ಅಂಕಣಗಳು

ಜನವರಿಯಲ್ಲಿ ಚಾಲಕ ಉದ್ದಿಮೆಗಳ ಬೆಳವಣಿಗೆ ಇಳಿಕೆ

• ಪ್ರೊ.ಆರ್.ಎಂ.ಚಿಂತಾಮಣಿ

ಇದೇ ಫೆಬ್ರವರಿ 29ರಂದು ಕೇಂದ್ರ ಅಂಕಿಸಂಖ್ಯಾ ಕಚೇರಿ (Central Statistical Office) ರಾಷ್ಟ್ರೀಯ ಒಟ್ಟಾದಾಯದ (ಜಿಡಿಪಿ) 2023-24ನೇ ಹಣಕಾಸು ವರ್ಷದ ಮೂರನೇ ತೈಮಾಸಿಕದ ಎರಡನೇ ಅಂದಾಜುಗಳನ್ನು ಪ್ರಕಟಿಸಿದೆ. ಜೊತೆಯಲ್ಲೇ ಆರ್ಥಿಕ ಬೆಳವಣಿಗೆಗೆ ಮೂಲಾಧಾರ ಮತ್ತು ಶಕ್ತಿಯನ್ನು ಒದಗಿಸುವ ‘ಚಾಲಕ ಉದ್ದಿಮೆ’ಗಳೆಂದೇ (Core Industries) ಕರೆಯಲ್ಪಡುವ ಎಂಟು ಉದ್ದಿಮೆಗಳ ಮಾಸಿಕ ಬೆಳವಣಿಗೆಯ ಜನವರಿ ತಿಂಗಳ ಅಂಕಿ ಸಂಖ್ಯೆಗಳನ್ನೂ ಪ್ರಕಟಿಸಿದೆ. ಮೊದಲನೆಯದು ನಿರೀಕ್ಷೆ ಮೀರಿ ಏರಿಕೆ ಕಂಡಿದ್ದರೆ, ಇನ್ನೊಂದರಲ್ಲಿ ಇಳಿಕೆಯಾಗಿದೆ.

ಅಕ್ಟೋಬರ್-ಡಿಸೆಂಬರ್ 2023ರ ಅವಧಿಯ ಜಿಡಿಪಿಯು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.8.4ರಷ್ಟು ಬೆಳವಣಿಗೆ ಕಂಡಿದೆ. ಆಗ ಹಿಂದಿನ ಇದೇ ಅವಧಿಗಿಂತ ಶೇ.4.3ರಷ್ಟು ಮಾತ್ರ ಹೆಚ್ಚಳ ಕಂಡಿತ್ತು. ಈ ವರ್ಷದ ಒಂದು ವಿಶೇಷವೆಂದರೆ, ಮೊದಲ ಮೂರು ತ್ರೈಮಾಸಿಕಗಳಲ್ಲಿಯೂ ಶೇ.8.0ರ ಮೇಲೆಯೇ ಮುಂದುವರಿದಿದೆ. ಇದು ಸರ್ಕಾರ ಇನ್ನಷ್ಟು ಉತ್ತೇಜಿತವಾಗಿ ವಾರ್ಷಿಕ ಬೆಳವಣಿಗೆ ಶೇ.7.6 ಆಗಲಿದೆ ಎಂದು ಅಂದಾಜು ಮಾಡಲು ಕಾರಣವಾಗಿದೆ. ಈ ಅಂದಾಜು ಜನವರಿಯಲ್ಲಿನ ಅಂದಾಜಿಗಿಂತ ಶೇ.0.3ರಷ್ಟು ಹೆಚ್ಚಾಗಿದೆ. ಅಂದರೆ ಜನವರಿ-ಮಾರ್ಚ್ 2024ರ ತೈಮಾಸಿಕ ದಲ್ಲಿ ಏನೇ ಏರುಪೇರುಗಳಾದರೂ ಜಿಡಿಪಿ ಬೆಳವಣಿಗೆ ಶೇ.5.7ಕ್ಕಿಂತ ಕೆಳಗೆ ಹೋಗಲಿಕ್ಕಿಲ್ಲ ಎನ್ನುವುದು ಸರ್ಕಾರದ ಲೆಕ್ಕಾಚಾರ. ಕಾದು ನೋಡಬೇಕು.

ಇದನ್ನೇ ಆಧಾರವಾಗಿಟ್ಟುಕೊಂಡು ನಮ್ಮ ಪ್ರಧಾನಿಗಳು ಈ ಶೇ.8.4ರಷ್ಟು ಬೆಳವಣಿಗೆಯು ಭಾರತದ ಅರ್ಥವ್ಯವಸ್ಥೆಯ ಸಾಮರ್ಥ್ಯವನ್ನು ತೋರಿಸುತ್ತದೆ. ನಮ್ಮ 1.4 ಬಿಲಿಯನ್ ಜನರು ವಿಕಸಿತ (ಶ್ರೀಮಂತ) ಭಾರತದಲ್ಲಿ ನೆಮ್ಮದಿ ಯಿಂದ ಜೀವಿಸುವಂತೆ ಮಾಡಲು ನಮ್ಮ ಪ್ರಯತ್ನಗಳನ್ನು ಮುಂದುವರಿ ಸುತ್ತೇವೆ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇನೋ ಸರಿಯೆ. ಆದರೆ ಅಲ್ಪಾವಧಿ ಅಂದಾಜುಗಳ ಆಧಾರದ ಮೇಲೆ ದೀರ್ಘಾವಧಿ ಪರಿಣಾಮಗಳ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಾದೀತೆ?

ಈ ತೈಮಾಸಿಕದ ಜಿಡಿಪಿ ಬೆಳವಣಿಗೆಯ ಹೆಚ್ಚಳಕ್ಕೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಾದ ತೆರಿಗೆ ಸಂಗ್ರಹ, ಸಬ್ಸಿಡಿ ವೆಚ್ಚಗಳಲ್ಲಿ ಇಳಿಕೆ ಮತ್ತು ಇಂದಿನ ತೈಮಾಸಿಕಗಳ ಮತ್ತು ಹಿಂದಿನ ಹಣಕಾಸು ವರ್ಷದ ಜಿಡಿಪಿಯ ಮರು ಅಂದಾಜಿನಲ್ಲಿ ಇಳಿಕೆ ಮುಂತಾದವುಗಳೂ ಕಾರಣವಾಗಿವೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಈ ತೈಮಾಸಿಕದಲ್ಲಿ ಉತ್ಪಾದಕ ಕೈಗಾರಿಕೆಗಳೇ <font face=”SHREE- KAN-0850AN”>(Manufacturing) ಗತಿ (ಶೇ.11.6) ಕಂಡಿದ್ದು, ನಿರ್ಮಾಣ (Construction) ವಲಯ (ಶೇ.9.5) ಮತ್ತು ಸೇವಾ ವಲಯ (ಶೇ.7.0) ನಂತರದ ಸ್ಥಾನಗಳಲ್ಲಿವೆ. ಕೃಷಿ ವಲಯದಲ್ಲಿ (ಶೇ.-0.8) ಹಿನ್ನಡೆಯಾಗಿರುವುದು ಕಾಣುತ್ತದೆ. ದೇಶಾದ್ಯಂತ ಮಳೆಗಾಲ ಕಡಿಮೆಯಾಗಿದ್ದು, ಕೆಲವು ಪ್ರದೇಶಗಳಲ್ಲಿ ಬರಗಾಲದ ತೀವ್ರ ಛಾಯೆ ಇದೆ. ನಾಲ್ಕನೇ ತ್ರೈಮಾಸಿಕದಲ್ಲಿಯೂ ಕೃಷಿ ಬೆಳವಣಿಗೆ ಕಡಿಮೆಯೇ. ಹಿನ್ನಡೆಯನ್ನು ಕೃಷಿ ಉತ್ಪಾದನೆ ಅನುಭವಿಸಿದರೂ ಆಶ್ಚರ್ಯವಿಲ್ಲ.

ಎಲ್ಲ ವಲಯಗಳಿಗೂ ಮೂಲವಸ್ತುಗಳನ್ನು ಮತ್ತು ಶಕ್ತಿ ಮೂಲಗಳನ್ನು ಒದಗಿಸುವ ಕಚ್ಚಾತೈಲ, ರಿಫೈನರಿಗಳು, ಗೊಬ್ಬರಗಳು, ವಿದ್ಯುಚ್ಛಕ್ತಿ, ನೈಸರ್ಗಿಕ ಅನಿಲ, ಸಿಮೆಂಟ್, ಉಕ್ಕು ಮತ್ತು ಕಲ್ಲಿದ್ದಲು ಹೀಗೆ ಎಂಟು ಚಾಲಕ ಉದ್ದಿಮೆಗಳ ಬಗ್ಗೆ ತಿಳಿದುಕೊಳ್ಳಬೇಕು. ಇವುಗಳಿಗೆ ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ (Index of Industrial Production -ಐ.ಐ.ಪಿ.) ಶೇ.40.43 ಮಹತ್ವವಿದೆ. ಇವುಗಳನ್ನು ಮೂಲ ಉದ್ದಿಮೆಗಳೆಂದೂ ಕರೆಯಲಾಗುತ್ತದೆ.

ಮೂಲ ಉದ್ದಿಮೆಗಳ ಬೆಳವಣಿಗೆ: ಸಿಎಸ್‌ಒ ವರದಿಯಂತೆ ಈ ಜನವರಿಯಲ್ಲಿ ಒಟ್ಟಾರೆ ಎಂಟು ಉದ್ದಿಮೆಗಳೂ ಸೇರಿ ಶೇ.3.6ರಷ್ಟು ಬೆಳವಣಿಗೆಯಾಗಿದ್ದು, ಕಳೆದ 14 ತಿಂಗಳಲ್ಲೇ ಇದು ಕಡಿಮೆ. 2022ರ ಅಕ್ಟೋಬರ್‌ನಲ್ಲಿ ಮಾತ್ರ ಹಿಂದಿನ ಇದೇ ಅವಧಿಗೆ ಹೋಲಿಸಿದರೆ ಶೇ.0.7ರ ಬೆಳವಣಿಗೆ ತಳಮಟ್ಟದಲ್ಲಿತ್ತು. ನಂತರದ ತಿಂಗಳುಗಳಲ್ಲಿ ಉತ್ಪಾದನೆ ಬೆಳವಣಿಗೆ ಶೇ.10.0ಕ್ಕೇರುವುದು ಶೇ.4.0ಕ್ಕಿಳಿಯುವುದು ಮತ್ತೇ ಮೇಲೇರಿ ಶೇ.11.8ಕ್ಕೆ ತಲುಪುವುದು ಹೀಗೆ ಏರಿಳಿತಗಳು ಮುಂದುವರಿದು ಈಗ ಈ ಮಟ್ಟಕ್ಕಿಳಿದಿದೆ. 2023ರ ಜನವರಿಯಲ್ಲಿ ಶೇ.9.7 ಬೆಳೆದಿದ್ದವು. ಕಳೆದ ಡಿಸೆಂಬರ್ ತಿಂಗಳಲ್ಲಿ ಇವುಗಳ ಬೆಳವಣಿಗೆ ಶೇ.4.9 ಇತ್ತು.

ಒಂದೊಂದನ್ನೇ ಪರಿಶೀಲಿಸಿದರೆ ಜನವರಿಯಲ್ಲಿ ರಿಫೈನರೀಸ್ (ಶೇ.-4.3) ಮತ್ತು ಗೊಬ್ಬರಗಳು (ಶೇ.-0.6) ಹಿನ್ನಡೆ ಕಂಡಿದ್ದರೆ, ಕಚ್ಚಾ ತೈಲ ಉತ್ಪಾದನೆ ಹೆಸರಿಗೆ ಮಾತ್ರ ಎನ್ನುವ ಮಟ್ಟಿಗೆ ಶೇ.0.7 ಮಾತ್ರ ಹೆಚ್ಚಾಗಿದೆ. ಉಳಿದ ಐದರಲ್ಲಿ ಕಲ್ಲಿದ್ದಲು ಉತ್ಪಾದನೆ ಮಾತ್ರ ಶೇ.10.2ರಷ್ಟು ಹೆಚ್ಚಾಗಿದ್ದು, ಎರಡಂಕಿಯ ಮುನ್ನಡೆ ಇದೆ. ಉಕ್ಕು ಶೇ.7.0, ಸಿಮೆಂಟ್ ಶೇ.5.6, ನೈಸರ್ಗಿಕ ಅನಿಲ ಶೇ.5.5 ಮತ್ತು ವಿದ್ಯುತ್ ಶೇ.5.2 ಬೆಳವಣಿಗೆ ಆಗಿರುತ್ತವೆ. ಬರುವ ಎರಡು ತಿಂಗಳಲ್ಲಿ ಕೃಷಿ ಚಟುವಟಿಕೆಗಳು ಕಡಿಮೆಯಾಗುವುದರಿಂದ ಕೃಷಿ ಉತ್ಪಾದನೆ ಕಡಿಮೆಯಾಗುವ ಭಯವಿದೆ. ಹಲವು ಪ್ರದೇಶಗಳಲ್ಲಿ ಹಿಂಗಾರು ಬೆಳೆ ಬಾರದಿರುವುದೂ ಕಾರಣವಾಗಬಹುದು. ಗೊಬ್ಬರಗಳ ಬೇಡಿಕೆ ಈ ಹಣಕಾಸು ವರ್ಷಾಂತ್ಯದವರೆಗೆ ಇನ್ನೂ ಕಡಿಮೆಯಾಗುವ ಆತಂಕವಿದೆ. ಗೊಬ್ಬರಗಳ ಉತ್ಪಾದನೆ ಹೆಚ್ಚಿಸುತ್ತಾ ದಾಸ್ತಾನುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಅವಶ್ಯ. ಮುಂದಿನ ಮುಂಗಾರು ಹಂಗಾಮಿನಲ್ಲಿ ಮತ್ತು ನಂತರ ಮಳೆ ಚೆನ್ನಾಗಿ ಬಿದ್ದು ಗೊಬ್ಬರಗಳಿಗೆ ಬೇಡಿಕೆ ಹೆಚ್ಚಾದಾಗ ಕೊರತೆ ಅನುಭವಿಸುವಂತಾಗಬಾರದು.

ವಿದ್ಯುತ್‌ ಒಂದು ಶಕ್ತಿ ಮೂಲವಾಗಿ ಮತ್ತು ಶಕ್ತಿಯಾಗಿ ಎಲ್ಲ ರಂಗಗಳಲ್ಲಿಯೂ ಬೇಕೇ ಬೇಕು. ಉತ್ಪಾದಿಸಿದ ವಿದ್ಯುತ್ತನ್ನು ಸಂಗ್ರಹಿಸಿಡುವ ಮತ್ತು ವಿತರಣಾ ವೆಚ್ಚಗಳನ್ನು ಮತ್ತು ಸೋರಿಕೆಯನ್ನು ಕಡಿಮೆ ಮಾಡುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಬೇಕು. ಅಗ್ಗದ ಮತ್ತು ಪರಿಸರಸ್ನೇಹಿ ಸೌರಶಕ್ತಿ ಮತ್ತು ಗಾಳಿ ವಿದ್ಯುತ್ ಉತ್ಪಾದನೆ ಹೆಚ್ಚಬೇಕು. ಈಗ ಸರ್ಕಾರ ‘ರೂಫ್ ಟಾಪ್’ ವಿದ್ಯುತ್ ಉತ್ಪಾದನೆ ಮತ್ತು ಗ್ರಿಡ್‌ಗಳಿಗೆ ವರ್ಗಾವಣೆ ಮಾಡಲು ಉತ್ತೇಜನಗಳನ್ನು ಘೋಷಿಸಿರುವುದರಿಂದ ಅದು ಹೆಚ್ಚಾದೀತು. ಒಟ್ಟಾರೆ ನಿರಂತರ ವಿದ್ಯುತ್‌ ಉತ್ಪಾದನೆ ಹೆಚ್ಚಳವಾಗಬೇಕು.

ಉಕ್ಕು ಮತ್ತು ಸಿಮೆಂಟ್ ಎಲ್ಲ ರಂಗಗಳಲ್ಲಿಯೂ ಬೇಕು. ಇವುಗಳ ಉತ್ಪಾದನೆ ಒಂದು ಮಟ್ಟದಲ್ಲಿ ಹೆಚ್ಚುತ್ತಿದೆ. ಸರ್ಕಾರ ಮೂಲ ಸೌಲಭ್ಯಗಳಿಗೆ ಹೆಚ್ಚು ಒತ್ತು ಕೊಟ್ಟಿರುವುದರಿಂದ ಬರುವ ದಿನಗಳಲ್ಲಿ ಬೇಡಿಕೆಯು ಹೆಚ್ಚಾಗುತ್ತದೆ ಎಂದು ನಿರೀಕ್ಷಿಸೋಣ. ಉತ್ಪಾದನೆ ತಯಾರಿರಬೇಕು.

ಕಲ್ಲಿದ್ದಲು ಇಂಧನವಾಗಿ ವಿದ್ಯುತ್ ಉತ್ಪಾದನೆ ಸೇರಿದಂತೆ ಎಲ್ಲ ವಲಯಗಳಲ್ಲಿಯೂ ಬಳಸಲ್ಪಡುತ್ತದೆ. ತಕ್ಕಂತೆ ಪೂರೈಕೆಯೂ ಇದೆ. ಆದರೆ ಅದು ಪರಿಸರಕ್ಕೆ ಹೆಚ್ಚು ಹಾನಿ ಮಾಡುವುದರಿಂದ ಮತ್ತು ದುಬಾರಿಯೂ ಆಗಿರುವುದರಿಂದ ನಿಧಾನವಾಗಿಯಾದರೂ ಬೇರೆ ಅಗ್ಗದ ಪರಿಸರಸ್ನೇಹಿ ಇಂಧನಗಳಿಗೆ ಮೊರೆ ಹೋಗಲೇಬೇಕಾಗುತ್ತದೆ ಅಲ್ಲಿಯವರೆಗೂ ಹೊಸ ತಂತ್ರಜ್ಞಾನಗಳನ್ನು ಹುಡುಕಿ ಪರಿಸರಕ್ಕೆ ಹಾನಿ ಕಡಿಮೆ ಮಾಡಬೇಕಾಗುತ್ತದೆ. ಇನ್ನಷ್ಟು ದಿವಸ ಕಲ್ಲಿದ್ದಲು ನಮ್ಮೊಡನೆ ಇರಲೇಬೇಕು. ಇದ್ದುದ್ದರಲ್ಲಿಯೇ ಒಂದು ಸಮಾಧಾನವೆಂದರೆ ಈ ವರ್ಷದ (2023-24) ಮೊದಲ 10 ತಿಂಗಳಲ್ಲಿ ಒಟ್ಟಾರೆ ಮೂಲ ಉದ್ದಿಮೆಗಳು ಕಳೆದ ವರ್ಷದ ಇದೇ ಅವಧಿಗಿಂತ ಶೇ.7.7 ಉತ್ಪಾದನಾ ಬೆಳವಣಿಗೆಯನ್ನು ಹೊಂದಿರುತ್ತವೆ. ಜಿಡಿಪಿಯ ಬೆಳವಣಿಗೆ ಅಂದಾಜಿಗಿಂತ ಸ್ವಲ್ಪವಾದರೂ ಹೆಚ್ಚಾಗಿದೆ. ಆರ್ಥಿಕಾಭಿವೃದ್ಧಿಗೆ ಇವು ಬೆನ್ನೆಲುಬು.

andolana

Recent Posts

ಮುಡಾ ಪ್ರಕರಣ: ಮುಡಾ ಕಚೇರಿಗಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕ ಫೈಲ್‌: ಶ್ರೀವತ್ಸ

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್‌ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್‌.ಶ್ರೀವತ್ಸ…

1 hour ago

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…

2 hours ago

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

3 hours ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

3 hours ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

3 hours ago

ಮುಡಾ ಪ್ರಕರಣ: ಮುಡಾ ಕಚೇರಿಯ ಮೇಲೆ ಇ.ಡಿ ದಾಳಿ

ಮೈಸೂರು: ಮುಡಾದಲ್ಲಿ ಹಗರಣ ನಡೆದಿದೆ ಎಂದು ಆರ್‌ಐಟಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ದೂರಿನ ಆಧಾರದ…

4 hours ago