ಪ್ರಧಾನಿ ಭೇಟಿಯ ಪ್ರತಿಫಲ ದಕ್ಕಲು ‘ಪ್ರಚಾರ’ ರಾಜಕಾರಣವಲ್ಲ, ‘ಅಭಿವೃದ್ಧಿ’ ರಾಜಕಾರಣ ಬೇಕು!

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜೂನ್ ೨೧ರಂದು ಮೈಸೂರಿನ ಅರಮನೆ ಆವರಣದಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಯೋಗ ಪ್ರದರ್ಶನ ನೀಡಲಿದ್ದಾರೆ. ಇವರ ಜತೆ ಸುಮಾರು ೧೫ ಸಾವಿರಕ್ಕೂ ಹೆಚ್ಚು ಮಂದಿ ಹಾಗೂ ಮುಖ್ಯಮಂತ್ರಿ, ರಾಜ್ಯಪಾಲರು, ಜಿಲ್ಲಾ ಉಸ್ತುವಾರಿ ಸಚಿವರು ಕೂಡಾ ಭಾಗಿಯಾಗಲಿದ್ದಾರೆ. ಸುಮಾರು ಒಂದು ಗಂಟೆ ಕಾಲ ಯೋಗ ಪ್ರದರ್ಶನ ಸೇರಿದಂತೆ ಸುಮಾರು ೩ ಗಂಟೆಗಳ ಕಾಲ ಮೈಸೂರು ಅರಮನೆ ಆವರಣ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ.

ಈ ಕಾರ್ಯಕ್ರಮಕ್ಕಾಗಿ ಮೈಸೂರು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಸಮರೋಪಾದಿಯಲ್ಲಿ ಅಹರ್ನಿಶಿ ಕಾಮಗಾರಿ’ಗಳನ್ನು ಮಾಡತೊಡಗಿವೆ. ಸುಕ್ಕುಗಟ್ಟಿದ ಕೆನ್ನೆಯಂತೆ ಇದ್ದ ಹೆದ್ದಾರಿಗಳಿಗೆ ಮೇಕಪ್ ಮಾಡಿ, ಸಿನಿಮಾ ನಾಯಕಿಯ ನುಣುಪಾದ ಕೆನ್ನೆಯಂತೆ ಮಾಡಲಾಗುತ್ತಿದೆ. ಇದಕ್ಕಾಗಿ ಸುಮಾರು ೧೫ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ ಅವರೇ ಖುದ್ದಾಗಿ ಮಾಹಿತಿ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಬಂದಿಳಿಯುವ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಮೈಸೂರಿನ ರೇಸ್‌ಕೋರ್ಸ್ ಬಳಿ ಇರುವ ಖಾಸಗಿ ಹೋಟೆಲ್ ತನಕ ಕಳೆದ ಎರಡು ವಾರಗಳಿಂದ ರಸ್ತೆಯನ್ನು ಡಾಂಬರೀಕರಣ ಮಾಡಲಾಗಿದೆ.

ಮೈಸೂರು-ನಂಜನಗೂಡು ಚತುಷ್ಪಥ ರಸ್ತೆಯ ವಿಭಜಕದಲ್ಲಿ ಸಸಿಗಳೊಪಾದಿಯಲ್ಲಿ ಬೆಳೆದುಕೊಂಡಿದ್ದ ಗಿಡಗಳನ್ನು ಕತ್ತರಿಸಲಾಗಿದೆ. ಹುಲ್ಲು-ಮುಳ್ಳು ಪೊದೆಗಳನ್ನು ಕಿತ್ತುಹಾಕಿ ಸ್ವಚ್ಛಗೊಳಿಸಲಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಬೇಲಿಯಂತೆ ಬೆಳೆದು ನಿಂತಿದ್ದ ಪೊದೆಗಳನ್ನೂ ಕೂಡಾ ಸ್ವಚ್ಛಗೊಳಿಸಲಾಗಿದೆ. ಮಧುವನದಿಂದ ಜೆಎಸ್‌ಎಸ್ ಕಾಲೇಜಿನವರೆಗೂ ದೊಡ್ಡ ಮೋರಿಯನ್ನು ಕ್ಲೀನ್ ಮಾಡಿ, ಒಂದು ಬದಿಯಲ್ಲಿ ಬೆಳೆದುಕೊಂಡಿದ್ದ ಗಿಡ-ಗಂಟಿಗಳನ್ನು ತೆರವುಗೊಳಿಸಲಾಗಿದೆ. ಗಣಪತಿ ಸಚ್ಚಿದಾನಂದ ಆಶ್ರಮದಿಂದ ಮೊದಲ್ಗೊಂಡು ಬಂಡೀಪಾಳ್ಯದ ತನಕ ರಸ್ತೆ ಬದಿಯಲ್ಲಿ ಹೊಸದಾಗಿ ಬೀದಿ ದೀಪಗಳನ್ನು ಅಳವಡಿಸಲು ಕಂಬಗಳನ್ನು ನೆಡುವ ಕಾರ್ಯವೂ ಭರದಿಂದ ಸಾಗಿದೆ. ಅರಮನೆಯ ಸುತ್ತಲಿನ ರಸ್ತೆ, ಪಾದಾಚಾರಿ ಮಾರ್ಗವೂ ದುರಸ್ತಿಯಾಗುತ್ತಿದೆ.
ಪ್ರಧಾನಿಯವರು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಗೆ ಭೇಟಿ ನೀಡುವ ಕಾರ್ಯಕ್ರಮವಿರುವುದರಿಂದ ಬೋಗಾದಿ ರಸ್ತೆಯ ಹುಬ್ಬು-ತಗ್ಗುಗಳನ್ನು ಒಂದು ಸಮ ಮಾಡಲಾಗಿದೆ. ಇದನ್ನು ನೋಡಿದರೇ ಮೈಸೂರು ದಸರಾ ಮೂರು ತಿಂಗಳ ಮೊದಲೇ ಬಂದಿಬಿಟ್ಟಿತೇನೋ ಎನ್ನುವಷ್ಟರ ಮಟ್ಟಿಗೆ ಸಾಂಸ್ಕೃತಿಕ ನಗರಿ ಮದುವಣಗಿತ್ತಿಯಂತೆ ಸಿಂಗಾರಗೊಳುತ್ತಿದೆ.

ಯೋಗ ಪ್ರದರ್ಶನವಲ್ಲದೇ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ಸಭೆಯನ್ನು ಏರ್ಪಡಿಸಲಾಗಿದೆ. ಇಲ್ಲಿ ಮೋದಿಯವರು ಕೇಂದ್ರ ಸರ್ಕಾರದ ಪುರಷ್ಕೃತ ಯೋಜನೆಗಳ ಫಲಾನುಭವಿಗಳ ಜತೆ ಸಂವಾದ ನಡೆಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ೩೦ರಿಂದ ೪೦ ಸಾವಿರ ಜನರನ್ನು ಸೇರಿಸುವ ಆಲೋಚನೆಯೂ ಬಿಜೆಪಿ ಪಕ್ಷಕ್ಕೆ ಇದೆ. ಇದೊಂದು ತರಹ ಮುಂದೆ ಬರುವ ಚುನಾವಣೆಗೆಗಳಿಗೆ ಶಕ್ತಿ ಪ್ರದರ್ಶನ ವೇದಿಕೆಯಾಗಬಹುದು. ಈ ಎಲ್ಲದರ ನಡುವೆ ಆರಮನೆಯಲ್ಲಿ ಮೋದಿಯವರೊಂದಿಗೆ ಯೋಗವನ್ನು ಪ್ರದರ್ಶನ ಮಾಡುವ ಮಂದಿಯ ಪ್ರವೇಶದ ವಿಚಾರದಲ್ಲಿ ಬಿಜೆಪಿ ಪಕ್ಷದ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಸ್.ಎ.ರಾಮದಾಸ್ ಅವರ ನಡುವೇ ತಿಕ್ಕಾಟವು ಸಾರ್ವಜನಿಕರ ಎದುರೇ ‘ಪ್ರದರ್ಶನ’ಗೊಂಡಿದೆ. ಇದು ಯೋಗ ಕಾರ್ಯಕ್ರಮದ ‘ಫಲ’ವನ್ನು ಗರಿಷ್ಠ ಮಟ್ಟದಲ್ಲಿ ತಮ್ಮ ಪಾಲಿಗೆ ದಕ್ಕಿಸಿಕೊಳ್ಳಬೇಕು ಎನ್ನುವ ಉಮೇದು ಎನ್ನುವ ಮಾತುಗಳು ಜನರಿಂದ ಕೇಳಿಬರುತ್ತಿವೆ. ಅಲ್ಲದೇ ಮೋದಿಯವರ ಜತೆ ಯೋಗ ಪ್ರದರ್ಶನ ಮಾಡುವವರ ಸಂಖ್ಯೆಯನ್ನು ನಿರ್ಧಾರ ಮಾಡುವುದು ಪ್ರಧಾನಿಯವರ ವಿಶೇಷ ಭದ್ರತಾ ಪಡೆಯು ಸುರಕ್ಷತಾ ದೃಷಿಯಿಂದ ಭದ್ರತಾ ಪಡೆಯು ಎಷ್ಟು ಸಂಖ್ಯೆ ಎಂದು ಸೂಚನೆ ಕೊಡುತ್ತದೋ ಅಷ್ಟೇ ಅಂತಿಮವಾಗುತ್ತದೆ. ಆದರೆ ಅದಕ್ಕೂ ಮೊದಲು ಜನಪ್ರತಿನಿಧಿಗಳಿಬ್ಬರೂ ಎಂಟು ಸಾವಿರ- ಹದಿಮೂರು ಸಾವಿರ ಎಂದು ಹೇಳುತ್ತಿರುವುದು ಒಂದು ರೀತಿಯ ಪ್ರಹಸನದಂತೆ ಕಾಣುತ್ತಿದೆ.

ಬಿಜೆಪಿಯ ಶಾಸಕರು ಹಾಗೂ ಮೈಸೂರು-ಕೊಡಗು ಸಂಸದರ ನಡುವೆ ಇಂತಹ ಕ್ರೆಡಿಟ್ ರ್ವಾ ಇದೇ ಮೊದಲಲ್ಲ. ಹಿಂದೆ ಹಲವಾರು ವಿಚಾರಗಳಿಗೆ ‘ನಾವೇ- ನಾವೇ’ ಎನ್ನುತ್ತಾ ಮಾಧ್ಯಮಗಳ ಮೈಕಿನ ಮುಂದೆ ಮಾತನಾಡಿದ್ದು ಆಗಿದೆ. ಈಗ ಇದು ಪ್ರಧಾನಿಯವ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲೂ ಮುಂದುವರಿದಿದೆ ಎಂದು ಹತ್ತಿರದಿಂದ ಕಂಡವರ ವಿಶ್ಲೇಷಣೆಯಾಗಿದೆ. ಮೋದಿಯವರ ಗಮನ ಸೆಳೆಯುವುದಕ್ಕಾಗಿಯೇ ಶಾಸಕ ರಾಮದಾಸ್ ಅವರು ಶುಕ್ರವಾರದಿಂದ ಎರಡು ದಿನಗಳ ಕಾಲ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳ ಅರ್ಜಿ ಸಲ್ಲಿಕೆ ಹಾಗೂ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಚಾಲನೆ ನೀಡುವ ಸಮಾರಂಭಗಳನ್ನು ಹಮ್ಮಿಕೊಂಡಿದ್ದಾರೆ. ಅತ್ತ ಪ್ರತಾಪ್ ಸಿಂಹ ಕೂಡ ಮೈಸೂರಿನಲ್ಲಿ ಎಲ್ಲಾ ರಸ್ತೆಗಳಲ್ಲೂ ಓಡಾಡಿ ಕ್ರೆಡಿಟ್ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆ.

ಮೈಸೂರು ಪ್ರಾಂತ್ಯದ ಸಮಸ್ಯೆಗಳು, ಆಗಬೇಕಾಗಿರುವ ಅಭಿವೃದ್ಧಿ ಯೋಜನೆಗಳ ಪಟ್ಟಿ ಸಿದ್ದ ಮಾಡಿ ಆಗಮಿಸುವ ಪ್ರಧಾನಿಗಳ ಮುಂದಿಟ್ಟು ಸ್ಥಳದಲ್ಲೇ ′ತಾತ್ವಿಕ ಒಪ್ಪಿಗೆ′ ಪಡೆಯುವ ′ಜಾಣತ′ವನ್ನು ಉಭಯ ನಾಯಕರು ಪ್ರದರ್ಶಿಸುತ್ತಿಲ್ಲದಿರುವುದು ಮೇಲ್ನೋಟಕ್ಕೆ ಅವರ ನಡವಳಿಕೆಯಿಂದಲೇ ಕಾಣಿಸುತ್ತಿದೆ. ಗೌರವಾನ್ವಿತ ಸಂಸದರು ಮತ್ತು ಶಾಸಕರು ′ಅಭಿವೃದ್ಧಿ ರಾಜಕಾರಣ′ ಮಾಡಿ ಪ್ರಚಾರ ಪಡೆಯುವ ಬದಲು ‘ಪ್ರಚಾರ ರಾಜಕಾರಣ’ ಮಾಡಲು ಹೋಗಿ ಅಭಿವೃದ್ಧಿಗೆ ಎರವಾಗಿಬಿಡಬಹುದೆಂಬ ಆತಂಕ ಜನರಲ್ಲಿದೆ. ಇಂತಹ ಅನಪೇಕ್ಷಿತ ನಡವಳಿಕೆಗಳನ್ನು ಉಭಯ ನಾಯಕರು ತಿದ್ದಿಕೊಳ್ಳಲು ಇನ್ನೂ ಕಾಲಮಿಂಚಿಲ್ಲ!

andolana

Recent Posts

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ | ಜನಸಂಖ್ಯೆ ಏರುಪೇರು : ಆಂಧ್ರದ ನೀತಿ ಅನುಕರಣೀಯವೇ?

ದೇಶದ ಜನಸಂಖ್ಯೆಯಲ್ಲಾಗುತ್ತಿರುವ ಏರುಪೇರು ರಾಷ್ಟ್ರೀಯ ಜನಸಂಖ್ಯೆ ನಿರ್ವಹಣೆಯ ನೀತಿಯ ದಿಕ್ಕನ್ನೇ ಬದಲಿಸುತ್ತಿದೆ. ಉತ್ತರ ಭಾರತದ ಜನಸಂಖ್ಯೆ ಪ್ರಮಾಣ ಲಂಗು ಲಗಾಮಿಲ್ಲದೆ…

17 mins ago

ಮೆಲೊಡಿ ಖಾವೋ ; ಕುಚ್‌ ಜಾನ್‌ ಜಾವೋ!

ರಾಜಾರಾಂ ತಲ್ಲೂರು ಬೆಳಿಗ್ಗೆ ಎದ್ದ ತಕ್ಷಣ ಹಲ್ಲು ತಿಕ್ಕಿ ಮುಖ ತೊಳೆಯಬೇಕು ಎಂದು ದೇಶದ ಸಂವಿಧಾನದಲ್ಲಿ ಬರೆದಿದೆಯೇನ್ರಿ? . .…

34 mins ago

ಭಾನುವಾರದ ಹಾಡುಪಾಡು | ಈ ಮೋಹ, ಈ ಬಯಕೆ ಮತ್ತು ಇದೆಲ್ಲಾ ಯಾಕೆ ಹೀಗೆ?

ಮೋಹಿತ್‌ ಎಸ್‌ ಗೌಡ ನಾನು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಪರೀಕ್ಷೆಯ ಪ್ರಶ್ನೆಪತ್ರಿಕೆಗಳಲ್ಲಿ ‘ಲಿಂಗ ಬದಲಿಸಿ ಬರೆಯಿರಿ’ ಅಥವಾ ‘ವಿರುದ್ಧ ಪದ…

55 mins ago

ಭಾನುವಾರದ ಹಾಡುಪಾಡು | ಒಂದು ಸುಂದರ ಸಂಸಾರ ಮುರಿದುಹೋದ ಕಥೆ

ರೇಣುಕಾ ನಿಡಗುಂದಿ  ಕಾಲೇಜಿನ ದಿನಗಳಲ್ಲಿ ಅವರಿಬ್ಬರೂ ಭೇಟಿಯಾದಾಗಲೇ ಆಕೆ ತಾನು ಬೈ ( Bisexual) ಎಂದು ಹೇಳಿಕೊಂಡಿದ್ದಳು. ಹೊಸತಲೆಮಾರಿನ ಹುಡುಗ…

1 hour ago

ಒಬ್ಬ ಹುಡುಗ ಯಾವ ಕಾರಣಕ್ಕೆ ʼಗೇʼ ಆಗುತ್ತಾನೆ?

ವಸುಧೇಂದ್ರ ಹುಡುಗನೊಬ್ಬನಿಗೆ ಮತ್ತೊಬ್ಬ ಹುಡುಗನ ಮೇಲೆ ಅದು ಹೇಗೆ ಆಕರ್ಷಣೆ ಮೂಡುತ್ತದೆ? ಅದು ಅವನ ಆಯ್ಕೆಯೆ? ಕಲಿತ ದುಶ್ಚಟವೆ? ವಿಷಮ…

1 hour ago

ಮ.ಬೆಟ್ಟ | ಬಾಲಕನ ಮೇಲೆ ದಾಳಿ ಮಾಡಿದ್ದ ಚಿರತೆ ಸೆರೆ

ಹನೂರು : ಶ್ರೀ ಕ್ಷೇತ್ರ ನಾಗಮಲೆಗೆ ತೆರಳುತ್ತಿದ್ದ ಬಾಲಕನ ಮೇಲೆ ದಾಳಿ ಮಾಡಿ ಸಾವಿಗೆ ಕಾರಣವಾಗಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ…

3 hours ago