ಅಂಕಣಗಳು

ಕೆ.ಬಿ.ಗಣಪತಿ ದಿಲ್ ದಾರ್ ವ್ಯಕ್ತಿ

ಪ್ರೊ. ಎಂ.ಕೃಷ್ಣೇಗೌಡ

ಮೈಸೂರಿನ ಸಾಮಾಜಿಕ ಬದುಕಿನಲ್ಲಿ ಒಂದು ದೊಡ್ಡ ಶೂನ್ಯ ಆವರಿಸಿದೆ 

ನೆನೆಸಿಕೊಂಡರೆ ಮನಸ್ಸಿಗೆ ಸಂಕಟವಾಗುತ್ತದೆ ಇವತ್ತು ಸ್ಟಾರ್ ಆಫ್ ಮೈಸೂರ್ ಮತ್ತು ಮೈಸೂರು ಮಿತ್ರ ಪತ್ರಿಕೆಗಳು ತಮ್ಮ ಮಾಲೀಕನ ಸಾವಿನ ಸುದ್ದಿಯನ್ನು ಮುಖಪುಟದಲ್ಲಿ ಅಚ್ಚು ಹಾಕಿಕೊಂಡು ಹೊರಬೀಳಬೇಕು. ಕಳೆದ ನಲವತ್ತೇಳು ವರ್ಷಗಳಲ್ಲಿ ಈ ಪತ್ರಿಕೆಗಳು ಯಾವಯಾವ ಮಹನೀಯರ ಸಾವಿನ ಸುದ್ದಿಯನ್ನು ಪ್ರಕಟಿಸಿದ್ದವೋ, ಸಂಪಾದಕ ಕೆ.ಬಿ.ಗಣಪತಿ ಅವರು ಅಂಥ ಸುದ್ದಿಗಳ ಲೇ ಔಟನ್ನು ಕೊನೆಗೊಮ್ಮೆ ನೋಡಿ ಅಚ್ಚಿಗೆ ಕಳುಹಿಸಿದ್ದರೋ, ಈಗ ಆ ಗಣಪತಿಯವರು ಇನ್ನಿಲ್ಲ ಎಂದು ಕಂಬನಿ ಮಿಡಿಯುತ್ತಾ ಆ ಪತ್ರಿಕೆಗಳು ಪ್ರಕಟವಾಗಬೇಕು. ಇದಕ್ಕೆ ಏನು ಹೇಳುವುದು? ಸಂಕಟಕಾಲದಲ್ಲಿ ಮನಸ್ಸು ತತ್ವಜ್ಞಾನಿಯಾಗಿಬಿಡುತ್ತದೆ. ಇರಲಿ.

ಅಂತೂ ಕೆ.ಬಿ.ಗಣಪತಿ ಅವರ ನಿಧನದೊಂದಿಗೆ ಮೈಸೂರಿನ ಪತ್ರಿಕೋದ್ಯಮದ ಒಂದು ಸುವರ್ಣ ಅಧ್ಯಾಯ ಸಮಾಪ್ತವಾಗಿದೆ. ಸರಿ ಸುಮಾರು ಐವತ್ತೆರಡು ವರ್ಷ ಆಯಿತು ನಾನು ಕಾಲೇಜು ಓದುವುದಕ್ಕೆ ಎಂದು ಮೈಸೂರಿಗೆ ಬಂದು. ೧೯೭೯ನೇ ಇಸವಿ. ಆಗ ನಾನು ಮೈಸೂರಿನ ಯುವರಾಜ ಕಾಲೇಜಿನಲ್ಲಿ ಬಿಎಸ್ಸಿ ಕೊನೆಯ ವರ್ಷದಲ್ಲಿ ಓದುತ್ತಿದ್ದೆ. ಸರಸ್ವತಿಪುರಂ ಒಂಬತ್ತನೇ ಮೇನ್‌ನಲ್ಲಿದ್ದ ಯುನಿವರ್ಸಿಟಿ ಹಾಸ್ಟೆಲ್‌ನಲ್ಲಿ ಆಗ ನಾನಿದ್ದೆ. ಪ್ರತಿದಿನ ಸಂಜೆ ನಾನು ನನ್ನ ಗೆಳೆಯರು ಸಮೀಪದಲ್ಲಿದ್ದ ಒಂದು ಮಿಲ್ಕ್ ಬಾರ್ ಗೆ ಕಾಫಿ ಕುಡಿಯಲು ಹೋಗುತ್ತಿದ್ದೆವು. ಸ್ಟಾರ್ ಆಫ್ ಮೈಸೂರ್ ಎಂಬ ಒಂದು ಇಂಗ್ಲಿಷ್ ಸಂಜೆ ಪತ್ರಿಕೆ ನನ್ನ ಕಣ್ಣಿಗೆ ಬಿದ್ದಿದ್ದು ಅಲ್ಲಿ. ಕುತೂಹಲದಿಂದ ಕೈಗೆತ್ತಿಕೊಂಡೆ. ಆ ಕಾಲಕ್ಕೆ ಇಂಗ್ಲಿಷ್‌ಗೂ ನಮಗೂ ಅಷ್ಟಕ್ಕಷ್ಟೆ. ನಮಗೆ ಇಂಗ್ಲಿಷ್ ಕಲಿಯಬೇಕೆಂಬ ಆಸೆ ಇತ್ತಾದರೂ ಆ ಭಾಷೆ ನಮ್ಮ ವಿಷಯದಲ್ಲಿ ಕರುಣಾಮಯಿಯಾಗಿರಲಿಲ್ಲ. ಆದರೆ ಸ್ಟಾರ್ ಆಫ್ ಮೈಸೂರು ಪತ್ರಿಕೆಯ ಇಂಗ್ಲಿಷ್ ಅದೆಷ್ಟು ಸರಳವೂ, ಚಂದವೂ ಆಗಿತ್ತೆಂದರೆ ಆ ದಿನ ಇಡೀ ಪತ್ರಿಕೆ ನನ್ನಿಂದ ಸರಾಗವಾಗಿ ಓದಿಸಿಕೊಂಡಿತು.

ಆಹಾ! ನನಗೀಗ ಪತ್ರಿಕೆ ಓದುವಷ್ಟು ಇಂಗ್ಲಿಷ್ ಬರುತ್ತದೆ ಎಂದು ಸಂತೋಷವೂ ಆಯಿತು. ಅಂದಿನಿಂದ ತಪ್ಪದೇ ಟ್ಯಾಬ್ಲಾಯ್ಡ್ ಆಕಾರದ, ನಾಲ್ಕೇ ನಾಲ್ಕು ಪುಟಗಳಿದ್ದ ಸ್ಟಾರ್ ಆಫ್ ಮೈಸೂರ್ ಪತ್ರಿಕೆ ಓದುವುದು ಅಭ್ಯಾಸವಾಯಿತು. ಎಷ್ಟೋ ದಿನ ಆ ಪತ್ರಿಕೆ ಆಗತಾನೆ ಮುದ್ರಿತವಾಗಿ ಬರುತ್ತಿದ್ದುದರಿಂದ ಮುದ್ರಣದ ಮಸಿ ನಮ್ಮ ಅಂಗೈಗೆಲ್ಲಾ ಹತ್ತಿಕೊಂಡಿರುತ್ತಿತ್ತು. ಕೆಲವು ಸಲ ನಮ್ಮ ಕಾಲೇಜಿನ ಇಂಗ್ಲಿಷ್ ಮೇಷ್ಟ್ರುಗಳು ಪ್ರತಿ ದಿನ ಸ್ಟಾರ್ ಆಫ್ ಮೈಸೂರ್ ಓದಿ, ನಿಮ್ಮ ಇಂಗ್ಲಿಷ್ ಇಂಪ್ರೂವ್ ಆಗುತ್ತೆ ಅನ್ನುತ್ತಿದ್ದುದೂ ಉಂಟು.

ಆಗ ಸ್ಟಾರ್ ಆಫ್ ಮೈಸೂರ್ ಪತ್ರಿಕೆಯ ಕಚೇರಿ ಮತ್ತು ಪ್ರೆಸ್, ಕಾಮಾಕ್ಷಿ ಆಸ್ಪತ್ರೆಯ ಸಮೀಪದ ಒಂದು ಕಟ್ಟಡದಲ್ಲಿದ್ದವು. ಆ ದಿನಗಳಲ್ಲಿ ಎತ್ತರ ನಿಲುವಿನ ಸ್ಛುರದ್ರೂಪಿಯಾದ ಗಣಪತಿ ಅವರು ಒಂದು ಯಜ್ಡಿ ಮೋಟರ್ ಬೈಕ್‌ನಲ್ಲಿ ಓಡಾಡುತ್ತಿದ್ದುದನ್ನು ನಾನು ನೋಡುತ್ತಿದ್ದೆ. ಸ್ಟಾರ್ ಆಫ್ ಮೈಸೂರ್ ಪತ್ರಿಕೆ ಸಹಜವಾಗಿಯೇ ಸಾಕಷ್ಟು ಜನಪ್ರಿಯವಾಯಿತು. ಮೈಸೂರಿನ ಮೇಲ್ ಮಧ್ಯಮ ವರ್ಗ ಮತ್ತು ಶ್ರೀಮಂತರ ಮನೆಗಳ ಟೀಪಾಯಿ ಮೇಲೆ ಸ್ಟಾರ್ ಆಫ್ ಮೈಸೂರ್ ಇದ್ದೇ ಇರಬೇಕು ಅಂತಾಯಿತು.

ಆ ದಿನಗಳಲ್ಲಿ ಪತ್ರಿಕೆಯಲ್ಲಿ ಗಣಪತಿಯವರು ಬರೆಯುತ್ತಿದ್ದ ಎಡಿಟೋರಿಯಲ್, ಎಡಿಟರ್ಸ್ ಬಾಟಮ್ ಲೈನ್, ಅವುಗಳಿಗಿಂತ ವಿಶೇಷವಾಗಿ ಅವರ ABRACADABRA ಕಾಲಂ ತುಂಬಾ ಜನಪ್ರಿಯವಾಯಿತು.

ಸ್ಟಾರ್ ಆಫ್ ಮೈಸೂರ್ ಅತ್ಯಂತ ಜನಪ್ರಿಯ ಪತ್ರಿಕೆಯಾಗಿ  ದೃಢವಾಗಲು ಹೆಚ್ಚು ಕಾಲ ಬೇಕಾಗಲಿಲ್ಲ. ಅದಾದ ಕೆಲವು  ವರ್ಷಗಳಲ್ಲೇ ಗಣಪತಿಯವರು ಮೈಸೂರು ಮಿತ್ರ ಎಂಬ ಕನ್ನಡ ದಿನಪತ್ರಿಕೆಯನ್ನು ಆರಂಭಿಸಿದರು. ಅದು ಕೂಡ ಸಾಕಷ್ಟು ಜನಪ್ರಿಯವಾಗಿ ದಾಖಲೆಯಾಯಿತು.

ಅತಿಶಯೋಕ್ತಿ ಏನೂ ಇಲ್ಲದೆ ಹೇಳುವುದಾದರೆ ಮೈಸೂರಿನಲ್ಲಿ ಸಣ್ಣ ದೊಡ್ಡ ಹಲವಾರು ಸ್ಥಳೀಯ ಪತ್ರಿಕೆಗಳು ಇದ್ದವಾದರೂ, ಮೈಸೂರಿನ ಜನ ಬದುಕಿನೊಂದಿಗೆ ಹಾಸು ಹೊಕ್ಕಾಗಿ ಹರಡಿಕೊಂಡ ಪತ್ರಿಕೆಗಳೆಂದರೆ ಗಣಪತಿ ಅವರ ಸಂಪಾದಕತ್ವದ ಈ ಎರಡು ಪತ್ರಿಕೆಗಳು ಮತ್ತು ರಾಜಶೇಖರ ಕೋಟಿ ಅವರ ಸಂಪಾದಕತ್ವದ ಆಂದೋಲನ. ಈ ಎರಡೂ ಪತ್ರಿಕೆಗಳ ಧೋರಣೆ ಭಿನ್ನ ನೆಲೆಯವಾಗಿದ್ದರೂ, ಇವು ಮೈಸೂರಿನ ಮನಸ್ಸುಗಳನ್ನು ಗಾಢವಾಗಿ ತಾಕಿದ್ದಂತೂ ಸತ್ಯ.

ಆಂದೋಲನವು ವೈಚಾರಿಕತೆ, ಸಮಾಜದ ಕೆಳವರ್ಗ, ಅಲ್ಪಸಂಖ್ಯಾತ ವರ್ಗಗಳ ಪರವಾಗಿ ವಾಲುತ್ತಿದ್ದರೆ, ಸ್ಟಾರ್ ಆಫ್ ಮೈಸೂರು ಮತ್ತು ಮೈಸೂರು ಮಿತ್ರ ಸಮಾಜದ ಮಧ್ಯಮವರ್ಗ ಮತ್ತು ಮೇಲ್ಮಧ್ಯಮ ವರ್ಗಗಳ ನಾಡಿ ಮಿಡಿತವನ್ನು ಧ್ವನಿಸುತ್ತಿದ್ದವು. ಜೊತೆಗೆ ನಮ್ಮಲ್ಲಿ ಇಂಗ್ಲಿಷ್ ಓದುವಂಥ ಜನವರ್ಗದ ಮನಸ್ಥಿತಿ ಅಭಿಪ್ರಾಯ ಎಂತಹದೆಂಬ ಖಚಿತವಾದ ಪರಿಕಲ್ಪನೆ ಗಣಪತಿಯವರಿಗಿತ್ತು. ಆದ್ದರಿಂದಲೇ ಸುಮಾರು ಅರ್ಧ ಶತಮಾನ ಕಾಲ ಸ್ಟಾರ್ ಆಫ್ ಮೈಸೂರು ಜನಪ್ರಿಯತೆಯಲ್ಲಿ ಹಿಂದಿರುಗಿ ನೋಡಲಿಲ್ಲ.

ವ್ಯಕ್ತಿಯಾಗಿ ಕೆ.ಬಿ.ಗಣಪತಿಯವರು ದಿಲ್‌ದಾರ್. ಕೊಡವರಿಗೆ ಸಹಜವಾದ ಽರ ನಿಲುವು, ಭಿಡೆಯಿಲ್ಲದ ದೊಡ್ಡ ದನಿ. ಅವರೊಬ್ಬ ಒಳ್ಳೆಯ ಸ್ನೇಹಜೀವಿ. ಅವರ ಸ್ನೇಹ ಬಳಗ ದೊಡ್ಡದು. ರೋಟರಿ, ಭಾರತೀಯ ವಿದ್ಯಾ ಭವನ, ಕರ್ನಾಟಕದ ಪತ್ರಿಕಾ ಅಕಾಡೆಮಿ ಸೇರಿದಂತೆ ಹಲವಾರು ಸಂಸ್ಥೆಗಳಲ್ಲಿ ಅವರು ಕ್ರಿಯಾಶೀಲರಾಗಿ ಕೆಲಸ ಮಾಡಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಒಳ್ಳೆಯ ಮಾತುಗಾರರು. ಅವರು ಏನೇ ಮಾತನಾಡಲಿ ಪತ್ರಕರ್ತರಿಗೆ ಸಹಜವಾದ ನಿರ್ಭಿಡೆ ಮತ್ತು ಧೈರ್ಯ ಅಲ್ಲಿ ಕಾಣಿಸುತ್ತಿತ್ತು.

ಬರಹಗಾರರಾಗಿ ಕೆ.ಬಿ.ಗಣಪತಿ ಅವರ ಸಾಧನೆ ಬಹಳ ಗಣ್ಯವಾದುದು. ಅವರು ಒಂದೆರಡು ಕಾದಂಬರಿಗಳನ್ನುಕೆಲವು ಪ್ರವಾಸ ಕಥನಗಳನ್ನು ಬರೆದಿದ್ದಾರೆ. ಅವರ ಅಬ್ರಕಡಬ್ರ ಅಂಕಣ ಲೇಖನಗಳ ಎರಡೋ ಮೂರೋ ಸಂಪುಟಗಳು ಪ್ರಕಟವಾಗಿವೆ. ಅಗಾಧ ಓದಿನ ಜೊತೆಗೆ ಪ್ರಪಂಚ ಪರ್ಯಟನೆ ಅವರಿಗೆ ಪ್ರಿಯವಾದ ಹವ್ಯಾಸ. ಕನ್ನಡದಲ್ಲೊ ಇಂಗ್ಲಿಷ್ ನಲ್ಲೋ ಯಾವುದಾದರೂ ಒಂದು ಗಮನಾರ್ಹ ಕೃತಿ ಪ್ರಕಟವಾಯಿತು ಎಂದರೆ ಅದು ಮರುದಿನವೇ ಅವರ ಮೇಜಿನ ಮೇಲೆ ಕಾಣಸಿಗುತ್ತಿತ್ತು. ಅಂತ ಓದಿನ ಹಸಿವು ಗಣಪತಿ ಅವರದು.

ಗಣಪತಿ ಅವರು ನನ್ನ ಎಷ್ಟೋ ಹಾಸ್ಯ ಭಾಷಣಗಳನ್ನು ಇನ್ನಿತರ ಭಾಷಣಗಳನ್ನು ಕೇಳಿದ್ದಾರೆ, ಹಲವಾರು ಬಾರಿ ಅತ್ಯಂತ ಪ್ರೀತಿಯ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕೆಲವು ಸಲ ಅವರಿಗೆ ಅನಿಸಿದ್ದನ್ನು ನೇರವಾಗಿ ನನಗೆ ಹೇಳಿದ್ದಾರೆ. ಇದು ಪತ್ರಕರ್ತರ ಗುಣ. ನನಗದು ಇಷ್ಟ. ಸುಮಾರು ೪೭ ವರ್ಷ ಒಂದು ಅತ್ಯಂತ ಯಶಸ್ವಿ ಪತ್ರಿಕೆಯನ್ನು ನಡೆಸಿ ಗಣಪತಿಯವರು ೮೫ ವರ್ಷಗಳ ತುಂಬು ಬದುಕನ್ನು ನಡೆಸಿ ಇದೀಗ ನಿರ್ಗಮಿಸಿದ್ದಾರೆ. ಮೈಸೂರಿನ ಒಂದು ಎತ್ತರದ ದೀಪ ಸ್ತಂಭದ ಬೆಳಕು ಆರಿಹೋದಂತಾಗಿದೆ. ಇದು ಕ್ಲೀಷೆಯ ಮಾತಲ್ಲ – ಮೈಸೂರಿನ ಪತ್ರಿಕಾ ಕ್ಷೇತ್ರದಲ್ಲಿ, ಅಷ್ಟೇ ಏಕೆ ಮೈಸೂರಿನ ಸಾಮಾಜಿಕ ಬದುಕಿನಲ್ಲಿ ಒಂದು ದೊಡ್ಡ ಶೂನ್ಯ ರಾಚುತ್ತಿರುವಂತೆ ಅನ್ನಿಸುತ್ತಿದೆ. ಮೈಸೂರಿನ ಜನ ಮಾನಸದಲ್ಲಿ ಅವರು ಇದ್ದಾಗಲೂ ಇದ್ದರು. ಇಲ್ಲದಿದ್ದಾಗಲೂ ಖಂಡಿತವಾಗಿ ಬಹುಕಾಲ ಇರುತ್ತಾರೆ.

ವಿದಾಯ ನಿಮಗೆ ಗಣಪತಿ ಸರ್. ನಿಮ್ಮ ರೂಪಿದೆ ನಮ್ಮ ಕಣ್ಣುಗಳಲ್ಲಿ, ನಿಮ್ಮ ದನಿ ಇದೆ ನಮ್ಮ ಕಿವಿಗಳಲ್ಲಿ. ನಿಮ್ಮ ಬರಹಗಳಿವೆ ನಮ್ಮ ಸ್ಮೃತಿಯಲ್ಲಿ ವಿದಾಯ ನಿಮಗೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಕಾಲೇಜು ವಿದ್ಯಾರ್ಥಿನಿಯರಿಗೆ ಬಿಸಿಯೂಟ ಶ್ಲಾಘನೀಯ

ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ಫೌಂಡೇಶನ್ ಸಹಯೋಗದೊಂದಿಗೆ…

2 hours ago

ಓದುಗರ ಪತ್ರ: ಪೊಲೀಸ್ ಅಧಿಕಾರಿಯ ಅಸಭ್ಯ ವರ್ತನೆ ಅಕ್ಷಮ್ಯ

ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅವರ ಕಚೇರಿಯಲ್ಲಿ ಸಮವಸ್ತ್ರದಲ್ಲಿದ್ದಾಗಲೇ ಮಹಿಳೆಯೊಂದಿಗೆ ನಡೆಸಿದ್ದಾರೆ ಎನ್ನಲಾದ ರಾಸಲೀಲೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್…

2 hours ago

ಓದುಗರ ಪತ್ರ: ಅಮೆರಿಕ ಅಧ್ಯಕ್ಷರ ಹುಚ್ಚುತನ

ಉತ್ತರ ಅಟ್ಲಾಂಟಿಕ್ ಸಮುದ್ರದಲ್ಲಿ ಇರುವ ವಿಶ್ವದ ಅತಿದೊಡ್ಡ ದ್ವೀಪವಾಗಿರುವ ಹಾಗೂ ಡೆನ್ಮಾರ್ಕ್ ದೇಶದ ನಿಯಂತ್ರಣದಲ್ಲಿರುವ ‘ಗ್ರೀನ್ ಲ್ಯಾಂಡ್’ ದ್ವೀಪವನ್ನು ತನ್ನ…

2 hours ago

ಕಾಡ್ಗಿಚ್ಚು ತಡೆಗೆ ನಾನಾ ಮುಂಜಾಗ್ರತಾ ಕ್ರಮ

ನವೀನ್ ಡಿಸೋಜ ಅರಣ್ಯ ಇಲಾಖೆಯಿಂದ ಬೆಂಕಿ ರೇಖೆ ನಿರ್ಮಾಣ ಕಾರ್ಯ ಚುರುಕು; ಜನರಲ್ಲಿ ಜಾಗೃತಿ ಮೂಡಿಸಲು ಚಿಂತ ಮಡಿಕೇರಿ: ಬೇಸಿಗೆ…

2 hours ago

ಬಾಚಳ್ಳಿ ಆಂಜನೇಯಸ್ವಾಮಿ ಜಾತ್ರೋತ್ಸವಕ್ಕೆ ಸಕಲ ಸಿದ್ಧತೆ

ಎಂ ಯೋಗಾನಂದ್ ಜ.೨೩ರಿಂದ ೨೬ರವರೆಗೆ ಜಾತ್ರಾ ಮಹೋತ್ಸವ; ಮೆರುಗು ನೀಡಲಿರುವ ಗಾಡಿ ಓಡಿಸುವ ಸ್ಪರ್ಧೆ ಹುಣಸೂರು: ತಾಲ್ಲೂಕಿನ ಬಾಚಳ್ಳಿ ಗ್ರಾಮದಲ್ಲಿ…

2 hours ago