ಅಂಕಣಗಳು

ಇನ್ನೂ ಪೂರ್ಣವಾಗಿ ನಿಷೇಧವಾಗದ ಪ್ಲಾಸ್ಟಿಕ್…

ಪಿ.ಜೆ.ಎಸ್.ಅವಿನಾಶ್

     ಪ್ಲಾಸ್ಟಿಕ್, ಪ್ಲಾಸ್ಟಿಕ್, ಪ್ಲಾಸ್ಟಿಕ್… ಎಲ್ಲಿ ನೋಡಿದರೂ ಪ್ಲಾಸ್ಟಿಕ್‌ನದ್ದೇ ಕಾರುಬಾರು. ವಾತಾವರಣವನ್ನು, ಭೂಮಿಯನ್ನು ಹಾಗೂ ಸಕಲ ಜೀವಸಂಕುಲದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಸಂಶೋಧನೆಗಳಿಂದ ಮತ್ತೆ ಮತ್ತೆ ದೃಢಪಡುತ್ತಿದ್ದರೂ  ನಾವು ಪ್ಲಾಸ್ಟಿಕ್ ಉತ್ಪಾದನೆಯನ್ನು ಮತ್ತು ಬಳಕೆಯನ್ನು ನಿಯಂತ್ರಿಸಲು ಸಾಧ್ಯವೇ ಆಗಿಲ್ಲ. ಸರ್ಕಾರಗಳು ಆಗೊಮ್ಮೆ, ಈಗೊಮ್ಮೆ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಮಾತನಾಡುತ್ತಾ ಸುಮ್ಮನಾಗುತ್ತಿವೆ. ಈ ನಿಷೇಧದ ಮಾತಿನಲ್ಲಿ ಪ್ಲಾಸ್ಟಿಕ್ ಕಡ್ಡಿಗಳು, ಪ್ಲಾಸ್ಟಿಕ್ ಧ್ವಜಗಳು, ಪ್ಲೇಟ್‌ಗಳು, ಟೀ ಕಪ್‌ಗಳು, 120 ಮೈಕ್ರಾನ್‌ಗಿಂತ ಕಡಿಮೆ ದಪ್ಪವಿರುವ ಪ್ಲಾಸ್ಟಿಕ್ ಬ್ಯಾಗ್‌ಗಳ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.

ಆದರೆ, ಬ್ರಷ್, ಬಕೆಟ್, ಮಗ್, ಮೊಬೈಲ್, ಕಾರು, ಟಿ.ವಿ, ಫ್ರಿಡ್ಜ್, ಪೆನ್, ಪುಸ್ತಕ, ಆಹಾರ ಪದಾರ್ಥಗಳು, ಸಿಗರೇಟ್, ಗುಟ್ಕಾ ಮುಂತಾದವುಗಳ ಪ್ಯಾಕಿಂಗ್‌ಗಳಿಗಾಗಿ, ಕೃಷಿ ಭೂಮಿಯಲ್ಲಿ ಡ್ರಿಪ್ ಸಾಮಾನುಗಳು, ಪಿವಿಸಿ ಪೈಪ್‌ಗಳು, ಮಲ್ಚಿಂಗ್ ಶೀಟ್‌ಗಳಂತಹ ಹಲವಾರು ವಸ್ತುಗಳನ್ನು ನಿರ್ಭಯವಾಗಿ ಬಳಸುತ್ತಿದ್ದೇವೆ. ಹೀಗೆ ಬಳಕೆಯಾಗುತ್ತಿರುವ ಪ್ಲಾಸ್ಟಿಕ್ ಪರಿಸರಕ್ಕೆ ಹಾನಿಕಾರಕವಲ್ಲವೆ? ಪ್ಲಾಸ್ಟಿಕ್‌ಅನ್ನು ತಯಾರಿಸಲು ನೈಸರ್ಗಿಕ ಅನಿಲಗಳು, ಕಚ್ಚಾ ತೈಲ, ಸಸ್ಯಗಳ ತ್ಯಾಜ್ಯಗಳು, ಕಲ್ಲಿದ್ದಲು, ಉಪ್ಪು, ಸಲ್ಯುಲೋಸ್ ಮುಂತಾದವು ಅತ್ಯವಶ್ಯ. ಸಸ್ಯಗಳ ತ್ಯಾಜ್ಯಗಳು ದೊರೆಯಬೇಕಾದರೆ ಮರಗಿಡಗಳನ್ನು ಕಡಿಯಲೇಬೇಕು. ಗಣಿಗಾರಿಕೆಯನ್ನೂ ನಡೆಸಬೇಕು. ಇದರ ಜೊತೆಗೆ ಈ ಪ್ಲಾಸ್ಟಿಕ್ ತಯಾರಿಕೆಯಲ್ಲಿ ಹಲವಾರು ಕೆಮಿಕಲ್ಸ್‌ಗಳನ್ನು ಬಳಸುತ್ತಾರೆ. ಇದೆಲ್ಲದರಿಂದ ನೈಟ್ರಸ್ ಆಕ್ಸೈಡ್, ಮಿಥೆನಾಲ್, ಎಥಿಲಿನ್, ಕಾರ್ಬನ್ ಡೈಆಕ್ಸೈಡ್, ಸಲ್ಛರ್ ಡೈಆಕ್ಸೈಡ್‌ನಂತಹ ಹಲವು ಶಾಖವರ್ಧಕ ಅನಿಲಗಳು ಬಿಡುಗಡೆಯಾಗುತ್ತವೆ.

ಒಂದು ಕೆಜಿ ಪ್ಲಾಸ್ಟಿಕ್ ಅನ್ನು ಉತ್ಪಾದಿಸುವಾಗ ಹಾಗೂ ಅದನ್ನು ಸಾಗಿಸುವಾಗ ಸುಮಾರು 5-6 ಕೆ.ಜಿ.ಯಷ್ಟು, ಒಂದು ಲೀಟರ್ ಪ್ಲಾಸ್ಟಿಕ್ ಬಾಟಲ್ ತಯಾರಿಸುವಾಗ ಮತ್ತು ಅದನ್ನು ಸಾಗಿಸುವಾಗ ಸುಮಾರು 4-5 ಕೆ.ಜಿ.ಯಷ್ಟು, ಒಂದು ಕೆ.ಜಿ.ಯ ಪ್ಲಾಸ್ಟಿಕ್ ಬ್ಯಾಗ್ ತಯಾರಿಸುವಾಗ ಮತ್ತು ಅದನ್ನು ಸಾಗಿಸುವಾಗ ಸುಮಾರು 1 ರಿಂದ 1.5 ಕೆ.ಜಿ.ಯಷ್ಟು ಶಾಖವರ್ಧಕ ಅನಿಲಗಳು ಬಿಡುಗಡೆ ಆಗುತ್ತವೆ. ಪ್ಲಾಸ್ಟಿಕ್ ಉತ್ಪಾದನೆಯಿಂದಲೇ ಪ್ರಪಂಚದಾದ್ಯಂತ ಪ್ರತಿವರ್ಷವೂ ಸುಮಾರು 850 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು ಶಾಖವರ್ಧಕ ಅನಿಲಗಳು ಬಿಡುಗಡೆ ಆಗುತ್ತಿವೆ ಎಂದು ಅಂದಾಜಿಸಲಾಗಿದೆ.

ಜಾಗತಿಕವಾಗಿ ತಾಪಮಾನ ಹೆಚ್ಚಾಗಲು, ಹವಾಮಾನದ ಬದಲಾವಣೆಗೆ ಹಾಗೂ ಜೀವಸಂಕುಲದ ಸಾವಿಗೆ ಕಾರಣವೇ ಈ ಶಾಖವರ್ಧಕ ಅನಿಲಗಳು. ಮತ್ತೊಂದು ಕಡೆ ಈ ಪ್ಲಾಸ್ಟಿಕ್‌ಗಳಿಂದ ಜೀವಸಂಕುಲದ ಮೇಲೆ ಎಷ್ಟೊಂದು ದುಷ್ಪರಿಣಾಮ ಆಗುತ್ತಿದೆ ಎಂದರೆ ಮನುಷ್ಯನ ರಕ್ತದ ಕಣಗಳಲ್ಲಿಯೂ ಪ್ಲಾಸ್ಟಿಕ್‌ನ ಸೂಕ್ಷ್ಮಾತಿಸೂಕ್ಷ್ಮ ಕಣಗಳು ಇರುವುದನ್ನು ವಿಜ್ಞಾನಿಗಳು ದೃಢಪಡಿಸಿದ್ದಾರೆ. ಅಕ್ಕಿ, ಸಕ್ಕರೆಯಂತಹ ಆಹಾರ ಪದಾರ್ಥಗಳಲ್ಲಿ ಪ್ಲಾಸ್ಟಿಕ್‌ಗಳನ್ನು ಬೆರೆಸಲಾಗುತ್ತಿದೆ. ಪಾನೀಯಗಳು, ನೀರು, ಮಜ್ಜಿಗೆ, ಹಾಲಿನಂತಹವನ್ನು ಪ್ಯಾಕ್ ಮಾಡಲು ಬಳಸುತ್ತಿರುವುದು ಇದೇ ಪ್ಲಾಸ್ಟಿಕ್‌ಅನ್ನು. ಚಹಾ ಲೋಟ, ತಟ್ಟೆ, ಚಮಚಗಳೆಲ್ಲವೂ ಪ್ಲಾ ಸ್ಟಿಕ್. ಬಿಸಿಯಾದ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್‌ನಲ್ಲಿ ಶೇಖರಣೆ ಮಾಡುವುದರಿಂದ ಮತ್ತು ಅದರಲ್ಲಿ ಬಿಸಿಯಾದ ಆಹಾರವನ್ನು ಸೇವಿಸುವುದರಿಂದ ಪ್ಲಾಸ್ಟಿಕ್‌ನ ನ್ಯಾನೋ ಕಣಗಳು ನಮ್ಮ ದೇಹವನ್ನು ಸೇರುತ್ತಿವೆ. ಇನ್ನು ನಾವು ಬಳಸಿ ಬಿಸಾಡಲ್ಪಟ್ಟ ಪ್ಲಾಸ್ಟಿಕ್‌ನ ಸಣ್ಣಸಣ್ಣ ಕಣಗಳು ಗಾಳಿಯ ಜೊತೆ ವಾತಾವರಣದಲ್ಲಿ ಬೆರೆತು ಉಸಿರಾಟದ ಮೂಲಕ ನಮ್ಮ ದೇಹವನ್ನು ಸೇರುತ್ತಿವೆ. ಇದು ಕ್ಯಾನ್ಸರ್‌ಗೆ ಕಾರಣವಾಗುತ್ತಿದೆ.

ಯು.ಎನ್.ಇ.ಪಿ.ಯ ವರದಿಯ ಪ್ರಕಾರ ವಾರ್ಷಿಕ 11 ಮಿಲಿಯನ್ ಟನ್‌ಗಳಷ್ಟು ಪ್ಲಾಸ್ಟಿಕ್ ಸಮುದ್ರ ಸೇರುತ್ತಿದೆಯಂತೆ. ಇದರಿಂದ ಜಲಜೀವಿಗಳ ಸಾವಿಗೂ ನಾವು ಕಾರಣವಾಗುತ್ತಿದ್ದೇವೆ. ಇಷ್ಟೊಂದು ಪ್ರಮಾಣದಲ್ಲಿ ಪ್ಲಾಸ್ಟಿಕ್‌ಅನ್ನು ಸಮುದ್ರಕ್ಕೆ ಸೇರಿಸುತ್ತಿರುವವರು ಯಾರು ಗೊತ್ತೆ? ಈ ವಿಷಯದಲ್ಲಿ 2021ರ ಸೈನ್ಸ್ ಅಡ್ವಾನ್ಸ್ ಪತ್ರಿಕೆಯ ವರದಿಯಂತೆ ಫಿಲಿಪೈನ್ಸ್‌ನವರು (3,56,371 ಮೆಟ್ರಿಕ್ ಟನ್‌ನಷ್ಟು), ಭಾರತದವರು (1,26,513 ಮೆಟ್ರಿಕ್ ಟನ್‌ನಷ್ಟು), ಮಲೇಷಿಯಾದವರು (73,098 ಮೆಟ್ರಿಕ್ ಟನ್‌ನಷ್ಟು) ಮೊದಲ ಮೂರು ಸ್ಥಾನದಲ್ಲಿ ನಿಲ್ಲುತ್ತಾರೆ. ಈಗ ಸಮುದ್ರಗಳಲ್ಲಿ ಎಷ್ಟು ಪ್ರಮಾಣದ ಪ್ಲಾಸ್ಟಿಕ್ ಹಾಗೂ ಇನ್ನಿತರೆ ಹಾನಿಕಾರಕ ವಸ್ತುಗಳು ಇದೆ ಎನ್ನುವುದನ್ನು ತಿಳಿಯುವುದಾದರೆ, ಅಲ್ಲಿರುವುದನ್ನೆಲ್ಲಾ ಭಾರತ ದೇಶದ ವ್ಯಾಪ್ತಿಗೆ ಬರುವ ಜಾಗದ ಮೇಲೆ ಹಾಸಿದರೂ ಕೂಡ ಇನ್ನೂ ಮಿಕ್ಕಿ ಉಳಿಯುತ್ತದೆಯಂತೆ. ಅಷ್ಟೊಂದು ಪ್ರಮಾಣದ ಪ್ಲಾಸ್ಟಿಕ್‌ಅನ್ನು ಬಳಸಿದ್ದೇವೆ ನಾವು.

ವಿಜ್ಞಾನಿಗಳು ಮಾನವನ ದೇಹವನ್ನೇನೋ ಪರೀಕ್ಷಿಸಿ ಪ್ಲಾಸ್ಟಿಕ್‌ನ ಸೂಕ್ಷ್ಮಾತಿ ಸೂಕ್ಷ್ಮ ಕಣಗಳು ಇರುವುದನ್ನು ದೃಢಪಡಿಸಿದರು. ನಮ್ಮ ಸಹಜೀವಿಗಳೂ ಹೀಗೆಯೇ ನಮ್ಮಂತೆಯೇ ನರಳಾಡುತ್ತಿರಬಹುದಲ್ಲವೆ? ಅದರಲ್ಲೂ ಮುಖ್ಯವಾಗಿ ಪ್ಲಾಂಕ್ಟಾನ್‌ನಂತಹ ಜೀವಿಗಳು ಸಾವಿಗೀಡಾಗುತ್ತಿರುವುದು ನಮ್ಮೆಲ್ಲರ ದುರಂತವೇ ಸರಿ. ಏಕೆಂದರೆ, ಈ ನಮ್ಮ ಭೂಮಿಯ ಮೇಲೆ ಆಮ್ಲಜನಕದ ಒಟ್ಟು ಉತ್ಪಾದನೆಯಲ್ಲಿ ಪ್ಲಾಂಕ್ಟಾನ್‌ನಂತಹ ಜೀವಿಗಳ ಪಾಲು ಸುಮಾರು ಶೇ.40ರಷ್ಟಿದೆ ಎಂದು ಅಂದಾಜಿಸಲಾಗಿದೆ. ಹಾಗಾಗಿ ನಾವು ಸಮುದ್ರವನ್ನು ಅಷ್ಟೇ ಜೋಪಾನವಾಗಿ ಕಾಪಾಡಿಕೊಳ್ಳಬೇಕಾಗಿದೆ.

ಇದು ಸಾಧ್ಯವಾಗಬೇಕಾದರೆ ಪುನರ್ಬಳಕೆ ಮಾಡಬಹುದಾದ ಪ್ಲಾಸ್ಟಿಕ್‌ಅನ್ನು ಮಾತ್ರವೇ ಬಳಸಬೇಕು. ಪ್ಲಾಸ್ಟಿಕ್‌ನಲ್ಲಿ ಪ್ಯಾಕ್ ಮಾಡಿರುವ ಆಹಾರ ಪದಾರ್ಥಗಳನ್ನು ಬಳಸಲೇಬಾರದು ಎನ್ನುವಂತಹ ಹತ್ತು ಹಲವು ಅಂಶಗಳಿಗೆ ಕಡಿವಾಣ ಹಾಕುವುದು ನಮ್ಮದೇ ಕೈಯಲ್ಲಿದೆ.

ಹಾಗೆಯೇ ಸರ್ಕಾರವು ಪ್ಲಾಸ್ಟಿಕ್ ಉತ್ಪಾದನೆಯನ್ನು ಹಾಗೂ ಬಳಕೆಯನ್ನು ನಿಯಂತ್ರಿಸದೇ ಹೋದರೆ ನಮಗೆ ಉಳಿಗಾಲವಿಲ್ಲ. ಇ.ಪಿ.ಆರ್. (Extended producer responsibilty  ) ಕಾನೂನಿನ ಪ್ರಕಾರ ಪ್ಲಾಸ್ಟಿಕ್ ಉತ್ಪಾದಕರು ಬಳಕೆಯಾದ ಪ್ಲಾಸ್ಟಿಕ್‌ಅನ್ನು ಸಂಗ್ರಹಿಸಿ ಮರುಬಳಕೆ ಮಾಡಬೇಕು. ಆದರೆ ಇದನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಂತೆ ಕಾಣುವುದೇ ಇಲ್ಲ. ಬದಲಿಗೆ ಶೇ.90 ಪುನರ್ ಬಳಕೆ ಮಾಡಬಹುದಾದ ಪಾಲಿ ಎಥಿಲೀನ್ ಟೆರೆಫ್ತಾಲೇಟ್ (ಪಿ.ಇ.ಟಿ.) ಪ್ಲಾಸ್ಟಿಕ್‌ನ ಕೊರತೆ ಇದೆ,

ಹಾಗಾಗಿ ಪುನರ್ ಬಳಕೆ ಮಾಡುವ ಕಂಪೆನಿಗಳಿಗೆ ಬೇಕಾದಷ್ಟು ತ್ಯಾಜ್ಯ ಸಿಗುತ್ತಿಲ್ಲವಾದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ ಎನ್ನುವ ವಾದವನ್ನು ಮುಂದಿಡುತ್ತಿದ್ದಾರೆ. ಭಾರತದಲ್ಲಿಯೇ ಸರಿಸುಮಾರು 14 ಲಕ್ಷ ಟನ್ ಪೆಟ್ (ಪಿ.ಇ.ಟಿ.) ಪ್ಲಾಸ್ಟಿಕ್ ಬಳಸುತ್ತಿದ್ದು, ಅದರಲ್ಲಿ ಕೇವಲ 4 ಲಕ್ಷ ಟನ್‌ಗಳಷ್ಟನ್ನು ಮಾತ್ರ ಪುನರ್ ಬಳಕೆ ಮಾಡಲಾಗುತ್ತಿದೆ. ಹೀಗಿದ್ದರೂ ಕೊರತೆ ಎದುರಾಗಲು ಹೇಗೆ ಸಾಧ್ಯ?

 ಸಕಲ ಜೀವರಾಶಿಗಳ ಉಳಿವಿಗಾಗಿ ಈಗಲಾದರೂ ನಾವೆಲ್ಲರೂ ಎಚ್ಚೆತ್ತುಕೊಳ್ಳಲೇಬೇಕಾಗಿದೆ. ಸರ್ಕಾರವೂ ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೊಳಿಸುವುದು ಅವಶ್ಯವಾಗಿದೆ. ಹಾಗಾಗಿ ಪ್ಲಾಸ್ಟಿಕ್‌ಗಳಿಗೆ ಪರ್ಯಾಯ ಮಾರ್ಗಗಳನ್ನು ಸಂಶೋಽಸುವವರೆಗೆ ಪ್ರೋತ್ಸಾಹವನ್ನು ನೀಡಬೇಕಾಗಿದೆ.ಹಾಗೂ ಅವಶ್ಯವಿದ್ದರೆ ಧನ ಸಹಾಯವನ್ನೂ ಮಾಡಬೇಕಾಗಿದೆ.

andolanait

Recent Posts

ಕುರಟ್ಟಿ ಹೊಸೂರಲ್ಲಿ ಪ್ರಕೃತಿ ವಿಸ್ಮಯ: ಕಹಿ ಬೇವಿನ ಮರದಲ್ಲಿ ಸಿಹಿ ದ್ರಾವಣ ಕಂಡು ಜನರು ಅಚ್ಚರಿ

ಮಹಾದೇಶ್‌ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು  ಹನೂರು: ಕಡು ಕಹಿ ಎಲೆ, ಕಾಂಡ, ಕಾಯಿ ನೀಡುವ ಬೇವಿನ ಮರದಲ್ಲಿ…

29 mins ago

ಕನ್ನಡದಲ್ಲಿ ರೈಲ್ವೆ ಪರೀಕ್ಷೆ ನಡೆಸದಿದ್ದರೆ ಉಗ್ರ ಹೋರಾಟ: ನಾರಾಯಣಗೌಡ ಎಚ್ಚರಿಕೆ

ಬೆಂಗಳೂರು: ರೈಲ್ವೆಯ ಯಾವುದೇ ಪರೀಕ್ಷೆಯಿರಲಿ, ಅದನ್ನು ಕನ್ನಡದಲ್ಲೇ ಕಡ್ಡಾಯವಾಗಿ ನಡೆಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಕರ್ನಾಟಕ ರಕ್ಷಣಾ…

40 mins ago

ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ: ಪರೀಕ್ಷಾ ಕೇಂದ್ರಗಳಿಗೆ ಸಿಇಓ ಭೇಟಿ

ಮಂಡ್ಯ: ಜನವರಿ.27ರಿಂದ ಪ್ರಾರಂಭವಾಗಿರುವ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಹಿನ್ನೆಲೆಯಲ್ಲಿ ಇಂದು ತಾಲ್ಲೂಕಿನ ಸೂನಗನಹಳ್ಳಿ ಮತ್ತು ತಗ್ಗಹಳ್ಳಿ ಗ್ರಾಮದ ಸರ್ಕಾರಿ…

55 mins ago

ಲೋಕಸಭೆಯಲ್ಲಿ ಸ್ಪೀಕರ್‌ ಮೇಲೆ ಪೇಪರ್‌ ತೂರಿದ್ದ 8 ಮಂದಿ ಸಂಸದರು ಅಮಾನತು

ನವದೆಹಲಿ: ಸಂಸತ್ತಿನ ಬಜೆಟ್‌ ಅಧಿವೇಶನದ ವೇಳೆ ಲೋಕಸಭೆಯಲ್ಲಿ ಉಂಟಾದ ಭಾರೀ ಗದ್ದಲ ಮತ್ತು ಸ್ಪೀಕರ್‌ ಪೀಠದ ಕಡೆಗೆ ಪೇಪರ್‌ ಹರಿದು…

1 hour ago

ನರೇಗಾ ಮರುಸ್ಥಾಪನೆಗೆ ಸಿಎಂ ಸಿದ್ದರಾಮಯ್ಯ ಪಟ್ಟು: ವಿಧಾನಸಭೆಯಲ್ಲಿ ಕೇಂದ್ರದ ವಿರುದ್ಧ ನಿರ್ಣಯ ಮಂಡನೆ

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಉದ್ಯೋಗ ಯೋಜನೆಯನ್ನು ವಿರೋಧಿಸಿ ಹಾಗೂ ಹಳೆಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ…

1 hour ago

ಹನೂರು| ಆಂದೋಲನ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು: ಗ್ರಾಮಗಳಿಗೆ ಭೇಟಿ

ಮಹಾದೇಶ್‌ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರ್ಟಳ್ಳಿ ಹಾಗೂ ಸುಳ್ವಾಡಿ…

2 hours ago