡಿದ್ರೆ, ಹೆಣ್ಣು ಮಕ್ಕಳ ವಿಡಿಯೋ ಮಾಡಿದ್ರೆ 30 ಸಾವಿರ ದಂಡ ವಿಧಿಸುವ…

7 hours ago

2027 ಸೆ.3ಕ್ಕೆ ಅಟ್ಲಾಂಟಾದಲ್ಲಿ 9ನೇ ನಾವಿಕ ವಿಶ್ವ ಸಮ್ಮೇಳನ

ಬೆಂಗಳೂರು : ದುಬೈನ ಕರ್ನಾಟಕ ಸಂಘದೊಂದಿಗೆ ನವೆಂಬರ್ 22 ರಂದು ನಾವಿಕ ರಾಜ್ಯೋತ್ಸವ ಮತ್ತು ನಾಟಕೋತ್ಸವವನ್ನು ಆಯೋಜಿಸಲಾಗಿದೆ ಎಂದು ನಾವು…

7 hours ago

ಉಕ್ಕು ಉದ್ಯಮಕ್ಕೆ ಮತ್ತಷ್ಟು ಬಲ ; ₹11,887 ಕೋಟಿ ಹೂಡಿಕೆ

ಹೊಸದಿಲ್ಲಿ : ಭಾರತ ಸರ್ಕಾರವು ಸ್ಪೆಶಾಲಿಟಿ ಸ್ಟೀಲ್ (ವಿಶೇಷ ಉಕ್ಕು) ಉತ್ಪಾದನೆಗೆ ಸಂಬಂಧಿಸಿ ಹೊಸದಾಗಿ ಉತ್ತೇಜನಾ (ಪಿಎಲ್ಐ) ಯೋಜನೆ 1.2…

7 hours ago

ಬಂಡೀಪುರದಲ್ಲಿ ಅಂತರಾಷ್ಟ್ರೀಯ ಬಿಗ್‌ ಕ್ಯಾಟ್‌ ಶೃಂಗಸಭೆ : 23 ದೇಶದ ವಿಜ್ಞಾನಿಗಳು ಭಾಗಿ

ಚಾಮರಾಜನಗರ : ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೇಲುಕಾಮನಹಳ್ಳಿಯಲ್ಲಿ ಅಂತರಾಷ್ಟ್ರೀಯ ಬಿಗ್ ಕ್ಯಾಟ್ಸ್ ಅಲಯನ್ಸ್ ಶೃಂಗಸಭೆಯಲ್ಲಿಂದು…

9 hours ago