ಪರಿಸರ ಉಳಿಯಬೇಕಾದರೆ ಮಕ್ಕಳ ಮನಸ್ಸಿನಲ್ಲಿ ಪ್ರಕೃತಿಯ ಬೀಜ ಬಿತ್ತಬೇಕು
• ಶ್ರೇಯಸ್ ದೇವನೂರು
ವಿಶ್ವ ಪರಿಸರ ದಿನವನ್ನು ಪ್ರತಿವರ್ಷ ಆಚರಿಸುತ್ತೇವೆ. ಮರ ನೆಡುತ್ತೇವೆ. ಭಾಷಣ ಮಾಡುತ್ತೇವೆ. ಪರಿಸರ ಸಂರಕ್ಷಣೆಯ ಬಗ್ಗೆ ಮಾತನಾಡುತ್ತೇವೆ. ಆದರೆ ಒಂದು ಮಹತ್ವದ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕು – ಐವತ್ತು ವರ್ಷಗಳ ನಂತರ ಪರಿಸರವನ್ನು ಯಾರು ಕಾಪಾಡುತ್ತಾರೆ?
ಉತ್ತರ ಸ್ಪಷ್ಟವಾಗಿದೆ – ಇಂದಿನ ಮಕ್ಕಳು.
ಇಂದು ಪರಿಸರದ ಮೇಲೆ ಹೆಚ್ಚುತ್ತಿರುವ ಒತ್ತಡ, ಅಸಹಜ ಉಷ್ಣಾಂಶ, ಅನಿರೀಕ್ಷಿತ ಮಳೆ, ನೀರಿನ ಕೊರತೆ, ಕಾಡು ನಾಶ ಮತ್ತು ವನ್ಯಜೀವಿಗಳ ಸಂಕಷ್ಟದ ನಡುವೆ ನಾವು ಬದುಕುತ್ತಿದ್ದೇವೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ
ಬೇಕಾದರೆ ಹೊಸ ಕಾನೂನುಗಳು ಮಾತ್ರ ಸಾಕಾಗುವುದಿಲ್ಲ. ಪ್ರಕೃತಿಯನ್ನು ಪ್ರೀತಿಸುವ ಹೊಸ ತಲೆಮಾರನ್ನು ನಿರ್ಮಿಸಬೇಕಾಗಿದೆ.
ಇಂದು ಹೆಚ್ಚಿನ ಮಕ್ಕಳು ಮೊಬೈಲ್, ಟ್ಯಾಬ್ಲೆಟ್ ಮತ್ತು ಟೆಲಿವಿಷನ್ ಜಗತ್ತಿನಲ್ಲಿ ಬೆಳೆಯುತ್ತಿದ್ದಾರೆ. ಅವರಿಗೆ ಆನೆಯ ಹೆಜ್ಜೆಗುರುತು ಹೇಗಿರುತ್ತದೆ ಎಂಬುದು ಗೊತ್ತಿಲ್ಲ. ಪಕ್ಷಿಗಳ ಧ್ವನಿಯನ್ನು ಗುರುತಿಸಲು ಬರುವುದಿಲ್ಲ. ಒಂದು ಮರದ ಕೆಳಗೆ ಕುಳಿತು ಅದರ ಮಹತ್ವವನ್ನು ಅರಿಯುವ ಅವಕಾಶವೇ ಸಿಗುತ್ತಿಲ್ಲ. ಪ್ರಕೃತಿಯನ್ನು ಪುಸ್ತಕದ ಚಿತ್ರಗಳಲ್ಲಿ ಮಾತ್ರ ನೋಡುವ ಪರಿಸ್ಥಿತಿ ಬಂದಿದೆ.
ಆದ್ದರಿಂದ ಪರಿಸರ ಶಿಕ್ಷಣವನ್ನು ತರಗತಿಯ ನಾಲ್ಕು ಗೋಡೆಗಳೊಳಗೆ ಸೀಮಿತಗೊಳಿಸದೆ ನೇರವಾಗಿ ಪ್ರಕೃತಿಯ ಮಡಿಲಿಗೆ ಕೊಂಡೊಯ್ಯಬೇಕು. ಮಕ್ಕಳನ್ನು ವರ್ಷಕ್ಕೊಮ್ಮೆ ಮನರಂಜನಾ ಉದ್ಯಾನಗಳು, ಮಾಲ್ಗಳು ಅಥವಾ ದೂರದ ನಗರಗಳಿಗೆ ಕರೆದುಕೊಂಡು ಹೋಗುವುದಕ್ಕಿಂತ ಕಾಡುಗಳಿಗೆ, ಪಕ್ಷಿಧಾಮಗಳಿಗೆ, ಪ್ರಕೃತಿ ಶಿಬಿರಗಳಿಗೆ, ಕೃಷಿ ಕ್ಷೇತ್ರಗಳಿಗೆ ಕರೆದುಕೊಂಡು ಹೋಗುವುದು ಹೆಚ್ಚು ಪರಿಣಾಮಕಾರಿ.
ಒಂದು ದಿನದ ಕಾಡಿನ ಸಫಾರಿ ಅನೇಕ ಪಠ್ಯಪುಸ್ತಕಗಳಿಗಿಂತ ಹೆಚ್ಚು ಅರಿವು ಮೂಡಿಸಬಲ್ಲದು.
ಮಕ್ಕಳು ಕಾಡಿನಲ್ಲಿ ಆನೆಯನ್ನು ನೋಡುವಾಗ, ಜಿಂಕೆಗಳ ಹಿಂಡನ್ನು ಗಮನಿಸುವಾಗ, ನವಿಲಿನ ನೃತ್ಯವನ್ನು ಕಂಡಾಗ, ಮರಗಳ ಮಧ್ಯೆ ಬೀಸುವ ಗಾಳಿಯ ಸದ್ದು ಕೇಳುವಾಗ ಅವರ ಮನಸ್ಸಿನಲ್ಲಿ ಪ್ರಕೃತಿಯೊಂದಿಗೆ ಒಂದು ಭಾವನಾತ್ಮಕ ಸಂಬಂಧ ಬೆಳೆದು ಬರುತ್ತದೆ. ಒಮ್ಮೆ ಆ ಸಂಬಂಧ ಮೂಡಿದರೆ ಅವರುಪರಿಸರವನ್ನು ನಾಶಪಡಿಸುವವರಾಗುವುದಿಲ್ಲ; ರಕ್ಷಿಸುವವರಾಗುತ್ತಾರೆ.
ಪ್ರತಿ ಶಾಲೆಯೂ ವರ್ಷದಲ್ಲಿ ಕನಿಷ್ಠ ಕೆಲವು ದಿನಗಳನ್ನು ಪ್ರಕೃತಿ ಕಲಿಕಾ ದಿನಗಳಾಗಿ ಆಚರಿಸಬೇಕು. ವಿದ್ಯಾರ್ಥಿಗಳನ್ನು ಕಾಡಿನಲ್ಲಿ ಸಫಾರಿ, ಟೆಕ್ಸಿಂಗ್, ಪಕ್ಷಿ ವೀಕ್ಷಣೆ, ನದಿಯ ಅಧ್ಯಯನ, ಜೀವವೈವಿಧ್ಯ ಪಯಣಗಳಂತಹ ಕಾರ್ಯಕ್ರಮಗಳಿಗೆ ಕರೆದೊಯ್ಯಬೇಕು. ಅಲ್ಲಿ ಅವರು ಕೇವಲ ಪ್ರಾಣಿಗಳನ್ನು ನೋಡುವುದಲ್ಲ, ಪ್ರಕೃತಿಯ ಸಮತೋಲನ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ.
ಇದರ ಜೊತೆಗೆ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವುದು ಅತ್ಯಗತ್ಯ. ಇಂದಿನ ಮಕ್ಕಳು ಭತ್ತ, ರಾಗಿ ದವಸ ಧಾನ್ಯಗಳನ್ನು ಹೇಗೆ ಬೆಳೆಯುತ್ತಾರೆ. ಎಂಬುದನ್ನು ಸಹ ತಿಳಿದಿಲ್ಲ. ಅಕ್ಕಿ, ತರಕಾರಿ, ಹಣ್ಣುಗಳು ಸೂಪರ್ಮಾರ್ಕೆಟ್ ನಲ್ಲಿ ಹುಟ್ಟುವುದಿಲ್ಲ ಎಂಬ ಅರಿವು ಅವರಿಗೆ ಬರಬೇಕು.
ಶಾಲೆಗಳಲ್ಲಿ ಸಣ್ಣ ಕೃಷಿ ತೋಟಗಳನ್ನು ನಿರ್ಮಿಸಬೇಕು. ಮಕ್ಕಳು ಬೀಜ ಬಿತ್ತಬೇಕು, ನೀರು ಹಾಕಬೇಕು, ಗಿಡ ಬೆಳೆಸಬೇಕು, ಬೆಳೆ ಕೊಯ್ಯಬೇಕು. ತಮ್ಮ ಕೈಯಿಂದ ಬೆಳೆದ ಒಂದು ಟೊಮೆಟೊ ಅಥವಾ ಸೊಪ್ಪಿನ ಗಿಡ ಅವರಿಗೆ ಪ್ರಕೃತಿಯ ಮೌಲ್ಯವನ್ನು ಕಲಿಸುತ್ತದೆ. ಕೃಷಿಯ ಬಗ್ಗೆ ಗೌರವ ಮತ್ತು ರೈತರ ಬಗ್ಗೆ ಕೃತಜ್ಞತೆ ಮೂಡಿಸುತ್ತದೆ.
ಪರಿಸರ ಸಂರಕ್ಷಣೆಯ ನಿಜವಾದ ಪಾಠ ಪುಸ್ತಕದಲ್ಲಿಲ್ಲ, ಅನುಭವದಲ್ಲಿದೆ. ಒಂದು ಮಗು ಗಿಡ ನೆಟ್ಟರೆ ಅದು ಒಂದು ದಿನದ ಕಾರ್ಯಕ್ರಮ. ಆದರೆ ಆ ಗಿಡವನ್ನು ಮೂರು ವರ್ಷಗಳ ಕಾಲ ನೋಡಿಕೊಂಡರೆ ಅದು ಜೀವನಪಾಠ. ಒಂದು ಮಗು ಕಾಡಿನಲ್ಲಿ ಹುಲಿಯ ಮಹತ್ವವನ್ನು ಅರ್ಥಮಾಡಿಕೊಂಡರೆ ಅದು ಭವಿಷ್ಯದ ಸಂರಕ್ಷಣಾವಾದಿಯಾಗಬಹುದು. ಒಂದು ಮಗು ಪಕ್ಷಿಗಳ ವಲಸೆಯ ಕಥೆ ಕೇಳಿದರೆ ಅದು ವಿಜ್ಞಾನಿಯಾಗಬಹುದು. ಒಂದು ಮಗು ಮಣ್ಣಿನ ಮೌಲ್ಯ ತಿಳಿದರೆ ಅದು ಭವಿಷ್ಯದ ಜವಾಬ್ದಾರಿಯುತ ನಾಗರಿಕನಾಗಬಹುದು.
ಇಂದು ನಾವು ದೊಡ್ಡವರನ್ನು ಬದಲಾಯಿಸುವ ಬಗ್ಗೆ ಹೆಚ್ಚು ಮಾತನಾಡುತ್ತೇವೆ. ಆದರೆ ಪರಿಸರದ ವಿಷಯದಲ್ಲಿ ನಿಜವಾದ ಕ್ರಾಂತಿ ದೊಡ್ಡವರಿಂದ ಆರಂಭವಾಗುವುದಿಲ್ಲ. ಅದು ಶಾಲೆಯ ಪ್ರಾಥಮಿಕ ತರಗತಿಗಳಿಂದ, ಅಂಗನವಾಡಿಗಳಿಂದ, ಕಿಂಡರ್ಗಾರ್ಟನ್ ಗಳಿಂದ ಆರಂಭವಾಗಬೇಕು.
ಮರ ಎಂದರೇನು, ನೀರಿನ ಬೆಲೆ ಏನು, ಪಕ್ಷಿಗಳ ಪಾತ್ರ ಏನು, ಕಾಡು ಏಕೆ ಮುಖ್ಯ, ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಎಂಬ ಅರಿವು ಬಾಲ್ಯದಲ್ಲೇ ಮೂಡಬೇಕು. ಆ ವಯಸ್ಸಿನಲ್ಲಿ ಕಲಿತ ಮೌಲ್ಯಗಳು ಜೀವನಪೂರ್ತಿ ಉಳಿಯುತ್ತವೆ.
ಇಂದು ನಮಗೆ ಬೇಕಾಗಿರುವುದು ಕೇವಲ ವಿದ್ಯಾವಂತ ತಲೆಮಾರಲ್ಲ; ಪರಿಸರ ಜಾಗೃತಿಯುಳ್ಳ ತಲೆಮಾರು, ಕೇವಲ ಅಂಕಗಳಿಗಾಗಿ ಓದುವ ಮಕ್ಕಳಲ್ಲ; ಭೂಮಿಯ ಭವಿಷ್ಯದ ಬಗ್ಗೆ ಯೋಚಿಸುವ ಮಕ್ಕಳು. ಕೇವಲ ತಂತ್ರಜ್ಞಾನವನ್ನು ಬಳಸುವವರಲ್ಲ; ಪ್ರಕೃತಿಯೊಂದಿಗೆ ಬದುಕುವುದನ್ನು ಕಲಿತ ಮಕ್ಕಳು.
ಮುಂದಿನ ಹತ್ತು ಅಥವಾ ಇಪ್ಪತ್ತು ವರ್ಷಗಳಲ್ಲಿ ಪರಿಸರವನ್ನು ಉಳಿಸುವ ಮಹತ್ತರ ಕಾರ್ಯಕ್ಕೆ ಹೊಸ ಚಿಂತನೆಯ, ಹೊಸ ಮನೋಭಾವದ, ಪ್ರಕೃತಿಯನ್ನು ಪ್ರೀತಿಸುವ ಕ್ರಾಂತಿಕಾರಿ ತಲೆಮಾರಿನ ಅಗತ್ಯವಿದೆ.
ಆ ತಲೆಮಾರನ್ನು ನಿರ್ಮಿಸಲು ಇಂದೇ ಮಕ್ಕಳಿಗೆ ಪ್ರಕೃತಿಯ ನೇರ ಅನುಭವವನ್ನು ನೀಡಬೇಕು.
ಕಾಡುಗಳನ್ನು ಅವರಿಗೆ ತೋರಿಸಿ, ಪಕ್ಷಿಗಳನ್ನು ಪರಿಚಯಿಸಿ, ಕೃಷಿಯನ್ನು ಅನುಭವಿಸಲು ಅವಕಾಶ ನೀಡಿ, ಮಣ್ಣಿನೊಂದಿಗೆ ಆಟವಾಡಲು ಬಿಡಿ. ಮರಗಳೊಂದಿಗೆ ಸ್ನೇಹ ಬೆಳೆಸಲು ಕಲಿಸಿ ಏಕೆಂದರೆ, ಪ್ರಕೃತಿಯನ್ನು ಪ್ರೀತಿಸುವ ಮಗು ಎಂದಿಗೂ ಪರಿಸರವನ್ನು ನಾಶ ಮಾಡುವುದಿಲ್ಲ. ಇಂದು ಮಕ್ಕಳ ಮನಸ್ಸಿನಲ್ಲಿ ಬಿತ್ತುವ ಪರಿಸರದ ಬೀಜವೇ ನಾಳೆಯ ಹಸಿರು ಭಾರತದ ಅಡಿಪಾಯವಾಗಲಿದೆ.
ಬೆಂಗಳೂರು: ರಾಜ್ಯದಲ್ಲಿ ನೂತನವಾಗಿ ರಚನೆಯಾಗಿರುವ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದೆ. ಈ ಹಿಂದೆ ಜಾರಿಯಲ್ಲಿದ್ದ ಶೇ.50ರಷ್ಟು…
ಚೆನ್ನೈ : ತಮಿಳುನಾಡು ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ…
ಬೆಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಎರಡನೇ ಬಾರಿಗೆ ರಾಜ್ಯಸಭೆ ಸದಸ್ಯರಾಗಲು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಲೋಕಸಭೆಯ ವಿರೋಧ…
ಬೆಂಗಳೂರು : ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರ ಹಠಾತ್ ರಾಜೀನಾಮೆ ಬೆನ್ನಲ್ಲೇ, ಮತ್ತೊಬ್ಬ ಹಿರಿಯ ನಾಯಕ ಹಾಗೂ ಆಹಾರ ಸಚಿವ…
ಚೆನ್ನೈ : ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಬಿಜೆಪಿಗೆ ಗುಡ್ಬೈ ಹೇಳಿದ್ದಾರೆ.…
ಕೆ.ಆರ್.ಪೇಟೆ: ತಾಲೂಕಿನ ಕಸಬಾ ಹೋಬಳಿಯ ಮಾಕವಳ್ಳಿ ಗ್ರಾಮದಲ್ಲಿ ಚಿರತೆ ಹಾವಳಿ ಮುಂದುವರಿದಿದ್ದು, ತಡರಾತ್ರಿ ನಡೆದ ದಾಳಿಯಲ್ಲಿ ಗರ್ಭಿಣಿ ಹೆಮ್ಮೆ ಸಾವನ್ನಪ್ಪಿದ…