ಅಂಕಣಗಳು

ಪ್ರತಿದಿನ ಸಾವಿರಾರು ಜನರ ಹಸಿವು ತಣಿಸುವ ‘ನೋ ಫುಡ್ ವೇಸ್ಟ್ ’

ಪಂಜು ಗಂಗೊಳ್ಳಿ 

ಸಮಾಜಕ್ಕೆ ಮಾದರಿಯಾದ ಇಂಜಿನಿಯರಿಂಗ್ ಪದವೀಧರರ ಸೇವಾಕಾರ್ಯ

ಭಾರತ ಹಲವು ವೈರುಧ್ಯಗಳ ತವರು ಮನೆ. ಆಹಾರ ಲಭ್ಯತೆ ಅಂತಹ ವೈರುಧ್ಯಗಳಲ್ಲೊಂದು. ಇಲ್ಲಿ ಒಂದೆಡೆ ಕೆಲವರಿಗೆ ಒಂದು ಹೊತ್ತಿನ ಊಟಕ್ಕೂ ಗತಿಯಿರುವುದಿಲ್ಲ. ಆದರೆ, ಇನ್ನೊಂದೆಡೆ ಹಲವರು ಉಂಡು ಮಿಕ್ಕಿದ ಆಹಾರವನ್ನು ಕಸದ ತೊಟ್ಟಿಗೆ ಹಾಕುತ್ತಾರೆ. ಉದಾಹರಣೆಗೆ, ಒಂದು ಮದುವೆ ಊಟದಲ್ಲಿ ಹತ್ತಾರು ಬಗೆಯ ಖಾದ್ಯಗಳಿರುತ್ತವೆ. ಮದುವೆಗೆ ಬಂದವರೆಲ್ಲರೂ ತಮಗೆ ಬಡಿಸಿದ ಎಲ್ಲವನ್ನೂ ತಿನ್ನುವುದಿಲ್ಲ. ಹಾಗಾಗಿ, ಸಾಕಷ್ಟು ಆಹಾರ ಪದಾರ್ಥಗಳು ಉಳಿದಿರುತ್ತವೆ. ಅವೆಲ್ಲವೂ ಕಸದ ಬುಟ್ಟಿಯ ಪಾಲಾಗುತ್ತವೆ. ವಿಶ್ವಸಂಸ್ಥೆಯ ಒಂದು ವರದಿಯ ಪ್ರಕಾರ ಪ್ರತಿ ವರ್ಷ ಭಾರತದ ಮನೆಗಳಿಂದ ೭೮ ಮಿಲಿಯನ್ ಟನ್‌ಗಳಷ್ಟು ಆಹಾರ ಪದಾರ್ಥಗಳು ಬಳಸಲ್ಪಡದೆ ವ್ಯರ್ಥವಾಗಿ ಕಸದ ತೊಟ್ಟಿಗೆ ಸೇರುತ್ತವೆ.

ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ಆರ್ಥಿಕತೆ ಎಂದು ಹೇಳಿಕೊಳ್ಳುವ ಈ ದೇಶದಲ್ಲಿ ಕೊಳೆಗೇರಿಗಳಲ್ಲಿರುವ ಆರು ವರ್ಷಕ್ಕೆ ಕೆಳಗಿನ ಮಕ್ಕಳಲ್ಲಿ ೫೦% ಮಕ್ಕಳು ಪೋಷಕಾಂಶದ ಕೊರತೆಯಿಂದ ಬಳಲುತ್ತವೆ ಎಂಬುದು ಆತಂಕದ ವಿಚಾರ. ೨೦೨೪ರ ‘ಜಾಗತಿಕ ಹಸಿವು ಸೂಚ್ಯಂಕ’ದಲ್ಲಿ ಭಾರತ ೧೨೭ ದೇಶಗಳಲ್ಲಿ ೧೦೫ನೇ ಸ್ಥಾನದಲ್ಲಿದೆ ಎಂದರೆ ನಮ್ಮಲ್ಲಿನ ಆಹಾರದ ಕೊರತೆಯನ್ನು ಅಂದಾಜಿಸಬಹುದು. ಇನ್ನೂ ಹಸಿವೆಯ ಬಾಯಿಂದ ಹೊರಬಾರದ ಒಂದು ಬಡ ದೇಶದಲ್ಲಿ ಅಗಾಧ ಪ್ರಮಾಣದಲ್ಲಿ ಆಹಾರ ಪದಾರ್ಥ ವ್ಯರ್ಥವಾಗುವುದು ಎಂತಹ ದುರಂತವೆಂಬುದು ಮೇಲು ನೋಟಕ್ಕೇ ಅರಿವಾಗುವ ಸಂಗತಿ. ಆಹಾರ ಪದಾರ್ಥ ಹೀಗೆ ವ್ಯರ್ಥವಾಗುವುದನ್ನು ತಡೆಗಟ್ಟಲು ಎಷ್ಟೋ ಜನ ಬಯಸಿದರೂ ಏನೂ ಮಾಡಲಾಗದೆ ಅಸಹಾಯಕತೆಯಿಂದ ಕೈ ಕೈ ಹಿಸುಕಿಕೊಳ್ಳುತ್ತಾರೆ. ಆದರೆ ಕೆಲವರು ಪಟ್ಟು ಹಿಡಿದು ಏನಾದರೊಂದು ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಕೊಯಂಬತ್ತೂರಿನ ಪದ್ಮನಾಭನ್ ಗೋಪಾಲನ್, ದಿನೇಶ್ ಮಾಣಿಕ್ಕಮ್ ಮತ್ತು ಸುಧಾಕರ್ ಮಾರಿಮುತ್ತು ಎಂಬ ಮೂವರು ಪ್ರೊಡಕ್ಷನ್ ಇಂಜಿನಿಯರಿಂಗ್ ಪದವೀಧರರು ಅಂತಹ ಮೂವರು.

೨೦೧೪ರ ಅಕ್ಟೋಬರ್ ತಿಂಗಳಲ್ಲಿ ಈ ಮೂವರು ಜೊತೆಯಾಗಿ ಕೊಯಂಬತ್ತೂರಿನಲ್ಲಿ ‘ನೋ ಫುಡ್ ವೇಸ್ಟ್’ ಎಂಬ ಒಂದು ಸಂಸ್ಥೆಯನ್ನು ಹುಟ್ಟು ಹಾಕಿದರು. ಹೆಸರೇ ಸೂಚಿಸುವಂತೆ ಇದು ಹೀಗೆ ವ್ಯರ್ಥವಾಗುವ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಅದನ್ನು ಅಗತ್ಯವಿರುವವರಿಗೆ ನೀಡುತ್ತದೆ. ಪ್ರಾರಂಭದಲ್ಲಿ ಈ ಮೂವರು ಎರಡು ಶಾಪಿಂಗ್ ಬ್ಯಾಗ್ ಮತ್ತು ಒಬ್ಬ ಸ್ವಯಂ ಸೇವಕನನ್ನು ಜೊತೆಯಲ್ಲಿರಿಸಿಕೊಂಡು ಕೊಯಂಬತ್ತೂರಿನಲ್ಲಿ ಎಲ್ಲೆಲ್ಲಿ ಹೆಚ್ಚುವರಿ ಆಹಾರ ಉಳಿದಿದೆ ಎಂದು ಪತ್ತೆ ಹಚ್ಚಿ, ಅದನ್ನು ಸಂಗ್ರಹಿಸಿ, ಬಸ್ಸು, ಆಟೋಗಳಲ್ಲಿ ಸಂಚರಿಸಿ, ನಗರದ ರಸ್ತೆಗಳಲ್ಲಿ ವಾಸಿಸುವ ನಿರ್ಗತಿಕರಿಗೆ ನೀಡಿದರು. ಈಗ ‘ನೋ ಫುಡ್ ವೇಸ್ಟ್’ ಎಷ್ಟು ದೊಡ್ಡದಾಗಿ ಬೆಳೆದಿದೆಯೆಂದರೆ ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೂ ಅದು ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿದೆ.

ಹೆಚ್ಚುವರಿ ಆಹಾರವನ್ನು ಸಂಗ್ರಹಿಸಿ, ವಿತರಿಸುವ ಕೆಲಸ ಮೇಲು ನೋಟಕ್ಕೆ ಕಾಣಿಸುವಷ್ಟು ಸುಲಭ ಹಾಗೂ ಸರಳವಾದುದಲ್ಲ. ಮೊದಲಿಗೆ ಎಲ್ಲೆಲ್ಲ ಹೆಚ್ಚುವರಿ ಆಹಾರ ಲಭ್ಯವಿದೆ ಎಂಬ ಮಾಹಿತಿಯನ್ನು ಪಡೆಯಬೇಕು. ನಂತರ, ತಕ್ಷಣವೇ ವಾಹನಗಳನ್ನು ಕಳುಹಿಸಿ ಸಂಗ್ರಹಿಸಿ ತರಬೇಕು. ತಂದ ನಂತರ ಅದನ್ನು ಪರೀಕ್ಷಿಸಿ ತಿನ್ನಲು ಯೋಗ್ಯವೇ ಎಂಬುದನ್ನು ಖಾತರಿ ಮಾಡಿಕೊಳ್ಳಬೇಕು. ಒಂದೊಂದು ಬಗೆಯ ಆಹಾರಕ್ಕೆ ಒಂದೊಂದು ರೀತಿಯ ‘ಶೆಲ್ಛ್ ಲೈಫ್’ ಇರುತ್ತದೆ. ಆದಷ್ಟು ಮಟ್ಟಿಗೆ ಆಹಾರ ಪದಾರ್ಥಕ್ಕೆ ಮಾನವ ಕೈಗಳು ತಾಕದಂತೆ ನೋಡಿಕೊಳ್ಳಬೇಕಾಗುತ್ತದೆ. ಏಕೆಂದರೆ, ತುಸುವೂ ಅಜಾಗರೂಕತೆಯಿಂದ ಹಳಸಿದ ಅಥವಾ ವಿಷವಾದ ಆಹಾರ ಪದಾರ್ಥ ಸೇವಿಸಿ ಯಾರಿಗಾದರೂ ಅಲರ್ಜಿಯಾದರೆ ಅಥವಾ ಯಾರಾದರೂ ಅಸ್ವಸ್ಥರಾದರೆ ಪೊಲೀಸ್ ಕೇಸುಗಳನ್ನು ಎದುರಿಸಬೇಕಾಗುತ್ತದೆ. ಸಂಗ್ರಹಿಸಿದ ಆಹಾರವನ್ನು ನಂತರ ಸೂಕ್ತವಾಗಿ ಪ್ಯಾಕ್ ಮಾಡಿ, ಎಲ್ಲೆಲ್ಲಿ ಆಹಾರದ ಅಗತ್ಯ ಇದೆಯೆಂಬುದನ್ನು ತಿಳಿದು ಆ ಜಾಗಗಳಿಗೆ ಕಳುಹಿಸಿಕೊಡಬೇಕು. ಇಷ್ಟೆಲ್ಲ ಮಾಡಲು ಒಂದು ಕಾಲ್ ಸೆಂಟರ್, ವಾಹನ ವ್ಯವಸ್ಥೆ, ಸ್ವಯಂಸೇವಕರ ಪಡೆ ಹಾಗೂ ಸಂಗ್ರಹಿಸಿ ತಂದ ಆಹಾರವನ್ನು ಇಡಲು ಸ್ವಚ್ಛ ಹಾಗೂ ಸುರಕ್ಷಿತವಾದ ಸ್ಥಳದ ವ್ಯವಸ್ಥೆ ಬೇಕಾಗುತ್ತದೆ. ನೋ ಫುಡ್ ವೇಸ್ಟ್ ಇವೆಲ್ಲವನ್ನು ಹೊಂದಿದೆ.

ತಮಿಳುನಾಡಿನ ಮಧುರೈ ‘ನೋ ಫುಡ್ ವೇಸ್ಟ್’ ಕಾರ್ಯ ನಿರ್ವಹಿಸುವ ಪ್ರಧಾನ ನಗರ. ಪ್ರತೀ ದಿನ ಐಟಿ ಕಂಪೆನಿ, ಐಐಟಿ ಮದ್ರಾಸ್, ಕಾರ್ಪೋರೇಟ್ ಕಾರ್ಯಕ್ರಮ, ಮದುವೆ ಹಾಗೂ ಮ್ಯಾರಥಾನ್ ಮೊದಲಾದೆಡೆಗಳಿಂದ ಬಳಸಿ ಉಳಿದ ಹೆಚ್ಚುವರಿ ಆಹಾರವನ್ನು ಸಂಗ್ರಹಿಸಿ, ಸಾವಿರದಿಂದ ಒಂದೂವರೆ ಸಾವಿರ ಜನರಿಗೆ ಒದಗಿಸುತ್ತದೆ. ಅಂದರೆ, ನೋ ಫುಡ್ ವೇಸ್ಟ್ ಒಂದು ತಿಂಗಳಿಗೆ ಸುಮಾರು ನಲವತ್ತು ಸಾವಿರ ಹಸಿದ ಹೊಟ್ಟೆಗಳನ್ನು ತಣಿಸುತ್ತದೆ. ಸ್ವಯಂಸೇವಕರು ‘ನೋ ಫುಡ್ ವೇಸ್ಟ್’ನ ಜೀವನಾಡಿಗಳು ‘ನೋ ಫುಡ್ ವೇಸ್ಟ್’ ಇಂತಹ ಮೂವತ್ತು ಪೂರ್ಣಾವಧಿ ಸ್ವಯಂಸೇವಕರನ್ನು ಹೊಂದಿರುವುದಲ್ಲದೆ, ಸರ್ಕಾರೇತರ ಸಂಸ್ಥೆ, ಶಾಲೆ, ಕಾಲೇಜುಗಳಿಂದ ಅರೆ ಸ್ವಯಂಸೇವಕರ ಸಹಾಯವನ್ನು ಪಡೆಯುತ್ತದೆ.

‘ನೋ ಫುಡ್ ವೇಸ್ಟ್’ ಹೀಗೆ ಹೆಚ್ಚುವರಿ ಆಹಾರ ಸಂಗ್ರಹಿಸಿ, ವಿತರಿಸುವುದಕ್ಕಷ್ಟೇ ತನ್ನನ್ನು ಸೀಮಿತಗೊಳಿಸಿಕೊಂಡಿಲ್ಲ. ಯಾವುದಾದರೂ ಆಕಸ್ಮಿಕ ಅಥವಾ ನೈಸರ್ಗಿಕ ಪ್ರಕೋಪಗಳು ತಲೆದೋರಿದ ಸಮಯದಲ್ಲೂ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಅಂತಹ ಸಮಯದಲ್ಲಿ ಕೇವಲ ಸಂಗ್ರಹಿಸಿದ ಆಹಾರ ಸಾಕಾಗುವುದಿಲ್ಲ. ಅಂತಹ ಉದ್ದೇಶಕ್ಕೆಂದೇ ‘ನೋ ಫುಡ್ ವೇಸ್ಟ್’ ಚೆನ್ನೆ ಯ ಪಳ್ಳಿಕರಾಣೈ ಎಂಬಲ್ಲಿ ತನ್ನದೇ ಆದ ಒಂದು ಅಡುಗೆ ಮನೆಯನ್ನೂ ಹೊಂದಿದೆ. ೨೦೨೧ರಂದು ನಿರ್ಮಿಸಲ್ಪಟ್ಟ ಈ ಅಡುಗೆ ಮನೆ ಈಗ ‘ನೋ ಫುಡ್ ವೇಸ್ಟ್’ನ ಆಹಾರ ವಿತರಣ ಕಾರ್ಯದಲ್ಲಿ ಪ್ರಧಾನ ಪಾತ್ರವನ್ನು ನಿಭಾಯಿಸುತ್ತಿದೆ. ಸಂಗ್ರಹಿಸಿದ ಆಹಾರ ಸಾಕಾಗದಿದ್ದಾಗ ಈ ಅಡುಗೆ ಮನೆಯಲ್ಲಿ ಹೆಚ್ಚುವರಿ ಆಹಾರವನ್ನು ತಯಾರಿಸಲಾಗುತ್ತದೆ. ಸ್ವಯಂಸೇವಕರು ಸಂಗ್ರಹಿಸಿದ ಆಹಾರದ ಜೊತೆ ಈ ಅಡುಗೆ ಮನೆಯಲ್ಲಿ ಪ್ರತಿದಿನ ಸುಮಾರು ೭೦೦-೮೦೦ ಪ್ಲೇಟ್‌ನಷ್ಟು ಆಹಾರವನ್ನು ತಯಾರಿಸುತ್ತಾರೆ. ಅದಕ್ಕೆ ಬೇಕಾಗುವ ದಿನಸಿ ವಸ್ತುಗಳನ್ನು ದಾನಿಗಳಿಂದ ಪಡೆಯುತ್ತದೆ. ಹೀಗೆ ದಾನಿಗಳಿಂದ ಬಂದ ದಿನಸಿ ಸಾಕಾಗದಿದ್ದರೆ ತನ್ನದೇ ಖರ್ಚಿನಲ್ಲಿ ಖರೀದಿಸಿ, ಆಹಾರ ವಿತರಣೆಯಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ.

‘ನೋ ಫುಡ್ ವೇಸ್ಟ್’ ಹೆಚ್ಚುವರಿ ಆಹಾರದ ವಿತರಣೆಯ ಜೊತೆ ಶಾಲೆ, ಕಾಲೇಜುಗಳಿಗೆ ಹೋಗಿ ಆಹಾರ ವ್ಯರ್ಥಗೊಳಿಸುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಮಾಡುತ್ತದೆ. ಸಾಧ್ಯವಾದಾಗಲೆಲ್ಲ ವಿದ್ಯಾರ್ಥಿಗಳನ್ನು ತನ್ನ ಆಹಾರ ವಿತರಣೆಯ ಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸುವಂತೆ ಮಾಡಿ, ಸಮಾಜದಲ್ಲಿ ಆಹಾರದ ತಾರತಮ್ಯದ ಬಗ್ಗೆ ಸೂಕ್ಷ ಗ್ರಾಹಿಗಳಾಗುವಂತೆ ಮಾಡುತ್ತದೆ. ಆಹಾರವನ್ನು ಪ್ಲಾಸ್ಟಿಕ್ ಪ್ಯಾಕುಗಳಲ್ಲಿ ಕೊಡದೆ, ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಿದ ಪ್ಯಾಕುಗಳಲ್ಲಿ ಹಂಚಿ, ಪ್ಲಾಸ್ಟಿಕ್‌ನ ಬಳಕೆಯ ಬಗ್ಗೆಯೂ ಜನರಲ್ಲಿ ಜಾಗೃತಿ ಹುಟ್ಟು ಹಾಕುವ ಕೆಲಸವನ್ನೂ ಮಾಡುತ್ತಿದೆ.

” ನೋ ಫುಡ್ ವೇಸ್ಟ್’  ಮೂವತ್ತು ಪೂರ್ಣಾವಧಿ ಸ್ವಯಂಸೇವಕರನ್ನು ಹೊಂದಿರುವುದಲ್ಲದೆ, ಸರ್ಕಾರೇತರ ಸಂಸ್ಥೆ, ಶಾಲೆ, ಕಾಲೇಜುಗಳಿಂದ ಅರೆ ಸ್ವಯಂಸೇವಕರ ಸಹಾಯವನ್ನು ಪಡೆಯುತ್ತದೆ.”

ಆಂದೋಲನ ಡೆಸ್ಕ್

Recent Posts

911 ಅಕ್ರಮ ವಿದೇಶಿ ನುಸುಳುಕೋರರು ಪತ್ತೆ : ಗೃಹ ಸಚಿವ ಖರ್ಗೆ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಿದ್ದು, ನಗರದಲ್ಲಿ 911 ಅಕ್ರಮ ವಿದೇಶ ನುಸುಳುಕೋರರು ಇರೋದಾಗಿ ಖುದ್ದು…

8 hours ago

ಕಾವೇರಿ ವನ್ಯಧಾಮದಲ್ಲಿ 8 ಕಳ್ಳಬೇಟೆ ಶಿಬಿರ ಧ್ವಂಸ : ಎಫ್‌ಐಆರ್ ದಾಖಲು, ತನಿಖೆ ಚುರುಕು

ಹನೂರು : ಕಾವೇರಿ ವನ್ಯಜೀವಿ ವಿಭಾಗದ ಹನೂರು ವಲಯ ವ್ಯಾಪ್ತಿಯಲ್ಲಿ ಆಗಸ್ಟ್ 15ರಿಂದ 19ರವರೆಗೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಇಲಾಖಾ…

9 hours ago

1984 ಸಿಖ್‌ ವಿರೋಧಿ ದಂಗೆ ಪ್ರಕರಣ; ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಸಜ್ಜನ್‌ ಕುಮಾರ್‌ ನಿಧನ

ಹೊಸದಿಲ್ಲಿ : ಸಾವಿರಾರು ಜನರ ಸಾವಿಗೆ ಕಾರಣವಾದ 1984ರ ಸಿಖ್ ವಿರೋಧಿ ಗಲಭೆಯ ಸಂದರ್ಭದಲ್ಲಿ ಐವರು ವ್ಯಕ್ತಿಗಳ ಹತ್ಯೆ ಪ್ರಕರಣದಲ್ಲಿ…

10 hours ago

ನಾರಾಯಣಸ್ವಾಮಿಗೆ ಕಮಾಂಡೆಂಟ್‌ ಬೆಳ್ಳಿ ಪದಕ

ಮೈಸೂರು: ನಗರದ ಸಂತ ಮರಿಯಾ ದಿ ಮಥಿಯಾಸ್ ಶಾಲೆಯ ಶಿಕ್ಷಕ ನಾರಾಯಣಸ್ವಾಮಿ ಅವರು ಮೈಸೂರು ೩ ಕರ್ನಾಟಕ ರಾಷ್ಟ್ರೀಯ ಕೆಡೆಟ್…

11 hours ago

ಹನೂರು ಎನ್‌ಕೌಂಟರ್‌ ಬೆನ್ನಲ್ಲೇ ಕಳ್ಳಬೇಟೆ ಕಡಿವಾಣಕ್ಕೆ ಸರ್ಕಾರದ ಚಿಂತನೆ

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದ ಎನ್‌ಕೌಂಟರ್‌ ಪ್ರಕರಣದ ಬೆನ್ನಲ್ಲೇ ಆ ಭಾಗದಲ್ಲಿ ನಡೆಯುತ್ತಿರುವ ಕಳ್ಳಬೇಟೆ ಪ್ರಕರಣಗಳನ್ನು ರಾಜ್ಯ…

14 hours ago

ಟೋಲ್ ಬಳಿ ಸೈನ್ ಬೋರ್ಡ್‌ಗೆ ಖಾಸಗಿ ಬಸ್ ಡಿಕ್ಕಿ; ಇಬ್ಬರು ದುರ್ಮರಣ, 20ಕ್ಕೂ ಹೆಚ್ಚು ಜನರಿಗೆ ಗಾಯ

ಮಂಡ್ಯ: ಟೋಲ್‌ ಬಳಿಯ ಸೈನ್ ಬೋರ್ಡ್‌ಗೆ ಅತಿ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ…

15 hours ago